Wednesday, August 17, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 29

                                         ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 29

"ನನ್ನ ಸುದ್ಧಿಗೆ ಬಂದರೆ ಸರಿ ಇರುವುದಿಲ್ಲ.. ಈಗಲೇ ಪೊಲೀಸರಿಗೆ ಫೋನ್ ಮಾಡುತ್ತೇನೆ.." ಎನ್ನುತ್ತಾ ವ್ಯಾನಿಟಿ ಬ್ಯಾಗಿನಿಂದ ಮೊಬೈಲ್ ಹೊರತೆಗೆದಳು ಸ್ವಯಂವರಾ. ಬಾಷಾ ಅದೆಷ್ಟು ವೇಗವಾಗಿ ಚಲಿಸಿದ್ದ ಎಂದು ಕಲ್ಪನೆಗೂ ಸಿಗಲಿಲ್ಲ ಸ್ವಯಂವರಾಳಿಗೆ. ಏನಾಯಿತು ಎಂದು ತಿಳಿಯುವುದರೊಳಗೆ ಬಾಷಾನ ಬಲವಾದ ಕೈ ಸ್ವಯಂವರಾಳ ಕೆನ್ನೆಗೆ ಗಟ್ಟಿಸಿತ್ತು. ಮೊಬೈಲ್ ತೆಗೆದು ಡಯಲ್ ಮಾಡಬೇಕು ಎಂಬ ಆಕೆಯ ಯೋಚನೆ ಯೋಚನೆಯಾಗೆ ಉಳಿಯಿತು. ಕೈಲಿದ್ದ ಮೊಬೈಲ್ ಎಗರಿ ದೂರ ಬಿತ್ತು. "ಅಮ್ಮಾ.." ಎಂದು ಕಿರುಚುತ್ತಾ ಕೈಯಿಂದ ಕೆನ್ನೆಯನ್ನು ಗಟ್ಟಿಯಾಗಿ ಒತ್ತಿ ಹಿಡಿದುಕೊಂಡಳು ಸ್ವಯಂವರಾ. 
ಇದೇನೋ ಸಣ್ಣದಾಗಿ ಮುಗಿಯುತ್ತದೆ ಎಂದುಕೊಂಡ ವಿಷಯ ಈಗ ರಾದ್ಧಾಂತವಾಗಿ ಪರಿವರ್ತಿತವಾಗಿತ್ತು. ಹೀಗೆ ಜನ ಓಡಾಡುತ್ತಿರುವ ಜಾಗದಲ್ಲಿ ದಡೂತಿ ವ್ಯಕ್ತಿಯೊಬ್ಬ ಹೆಣ್ಣಿನ ಮೇಲೆ ಕೈ ಮಾಡಬಲ್ಲ ಎಂಬ ಸಣ್ಣ ಯೋಚನೆಯು ಆಕೆಗೆ ಬಂದಿರಲಿಲ್ಲ. ಬಾಷಾನ ಚೇಲಾಗಳು ನೋಡಿ ನಗುತ್ತ ನಿಂತಿದ್ದರು. ಆತನ ಸುತ್ತಲೂ ನಿಂತ ಚೇಲಾಗಳು ತಮ್ಮ ಚಾನ್ಸ್ ಯಾವಾಗ ಬರುತ್ತದೆ ಎಂದು ಕಾಯುತ್ತಿರುವಂತೆ ಕಂಡು ಬಂತು ಆಕೆಗೆ. ದಾರಿಯಲ್ಲಿ ಹೋಗಿ ಬರುವ ಕೆಲವೊಬ್ಬರು ಈ ಘಟನೆಯನ್ನು ನೋಡಿದರೂ ತಮಗೆ ಸಂಬಂಧವಿಲ್ಲದ ವಿಷಯವೆಂಬಂತೆ ತಲೆ ತಗ್ಗಿಸಿ ನಡೆದು ಹೋಗುತ್ತಿದ್ದರು. ಇನ್ನು ಕೆಲವರು ಅಲ್ಲೇ ದೂರದಲ್ಲಿ ನಿಂತು ಮುಂದೇನು ನಡೆಯುತ್ತದೆ ಎಂದು ಕುತೂಹಲದಿಂದ ನೋಡುತ್ತಾ ನಿಂತಿದ್ದರು. 
ಬಾಷಾ!! ಯಾರಿಗೆ ತಾನೇ ಗೊತ್ತಿಲ್ಲ?. ರಕ್ತ ಪಿಪಾಸು..!? ಆತನನ್ನು ಎದುರು ಹಾಕಿಕೊಂಡು ಬದುಕಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಇದು ಈಗಿನ ಹಿಂದುಸ್ಥಾನದ ಪರಿಸ್ಥಿತಿ. ಷಂಡತನ ಕರಾಳವಾಗಿ ಆವರಿಸಿದೆ. ಎಲ್ಲಿಯವರೆಗೆ ತಮ್ಮ ಮನೆ ಹೊತ್ತಿ ಉರಿಯುವುದಿಲ್ಲವೋ ಅಲ್ಲಿಯವರೆಗೆ ಯಾರು ನೀರಿನ ಬಿಂದಿಗೆಗೆ ಕೈ ಹಾಕುವುದಿಲ್ಲ. ಓಡಿ ಬಿಟ್ಟರೆ ಹೇಗೆ ಎಂಬ ಆಲೋಚನೆ ಮೂಡಿತು ಸ್ವಯಂವರಾಳಿಗೆ ಆದರೆ ಅದಕ್ಕೆ ಆಸ್ಪದ ಕೊಡಲಿಲ್ಲ ಭಾಷಾ. ಹೊಡೆದು ಕೈ ಬಿಡದೆ, ಆಕೆಯ ಜಡೆಗೆ ಕೈ ಹಾಕಿ ಎಳೆದುಕೊಂಡು ಜೀಪ್ ಕಡೆ ನಡೆಯತೊಡಗಿದ. ಬಲವಾದ ಹಿಡಿತದಿಂದ ತಪ್ಪಿಸಿಕೊಳ್ಳಲು ಇಲ್ಲದ ಹರಸಾಹಸ ಮಾಡಿದಳು ಅವಳು. ಭಾಷನ ಬಲವಾದ ಕೈಗಳು ಅವಳ ಜಡೆಯನ್ನು ಎಳೆಯುತ್ತಿದ್ದರಿಂದ ಕೂದಲು ಕಿತ್ತು ಬಂದು ಕಣ್ಣುಗಳಿಂದ ನೀರು ದಳ ದಳ ಹರಿಯುತ್ತಿತ್ತು. ದುಃಖ ಉಕ್ಕಿ ಬಂದಿತು ಸರೋವರಾಳಿಗೆ. ಬಾಷಾ ಜೋರಾಗಿ ಹೊಡೆದ ಪರಿಣಾಮವಾಗಿ ಕೆನ್ನೆಯ ಮೇಲೆ ಕೈಗಳ ಅಚ್ಚು ಮೂಡಿ, ನಿಧಾನವಾಗಿ ಊದಿಕೊಳ್ಳತೊಡಗಿತು. ತುಟಿ ಒಡೆದು ರಕ್ತ ಒಸರುತ್ತಿತ್ತು.
ದರದರನೆ ಎಳೆದುಕೊಂಡು ಹೋಗಿ ಜೀಪಿನ ಮುಂದಿನ ಸೀಟಿನಲ್ಲಿ ತುರುಕಿದ ಸ್ವಯಂವರಾಳನ್ನು. ಹಿಂದೆಯೇ ತಾನೂ ಹತ್ತಿ ಕುಳಿತುಕೊಂಡು ಬಾಗಿಲು ಎಳೆದುಕೊಂಡ. ಇದನ್ನೆಲ್ಲಾ ನೋಡುತ್ತಾ, ಜನರನ್ನು ಬೆದರಿಸುತ್ತಿದ್ದ ಬಾಷಾನ ಚೇಲಾಗಳು ಜೀಪಿನ ಬಳಿ ಬಂದು ಇಬ್ಬರು ಹಿಂದೆ ಹತ್ತಿಕೊಂಡರೆ ಮತ್ತೊಬ್ಬ ಡ್ರೈವರ್ ಸೀಟಿಗೆ ಒರಗಿದ. 
ಇನ್ನು ನಿನ್ನ ಕಥೆ ಮುಗಿಯಿತು ಎಂದುಕೊಂಡಳು ಸ್ವಯಂವರಾ. ಒಂದು ತಾಸಿನ ಹಿಂದಷ್ಟೇ ಅದೆಷ್ಟು ಸುಂದರ ಕನಸುಗಳನ್ನು ಕಂಡಿದ್ದಳು!! ವಿಧಿಲಿಖಿತ ಎಂಬುದು ನಿಜವೇ ಏನೋ ಎನ್ನಿಸಿತು ಒಮ್ಮೆ. ಇಂದು ಕ್ಷಾತ್ರನಿಗೆ ತನ್ನ ಸಮ್ಮತಿ ಸೂಚಿಸಬೇಕೆಂದು ತುಂಬಾ ಸುಂದರವಾಗಿ ರೆಡಿಯಾಗಿ ಸ್ಕೂಟಿ ಹತ್ತಿದ್ದಳು. 
ಯಾವುದಾದರೊಂದು ಒಳ್ಳೆಯ ಜಾಗ ಆರಿಸಿಕೊಂಡು ಕ್ಷಾತ್ರನನ್ನು ಅಲ್ಲಿಗೆ ಬರಲು ಹೇಳಬೇಕು. ನೋಡೋಣ ಪ್ರಪೋಸ್ ಮಾಡು ಎಂದರೆ ಏನು ಮಾಡುತ್ತಾನೆ ಎಂದು.. ಸ್ವಲ್ಪ ಕಾಡಿಸದೆ ಒಪ್ಪಿಕೊಂಡರೆ ಏನು ತಾನೇ ಮಜಾ!? ಎಂದು ಮನಸ್ಸಲ್ಲೇ ಅಂದುಕೊಂಡಳು. 
ಕ್ಷಾತ್ರ ನೆನಪಾದ. ಗಟ್ಟಿ ಮನುಷ್ಯ. ಮುಖದ ಮೇಲಿನ ಪೊದರು ಮೀಸೆ, ಆತನ ಪೊಲಿಸ್ ಗತ್ತಿಗೆ ಹೇಳಿ ಮಾಡಿಸಿದಂತಿತ್ತು. ಆತ ನಗುವುದು ಅಪರೂಪ. ನಕ್ಕರೆ ತುಂಬಾ ಚಂದವಾಗಿ ಕಾಣುತ್ತಾನೆ. ನಗುವಿನಲ್ಲೂ ಗಂಭೀರತೆಯಿದೆ. ಎಲ್ಲ ಹುಡುಗರಂತೆ ಲಲ್ಲೆಗರೆಯಲಾರ. ಪೋಲಿ ಮಾತುಗಳಲ್ಲಿ ಮುಳುಗಿಸಿ ಹಿತ ನೀಡಲಾರ. ಆದರೂ ಕ್ಷಾತ್ರ ಕ್ಷಾತ್ರನೇ..!! ಆತನ ಹರವಾದ ಎದೆಯಲ್ಲಿ ಮಲಗಿ, ಬಲವಾದ ತೋಳುಗಳಲ್ಲಿ ಬಂಧಿಯಾಗುವುದೇ ಹಿತ ಎಂದುಕೊಂಡಳು. ಕಲ್ಪನೆಗಳು ಅವಳಿಗೆ ನಗು ತರಿಸಿದವು. ನಿನ್ನೆಯವರೆಗೆ ಇಲ್ಲದ ಕನಸುಗಳು ಅದೆಲ್ಲಿಂದ ಬಂದು ಆವರಿಸಿಕೊಂಡಿವೆ!? ಮನವೆಂಬ ಮರ್ಕಟವೇ.. ಎಂದುಕೊಳ್ಳುತ್ತಲೇ ಸ್ಕೂಟಿ ಓಡಿಸುತ್ತಿದ್ದಳು. 
ರಸ್ತೆಯ ಪಕ್ಕದಲ್ಲಿಯೇ ಹೂವಿನಂಗಡಿ ಕಂಡಿದ್ದರಿಂದ ಸ್ಕೂಟಿ ನಿಲ್ಲಿಸಿ ಕೆಂಗುಲಾಬಿ ಕೊಂಡು ಮುಡಿದುಕೊಂಡಳು. ಅದೆಷ್ಟು ದಿನಗಳ ಹಿಂದೆ ತಾನು ಹೂವಿನೆಡೆಗೆ ಆಕರ್ಷಿತವಾದದ್ದು?? ಮನಸ್ಸಿನ ಸರಪಣಿಗಳು ಒಂದಕ್ಕೊಂದು ಅದೆಷ್ಟು ಹೆಣೆದುಕೊಂಡಿವೆ.. ಒಬ್ಬ ಮನುಷ್ಯನ ಮೇಲೆ ಪ್ರೀತಿ ಹುಟ್ಟುತ್ತಲೇ ಹೂವಿನೆಡೆಗೆ ಆಕರ್ಷಣೆ. ಚಿಟ್ಟೆಯೊಂದು ತುಂಬಿದ ಬೃಂದಾವನದೆಡೆಗೆ ಮನ ನೀಡಿ ಸೆಳೆದು ಹೋದಂತೆ.. ತುಂಬಿ ಹರಿಯುವ ನದಿಗಳು ಕಾಣದ ಕಡಲೆಡೆಗೆ ಹರಿದು ಸಾಗಿದಂತೆ.. ತನ್ನಲ್ಲಿ ಬರುತ್ತಿದ್ದ ಭಾವನೆಗಳ ಮಹಾಪೂರವನ್ನು ತೆರೆಯಿಲ್ಲದಂತೆ ಶಾಂತವಾಗಿರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ ಆಕೆಗೆ. ಅವಳ ಪ್ರತಿಯೊಂದು ಹುಚ್ಚು ಯೋಚನೆಗಳು ಅವಳ ಮುಖದಲ್ಲಿ ಲಜ್ಜೆ ಭರಿತ ಮುಗುಳ್ನಗುವಿಗೆ ಮನೆ ಮಾಡಿಕೊಡುತ್ತಿತ್ತು. ಎಷ್ಟು ವೇಗದಲ್ಲಿ ಸ್ಕೂಟಿ ಓಡಿಸುತ್ತಿದ್ದೇನೆಂಬ ಕಲ್ಪನೆಯು ಅವಳಿಗಿರಲಿಲ್ಲ. ಮೊದಲು ಆಸ್ಪತ್ರೆಗೆ ಹೋಗಿ ಸಂಜೆಗೆಲ್ಲಾ ಕ್ಷಾತ್ರನನ್ನು ಭೇಟಿಯಾಗಬೇಕು ಎಂಬ ಅವಳ ಯೋಚನೆ ತಲೆಕೆಳಗಾಗಿತ್ತು. ಮೊದಲು ಕ್ಷಾತ್ರನ ಭೇಟಿ ನಂತರ ಆಸ್ಪತ್ರೆ ಎಂದು ಘಾಜಿಯಾಬಾದ್ ಕಡೆ ಸ್ಕೂಟಿ ತಿರುಗಿಸಿದ್ದಳು. ಇಂದಿರಾಪುರಂ ನಲ್ಲಿ ಸ್ವರ್ಣ ಜಯಂತಿ ಪಾರ್ಕ್ ಇದೆ. ಬೆಳಗಿನ ಸಮಯದಲ್ಲಿ, ವಾರದ ದಿನಗಳಲ್ಲಿ ಪ್ರೇಮಿಗಳಿಗೆ ಹೋಗಿ ಕುಳಿತುಕೊಳ್ಳಲು ಹೇಳಿ ಮಾಡಿಸಿದ ಜಾಗದಂತಿದೆ. ಕ್ಷಾತ್ರನ ಸ್ಟೇಷನ್ ಕೂಡ ಅತ್ತ ಕಡೆಯೇ ಇದೆ. ಅಲ್ಲಿ ಹೋಗಿ ಆತನಿಗೆ ಸರ್ಪ್ರೈಸ್ ಕೊಡೋಣ ಎಂದು ಘಾಜಿಯಾಬಾದ್ ದಾಟಿ ಸ್ವರ್ಣ ಜಯಂತಿ ಪಾರ್ಕ್ ಕಡೆ ಹೊರಟಿದ್ದಳು. ಅದೇಕೋ ಮಿರರ್ ಕಡೆ ನೋಡಿದವಳು ಸ್ಕೂಟಿಯ ವೇಗ ಕಡಿಮೆ ಮಾಡಿದಳು. 
ಸ್ವಲ್ಪ ಹೊತ್ತಿನ ಮೊದಲು ಕೂಡ ಇದೆ ಜೀಪ್ ತನ್ನ ಹಿಂದೆ ಬರುವುದನ್ನು ಗಮನಿಸಿದ್ದಳು. ಇವರೇನಾದರೂ ತನ್ನನ್ನು ಹಿಂಬಾಲಿಸುತ್ತಿದ್ದಾರಾ?? ಎಂಬ ಸಂಶಯ ಮೂಡಿತು ಆಕೆಗೆ. ಹಾಗಾಗಿಯೇ ಜೀಪು ಮುಂದೆ ಹೋಗಲಿ ಎಂದು ವೇಗ ಕಮ್ಮಿ ಮಾಡಿದ್ದಳು. ಆದರೆ ಜೀಪಿನವರು ಮುಂದೆ ಹೋಗುವವರಂತೆ ಕಾಣಲಿಲ್ಲ. ಅವರ ವೇಗವು ಕೂಡ ಕಡಿಮೆಯಾಗಿತ್ತು. ತನ್ನ ಅನುಮಾನ ನಿಜವಾಗುತ್ತಿದೆಯೇ ಎಂದೆನ್ನಿಸಿತು ಆಗ. 
ಆದರೆ ಯಾಕೆ!? ನನ್ನನ್ನೇಕೆ ಹಿಂಬಾಲಿಸುತ್ತಾರೆ? ನನ್ನ ಪರಿಚಯದವರಿರಬಹುದಾ? ಎಂದು ಮಿರರ್ ನಲ್ಲಿ ಮತ್ತೆ ನೋಡುತ್ತಲೇ ಗಾಡಿ ಮುಂದುವರೆಸಿದಳು. ಒಮ್ಮೆ ಗಾಡಿ ನಿಲ್ಲಿಸಿ ಕ್ಷಾತ್ರನಿಗೆ ಫೋನ್ ಮಾಡಿಬಿಡುವುದು ಒಳ್ಳೆಯದು ಎಂದೆನ್ನಿಸಿತು. 
ಒಂದೇ ಕ್ಷಣಕ್ಕೆ ಎಡಕ್ಕಿದ್ದ ರಸ್ತೆಗೆ ಇಳಿಸಿ ಜೀಪ್ ಕಾಣದ್ದರಿಂದ ಎಕ್ಸಿಲೇಟರ್ ತಿರುವಿ ರಸ್ತೆಯ ಕೊನೆ ತಲುಪಿ ಮತ್ತೆ ಎಡಕ್ಕೆ ಹೊರಳಿದಳು. ಅವರು ತನ್ನನ್ನು ಹಿಂಬಾಲಿಸುತ್ತಿದ್ದಾರೆ ಹೆಚ್ಚು ಸಮಯವಿಲ್ಲ. ಬೇಗ ಕ್ಷಾತ್ರನಿಗೆ ಫೋನಾಯಿಸಬೇಕು.
ಜೀಪ್ ಇನ್ನು ಬಂದಿರದ ಕಾರಣ ಕ್ಷಾತ್ರನಿಗೆ ಫೋನ್ ಮಾಡಿದಳು. ಅಷ್ಟರಲ್ಲಿ ಜೀಪ್ ಇದೆ ರಸ್ತೆಗೆ ಎಂಟ್ರಿ ಆಗುತ್ತಿರುವುದು ಕಂಡಿತು. ಸ್ಕೂಟಿ ಬಿಟ್ಟು ರಸ್ತೆಯ ಪಕ್ಕದಲ್ಲಿದ್ದ ಮರದ ಮರೆಗೆ ಸರಿದು ಕ್ಷಾತ್ರ ಕಾಲ್ ಎತ್ತಬಹುದೆಂದು ನೋಡತೊಡಗಿದಳು. ಜೀಪು ವೇಗವಾಗಿ ಸ್ಕೂಟಿ ಇರುವ ಕಡೆಯೇ ಬರುತ್ತಿತ್ತು. 
"ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ.." 
ಸ್ವಯಂವರಾಳ ಗಂಟಲ ಪಸೆಯೇ ಆರಿ ಹೋಯಿತು. ಮತ್ತೊಮ್ಮೆ ಫೋನ್ ಪ್ರಯತ್ನಿಸಬೇಕೆನ್ನುವಷ್ಟರಲ್ಲಿ ಜೀಪ್ ಬಂದು ಆಕೆಯ ಸ್ಕೂಟಿಯ ಬಳಿ ನಿಂತಿತು. ಅದರಿಂದ ಮೊದಲು ಹೊರಗಿಳಿದಿದ್ದು ಬಾಷಾ. ಅವನ ಎಡಬಲಕ್ಕೆ ಮೂವರು ಚೇಲಾಗಳು. 
ಏನು ಮಾಡಬೇಕು?? ಯಾರಿವರು?? ಅದಲ್ಲದೆ ಈ ರಸ್ತೆಯಲ್ಲಿ ಜನ ಸಂಚಾರವು ಕಡಿಮೆಯಿದೆ. ಕ್ಷಾತ್ರನಿಗೆ ಕಾಲ್ ಮಾಡಿ ಮೊಬೈಲ್ ಅನ್ನು ಹಾಗೆಯೇ ಬ್ಯಾಗಿಗೆ ಹಾಕಿಕೊಂಡಳು. 
ತಾನು ಸುಮ್ಮನೆ ಹೆದರುತ್ತಿರುವೆನಾ? ಏನೆಂದು ಕೇಳಿಬಿಡೋಣ.. ನಾನೊಬ್ಬ ಡಾಕ್ಟರ್. ಜನರನ್ನು ಕಂಡು ಹೀಗೆ ಹೆದರುವುದೇಕೆ?? ಅಥವಾ ಅವರ ಮುಖದ ಭಾವನೆಗಳನ್ನು ಅರಿತು ನಾನು ಹೆದರುತ್ತಿರುವೆನಾ? ಅವರ ಮುಖದಲ್ಲಿ ಅಡಗಿದ ಅಮಾನುಷ ಕ್ರೂರತೆ ಅವಳಿಗೆ ತಿಳಿದು ಹೋಗಿತ್ತು. 
ನಾಲ್ಕು ಜನರಲ್ಲಿ ಒಬ್ಬನನ್ನು ಎಲ್ಲಿಯೋ ನೋಡಿದ ನೆನಪು. ಆರೂವರೆ ಅಡಿ.. ಎರಡು ಮನುಷ್ಯರ ತೂಕ.. ಮೈಯಲ್ಲಿ ಬೊಜ್ಜಿಲ್ಲ. ಕೆತ್ತಿದ ಶಿಲೆಯಂತೆ ಗಟ್ಟಿಯಾಗಿದ್ದಾನೆ. ನಾನಿವನನ್ನು ಎಲ್ಲಿಯೋ ನೋಡಿದ್ದೇನೆ... ನೆನಪಾಗುತ್ತಿಲ್ಲ ಅವಳಿಗೆ. ಮಿಕ್ಕ ಮೂವರು ಅವನಷ್ಟು ಗಟ್ಟಿಯೇನಿಲ್ಲ. ಆದರೆ ಮುಖದ ಮೇಲಿನ ಕ್ರೂರತೆ ಕಡಿಮೆಯೇನೂ ಇಲ್ಲ. ಅವರ ಹಾವಭಾವ ನೋಡಿಯೇ ಒಳ್ಳೆಯ ಅಭಿಪ್ರಾಯ ಮೂಡಲಿಲ್ಲ ಅವಳಿಗೆ. 
ಬಾಷಾ ಮುಂದೆ ಬಂದು "ಡಾಕ್ಟರ್, ತೊಂದರೆ ಕೊಟ್ಟಿದ್ದಕ್ಕೆ ಕ್ಷಮೆಯಿರಲಿ.." ಎನ್ನುತ್ತಲೇ ಹತ್ತಿರ ಬಂದ. ಆತನ ಪಕ್ಕದಲ್ಲಿದ್ದವರು ವಿವಿಧ ರೀತಿಯ ಎಕ್ಸಪ್ರೆಷನ್ ನೀಡುತ್ತಾ ನಿಂತಿದ್ದರು. ಬಾಷಾನ ಮಾತು ಕೇಳಿ ಸ್ವಲ್ಪ ಸಮಾಧಾನವಾಯಿತು ಅವಳಿಗೆ. ತಾನು ಡಾಕ್ಟರ್ ಎಂದು ತಿಳಿದು ಬಂದಿದ್ದಾರೆ. ಅಂದರೆ ತಾನೇ ಅವಸರಪಟ್ಟೆನೇನೋ.. ಪಟ್ಟನೆ ನೆನಪಾಯಿತು ಆಕೆಗೆ.. ಈತ ಬಾಷಾ..!! ಸನ್ನಿ ಚಡ್ಡಾನ ರೈಟ್ ಹ್ಯಾಂಡ್.. ಆಗಾಗ ಪೇಪರಿನಲ್ಲಿ ಬರುತ್ತಿರುತ್ತಾನೆ. ದೊಡ್ಡ ಗುಂಡಾ ಎಂಬುದರಲ್ಲಿ ಸಂಶಯವಿಲ್ಲ. ಆದಷ್ಟು ಬೇಗ ಹೇಗಾದರೂ ಇವರನ್ನು ಸಾಗಹಾಕಬೇಕು. ಮುಖದ ಮೇಲೆ ಯಾವ ಭಾವನೆಯನ್ನು ತೋರ್ಪಡಿಸದೆ "ಇರಲಿ.. ಹೇಳಿ.." ಎಂದಳು. 
"ಡಾಕ್ಟರ್, ನಿಮ್ಮ ಆಸ್ಪತ್ರೆಯಲ್ಲಿ ಕೊಲೆ ನಡೆಯಿತಲ್ಲಾ.. ಅದರ ಬಗ್ಗೆ ಸ್ವಲ್ಪ ಮಾಹಿತಿ ಬೇಕು.. ಆ ಕೊಲೆ ಮಾಡಿದವರು ಯಾರು ಎಂದು ನಿಮ್ಮ ಬಳಿ ವಿವರವಿದೆಯಂತಲ್ಲಾ.. ಅಷ್ಟು ಕೊಡಿ ಸಾಕು.." ನಾಟಕೀಯ ವಿನಮ್ರತೆ ಕಂಡಿತು ಮಾತಿನಲ್ಲಿ. 
ಒಹೋ..! ಆ ಕೊಲೆಗೂ, ಇವರಿಗೂ ಸಂಬಂಧವಿದೆ ಹಾಗಾದರೆ.. 
ಇದೆ ಸಮಯ ಕ್ಷಾತ್ರನಿಗೆ ಇವರನ್ನು ಹಿಡಿದುಕೊಡಲು.. ಆಗ ನೆನಪಾಯಿತು.. ಅವನಿಗೆ ಕಾಲ್ ಮಾಡಿ ಮೊಬೈಲ್ ಬ್ಯಾಗಿಗೆ ಹಾಕಿದ್ದು.
ಕ್ಷಾತ್ರನಿಗೆ ಕಾಲ್ ಹೋಗಿರಬಹುದಾ? ಈಗ ಕಾಲ್ ನಲ್ಲೆ ಇದ್ದರೆ ಅವನಿಗೆ ಇಲ್ಲಿ ನಡೆಯುತ್ತಿರುವುದೆಲ್ಲ ಕೇಳುತ್ತಿರುತ್ತದೆ. ತನ್ನ ಇನಿಯ ಪೊಲಿಸ್. ಪೊಲಿಸ್ ಎಂದರೆ ಯಾರಾದರೂ ಹೆದರುತ್ತಾರೆ. ಈಗ ಆತ ಕಾಲ್ ನಲ್ಲಿದ್ದರೆ ತಾನಿರುವ ಜಾಗ ಹೇಳಿಬಿಡಬೇಕು ಎಂಬ ಯೋಚನೆ ಬರುತ್ತಲೇ "ನನ್ನ ವಿಷಯಕ್ಕೆ ಬಂದರೆ ಪೊಲೀಸರಿಗೆ ಹೇಳುತ್ತೇನೆ.." ಎಂದು ಬ್ಯಾಗಿಗೆ ಕೈ ಹಾಕಿದಳು. ಶಾಂತಿಯಿಂದಲೇ ಬಳಿ ಬಂದಿದ್ದ ಬಾಷಾ ಅವಳ ಕೆನ್ನೆಗೆ ಬಾರಿಸಿದ್ದ. ಕೈಲಿದ್ದ ಮೊಬೈಲ್ ದೂರ ಹಾರಿ ಬಿತ್ತು. ಕ್ಷಾತ್ರ ಲೈನಿನಲ್ಲಿಯೇ ಇದ್ದ. ಇತ್ತ ನಡೆಯುತ್ತಿರುವ ಮಾತುಕತೆ ಅಸ್ಪಷ್ಟವಾಗಿ ಕೇಳುತ್ತಿತ್ತು. ಅತ್ತಲಿಂದ ಆತ ಹಲೋ.. ಹಲೋ.. ಎಂದು ಕೂಗುತ್ತಲೇ ಇದ್ದ. ಸ್ವಯಂವರಾ ಏನೋ ತೊಂದರೆಯಲ್ಲಿ ಸಿಲುಕಿದ್ದಾಳೆ ಎಂದು ತಿಳಿಯಿತಾಗಲಿ ಎಲ್ಲಿ? ಹೇಗೆ? ಎಂದು ತಿಳಿಯದೆ ಕಂಗಾಲಾದ. 
ತಾನಿರುವ ಜಾಗ ಹೇಳಿಬಿಡಬೇಕು ಎಂದುಕೊಂಡಿದ್ದ ಅವಳಿಗೆ ಹೀಗೆ ಆಕಸ್ಮಿಕವಾಗಿ ಹೊಡೆತ ಬಿದ್ದಿದ್ದರಿಂದ, ಏನಾಯಿತು? ಏನು ಮಾಡಬೇಕು? ಎಂದು ತಿಳಿಯಲಿಲ್ಲ. 
ಮರುಕ್ಷಣದಲ್ಲಿ ಬಾಷಾ ಆಕೆಯ ಕೂದಲಿಗೆ ಕೈ ಹಾಕಿ ದರದರನೆ ಎಳೆದುಕೊಂಡು ಹೊರಟಿದ್ದ. ಮುಡಿದುಕೊಂಡ ಕೆಂಪು ಗುಲಾಬಿ ಕೆಳಗೆ ಬಿದ್ದಿತು. ಅವಳು ನೋವಿನಿಂದ ಕಿರುಚಿದ್ದು, ಅಳುತ್ತಿರುವುದು ಕ್ಷಾತ್ರನಿಗೆ ಕೇಳುತ್ತಲೇ ಇತ್ತು. ಆತ ತನ್ನ ಸ್ಟೇಷನ್ ಗೆ ಹೋಗುವ ದಾರಿಯಲ್ಲಿದ್ದ. ಫೋನ್ ಕಟ್ ಮಾಡಿ ಆಕೆಯ ಮೊಬೈಲ್ ಟ್ರೇಸ್ ಮಾಡಲು ಹೇಳೋಣವೆಂದರೆ ಅದಕ್ಕೂ ಭಯ. ತಟ್ಟನೆ ಜೀಪ್ ಇಳಿದು ಪಕ್ಕದಲ್ಲಿ ಹೋಗುತ್ತಿದ್ದವನ ಬಳಿ ಮೊಬೈಲ್ ತೆಗೆದುಕೊಂಡು ಸ್ಟೇಷನ್ ಗೆ ಫೋನ್ ಮಾಡಿ ಅವಳ ನಂಬರ್ ಕೊಟ್ಟು "ಟ್ರೇಸ್ ಮಾಡಿಸು ತಾನು ಕಾಲ್ ನಲ್ಲಿಯೇ ಇರುತ್ತೇನೆ" ಎಂದು ಬಾಲ ತುಳಿಸಿಕೊಂಡ ಸರ್ಪದಂತೆ ಮಾಡತೊಡಗಿದ. 
ಕಾನಸ್ಟೆಬಲ್ ಕ್ರೈಮ್ ಡಿಪಾರ್ಟಮೆಂಟ್ ಗೆ ಫೋನ್ ಮಾಡಿ ನಂಬರ್ ತಿಳಿಸಿದ್ದ. 
ಕ್ಷಾತ್ರನಿಗೆ ಈಗ ಸ್ವಯಂವರಾ ಕೂಗುವುದು ಕೇಳುತ್ತಿಲ್ಲ. ದೂರದಲ್ಲಿ ಸಾಗುವ ವಾಹನಗಳ ಶಬ್ದ ಮಾತ್ರ ಕೇಳಿ ಬರುತ್ತಿತ್ತು. 
ಹತ್ತಿರದಲ್ಲಿಯೇ ಜೀಪೊಂದು ಸ್ಟಾರ್ಟ್ ಆದ ಶಬ್ದ. ಅಂದರೆ ಸ್ವಯಂವರಾಳನ್ನು ಜೀಪ್ ಹತ್ತಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಎಲ್ಲಿಂದ? ಎಲ್ಲಿಗೆ??
"ಕಾನಸ್ಟೆಬಲ್.. ಏನಾಯಿತು??" ಕೂಗಿದ ಕ್ಷಾತ್ರ.
"ಎರಡು ನಿಮಿಷವಂತೆ ಸಾರ್.." 
ಡ್ರೈವರ್ ಸೀಟಿನಲ್ಲಿ ಕುಳಿತ ಬಾಷಾನ ಚೇಲಾ ಜೀಪ್ ಸ್ಟಾರ್ಟ್ ಮಾಡಿದ. ಇನ್ನು ತನ್ನ ಕಥೆ ಮುಗಿಯಿತು, ಏನಾದರೂ ಮಾಡಬೇಕು ಎಂದು ಬಾಷಾನ ಕೈ ಗಟ್ಟಿಯಾಗಿ ಕಚ್ಚಿಬಿಟ್ಟಳು. ಒಮ್ಮೆಲೇ ನಡೆದ ಈ ಘಟನೆಗೆ ಬಾಷಾ ನೋವಿನಿಂದ ಮುಖ ಕಿವುಚಿದ. ಆದರೆ ಅವನ ಹಿಡಿತ ಮಾತ್ರ ಸಡಿಲವಾಗಿರಲಿಲ್ಲ. ಸಿಟ್ಟಿನಿಂದ ಅವಳ ಮುಖ ನೋಡಿ ಹತ್ತಿರ ಎಳೆದು ತಾನು ಹೊಡೆದು ಅಂಗೈ ಮೂಡಿದ ಕೆನ್ನೆಯನ್ನು ಗಟ್ಟಿಯಾಗಿ ಕಚ್ಚಿದ. 
ತಡೆಯಲಾರದ ನೋವಿಗೆ "ಅಮ್ಮಾ.." ಎಂದು ಕೂಗಿದಳು ಸ್ವಯಂವರಾ. ಆ ಕೂಗು ಕ್ಷಾತ್ರನಿಗೆ ಸ್ಪಷ್ಟವಾಗಿ ಕೇಳಿಸಿತು. ಸ್ವಯಂವರಾಳ ಕಣ್ಣಿನಿಂದ ನೀರು ಹರಿಯತೊಡಗಿತು. ಬಾಷಾ ಅವಳ ಅಂಗಸೌಷ್ಟವವನ್ನೇ ನೋಡುತ್ತಾ ಆಕೆಯನ್ನು ಮತ್ತೂ ಗಟ್ಟಿಯಾಗಿ ತಬ್ಬಿ "ಹುಂ.. ಹೊಡಿ ಜೀಪು.." ಎಂದ.
*.............................................................*................................................................*
ಹೊರಗೆ ಗಲಾಟೆ ಶುರುವಾದದ್ದೇ ತನ್ನ ನಡೆ ಚುರುಕಾಗಿಸಿದ ಶಾಸ್ತ್ರಿ. ಹೇಗಾದರೂ ಮಾಡಿ, ಯಾರಿಗೂ ತಿಳಿಯದಂತೆ ಮೇನ್ ಗೇಟ್ ಬಳಿ ತಲುಪಿ ಬಿಟ್ಟರೆ ಮುಂದೆ ಏನಾಗುತ್ತದೋ ನೋಡಬಹುದು. ಹೊರಗೆ ಅಷ್ಟು ಗಲಾಟೆ ಇದ್ದರು ಜೈಲಿನ ಆವರಣದೊಳಗೆ ಯಾವುದೇ ಚಲನವಲನ ಕಂಡು ಬರಲಿಲ್ಲ. ಬೆಳಿಗ್ಗಿನಿಂದಲೇ ಈ ಗಲಾಟೆ ಸಾಮಾನ್ಯವಾಗಿ ಹೋಗಿದ್ದರಿಂದ ಕಾವಲುಗಾರರು ಅದರ ಬಗ್ಗೆ ವಿಶೇಷ ಆಸಕ್ತಿ ತೋರಿಸಿರಲಿಲ್ಲ. 
ನಿಧಾನವಾಗಿ ಸಾಗುತ್ತ ಮೇನ್ ಗೇಟ್ ಬಳಿ ಬಂದುಬಿಟ್ಟಿದ್ದ ಶಾಸ್ತ್ರಿ. ಗೇಟಿನ ಬಳಿ ಇಬ್ಬರು ಗನ್ ಧಾರಿಗಳು ಕುಳಿತಿದ್ದರು. ಕತ್ತಲಿನಲ್ಲಿಯೇ ಸುತ್ತಲೂ ಗಮನಿಸಿದ ಶಾಸ್ತ್ರಿ. ದೂರದಲ್ಲಿ ಎತ್ತರದ ಗೋಡೆಯ ಮೇಲೆ ಪುಟ್ಟ ಮನೆಯಂತಿದ್ದ ಒಂದು ಚೌಕದಲ್ಲಿ ಗನ್ ಮ್ಯಾನ್ ನಿಂತಿದ್ದ. ಜೈಲಿನ ನಾಲ್ಕು ಮೂಲೆಯಲ್ಲಿ ಒಬ್ಬೊಬ್ಬರು ನಿಂತಿದ್ದಾರೆ. ಅವರ ಬಳಿ ಕತ್ತಲಲ್ಲೂ ಕಾಣುವ ಬೈನಾಕ್ಯುಲರ್ ಗಳಿರುತ್ತವೆ, ದೂರದವರೆಗೆ ರೇಂಜ್ ತೆಗೆದುಕೊಳ್ಳುವ ಗನ್ ಕೂಡ. ತನ್ನ ಸಣ್ಣ ತಪ್ಪು ಕೂಡ ತನ್ನನ್ನು ಪರಲೋಕಕ್ಕೆ ಕಳುಹಿಸಬಹುದು. ಗೇಟಿನ ಎದ ಪಕ್ಕದಲ್ಲಿ ಬೆಳೆಸಿದ್ದ ಪುಟ್ಟ ಗಾರ್ಡನ್ ನಲ್ಲಿ ಪೊದೆಗಳು ಬೆಳೆದುಕೊಂಡಿದ್ದವು. ವರಾಂಡದಲ್ಲಿ ಇರುವುದಕ್ಕಿಂತ ಅಲ್ಲೇಲ್ಲಾದರೂ ಅಡಗಿ ಕೂರುವುದು ಒಳಿತೆಂದು ಕಳ್ಳ ಹೆಜ್ಜೆ ಇಟ್ಟು ಆಕಡೆ ನಡೆದ. ಅಲ್ಲಿಯೇ ಇದ್ದ ನಾಗದಾಳಿ ಗಿಡಗಳ ಸಂದಿಯಲ್ಲಿ ಸುಮ್ಮನೆ ಹುದುಗಿ ಕುಳಿತ. ಅಲ್ಲಿಂದ ಹೊರ ಬಾಗಿಲು ಸರಿಯಾಗಿ ಕಾಣಿಸುತ್ತಿತ್ತು. ಅದಲ್ಲದೆ ಎರಡು ಮೂಲೆಯಲ್ಲಿ ಮೇಲೆ ನಿಂತು ಕಾವಲು ಕಾಯುವವರು ಸರಿಯಾಗಿ ಕಾಣುತ್ತಿದ್ದರು. 
ಮುಂದೇನು?? ಸರೋವರಾ ಏನು ವ್ಯವಸ್ಥೆ ಮಾಡಿದ್ದಾಳೆ?? ಇಲ್ಲಿಂದ ಹೊರಬೀಳಲು?? ಒಮ್ಮೆಲೇ ಶಾಸ್ತ್ರಿಗೆ ಮತ್ತೊಂದು ಯೋಚನೆ ಬಂದಿತು. ಸರೋವರಾ ಏನಾದರೂ ಪ್ರತಾಪ್ ಜೊತೆ ಸೇರಿ ನಾಟಕವಾಡುತ್ತಿದ್ದಾಳಾ?? ಆ ಯೋಚನೆಗೇಮೈ ಬೆವರಿ ಹೋಯಿತು ಶಾಸ್ತ್ರಿಗೆ. ತಾನು ಹೊರಗೆ ಕಾಲಿಡುತ್ತಲೇ ಎನಕೌಂಟರ್ ಮಾಡಿಬಿಟ್ಟರೆ? ಕುಳಿತಲ್ಲಿಯೇ ಮಿಸುಕಾಡಿದ ಶಾಸ್ತ್ರಿ. ಕೊನೆಯ ಕ್ಷಣದಲ್ಲಿ ಈ ಹಾಲು ಯೋಚನೆ ಏಕೇ ಬಂತು ಎಂದುಕೊಂಡ ಒಮ್ಮೆ. ತನ್ನ ಜೊತೆ ಸರೋವರಾ ನಡೆದುಕೊಂಡ ರೀತಿಯನ್ನು ಮತ್ತೊಮ್ಮೆ ಸ್ಮರಿಸಿಕೊಂಡ. ಯಾವುದೇ ಸಂದರ್ಭದಲ್ಲಿಯೂ ನಾಟಕವಾಡಿದಂತೆ ಅನ್ನಿಸಲಿಲ್ಲ. ಇಲ್ಲಿಯವರೆಗೆ ಬಂದಾಗಿದೆ. ಸಮುದ್ರಕ್ಕೆ ಇಳಿದಾಗಿದೆ. ಇನ್ನು ಚಳಿಯೇನು? ಮಳೆಯೇನು? ಏನಾಗುತ್ತದೆಯೋ ನೋಡಿಯೇ ಬಿಡೋಣ ಎಂದು ಹೊರಗಿನ ಗದ್ದಲವನ್ನೇ ಆಲಿಸುತ್ತ ಕುಳಿತ. 
ಅಷ್ಟರಲ್ಲಿ ಹೊರಗಡೆ ಗಲಾಟೆ ಹೆಚ್ಚಾಗುವಂತೆ ಜನರ ಕೇಕೆ ಜೋರಾಗತೊಡಗಿತು. ಯಾರೋ ಕಲ್ಲು ಒಗೆದದ್ದರಿಂದ ಜೈಲಿನ ಬಾಗಿಲು ಕಲ್ಲು ಬಡಿದು ಸದ್ದಾಯಿತು. ಜೈಲಿನ ಮುಖ್ಯ ದ್ವಾರದ ಬಳಿಯ ಲೈಟ್ ಹೊತ್ತಿಕೊಂಡಿದ್ದರಿಂದ ದೇಹವನ್ನು ಮತ್ತಷ್ಟು ಹಿಡಿ ಮಾಡಿಕೊಂಡು ಕುಳಿತುಕೊಂಡ. ಈಗೇನೋ ನಡೆಯಲಿದೆ ಎಂದು ಆತನ ಅಂತರಾತ್ಮ ಎಚ್ಚರಿಸಿತು. ಮತ್ತೆರಡು ಕಲ್ಲುಗಳು ತೂರಿಕೊಂಡು ಬಂದು ಜೈಲಿನ ಗೇಟಿಗೆ ಬಡಿಯಿತು. "ಜೈಲಿನ ಪ್ರಾಂಗಣದಿಂದ ದೂರ ಸರಿಯಿರಿ.. ಇಲ್ಲದಿದ್ದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.. " ಜೈಲಿನ ಮೂಲೆಯಲ್ಲಿದ್ದ ಮನೆಯಲ್ಲಿನ ಕಾವಲುಗಾರ ಮೈಕ್ ತೆಗೆದುಕೊಂಡು ಎಚ್ಚರಿಸತೊಡಗಿದ. ಬಾಗಿಲಿನ ಬಳಿ ನಿಂತಿದ್ದ ಕಾವಲುಗಾರರು ಗೇಟ್ ಭದ್ರವಾಗಿದೆಯೇ ಎಂದೊಮ್ಮೆ ಪರಿಶೀಲಿಸಿದರು. ಹೊರಗೆ ಹೀಗೆ ಗಲಾಟೆ ಆಗುತ್ತಿದ್ದರೆ ಒಮ್ಮೆ ಗೇಟ್ ಎಲ್ಲವನ್ನು ಪರೀಕ್ಷಿಸುವುದು ಕರ್ತವ್ಯ. 
ಶಾಸ್ತ್ರಿ ಇವೆಲ್ಲವನ್ನೂ ನೋಡುತ್ತಲೇ ಇದ್ದ. ಹೊರಗಡೆ ಗಲಾಟೆ ಮತ್ತೂ ಹೆಚ್ಚಾಯಿತು. ಸೇರಿದ್ದ ಜನರಲ್ಲಿ ಯಾರೋ ಒಬ್ಬ "ಇದೇನು ಸಿನೆಮಾವಯ್ಯಾ?? ಒಂದು ಸ್ವಲ್ಪವೂ ಸರಿಯಾಗಿಲ್ಲ. ಟ್ರೈಲರ್ ಅಷ್ಟೆ ಚೆನ್ನಾಗಿದೆ" ಎಂದು ಕೂಗಿದ. ಆಗ ಶುರುವಾಗಿತ್ತು ಅಭಿಮಾನಿಗಳ ದಾಂಧಲೆ. "ಯಾರು ಹಾಗೆ ಹೇಳಿದ್ದು?? ಯಾರು ಹಾಗೆ ಹೇಳಿದ್ದು?" ಎನ್ನುತ್ತಾ. 
ವಿರೋಧಿಗಳ ಗುಂಪೂ ದೊಡ್ಡದೇ ಇತ್ತು. ಅಲ್ಲಿಯೇ ಎರಡು ಗುಂಪುಗಳಾಗಿ ಹೊಡೆದಾಟ ಪ್ರಾರಂಭವಾಯಿತು. ಗೋಡೆಯ ಮೇಲೆ ಕಾವಲಿದ್ದವರಿಗೆ ಗುಂಪು ಘರ್ಷಣೆ ಕಣ್ಣಿಗೆ ಬಿದ್ದಿತು. "ಹೊರಗಡೆ ಗುಂಪು ಘರ್ಷಣೆ ಪ್ರಾರಂಭವಾಗಿದೆ. ಒಮ್ಮೆ ನೋಡಿ, ಇಲ್ಲದಿದ್ದರೆ ಪಜೀತಿ.. ನ್ಯೂಸ್ ಚಾನೆಲ್ ಗಳಿಗೆ ಹಬ್ಬ.. ಜೈಲಿನ ಬಳಿಯೇ ಹೊಡೆದಾಟ ಮುಖ ಪ್ರೇಕ್ಷಕ ಪೊಲೀಸರು.. ಎಂದು ಬಿಡುತ್ತಾರೆ.. ಬಾಗಿಲು ತೆಗೆದು ನೋಡಿ.. ಮೇಲಿನಿಂದ ನಾವು ನೋಡುತ್ತಿರುತ್ತೇವೆ ಯಾರು ಒಳ ಬರದಂತೆ.. " ಎಂದು ವಾಕಿಟಾಕಿಯಿಂದ ಬಾಗಿಲ ಬಳಿ ಇದ್ದವರಿಗೆ ಸೂಚನೆ ನೀಡಿದರು. 
ಕಾವಲು ಕುಳಿತಿದ್ದ ಇಬ್ಬರಿಗೂ ಅದು ಸರಿಯೆನ್ನಿಸಿ ಒಬ್ಬ ಗನ್ ತೆಗೆದುಕೊಂಡರೆ, ಇನ್ನೊಬ್ಬ ಲಾಠಿ ಹಿಡಿದು ಬಾಗಿಲು ತೆರೆದು ಹೊರ ಬಂದರು. ಹೊರಗಡೆ ನೂರಾರು ಸಂಖ್ಯೆಯಲ್ಲಿದ್ದರು ಜನರು. ಇವರು ಇಬ್ಬರೇ, ನೋಡಿದರೆ ತಿಳಿಯುತ್ತಿತ್ತು ಇಬ್ಬರಿಂದ ಏನು ಮಾಡಲು ಸಾಧ್ಯವಿಲ್ಲ ಎಂದು. ಆದರೂ ಪೊಲೀಸರಿಗೆ ಇವರೇನು ಮಾಡಿಯಾರು? ಎಂದು "ಸುಮ್ಮನಿರಿ.. ಯಾಕೆ ಹೊಡೆದಾಡುತ್ತಿರಿ.. ಒಳಗೆ ಹಾಕಿಬಿಡ್ತೀವಿ.." ಎಂದು ಬೆದರಿಸುತ್ತ ಗುಂಪಿನೆಡೆಗೆ ನಡೆದರು. 
ಬರುತ್ತಿರುವ ಪೊಲೀಸರು ಹಾಗು ಅವರ ಕೈಲಿರುವ ಗನ್ ನೋಡಿ ಅರ್ಧ ಜನ ಹೆದರಿ ದೂರ ಸರಿದರೆ, ಇನ್ನುಳಿದ ಪುಂಡರು ತಮಗೇನು ಗುಂಡು ಹೊಡೆದು ಸಾಯಿಸಲು ಸಾಧ್ಯವಾ? ಏನು ಮಾಡುತ್ತಾರೆ ನೋಡಿಯೇ ಬಿಡೋಣ.. ಎಂದು ಒಬ್ಬರನ್ನೊಬ್ಬರು ಎಳೆದಾಡುತ್ತಿದ್ದರು. 
ತಮ್ಮನ್ನು ಕಂಡೂ ಹೀಗೆ ಪೊಗರು ತೋರಿಸುತ್ತಿರುವುದಕ್ಕೆ ಮೈ ಉರಿದಿತ್ತು ಪೊಲೀಸರಿಗೆ. ಲಾಠಿ ಹಿಡಿದಿದ್ದ ಪೊಲಿಸ್ ಲಾಠಿ ಎತ್ತಿ ಎದುರಿಗಿದ್ದವನ ಕಾಲಿಗೆ ಪಟ್ ಎಂದು ಹೊಡೆದ ಅಷ್ಟೆ.. ಆಗ ನಡೆದಿತ್ತು ನಡೆಯಬಾರದ ಘಟನೆ..
"ಅಣ್ಣನ ಅಭಿಮಾನಿಗೆ ಹೊಡೆದುಬಿಟ್ಟ ಮಚ್ಚಿ.. ಹಿಡೀರಿ ಅವನನ್ನಾ..." ಗುಂಪಿನ ಮದ್ಯದಿಂದ ಯಾವಾಗ ಕೂಗು ಬಂತೋ ಹೊಡೆದಾಡುತ್ತಿದ್ದ ಎರಡು ಗುಂಪಿನವರು ತಮ್ಮ ತಮ್ಮಲ್ಲಿನ ಜಗಳ ಬಿಟ್ಟು ಪೊಲೀಸರನ್ನು ತಮ್ಮ ಮಧ್ಯೆ ಎಳೆದುಕೊಂಡರು. ಒಬ್ಬ ಲಾಠಿ ಕಸಿದರೆ, ಇನ್ನಿಬ್ಬರು ಸಿಂಗಲ್ ಬ್ಯಾರೆಲ್ ಗನ್ ಕಸಿದು ಬಿಟ್ಟರು. ಗನ್ ಕಸಿದವ ಅಷ್ಟಕ್ಕೇ ಸುಮ್ಮನಿರಲಿಲ್ಲ. ಲೋಡೆಡ್ ಗನ್ ಮೇಲೆತ್ತಿ ಗಾಳಿಯಲ್ಲಿ ಗುಂಡು ಹಾರಿಸಿದ. ಮಂಗಕ್ಕೆ ಹೆಂಡ ಕುಡಿಸಿ ಬಿಟ್ಟಂತಾಯಿತು ಅಲ್ಲಿದ್ದವರಿಗೆ. ಏನು ನಡೆಯುತ್ತಿದೆ? ಯಾರು ಗುಂಡು ಹಾರಿಸಿದರು? ಯಾರಿಗೆ ಗುಂಡು ಹಾರಿಸಿದರು? ಏನು ತಿಳಿಯದೆ ಜನ ಅಲ್ಲಿಂದ ಓಡತೊಡಗಿದರು. ಪರಿಸ್ಥಿತಿ ಕೈ ಮೀರಿದ್ದನ್ನು ಗಮನಿಸಿ ಗೋಡೆಯ ಮೇಲೆ ಕಾವಲು ನಿಂತವರು ಕೂಡ ಈ ಕಡೆ ಓಡಿ ಬರತೊಡಗಿದರು. 
ಮೇನ್ ಗೇಟ್ ತೆಗೆದಾಗಿಲಿನಿಂದ ನೋಡುತ್ತಲೇ ಇದ್ದ ಶಾಸ್ತ್ರಿ. ಯಾವ ಕ್ಷಣ ಹೊರಬೀಳಬೇಕು ಎಂದು ಯೋಚಿಸುತ್ತಲೇ ಇದ್ದ. ಆದರೆ ಗೋಡೆಯ ಮೇಲೆ ನಿಂತವರು ಗಮನಿಸುತ್ತಿರುತ್ತಾರೆ ಎಂದು ಸುಮ್ಮನೆ ಕುಳಿತಿದ್ದ. ಈಗ ಅವರು ಕೂಡ ಹೊರಗಡೆ ನೋಡುತ್ತಾ ಅತ್ತಲೇ ಸಾಗುತ್ತಿದ್ದಾರೆ. ಅವರಿಗೆ ಬಾಗಿಲ ಬಳಿ ಲಕ್ಷ ಇದ್ದಂತಿಲ್ಲ. ಇದಕ್ಕಿಂತ ಒಳ್ಳೆಯ ಸಮಯ ಸಿಗುವುದಿಲ್ಲ. ತಪ್ಪಿಸಿಕೋ.. ಎಂದಿತು ಮನಸ್ಸು. 
ಇಪ್ಪತ್ತು ಮೀಟರ್ ಅಷ್ಟೇ. ಮತ್ತೆ ಯೋಚಿಸಲಿಲ್ಲ ಶಾಸ್ತ್ರಿ. ಮನಸ್ಸು ಗಟ್ಟಿ ಮಾಡಿಕೊಂಡು ಬಾಗಿಲ ಕಡೆ ಓಡಿದ. ಎದೆ ಜೋರಾಗಿ ಹೊಡೆದುಕೊಳ್ಳುತ್ತಿತ್ತು. ಐದೇ ಸೆಕೆಂಡಿಗೆ ಆತ ಬಾಗಿಲ ಬಳಿ ಇದ್ದ. ಬಾಗಿಲು ತೆರೆದೇ ಇತ್ತು. ಹೊರಗೆ ಜನ ಚೆಲ್ಲಾಪಿಲ್ಲಿಯಾಗಿ ಓಡುತ್ತಿದ್ದರು. ಇನ್ನೊಂದು 25-30 ಮೀಟರ್ ಗಳು. ಹೊರಗೆ ಹೋದ ಪೊಲೀಸರು ಕಾಣಿಸುತ್ತಿದ್ದಾರಾ ನೋಡಿದ. ಅವರೆಲ್ಲೋ ಜನರ ಮಧ್ಯದಲ್ಲಿ ಕಳೆದುಹೋಗಿದ್ದಾರೆ, ಮತ್ತೆ ಯೋಚಿಸಲಿಲ್ಲ ಬಾಗಿಲಿನಿಂದ ತೂರಿಕೊಂಡು ಹೊರಬಂದ ಶಾಸ್ತ್ರಿ. 
ತಂಪನೆ ಹೊಸ ಉಸಿರು.. ಹೊಸ ಗಾಳಿ ಮುಖಕ್ಕೆ ರಾಚಿತು. ಬಾಗಿಲಿನಿಂದ ಸೀದಾ ಗುಂಪಿನೆಡೆಗೆ ಓಡಿದ ಶಾಸ್ತ್ರಿ. ಹೊರಗಡೆ ಗಮನಿಸುತ್ತಾ ಮೇಲಿನಿಂದ ಬರುತ್ತಿದ್ದ ಕಾವಲು ಪಡೆಯವನಿಗೆ ಶಾಸ್ತ್ರಿ ಓಡುತ್ತಿರುವುದು ಕಂಡಿತು. ಆದರೆ ಅವನು ಕೈದಿಯೊ, ಹೊರಗಿನವನೋ ಅರ್ಥವಾಗಲಿಲ್ಲ. ಆದರೂ "ತಪ್ಪಿಸಿಕೊಳ್ಳುತ್ತಿದ್ದಾನೆ ಹಿಡಿಯಿರಿ.. ಹಿಡಿಯಿರಿ.." ಎಂದು ಕೂಗಿಕೊಂಡ. ಜನರ ಕೂಗಿನಲ್ಲಿ ಆ ಕೂಗು ಅಸ್ಪಷ್ಟವಾಗಿ ಶಾಸ್ತ್ರಿಗೂ ಕೇಳಿಸಿತು. ಆದರೆ ಜನರ ಮಧ್ಯದಲ್ಲಿ ಸಿಕ್ಕಿಕೊಂಡ ಕಾವಲಿನವರಿಗೆ ಅರಿವಾಗಲಿಲ್ಲ. ಕಸಿದುಕೊಂಡ ಗನ್ ಎಲ್ಲಿದೆ ಎಂದು ಹುಡುಕುವುದರಲ್ಲಿದ್ದರು. ನಾಳೆ ಕೆಲಸ ಹೋಗುತ್ತದೆ ನಾವು ಮಾಡಿದ ತಪ್ಪಿಗೆ. ಜೈಲಿನ ಹೊರಗಡೆ ಏನೇ ನಡೆದರೂ, ಯಾವುದೇ ಪರಿಸ್ಥಿತಿಯಲ್ಲೂ ಗೇಟ್ ತೆಗೆದು ಹೊರ ಬರಬಾರದು ಎಂಬ ನಿಯಮ ಮೀರಿ ಹೊರಬಂದಿದ್ದಾರೆ. ಈಗ ಗನ್ ಕೂಡ ಎಳೆದುಕೊಂಡಿದ್ದಾರೆ ಎಂಬ ಚಿಂತೆ. ಅಷ್ಟರಲ್ಲಿ ಶಾಸ್ತ್ರಿ ಕೂಡ ಓಡುತ್ತಿದ್ದ ಗುಂಪಿನ ಮಧ್ಯ ಸೇರಿಕೊಂಡ. ಸುತ್ತಲೂ ನೋಡುತ್ತಲೇ ಓಡುತ್ತಿದ್ದ ಆತ. ತನ್ನನ್ನು ತಪ್ಪಿಸುವ ಹಿಂದಿರುವ ಮಾಸ್ಟರ್ ಮೈಂಡ್ ಸರೋವರಾ ಇಲ್ಲೆ ಎಲ್ಲಾದರೂ ಇರುವಳಾ ಎಂದು ಆತನ ಕಣ್ಣುಗಳು ಹುಡುಕುತ್ತಿದ್ದವು. ಓಡಿ ಬರುತ್ತಿದ್ದ ಕಾವಲಿನವನು ಶಾಸ್ತ್ರೀಯ ಮೇಲೆ ಒಂದು ಕಣ್ಣಿಟ್ಟುಕೊಂಡೇ ಬರುತ್ತಿದ್ದ. ಇಳಿಯುವ ಮೆಟ್ಟಿಲು ಜೈಲಿನ ಒಳಭಾಗಕ್ಕಿತ್ತು. ಆ ಕಡೆಯಿಂದ ಇಳಿದು ಬರುವ ವೇಳೆಗೆ ಶಾಸ್ತ್ರಿ ತಪ್ಪಿಸಿಕೊಂಡಿರುತ್ತಾನೆ. ಹಾಗಾಗಬಾರದು ಮುಂದೆ ಯೋಚಿಸದೆ ಅವನು ಹೊರಗಡೆ ಜಿಗಿದಿದ್ದ. ಕೈ ಕಾಲು ಮುರಿದರೆ ಎಂಬ ಯೋಚನೆಗಿಂತ, ತಪ್ಪಿಸಿಕೊಳ್ಳುತ್ತಿರುವ ಕೈದಿಯನ್ನು ಹಿಡಿಯಬೇಕೆಂಬ ಹಂಬಲ. ಗುಂಪು ಚದುರಿದ್ದರಿಂದ ಓಡುತ್ತಿರುವ ಶಾಸ್ತ್ರಿ ಸರಿಯಾಗಿ ಕಾಣಿಸುತ್ತಿದ್ದ. ಗೋಡೆಯಿಂದ ಜಿಗಿದು ಒಮ್ಮೆ ನೆಲಕ್ಕೆ ಕುಳಿತು ಮತ್ತೆ ಶಾಸ್ತ್ರಿಯನ್ನು ಹಿಂಬಾಲಿಸಲು ಓಡತೊಡಗಿದ. 
ಶಾಸ್ತ್ರಿ ಅದನ್ನು ಗಮನಿಸಲೇ ಇಲ್ಲ. ಅವನ ಗಮನವೆಲ್ಲ ಸರೋವರಳನ್ನು ಹುಡುಕುವುದರಲ್ಲೇ ಇತ್ತು. ಅಷ್ಟರಲ್ಲಿ ಮತ್ತೆ ಗುಂಡು ಸಿಡಿದ ಸದ್ದು. ಅದರ ಹಿಂದೆಯೇ ಮತ್ತೊಂದು.. ಈ ಬಾರಿ ಜನರು ಮತ್ತು ಜೋರಾಗಿ ಕೂಗಿಕೊಂಡರು. ಓಡುತ್ತಿದ್ದ ಶಾಸ್ತ್ರಿಯು ಒಮ್ಮೆಲೇ ನಿಂತು ಬಿಟ್ಟ. ಯಾರಾದರೂ ನನಗೆ ಗುಂಡು ಹಾರಿಸುತ್ತಿದ್ದಾರಾ?? 
ಬೆಳಕು ಬರುತ್ತಿದ್ದ ಸ್ಟ್ರೀಟ್ ಲೈಟ್ ಪುಡಿ ಪುಡಿಯಾಗಿ ಒಮ್ಮೆಲೇ ಕತ್ತಲಾವರಿಸಿತು. ಜೊತೆಗೆ ಜನರ ಹಾಹಾಕಾರವು ಹೆಚ್ಚಿತು. ಕಣ್ಣು ಕತ್ತಲೆಗೆ ಹೊಂದಿಕೊಳ್ಳುವವರೆಗೆ ಏನು ಮಾಡಲು ತಿಳಿಯದೆ ಹಾಗೆಯೇ ನಿಂತ ಶಾಸ್ತ್ರಿ. ಇವೆಲ್ಲ ಪ್ಲಾನ್ ಸರೋವರಳದಾ?? ಗಾಳಿಗುಡ್ಡ ಏನಾದರೂ ಸಹಾಯಕ್ಕೆ ಬಂದನಾ?? ಅಥವಾ ಇನ್ನೇನಾದರೂ ನಡೆಯುತ್ತಿದೆಯಾ? ಅರ್ಥವಾಗಲಿಲ್ಲ ಶಾಸ್ತ್ರಿಗೆ. 
ಕಣ್ಣು ಕತ್ತಲೆಗೆ ಹೊಂದಿಕೊಂಡಿತು ಮುಂದೆ ನಡೆಯಬೇಕು.. ಅಷ್ಟರಲ್ಲಿ ಆತನ ಭುಜದ ಮೇಲೆ ಬಲವಾದ ಕೈ ಬಿತ್ತು.
ತಪ್ಪಿಸಿಕೊಂಡು ಓಡಲು ನೋಡಿದ ಶಾಸ್ತ್ರಿ. ಭುಜದ ಮೇಲೆ ಬಿದ್ದ ಕೈ ಈಗ ಶಾಸ್ತ್ರೀಯ ಕಾಲರ್ ಗಟ್ಟಿಯಾಗಿ ಹಿಡಿದು ಒಂದು ಕಡೆ ಎಳೆದೊಯ್ಯತೊಡಗಿತು. 
ಒಮ್ಮೆಲೇ ನಡೆದ ಈ ಘಟನೆಗೆ ಅವಾಕ್ಕಾಗಿ ಶಾಸ್ತ್ರಿ ತನ್ನನ್ನು ಹಿಡಿದವರು ಯಾರು ಎಂದು ಕತ್ತಲಲ್ಲೇ ನೋಡಲು ಪ್ರಯತ್ನಿಸಿದ. ಸ್ವಲ್ಪ ದೂರ ಆತನನ್ನು ದರದರನೆ ಎಳೆದುಕೊಂಡು ಹೋಗಿ ಹಿಡಿತ ಸಡಿಲಿಸಿದ ಶಾಸ್ತ್ರಿಯನ್ನು ಹಿಡಿದ ವ್ಯಕ್ತಿ.
"ಓಡದಿರು ಶಾಸ್ತ್ರಿ.. ನೀನು ಸ್ವಲ್ಪ ತಪ್ಪು ಹೆಜ್ಜೆ ಇಟ್ಟರು ಉಳಿಯಲಾರೆ.."
ಶಾಸ್ತ್ರಿಗೆ ಒಮ್ಮೆಲೇ ಆಶ್ಚರ್ಯವಾಯಿತು ಧ್ವನಿ ಕೇಳಿ.. ತನ್ನ ಸಂಶಯ ಸರಿಯೋ ಅಲ್ಲವೋ ಎಂದು ನೋಡಲು ಕತ್ತಲೆಯಲ್ಲೇ ಕಣ್ಣು ಕಿರಿದಾಗಿಸಿದ. 
ನಿಜವಾಗಿಯೂ ತನ್ನ ಕಣ್ಣುಗಳನ್ನು ತಾನೇ ನಂಬದಾದ. ಸರೋವರಾ ಒಬ್ಬಳೇ ಇಷ್ಟು ಪಕಡ್ಬಂದಿ ವ್ಯವಸ್ಥೆ ಮಾಡಲು ಸಾಧ್ಯವೇ ಇಲ್ಲ ಎಂದು ಆತನಿಗೆ ಅನ್ನಿಸುತ್ತಲೇ ಇತ್ತು. ಇದರ ಹಿಂದೆ ಇರುವ ಮಾಸ್ಟರ್ ಮೈಂಡ್ ಯಾರು ಎಂದು ಈಗ ತಿಳಿಯಿತು ಅವನಿಗೆ.
ಆದರೆ ಏಕೆ? ಹೇಗೆ? ಅರ್ಥವಾಗಲಿಲ್ಲ ಶಾಸ್ತ್ರಿಗೆ. ಪಕ್ಕದಲ್ಲೇ ಇದ್ದ ಸಣ್ಣ ರಸ್ತೆಯಲ್ಲಿ ಜೀಪ್ ನಿಂತಿತ್ತು. ಇಬ್ಬರು ಅಲ್ಲಿ ಬರುತ್ತಲೇ ಜೀಪಿನಿಂದ ಇಳಿದು ಬಂದ ಸರೋವರಾ ಶಾಸ್ತ್ರಿಯನ್ನು ಗಟ್ಟಿಯಾಗಿ ತಬ್ಬಿಕೊಂಡು ಮುಖದ ತುಂಬಾ ಮುತ್ತನಿಟ್ಟಳು. ಶಾಸ್ತ್ರಿಯು ಕೂಡ ಅಷ್ಟೇ ಗಟ್ಟಿಯಾಗಿ ತಬ್ಬಿಕೊಂಡ. ಅವನಿಗೆ ಸ್ವಲ್ಪ ನಾಚಿಕೆಯಾಯಿತು ಸುಮ್ಮನೆ ಎನಕೌಂಟರ್ ಎಂದುಕೊಂಡು ಇವಳ ಮೇಲೆ ಅನುಮಾನ ಪಟ್ಟೆನಲ್ಲಾ ಎಂದು. 
ನಮಗೆ ಸಮಯವಿಲ್ಲ... ಪೊಲೀಸ್ ಅಲರ್ಟ್ ಆಗುವ ಮುನ್ನ ಇಲ್ಲಿಂದ ಹೊರಬೀಳಬೇಕು.. ನಡೆಯಿರಿ.." ಎನ್ನುತ್ತಾ ಡ್ರೈವಿಂಗ್ ಸೀಟ್ ಹತ್ತಿದ ಆ ವ್ಯಕ್ತಿ.
ಶಾಸ್ತ್ರಿ ಸರೋವರಾ ಇಬ್ಬರು ಹಿಂದೆ ಕುಳಿತರು. 
"ಥ್ಯಾಂಕ್ಸ್.." ಶಾಸ್ತ್ರಿಗೆ ತನ್ನನ್ನು ನಂಬಿ ಇಷ್ಟು ಸಹಕರಿಸಿದ್ದಾನೆ ಎಂಬ ಭಾವ ತುಂಬಿತ್ತು ಮನದಲ್ಲಿ. 
"ಶಾಸ್ತ್ರಿ, ಈಗ ನೀನು ಕೂಡ ನನಗೆ ಸಹಾಯ ಮಾಡುವುದಿದೆ. ಥ್ಯಾಂಕ್ಸ್ ಅಲ್ಲಿಂದ ಅಲ್ಲಿಗೆ ವಜಾ.. ಮುಂದಿನದು ನಂತರ ನೋಡೋಣ.. "
ಸರೋವರಾಳ ಕಣ್ಣಿನಲ್ಲೂ ಕೃತಜ್ಞತಾ ಭಾವವಿತ್ತು. 
ತನ್ನಿಂದ ಏನು ಹೆಲ್ಪ್ ಬೇಕಾಗಿರುವುದು ಈತನಿಗೆ ಎಂದು ಯೋಚಿಸತೊಡಗಿದ ಶಾಸ್ತ್ರಿ..
ಮುಗುಳ್ನಗುತ್ತ ಎಕ್ಸಿಲೇಟರ್ ಮೇಲೆ ಕಾಲಿಟ್ಟು ಜೀಪ್ ಮುನ್ನಡೆಸಿದ ಕ್ಷಾತ್ರ....
.............................................................................................................................................................................

No comments:

Post a Comment