Sunday, April 3, 2016

ನಮ್ಮ ನಿಮ್ಮ ನಡುವೆ...
ಹಣೆ ಉಜ್ಜಿಕೊಳ್ಳುತ್ತಾ ಮಾರ್ಚುರಿಯಿಂದ ಹೊರಬಂದ ಇನಸ್ಪೆಕ್ಟರ್ ಕ್ಷಾತ್ರ. ಆತನ ಹೆಸರಿಗೂ, ಆತ ಬದುಕುವ ರೀತಿಗೂ ಬಹಳ ಸಾಮ್ಯವಿತ್ತು. ಆರಡಿ ಮನುಷ್ಯ, ಅಗಲವಾದ ಹಣೆ. ತೀಡಿದಂತಹ ಹುಬ್ಬು, ಉದ್ದ ಮುಖ, ಅದಕ್ಕೆ ಶೋಭೆ ತರುವ ಮೀಸೆ, ಕುರುಚಲು ಗಡ್ಡ, ಹರವಾದ ಮೈಕಟ್ಟು, ಜಿಮ್ ಮಾಡಿ ಹುರಿಗೊಳಿಸಿದ ಆಜಾನುಬಾಹು ಶರೀರ. ಪೋಲಿಸ್ ಡಿಪಾರ್ಟಮೆಂಟ್ ಗೆ ಸರಿ ಹೊಂದುವ ದೇಹ ಅವನದು. ಆತ ಸುಂದರನೇನೂ ಅಲ್ಲ. ಆದರೆ ಆತನ ಹೆಸರಿನಂತೆಯೇ ಮುಖದಲ್ಲಿರುವ ಕ್ಷಾತ್ರ ತೇಜಸ್ಸು ಅವನನ್ನು ಮತ್ತೆ ಮತ್ತೆ ನೋಡಲು ಪ್ರೇರೆಪಿಸುವಂತೆ ಮಾಡುತ್ತಿತ್ತು. ಆತನೂ ಹಾಗೆಯೇ ಬದುಕುತ್ತಿದ್ದ. ಆತನ ಐದು ವರ್ಷದ ಕೆರಿಯರಿನಲ್ಲಿ 38 ಬಾರಿ Transfer ಆಗಿದ್ದ. ಹತ್ತು ಬಾರಿ ಅವನು ಲೀವ್ ಗೆ ತೆರಳುವಂತೆ ಮೇಲಿನಿಂದ ಪತ್ರ ಬಂದಿತ್ತು. ಇದು ಹಿಂದೂಸ್ಥಾನದಲ್ಲಿ ನಿಷ್ಠೆಯಿಂದ ಕರ್ತವ್ಯವನ್ನು ನಿರ್ವಹಿಸುವವನೊಬ್ಬನಿಗೆ ಸಿಗುವ ಬಹುಮಾನ. ಈ ಕ್ರಿಯೆಗಳು ಆತನನ್ನು ಎಂದಿಗೂ ಬಳಲಿಸಿರಲಿಲ್ಲ, ಬದಲಾಗಿ ಪ್ರತಿಯೊಂದೂ ದಿನವೂ ಆತನ ಕಾರ್ಯವೈಖರಿಯನ್ನು ಗಟ್ಟಿಗೊಳಿಸುತ್ತಲೇ ಇತ್ತು. ಪೋಲಿ ಪುಂಡರಿಗೆ ಆತ ಸಿಂಹ ಸ್ವಪ್ನ.ಆತ ಬಂದು ನೆಲೆನಿಂತ ಎರಡು ವಾರಗಳಲ್ಲಿ ಹಪ್ತಾ ವಸೂಲಿ, ಮಟ್ಕಾ ದಂಧೆ, ಲೈಸೆನ್ಸ್ ಇಲ್ಲದ ಕ್ಲಬ್ಬುಗಳು, ಹನ್ನೊಂದರ ನಂತರವೂ ತೆರೆದಿರುವ ಪಬ್ಬುಗಳು, ಗಲ್ಲಿಯ ಮೂಲೆಯ ಹಸಿರು ಮನೆಯಲ್ಲಿ ನಡೆಯುವ ವೈಶ್ಯಾವಾಟಿಕೆ ಎಲ್ಲವೂ ಬಂದ್.
ತನ್ನ ಕೆಳಗಿನ ಆಫೀಸರ್ಸ್ ಗಳು, ಕಾನಸ್ಟೇಬಲ್ ಗಳೂ ಅಷ್ಟೆ. ಸಮಯಕ್ಕೆ ಸರಿಯಾಗಿ ಬಂದಿರಬೇಕು.ಆತನೂ ಹಾಗೆಯೇ ನಡೆದುಕೊಳ್ಳುತ್ತಿದ್ದ. ಎಲ್ಲಕ್ಕಿಂತ ಹೆಚ್ಚಾಗಿ ಕಿತ್ತು ತಿನ್ನುವ ಬುದ್ಧಿ ಆತನಿಗಿಲ್ಲ.
ಜನರ ರಕ್ಷೆಣೆಗೆ ಮೂರ್ತಿವೆತ್ತಂತ ಪೋಲಿಸ್ ಕ್ಷಾತ್ರ!!
ಆತ ಹೋಗಿ ನಿಂತು ಒಮ್ಮೆ "ಏಯ್" ಎಂದು ಕೂಗಿದರೆ ಎದುರಿಗಿದ್ದವರ ಎದೆ ಅದುರಿ ಬಿಡುತ್ತಿತ್ತು. ಅಂತಹ ಮನುಷ್ಯ ಕ್ಷಾತ್ರ.
ಕಳ್ಳರನ್ನು ಬಾಯಿಬಿಡಿಸುವುದು ಕೂಡಾ ನೀರು ಕುಡಿದಂತೆ. ಥರ್ಡ್ ಡಿಗ್ರಿ ಆತ ಎಂದೂ ಉಪಯೋಗಿಸುತ್ತಿರಲಿಲ್ಲ. ಅವರ ಹತ್ತಿರ ಸತ್ಯ ಬಿಡಿಸಲು ಅವನ ಡಿಗ್ರಿಗಳೇ ಬೇರೆ ಆಗಿದ್ದವು.
ಆದ್ದರಿಂದ ಐದು ವರ್ಷದಲ್ಲಿ ನೂರಕ್ಕೂ ಹೆಚ್ಚು Case Solve ಮಾಡಿದ ಮನುಷ್ಯನಾದರೂ Promotion ಸಿಗದೇ ಇನಸ್ಪೆಕ್ಟರ್ ಆಗಿಯೇ ಇದ್ದ, ಟ್ರಾನ್ಸಫರ್ ಆಗುತ್ತಲೇ ಇದ್ದ, ಕೆಲಸ ಮುಗಿಸುತ್ತಲೇ ಬಂದಿದ್ದ.
ಅಂತಹ ಕ್ಷಾತ್ರನಿಗೆ ಸರಿಯಾದ ಕೇಸ್ ಒಂದು ಸಿಕ್ಕಿತ್ತು. ಘಾಜಿಯಾಬಾದ್, ಉತ್ತರ ಪ್ರದೇಶದ ಮುಖ್ಯ ನಗರ. National Capital Region ಪಕ್ಕದಲ್ಲಿ ಇರುವ ಈ ಸಿಟಿಯಲ್ಲಿ ಪೋಲಿಸರಿಗಿಂತ ಹೆಚ್ಚು ಕಳ್ಳರಿದ್ದಾರೆ. ಹತ್ತು ಘಂಟೆ ರಾತ್ರಿಯಾಯಿತೆಂದರೆ ಕಪ್ಪು ಜಗತ್ತು ಕಣ್ಬಿಡುತ್ತದೆ. ಸಣ್ಣ ಸಣ್ಣ ಪುಂಡು ಪೋಕರಿಗಳು ರಾಜಕೀಯ ವ್ಯಕ್ತಿಗಳ ಬೆಂಬಲದಿಂದ ಪೊಗರು ತುಂಬಿದ ಹೋರಿಗಳಂತೆ ಗುಟುಕರಿಸುತ್ತಾ ಓಡಾಡುವ ಊರದು. ಅಲ್ಲಿಗೆ ಟ್ರಾನ್ಸಫರ್ ಆಗಿದ್ದ ಕ್ಷಾತ್ರ. ಕ್ಷಾತ್ರ ಬಂದು ಎರಡು ವಾರಗಳಿಗೆ ಕುದ್ದು ಆತನಿಗೆ ತಿಳಿದು ಹೋಗಿತ್ತು.
ತಾನು ಚಾಣಾಕ್ಷನಾಗಿ ಕೆಲಸ ಮಾಡಬೇಕಿಲ್ಲಿ ಇಲ್ಲದಿದ್ದರೆ ಪೋಲಿಸ್ ಎಂದೂ ಕೂಡ ನೋಡದೆ ಗುಂಡಿಟ್ಟು ಬಿಡುತ್ತಾರೆ. ಇಲ್ಲವೇ ಮರಳು ತುಂಬಿದ ಲಾರಿ ಗುದ್ದಿ ಬಿಡುತ್ತಾರೆ. ಕ್ಷಾತ್ರ ಎಂಬ ಆರಡಿಯ ಮನುಷ್ಯ ಇಲ್ಲದಂತೆ ಮಾಯವಾಗಿ ಬಿಡುತ್ತಾನೆ. ಸಿಕ್ಕಿಬಿದ್ದರೆ ಐದು ವರ್ಷದ ಜೈಲು. ಕಮಕಿಮ್ ಎನ್ನದೇ ಒಳಗೆ ಹೋಗಲು ಜನ ಸಿಗುತ್ತಾರೆ. ಹೊರಗೆ ಬಂದ ಮೇಲೆ ಬದುಕಲು ಆತನಿಗೆ ಬೇಕಾಗುವಷ್ಟು ದುಡ್ಡು ಆತನ ಮನೆ ಮುಟ್ಟಿರುತ್ತದೆ.
ಕ್ಷಾತ್ರ ತನ್ನ ಕಾರ್ಯ ಶೈಲಿ ಬದಲಾಯಿಸಿದ್ದ. ಹಾವು ಸಾಯಬಾರದು, ಕೋಲು ಮುರಿಯಬಾರದು. ಎಲ್ಲ ಫೈಲ್ ಗಳನ್ನು ತೆಗೆಸಿಕೊಂಡು ನೋಡುತ್ತಿದ್ದ, ವಿಷಯಗಳನ್ನು ಕಲೆ ಹಾಕುತ್ತಿದ್ದ. ಹಾವೂ ಹೆಡೆ ಬಿಚ್ಚುವುದರೊಳಗೆ ಬಡಿದು ಬಿಡಬೇಕು, ಮತ್ತೆ ಹೆಡೆ ಬಿಚ್ಚದಂತೆ ಬಡಿದುಬಿಡಬೇಕು,ಕಾಯತೊಡಗಿದ ಕ್ಷಾತ್ರ.
ಅಷ್ಟರಲ್ಲಿ ಇನ್ನೊಂದು ಕೊಲೆಯ ಕೇಸ್ ಬೆನ್ನು ಬಿಡದ ಬೇತಾಳದಂತೆ ಹಿಂದೆ ಬಿದ್ದಿತ್ತು. ಆ ಕೊಲೆಯಾದ ದಿನದಿಂದ, ಈಗ ಆತ ಮಾರ್ಚುರಿಯಿಂದ ನೋಡಿ ಹೊರಬರುತ್ತಿರುವುದು ಎಂಟನೆಯ ಕೊಲೆ. ಅದು ಆತನ ಜ್ಯುರಿಡಿಕ್ಷನಿನಲ್ಲಿ ನಡೆಯುತ್ತಿರುವ ಎರಡನೇ ಕೊಲೆ . ಮೇಲಿನಿಂದಲೇ ತಿಳಿಯುತ್ತಿದೆ ಈ ಕೊಲೆಗಳನ್ನೆಲ್ಲ ಮಾಡುತ್ತಿರುವುದು ಒಬ್ಬನೇ. ಸರಣಿ ಕೊಲೆಗಾರ. ಯಾಕೆ? ಯಾರು? ತಿಳಿಯದಾಗಿದೆ. ಮೇಲಿನ ಜನರಿಗಂತೂ ಕ್ಷಾತ್ರನನ್ನು ಹಣಿಯಲು ಒಂದು ನೆಪ ಸಿಕ್ಕಿದಂತಾಗಿತ್ತು. ಈಗ ತೋರಿಸು ನಿನ್ನ ಪೌರುಷ ಎಂದು ಗುಟುರು ಹಾಕುತ್ತಿದ್ದರು. ಎಷ್ಟೇ ತಡಕಾಡಿದರೂ ಒಂದು ಎಳೆಯೂ ಸಿಗುತ್ತಿಲ್ಲ. ಮೊದಲೆರಡು ಕೊಲೆಗಳು ನಡೆದಾಗ ಕ್ಷಾತ್ರನಿಗೆ ಗಮನಕ್ಕೆ ಬಂದಿರಲಿಲ್ಲ. ಆದರೀಗ ಒಂದರ ಹಿಂದೆ ಒಂದರಂತೆ ಎಂಟು ಕೊಲೆಗಳು. ಕ್ಷಾತ್ರನಿಗೆ ತಿಳಿದು ಹೋಗಿತ್ತು ಒಬ್ಬನೇ ಮಾಡುತ್ತಿರುವ ಕೊಲೆಯಿದು. ಆದರೆ ಯಾಕೆ? ಮತ್ತದೇ ಪ್ರಶ್ನೆ ಆತನ ಎದುರು ನಿಲ್ಲುತ್ತಿತ್ತು. ಕೊಲೆಯಾಗಿರುವ ವ್ಯಕ್ತಿಗಳ ಮಧ್ಯೆ ಏನಾದರೂ ಸಂಬಂಧವಿದೆಯಾ ಎಂದು ತಡಕಾಡಿದ್ದ. ಉಳಿದ ಪೋಲಿಸ್ ಸ್ಟೇಷನ್ಗಲಿಂದಲೂ ಫೈಲ್ ತರಿಸಿಕೊಂಡು ವಿವರ ಗಮನಿಸಿದ್ದ. ಉಹುಂ, ಸಿಗುತ್ತಿಲ್ಲ. Missing Link ಸಿಗುತ್ತಿಲ್ಲ. ಒಂದು ಕೊಂಡಿ ಸಿಕ್ಕರೆ ಸಾಕು, ಕ್ಷಾತ್ರ ಅದರ ತಾಯಿ ಬೇರಿನವರೆಗೆ ತಲುಪಿ ಬಿಡಬಲ್ಲ. ಆದರೆ ಮೊದಲ ಬಿಳಲೇ ಸಿಗುತ್ತಿಲ್ಲ ಅವನಿಗೆ.
ದೆಹಲಿಯ ಸುತ್ತಮುತ್ತ ಎರಡು ತಿಂಗಳಲ್ಲಿ ಇಪ್ಪತ್ತೊಂದು ಕೊಲೆಗಳು ನಡೆದಿವೆ. ಆ ಇಪ್ಪತ್ತೊಂದು ಕೊಲೆಗಳಲ್ಲಿ ಬಡವರು, ಶ್ರೀಮಂತರು ಎಲ್ಲರೂ ಇದ್ದಾರೆ. ಅದರಲ್ಲಿ ನಾಲ್ಕು ಕೊಲೆಗಳು ಹಳೆಯ ವೈಷಮ್ಯಕ್ಕಾಗಿಯೂ, ಎರಡು ಹಳೆಯ ಪ್ರೇಮಿಗಳ ಅಂದ ಪ್ರೀತಿಯಿಂದಲೂ, ಇನ್ನೆರಡು ರಿಯಲ್ ಎಸ್ಟೇಟ್, ಮತ್ತೆರಡು ಬೇಡದ ಸಂಬಂಧಗಳಿಗೂ ನಡೆದ ಕೊಲೆಗಳು. ಅದನ್ನೆಲ್ಲ ಪೋಲಿಸರು ಬೇಧಿಸಿದ್ದಾರೆ. ಇನ್ನು ಮೂರು ಕೊಲೆ ಪ್ರಕರಣ ವಿಚಾರಣೆಯಲ್ಲಿದೆ. ಆದರೆ ಉಳಿದ ಎಂಟು ಕೊಲೆಗಳು ಮಾತ್ರ ಪ್ರಶ್ನಾರ್ತಕ ಚಿಹ್ನೆಯಾಗಿಯೇ ಉಳಿದಿದೆ. ಕೊಲೆಯಾದ ವ್ಯಕ್ತಿಗಳಿಂದ ಯಾವುದೇ ವಸ್ತುಗಳು ಕಾಣೆಯಾಗುತ್ತಿಲ್ಲ. ಹಳೆ ವೈಷಮ್ಯ ಎಂದುಕೊಂಡರೆ ಒಬ್ಬನೇ ವ್ಯಕ್ತಿಗೆ ಇಷ್ಟೊಂದು ಜನಗಳ ಮೇಲೇಕೆ ವೈಷಮ್ಯ!? ಎಲ್ಲವೂ ಸಂದೇಹವಾಗೆ ಉಳಿದಿತ್ತು.
ಹಣೆಗೆ ಕೈ ಹಚ್ಚಿ ಕುಳಿತು ಬೇರೆ ಬೇರೆ ಕಡೆಯಿಂದ ತರಿಸಿಕೊಂಡ ಎಲ್ಲ ಫೈಲ್ ಗಳನ್ನು ಒಂದೊಂದಾಗಿ ಬಿಡಿಸಿ ನೋಡತೊಡಗಿದ ಕ್ಷಾತ್ರ.ಕೊಲೆಯಾಗಿ ಬಿದ್ದ ಜಾಗ, ಬಿದ್ದುಕೊಂಡಿದ್ದ ರೀತಿ, ಕೊಲೆಗೆ ಉಪಯೋಗಿಸಿರಬಹುದೆಂಬ ಹತ್ಯಾರಗಳು, ಫಿಂಗರ್ ಪ್ರಿಂಟ್ ಗಳು, ವ್ಯಕ್ತಿಯ ವಿವರ, ಮಾಡುತ್ತಿರುವ ಕೆಲಸ ಎಲ್ಲದರ ಬಗ್ಗೆಯೂ ವಿವರಗಳು, ಚಿತ್ರಗಳು ಇದ್ದವು.
ಕೊಲೆಯನ್ನು ಒಬ್ಬನೇ ಮಾಡುತ್ತಿರುವುದರಿಂದ ಆತ ಮಾನಸಿಕ ರೋಗಿಯೋ ಅಥವಾ ಸೈಕೋಪಾತ್ ಆಗಿರಬೇಕು ಎಂದುಕೊಂಡ ಕ್ಷಾತ್ರ. ಇನ್ಯಾವುದೇ ಕಾರಣ ಆತನಿಗೆ ಹೊಳೆಯುತ್ತಿಲ್ಲ.
ಪಕ್ಕದಲ್ಲಿದ್ದ ಫೋನ್ ಕೈಗೆತ್ತಿಕೊಂಡ. ಡೈರೆಕ್ಟರಿಯಿಂದ ನಂಬರ್ ತೆಗೆದು ದೆಹಲಿಯ ಮುಖ್ಯ ಮಾನಸಿಕ ಚಿಕಿತ್ಸಾಲಯಕ್ಕೆ ಫೋನ್ ಮಾಡಿದ.
"ದೀನದಯಾಳ್ ಮೆಂಟಲ್ ಎಜುಕೇಷನ್ ಎಂಡ್ ರಿಸರ್ಚ್ ಆಫ್ ಸೈಕಾಲಜಿ" ಮಧುರವಾದ ಧ್ವನಿಯೊಂದು ಉಲಿಯಿತು ಆ ಕಡೆಯಿಂದ.
"ಇನಸ್ಪೆಕ್ಟರ್ ಕ್ಷಾತ್ರ" ಎಂದ.
"ಹೇಳಿ, ನಮ್ಮಿಂದ ಏನಾಗಬೇಕು?" ಮಾತನಾಡುತ್ತಿರುವುದು ಇನಸ್ಪೆಕ್ಟರ್ ಎಂದು ತಿಳಿಯುತ್ತಲೇ ಧ್ವನಿಯಲ್ಲಿ ಮತ್ತೂ ನಮ್ರತೆ ತುಂಬಿದಂತೆ ಕಂಡಿತು.
"ಮಾನಸಿಕ ರೋಗಕ್ಕೆ, ಮನಸ್ಸಿಗೆ ಸಂಬಂಧಪಟ್ಟ ವಿಷಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಮಾಹಿತಿ ಬೇಕಿತ್ತು" ಎಂದ ಆತ.
ಇನಸ್ಪೆಕ್ಟರಗಳು ಕೂಡ ಡಾಕ್ಟರ್ ಗಳಾಗಲು ನಿಂತರೆ ನಮಗೆ ಕೆಲಸವೇನು ಉಳಿಯುತ್ತದೆ? ಎಂದು ಮನಸ್ಸಿನಲ್ಲೇ ಅಂದುಕೊಂಡಳೇ ಹೊರತೂ ಹೊರಗಡೆ ಹೇಳಲಿಲ್ಲ.
"ಏನಾಗಿತ್ತು?" ನಮ್ರತೆ ತುಂಬಿದ ಅದೇ ದ್ವನಿಯಲ್ಲಿ ಉಲಿದಳು ಆಕೆ. ಕ್ಷಾತ್ರ ಅಂತಹ ತಲೆ ಬಿಸಿಯ ಸಮಯದಲ್ಲೂ ಆ ದ್ವನಿಯ ಸಿಹಿಯನ್ನು ಸ್ವಾದಿಸುತ್ತಿದ್ದ.
"ಡಾಕ್ಟರ್ಸ್ ಇದ್ದರೆ ಕರೆಯಿರಿ. ಅವರ ಬಳಿಯೇ ಮಾತನಾಡಬೇಕಿತ್ತು" ಎಂದ ಕ್ಷಾತ್ರ.
"ಹೇಗೆ ಕಾಣಿಸ್ತೇನ್ರಿ ನಿಮ್ಗೆ!! ನಾನು ನೋಡೋಕೆ ಡಾಕ್ಟರ್ ಥರ ಕಾಣಲ್ವೇನ್ರಿ?"ಸಿಟ್ಟಿನಿಂದ ಹೇಳಿಬಿಟ್ಟಳು ಸ್ವಯಂವರಾ. ಆಗಷ್ಟೇ ಒಬ್ಬ ರೋಗಿಯನ್ನು ಅಟೆಂಡ್ ಮಾಡಿ ಬಂದಿದ್ದಳವಳು. ಗಂಡುಗಳು ಹೆಣ್ಣಾಗಿಯೂ, ಹೆಣ್ಣುಗಳು ಗಂಡಾಗಿಯೂ ಕಾಣುವ ಕಾಯಿಲೆ ಇತ್ತವನಿಗೆ. ಅನೇಕ ಹುಡುಗಿಯರನ್ನು ಗಂಡು ಹುಡುಗರಂತೆ ಮಾತನಾಡಿಸಿ ಏನೇನೋ ಹೇಳಿ ಹೊಡೆತ ತಿಂದಿದ್ದ. ನನಗೆ ಮದುವೆಯಾಗಬೇಕು ಎಂದು ಇನ್ನೊಂದು ಗಂಡನ್ನು ತೋರಿಸಿ "ಇವಳು ತುಂಬಾ ಚೆನ್ನಾಗಿದ್ದಾಳೆ, ನಾನು ಮದುವೆಯಾದರೆ ಇವಳನ್ನೇ" ಎಂದು ಹುಡುಗನ ಹಿಂದೆ ಬಿದ್ದಾಗ ಈತನ ಕಾಟ ತಾಳಲಾರದೆ ಮಾನಸಿಕ ಕೇಂದ್ರಕ್ಕೆ ತಂದು ಸೇರಿಸಿದ್ದರು.
ಸ್ವಯಂವರಾ ಆತನನ್ನು ನೋಡಲು ಒಳಹೋಗುತ್ತಲೇ ಅಲ್ಲಿರುವ ಗಂಡು ಜೀವಗಳೆಲ್ಲ ಅವನಿಂದ ದೂರ ಸರಿದು ನಿಂತಿದ್ದರು. ಏನಾಗಿದೆ ಎಂದು ಅವಳು ಊಹಿಸಿದ್ದಳು. ಅವಳು ಒಳಹೊಗುತ್ತಲೇ "ನೋಡಿ ಡಾಕ್ಟರ್.. ನನ್ನ ನೋಡಿ ಹುಡುಗಿಯರೆಲ್ಲ ಏಕೆ ಹೀಗೆ ಓಡುತ್ತಾರೆ? ನೀವಾದರೂ ಹೇಳಿ" ಎಂದ ಆತ.
ನೋಡಲು ಸುರದ್ರುಪಿ, ಗಟ್ಟಿಯಾಗಿ ಚೆನ್ನಾಗಿಯೇ ಇದ್ದಾನೆ. ಅದು ಅಲ್ಲದೆ ತಾನು ಹಿಂದೆ ಎಂದು ಕೇಳಿರದ ಕಾಯಿಲೆ ಬೇರೆ, ಏನಪ್ಪಾ ಸಮಸ್ಯೆ ಎಂದುಕೊಳ್ಳುತ್ತಾ "ನಾನು ಸರಿ ಮಾಡುತ್ತೇನೆ. ನೀವೇನು ವರಿ ಮಾಡಿಕೊಳ್ಳಬೇಡಿ" ಎಂದಿದ್ದೆ ತಡ "ನೀವು ನನ್ನ ಪಾಲಿನ ದೇವರು " ಎನ್ನುತ್ತಾ ಅವಳ ಹತ್ತಿರ ಬಂದು ಅವಳನ್ನು ಗಟ್ಟಿಯಾಗಿ ಅಪ್ಪಿಕೊಂಡುಬಿಟ್ಟ. ಕಕ್ಕಾಬಿಕ್ಕಿಯಾಗಿಬಿಟ್ಟಳು ಸ್ವಯಂವರಾ!!
ಆತ ಬೇಕಂತಲೇ ಮಾಡಿದನಾ? ಹುಚ್ಚನಂತೆ ನಟಿಸುತ್ತಿದ್ದನಾ. ಎಂದು ಅವನ ಮುಖ ನೋಡಿದಳು. ಯಾವ ಭಾವವೂ ಇಲ್ಲದೇ ಸರಿಯಾಗಿಯೇ ಇದ್ದ ಆತ. ಕೇವಲ ತನ್ನ ಕೃತಜ್ಞತೆ ವ್ಯಕ್ತಪಡಿಸಿದ್ದ. ಸ್ವಯಂವರಾಳ ಮುಖ ಕೆಂಪು ಕೆಂಪಾಗಿತ್ತು. ದೂರ ನಿಂತಿದ್ದ ಕಂಪೌಂಡರ್ ಗಳು ಒಬ್ಬರ ಮುಖ ಒಬ್ಬರು ನೋಡಿ ಹಲ್ಲು ಕಿಸಿಯುತ್ತಿದರು. ಕಾಲಿನ ಬುಡದಿಂದ ಸಿಟ್ಟು ಕಿತ್ತುಕೊಂಡು ಬಂದಿತ್ತವಳಿಗೆ. ಹುಚ್ಚರ ಸಹವಾಸವೇ ಅಲ್ಲ ಎಂದುಕೊಳ್ಳುತ್ತ ಹೊರಬಂದಿದ್ದಳು.
ಅದೇ ಗುಂಗಿನಲ್ಲಿರುವಾಗಲೇ ಕ್ಷಾತ್ರ ಫೋನ್ ಮಾಡಿದ್ದ. ಆ ಮಾನಸಿಕ ರೋಗಿಗೆ ಬಯ್ಯಬೇಕು ಎಂದುಕೊಳ್ಳುತ್ತಿದ್ದ ವಿಷಯವನ್ನೇ ಅವನಿಗೆ ಕಿರುಚಿದ್ದಳು ಫೋನಿನಲ್ಲಿ.
ಕ್ಷಾತ್ರ ನಕ್ಕು "ಸಾರಿ, ನಾನು ಅಟೆಂಡರ್ ಎತ್ತಿದ್ದಾರೆ ಎಂದುಕೊಂಡೆ, ಸಿಟ್ತಾಗ್ಬೇಡಿ. ಅದೂ ಅಲ್ದೇ ಲ್ಯಾಂಡ್ ಲೈನಿನಲ್ಲಿ ಎದುರಿಗಿರುವ ವ್ಯಕ್ತಿಯನ್ನು ನೋಡುವ ಸೌಭಾಗ್ಯವನ್ನು ಇನ್ನೂ ನಮಗೆ ಒದಗಿಸಿಲ್ಲ ಈ ಕ್ಷಣದಲ್ಲಿ ಎಂತ ದುರದ್ರಷ್ಟ ಎಂದು ನನಗು ಅನ್ನಿಸುತ್ತಿದೆ" ಎಂದ.
ಗಂಡುಗಳೇ ಹೀಗೆ. flirt ಮಾಡಲು ಕಾಯುತ್ತಿರುತ್ತಾರೆ. ಅಲ್ಲದೆ ನಾನು ಸುಮ್ಮನೆ ರೇಗಿದೆ ಎಂದನಿಸಿತವಳಿಗೆ. "ಅದು ಸರೀರಿ" ಎನ್ನುತ್ತಾ ನಕ್ಕು "ಯಾವ ವಿಷಯದ ಬಗ್ಗೆ ಮಾಹಿತಿ ಬೇಕು" ಎಂದು ಕೇಳಿದಳು.
"ವಿಷಯ ಸ್ವಲ್ಪ ದೊಡ್ಡದಿದೆ. ನೀವು ಯಾವಾಗ ಫ್ರೀ ಇದ್ದೀರಾ ಎಂದರೆ ಫೈಲಿನ ಜೊತೆ ನಾನೇ ಬರುತ್ತೇನೆ" ಎಂದ ಕ್ಷಾತ್ರ.
"ಸರಿ ಯಾವಾಗ ಬೇಕಾದರೂ ಬನ್ನಿ. ಬೆಳಿಗ್ಗೆ ಒಂಬತ್ತರಿಂದ ಸಂಜೆ ಆರರವರೆಗೂ ನನ್ನ ಡ್ಯೂಟಿ" ಎಂದಳು.
"ಓಕೆ ಹಾಗಾದರೆ ನಾಳೆ ಬರುತ್ತೇನೆ. ಅಂದ ಹಾಗೆ ನಿಮ್ಮ ಹೆಸರು?" ಎಂದ ಕ್ಷಾತ್ರ.
"ಸ್ವಯಂವರಾ" ಎಂದಳವಳು. ಬಂದ ನಗುವನ್ನು ಪ್ರಯತ್ನಪೂರ್ವಕವಾಗಿ ತಡೆಹಿಡಿದ ಕ್ಷಾತ್ರ. "ಸರಿ, ನಾಳೆ ಸಿಗುತ್ತೇನೆ" ಎಂದ.
ಓಕೆ ಎಂದೂ ಹೇಳದೆ ರಿಸಿವರ್ ಇಟ್ಟುಬಿಟ್ಟಳು ಸ್ವಯಂವರಾ. ತನ್ನ ಹೆಸರು ಕೇಳುತ್ತಲೇ ಆತ ಮನಸ್ಸಿನಲ್ಲಿಯೇ ನಕ್ಕ ಎಂಬುದು ಅವಳಿಗೆ ತಿಳಿದಿತ್ತು. ಸ್ವಯಂವರಾ ತನ್ನ ಜೊತೆ ಮಾತನಾಡಿದವರ ಮೆದುಳನ್ನು ಸಹ ಓದಬಲ್ಲಳೆಂಬ ವಿಷಯ ಕ್ಷಾತ್ರನಿಗೆ ಆಗ ತಿಳಿಯದೇ ಹೋಯಿತು. ಎಲ್ಲದಕ್ಕೂ ಸಹ ಒಂದು ಕಾಲವಿರುತ್ತದೆ.
"ಸ್ವಯಂವರಾ.. ಸ್ವಯಂವರಾ" ಎನ್ನುತ್ತಾ ದೊಡ್ಡದಾಗಿ ನಕ್ಕು ಫೈಲ್ ತೆಗೆದುಕೊಂಡು ಸ್ಟೇಷನ್ ಇಂದ ಹೊರಬಿದ್ದ ಕ್ಷಾತ್ರ. ಯಾರಿರಬಹುದು ಈ ಕೊಲೆಗಳ ಹಿಂದೆ? ಯಾರಿರಬಹುದು? ಎನ್ನುತ್ತಲೇ ಜೀಪ್ ಏರಿದ.
ಮರುದಿನ ಬೆಳಿಗ್ಗೆ ಒಂಬತ್ತಕ್ಕೆಲ್ಲಾ ಮನೆಯಿಂದ ಹೊರಟ ಕ್ಷಾತ್ರ. ಹಿಂದಿನ ದಿನ ಫೈಲ್ ಮನೆಗೆ ತಂದಿದ್ದರಿಂದ ಸ್ವಯಂವರಾಳನ್ನು ಕಂಡೆ ಸ್ಟೇಷನ್ ಗೆ ಹೋಗೋಣ ಎಂದುಕೊಂಡ. 'ಸ್ವಯಂವರಾ' ವಿಚಿತ್ರ ಹೆಸರು ಎಂದುಕೊಂಡ. ಬೆಳಗಿನ ಟ್ರಾಫಿಕ್ ನಲ್ಲಿ ತಪ್ಪಿಸಿಕೊಂಡು ದೀನ್ ದಯಾಳು ಮಾನಸಿಕ ಕೇಂದ್ರ ತಲುಪುವವರೆಗೆ ಹತ್ತೂವರೆಯಾಗಿತ್ತು. ಹಿಂದಿನ ದಿನ ರಾತ್ರಿ ಪೂರ್ತಿ ಕೊಲೆಯ ಬಗ್ಗೆಯೇ ಯೋಚಿಸುತ್ತಿದ್ದ. ಯಾವುದೇ ಕೋನದಿಂದ ಯೋಚಿಸಿದರೂ ಯಾವುದೋ ಮಾನಸಿಕ ರೋಗಿಯೇ ಇದನ್ನು ಮಾಡುತ್ತಿದ್ದಾನೆ ಎಂದು ಆತನ ಒಳ ಮನಸ್ಸಿಗೆ ಅನ್ನಿಸುತ್ತಿತ್ತು. ಬೇಗ ಇದನ್ನು ಕಂಡು ಹಿಡಿಯಬೇಕು. ಇಲ್ಲದಿದ್ದರೆ ಇನ್ನೆಷ್ಟು ಕೊಲೆಗಳೋ? ಕೊಲೆಗಾರನ ಮನಸ್ಥಿತಿ ಅರ್ಥವಾಗಿರಲಿಲ್ಲ ಆತನಿಗೆ. ಯಾವುದೇ ವಸ್ತುವನ್ನು ಕದಿಯುತ್ತಿರಲಿಲ್ಲ. ಕೊಲೆ ಕೂಡ ಒಂದೇ ರೀತಿ. ಕುತ್ತಿಗೆ ಹರಿದಿರುತ್ತದೆ. ಮತ್ತೆ...
"ಹಲೋ" ಹತ್ತಿರದಿಂದ ಬಂದ ಮೃದು ಧ್ವನಿಗೆ ತನ್ನ ಆಲೋಚನೆಯಿಂದ ಹೊರಬಂದ ಕ್ಷಾತ್ರ. ಆತ ಆಸ್ಪತ್ರೆಯ ವರಾಂಡದ ಮೆಟ್ಟಿಲೇರಿ ಉದ್ದದ ವರಾಂಡದಲ್ಲಿ ನಡೆಯುತ್ತಿದ್ದ.
"ಇನಸ್ಪೆಕ್ಟರ್ ಕ್ಷಾತ್ರ??" ಎಂದಳು. "ಹಾಂ" ಎಂದ.
"I am ಸ್ವಯಂವರಾ" ಎಂದಳು ಕೈ ಚಾಚುತ್ತ. ಆಗಷ್ಟೆ ಬಂದ ಅವಳು ಕೂಡ ರೌಂಡ್ಸ್ ಗೆ ಹೊರಟಿದ್ದಳು. ಪೋಲಿಸ್ ಜೀಪ್ ನಿಂತಿದ್ದು ಕಂಡು ಹಿಂದಿನ ದಿನ ಮಾತನಾಡಿದ್ದು ನೆನಪಾಗಿ ಅಲ್ಲಿಯೇ ನಿಂತಿದ್ದಳು. ಅವನದೇ ಯೋಚನೆಯಲ್ಲಿ ನಡೆದು ಬರುತ್ತಿದ್ದ ಕ್ಷಾತ್ರನನ್ನು ಅಡಿಯಿಂದ ಮುಡಿಯವರೆಗೆ ಗಮನಿಸುತ್ತಿದ್ದಳು.
ಕೈಚಾಚಿ "ಗುಡ್ ಮಾರ್ನಿಂಗ್ ಡಾಕ್ಟ್ರೆ" ಎಂದ. ಹಿಂದಿನ ದಿನದ ಸಂಭಾಷಣೆ ನೆನಪಾಗಿ ನಕ್ಕಳವಳು. ಆತ ತನ್ನ ಮುಖಚರ್ಯೆಯನ್ನು ತನ್ನ ಯೋಚನೆಗಳಿಗೆ ಅನುಗುಣವಾಗಿ ಬದಲಾಗದಂತೆ ತಡೆಯಲು ಪ್ರಯತ್ನಿಸುತ್ತಿದ್ದ.
ಅಷ್ಟು ಚಂದದ ಹುಡುಗಿ ಅವಳು. ನೋಡಿದರೆ ಮತ್ತೆ ಮತ್ತೆ ನೋಡಬೇಕು ಎಂಬ ಅಪೂರ್ವ ರೂಪ. ಅವಳ ಬಣ್ಣ, ಮುಖದ ಮೇಲಿನ ಪ್ರಶಾಂತತೆ, ಗಾಡ ಕಪ್ಪು ಬಣ್ಣದ ಅವಳ ಕಂಗಳು, ಆ ತುಟಿಗಳು. ಮೇಕ್ ಅಪ್ ಮಾಡುವ ಅವಶ್ಯಕತೆಯೇ ಇರಲಿಲ್ಲ ಅವಳು. ದೇವರು ಕೊಟ್ಟ ಸಹಜ ಸೌಂದರ್ಯ. ಕ್ಷಾತ್ರ ಏನನ್ನು ನೋಡಬೇಕು, ಏನನ್ನು ನೋಡಬಾರದು ಎಂಬ ಗೊಂದಲದಲ್ಲಿದ್ದ.
ಸ್ವಯಂವರಾಳಿಗೂ ಗೊತ್ತದು, ತನ್ನ ನೋಡಿದ ಹುಡುಗರ ಬಯಕೆ ಏನು ಇರುತ್ತದೆ ಎಂಬುದು. ಅವನ ಮುಖ ನೋಡಿ ತನ್ನ ಮನಸ್ಸಿನೊಳಗೆ ನಕ್ಕಳು ಸ್ವಯಂವರಾ. "ಬೆಳಿಗ್ಗೆ ಬೆಳಿಗ್ಗೆನೇ ಬಂದಿರುವಿರಲ್ಲ, ಬನ್ನಿ ಬನ್ನಿ" ಎಂದು ಮತ್ತೆ ತನ್ನ ಚೇಂಬರ್ ನ ಒಳನಡೆದಳು.
"ನಿಮ್ಮ ಸಹಾಯವಿಲ್ಲದೆ ಈ ಕೇಸ್ ಮುಂದೆ ಹೋಗದಂತೆ ಕಾಣದು. ಅದಕ್ಕೆ ಕೆಲವು ವಿಚಾರಗಳನ್ನು ಕೇಳಿ ಹೋಗಲು ಬಂದೆ"ಎಂದು ಅವಳನ್ನು ಹಿಂಬಾಲಿಸಿದ. ಹುಡುಗಿಯರನ್ನು ಹಿಂಬಾಲಿಸಿ ನಡೆಯುವುದು ಇಷ್ಟು ಥ್ರಿಲ್ ನೀಡುತ್ತದೆ ಎಂದು ಆಗೇ ತಿಳಿದಿದ್ದು ಕ್ಷಾತ್ರ ನಿಗೆ.
ಕುಳಿತುಕೊಳ್ಳುವಂತೆ ಕುರ್ಚಿ ತೋರಿಸಿ ತಾನು ಮೇಜಿನ ಆಕಡೆ ಕುಳಿತು "ಹೇಳಿ, ನನ್ನಿಂದೇನಾಗಬೇಕು?" ಎಂದಳು. ತುಂಬಾ ಪ್ರೊಫೆಶನಲ್ ವ್ಯಕ್ತಿಯಂತೆ ಕಂಡುಬಂದಳು ಅವಳು. ಇನಸ್ಪೆಕ್ಟರ್ ಎಂದರೆ ಎದುರಿಗಿನ ವ್ಯಕ್ತಿ ಯಾರಾದರೂ ಸರಿಯೇ ಸ್ವಲ್ಪ ಭಯ ಗೌರವದಿಂದ ಮಾತನಾಡುತ್ತಾರೆ. ಆದರೆ ಅವಳ ನಡೆಯಲ್ಲಿ ಆತರದ ಯಾವುದೇ ಭಾವನೆ ಕಾಣಲಿಲ್ಲ. 'ಡಾಕ್ಟರ್ ಗೆ ಎಲ್ಲರೂ ಪೇಶಂಟ್' ಗಳೇ ಎಂದುಕೊಳ್ಳುತ್ತ ತನ್ನೊಡನೆ ತಂದಿದ್ದ ಫೈಲ್ ಅವಳ ಮುಂದಿಡುತ್ತಾ ತನ್ನ ಶರ್ಟಿನ ಕಿಸೆಗೆ ಕೈ ಹಾಕಿದ.
"ಹಮ್, ನೋಡುತ್ತೇನೆ.. ಅಷ್ಟರಲ್ಲಿ ಬೇಕಾದರೆ ನೀವು ನಮ್ಮ ಆಸ್ಪತ್ರೆಯ ಹೊರಗಡೆ ಹೋಗಿ ಬರಬಹುದು" ಎನ್ನುತ್ತಾ ಫೈಲ್ ಬಳಿಗೆಳೆದುಕೊಂಡಳು.
ಕಿಸೆಯೊಳಗೆ ಹೋಗುತ್ತಿದ್ದ ಕೈ ತಡೆದು "ಯಾಕೆ?" ಎಂದ.
"ಸಿಗರೆಟ್ ಸೇದುವುದು ಮನ್ನಿಸಲಾಗಿದೆ ನಮ್ಮ ವರಾಂಡದಲ್ಲಿ" ಎಂದಳು ಬಗ್ಗಿಸಿದ ತಲೆಯನ್ನು ಮೇಲೆತ್ತದೆ. ಕಕ್ಕಾಬಿಕ್ಕಿಯಾದ ಕ್ಷಾತ್ರ. ಕೈ ತೆಗೆದು, ನೇರವಾಗಿ ಕುಳಿತ ಅವಳನ್ನೇ ನೋಡುತ್ತ. ಬರುತ್ತಿದ್ದ ನಗುವನ್ನು ಕಷ್ಟದಿಂದ ತಡೆದುಕೊಂಡು ಮುಖವನ್ನು ಗಂಟು ಹಾಕಿ ಫೈಲ್ ನೋಡುತ್ತಿದ್ದಳು.
ಹದಿನೈದು ನಿಮಿಷ ಫೈಲ್ ಅನ್ನು ಕೂಲಂಕುಷವಾಗಿ ನೋಡಿ ಭಾರವಾದ ನಿಟ್ಟುಸಿರು ಬಿಟ್ಟು ಮುಖ ಮೇಲೆತ್ತಿದಳು. ಅವಳ ಹಾವಭಾವವನ್ನೇ ನೋಡುತ್ತ ಕುಳಿತಿದ್ದ ಕ್ಷಾತ್ರ. ಅವಳು ಮುಖ ಮೇಲೇತ್ತುತ್ತಲೇ ಕಣ್ಣು ಬೇರೆಡೆಗೆ ಹೊರಳಿಸಿದ.
"ಈಗ ಹೇಳಿ, ಏನು ವಿವರ ಬೇಕು ಇದರ ಬಗ್ಗೆ?' ಎಂದು ಕೇಳಿದಳು.
"ಸ್ವಯಂವರಾ ಅವ್ರೆ, ನಿಮಗೂ ತಿಳಿದಿರಬಹುದು. ಈ ಕೊಲೆಗಳನ್ನೆಲ್ಲ ಗಮನಿಸಿದಲ್ಲಿ ಎಲ್ಲ ಕೊಲೆಗಳಲ್ಲಿ ಸಾಮ್ಯತೆಯಿದೆ. ಈ ಕೊಲೆಗಳನ್ನೆಲ್ಲ ಯಾರೋ ಒಬ್ಬನೇ ಮಾಡುತ್ತಿದ್ದಾನೆ ಎಂಬುದು ನನ್ನ ಅನುಮಾನ. ಈ ಸತ್ತ ವ್ಯಕ್ತಿಗಳಲ್ಲಿ ಯಾರಿಗೂ ಯಾರೂ ಸಂಬಂಧಪಟ್ಟವರಲ್ಲ. ಆದರೂ ಕೊಲೆ ಮಾಡಿದವನು ಮಾತ್ರ ಒಬ್ಬನೇ ಎಂದು ನನ್ನ ಅನುಮಾನ. ಆದ್ದರಿಂದ ಯಾವುದೋ ಒಬ್ಬ ಸೈಕೋಪಾತ್ ಈ ಕೊಲೆಗಳನ್ನು ತನ್ನ ಮನೋರಂಜನೆಗೆ ಮಾಡುತ್ತಿದ್ದಾನೆ ಎಂದೆನ್ನಿಸುತ್ತಿದೆ ನನಗೆ. ಈ ತರಹದ ಕೊಲೆಗಳು ಸಾಧ್ಯವಾ?" ಮಾತು ನಿಲ್ಲಿಸಿದ.
ಆತ ಹೇಳುವುದನ್ನೆಲ್ಲ ಕೇಳಿ "ಈ ಕೊಲೆಯನ್ನು ಮಾಡಿರುವುದು ಮಾನಸಿಕ ರೋಗಿಯಲ್ಲ." ಎಂದುಬಿಟ್ಟಳು.
"ಹೇಗೆ ಅಷ್ಟು ಖಡಾಖಂಡಿತವಾಗಿ ಹೇಳುತ್ತಿರಿ?"
"ಕ್ಷಾತ್ರ ಅವ್ರೆ, ಮಾನಸಿಕ ರೋಗಿಗಳು ಅಥವಾ ಸೈಕೋಪಾತ್ ಗಳು ಕೊಲೆಗಳನ್ನು ಮಾಡುತ್ತಾರೆ. ಅಮೇರಿಕಾದಲಿ ಒಬ್ಬ ಸೈಕೋಪಾತ್ ಹೀಗೆಯೇ 168 ಕೊಲೆಗಳನ್ನು ಮಾಡಿದ್ದ. ಆದರೆ ಆತನನ್ನು ಹಿಡಿಯುವುದು ಕಷ್ಟವಾಗಿತ್ತು. ಅವರು ಕೊಲೆಗಳನ್ನು ತಾವೇ ಮಾಡುತ್ತಿದ್ದೇವೆ ಎಂದು ತಿಳಿಯದಂತೆ ಮಾಡಲು ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ. ಹೀಗೆ ಸಿಕ್ಕಿಬೀಳುವಂತೆ ವರ್ತಿಸುವುದಿಲ್ಲ.
ಅದೂ ಅಲ್ಲದೇ ಪ್ರತೀ ಫೋಟೊಗಳನ್ನು ನೋಡಿ, ಕುತ್ತಿಗೆಯ ಒಂದೇ ಜಾಗದಲ್ಲಿ ಹರಿತವಾದ ಆಯುಧದಿಂದ ಹೊಡೆದ ಗುರುತುಗಳಿವೆ. ಇದನ್ನು ಮಾಡುತ್ತಿರುವವರು ತುಂಬ ಪ್ರೋಫೆಷನಲ್ ವ್ಯಕ್ತಿಗಳು. ಶ್ವಾಸನಾಳದ ಮತ್ತು ಕುತ್ತಿಗೆಯ ರಿಬನ್ ನಡುವೆ ಇರುವ ಜಾಗಕ್ಕೆ ಹೊಡೆದಿದ್ದಾರೆ. ಅಂದರೆ ಅದಕ್ಕೂ ಮೊದಲು ವ್ಯಕ್ತಿಯನ್ನು ಬಂಧಿಸಿದ್ದಾರೆ.
ಮಾನಸಿಕ ರೋಗಿಗಳು ಹೀಗೆ ಹೊಂಚಿ ಕೊಲ್ಲುವುದಿಲ್ಲ. ಅವರದ್ದು ಏನಿದ್ದರೂ ಆ ಕ್ಷಣ, ಆ ಗಳಿಗೆ ಅಷ್ಟೆ. ಅವರದ್ದು ತಮ್ಮ ಬೇಟೆಯನ್ನು ಹಿಂಸಿಸಿ ಆನಂದಿಸುವ ಮನಸ್ಥಿತಿ. ಆದರೆ ಇಲ್ಲಿ ಹಾಗೇನು ಕಾಣುವುದಿಲ್ಲ" ಎಂದಳು.
ಅವಳ ಅನಾಲಿಸೀಸ್ ನೋಡಿ ಇವಳು ಇಂಟಲಿಜನ್ಸ್ ವಿಂಗ್ ನಲ್ಲಿರಬೇಕಾಗಿತ್ತು ಎಂದುಕೊಂಡ ಕ್ಷಾತ್ರ . ಸಿಗರೇಟ್ ಸೇದಿದರೆ ಮಾತ್ರ ತನ್ನ ತಲೆ ಚುರುಕಾಗಿ ಯೋಚಿಸಬಲ್ಲದು ಎಂದು ಕ್ಷಾತ್ರ ಆಗಾಗ ಯೋಚಿಸುತ್ತಿದ್ದ. ಸಿಗರೇಟ್ ಸೇದಬೇಕು ಎಂದು ಬರುತ್ತಿದ್ದ ತನ್ನ ಮನದಾಸೆಯನ್ನು ಬಲವಂತವಾಗಿ ತಡೆದುಕೊಂಡು "ನೀವು ಕೊನೆಯಲ್ಲಿ ಹೇಳಿದಿರಲ್ಲ ಹಿಂಸೆ, ಪ್ರತೀ ಕೊಲೆಯಲ್ಲೂ ನಡೆಯುತ್ತಿದೆ. ಅದಕ್ಕೇ ನನಗೆ ಇದು ಮಾನಸಿಕ ರೋಗಿ ಮಾಡುತ್ತಿರುವ ಕೊಲೆ ಎಂದೆನ್ನಿಸುತ್ತಿದೆ." ಎಂದ.
"ಹಿಂಸೆಯಾ?" ಎಂದಳು ಆಶ್ಚರ್ಯದಿಂದ.
"ಹೌದು." ಆತ ಇನ್ನೊಂದು ಸಣ್ಣ ಕವರ್ ತೆಗೆದು ಅವಳ ಕೈಗಿತ್ತ. ಅದನ್ನು ನೋಡಿ ಅವಾಕ್ಕಾದಳು.
ಪೋಸ್ಟ್ ಮಾರ್ಟಂ ಮಾಡುವಾಗ ತೆಗೆದ ಚಿತ್ರಗಳವು. ಗಟ್ಟಿಮನಸ್ಸಿನ ಸ್ವಯಂವರಾ ಕೂಡ ಆ ಚಿತ್ರಗಳನ್ನು ನೋಡಿ ಅಧೀರಳಾದಳು. ಒಂದು ಶವಗಳಿಗೂ ಮರ್ಮಾಂಗವೇ ಇರಲಿಲ್ಲ. ಎಂಟು ಕೊಲೆಗಳಲ್ಲೂ ಇರುವ ಸಾಮ್ಯತೆ ಅದೇ. ಮರ್ಮಾಂಗವನ್ನು ಕಟ್ ಮಾಡಲಾಗಿದೆ. "ಮನುಷ್ಯನ ಮರ್ಮಾಂಗ ಕತ್ತರಿಸಿದರೆ ಎಂಥ ನೋವು, ಇದೇ ಹಿಂಸೆ" ಎಂದ ಕ್ಷಾತ್ರ.
ಯೋಚಿಸುತ್ತಿದ್ದಳು ಸ್ವಯಂವರಾ. ಎಲ್ಲೋ ಏನೋ ತಪ್ಪುತ್ತಿದೆ. ಇದು ಮಾನಸಿಕ ರೋಗಿ ಮಾಡುತ್ತಿರುವ ಕೊಲೆಗಳಂತೆ ಕಾಣುತ್ತಿಲ್ಲ. ಏನೋ ನಡೆಯುತ್ತಿದೆ ಎಂದುಕೊಳ್ಳುತ್ತಿದ್ದಳವಳು.
"ಇದೇ ಕಾರಣದಿಂದ ನಾನು ಹೀಗೆ ಹೇಳುತ್ತಿದ್ದೆ" ಮತ್ತೆ ಒತ್ತಿ ಹೇಳಿದ ಕ್ಷಾತ್ರ, ತನ್ನ ಅನಾಲಿಸೀಸ್ ತಪ್ಪಿಲ್ಲ ಎಂಬಂತೆ. ಅವಳೆದುರು ತಾನು ಚಿಕ್ಕವನಾದಂತೆ ಕಾಣುತ್ತಿತ್ತು ಅವನಿಗೆ. ಅದಕ್ಕೆ ತನ್ನ ಯೋಚನೆ ಸರಿಯೆಂದು ಅವಳಿಗೆ ಪ್ರೂವ್ ಮಾಡಬೇಕಿತ್ತು.
ತಲೆಯಾಡಿಸಿದಳು ಸ್ವಯಂವರಾ. "ಸರಿ, ನಾನು ಈ ಬಗ್ಗೆ ನಮ್ಮ ಎಲ್ಲ ಬ್ರಾಂಚನ್ನು ಸಂಪರ್ಕಿಸಿ ವಿಷಯ ಒಗ್ಗೂಡಿಸುತ್ತೇನೆ. ಈ ತರಹದ ಮನಸ್ಥಿತಿಗಳನ್ನು ಸುಲಭವಾಗಿ ಕಂಡು ಹಿಡಿಯಬಹುದು."
"ಆದಷ್ಟು ಬೇಗ" ಎಂದ ಕ್ಷಾತ್ರ.
"ಸರಿ ನನಗೂ ಕೂಡ ಒಂದು ಫೇವರ್ ಬೇಕು ನಿಮ್ಮಿಂದ" ಎಂದಳು ಸ್ವಯಂವರಾ.
ಈಗ ತನ್ನ ಪಾಳಿ ಎಂದುಕೊಂಡು "ಅದೇನು?" ಎಂದ ಪೋಲಿಸ್ ಗತ್ತಿನಲ್ಲಿ.
"ಈ ಪೋಲಿಸ್ ದರ್ಪ ಬೇಡ ನನ್ನ ಬಳಿ" ಎಂದಳು ಆತನ ಕಣ್ಣಲ್ಲಿ ಕಣ್ಣಿಟ್ಟು.
ಇವಳು ಹೇಗೆ ನನ್ನ ಮೈಂಡ್ ರೀಡ್ ಮಾಡುತ್ತಿರುವಳು ಎಂದುಕೊಳ್ಳ್ಳುತ್ತ "ಸರಿ, ಅದೇನು ಎಂದು ಹೇಳಿ" ಎಂದ.
"ನಮ್ಮ ಆಸ್ಪತ್ರೆಗೆ ಒಬ್ಬ ಸೇರಿದ್ದಾನೆ. ಆತ ಮತ್ತು ಆತನ ಕಡೆಯವರು ಹೇಳುವ ಪ್ರಕಾರ ಆತನಿಗೆ ಹುಚ್ಚು. ನನ್ನ ಪ್ರಕಾರ ಆತನಿಗೆ ಏನೂ ಆಗಿಲ್ಲ. ನಾಟಕ ಮಾಡುತ್ತಿದ್ದಾನೆ. ನೀವು ಹೇಗಾದರೂ ಮಾಡಿ ಆತನ ಬಾಯ್ಬಿಡಿಸಬೇಕು. ಅವನದು ನಾಟಕ ಎಂದು ಪ್ರೂವ್ ಮಾಡಬೇಕು" ಎಂದಳು.
"ನೀವು ಹೇಗೆ ಹೇಳುತ್ತಿರಿ ನಾಟಕ ಮಾಡುತ್ತಿದ್ದಾನೆ ಎಂದು?"
"ನೋಡ್ರಿ, ನೀವು ಹೇಗೆ? ಏನು? ಸಾಕ್ಷಿ ಎಂದು ಇಂಟರಾಗೇಟ್ ಮಾಡಿದರೆ ನನ್ನ ಬಳಿ ಏನೂ ಇಲ್ಲ. ಆತ ನಾಟಕ ಮಾಡುತ್ತಿದ್ದಾನೆ ಅಷ್ಟೆ" ಎಂದಳು.
"ಇದೊಳ್ಳೆ ಆಯ್ತಲ್ರಿ.. ಕೇವಲ ನಿಮ್ಮ ಮಾತಿನ ಮೇಲೆ ಹೇಗ್ರೀ ನಾನು ನಂಬೋದು?"
"ನನಗೆ ಮೈಂಡ್ ರೀಡಿಂಗ್ ಗೊತ್ರಿ.. ಆತ ಮಾಡುತ್ತಿರುವುದು ನಾಟಕ ಅಷ್ಟೆ. ಆತನ ನೋಟವೇ ಬೇರೆ ತರ ಇದೆ." ಎಂದಳು.
"ಮೈಂಡ್ ರೀಡಿಂಗ್ ಮಾಡುತ್ತಿರಾ? ಸರಿ ನಾನು ನಿನಗೆ ಹೆಲ್ಪ್ ಮಾಡಬಲ್ಲೆ, ಒಂದು ಕನ್ಫರ್ಮ್ ಆದ ಮೇಲೆ." ಎಂದ.
"ಅದೇನು?" ಎಂದಳು.
"ಈಗ ನನ್ನ ಮೈಂಡ್ ರೀಡ್ ಮಾಡಿ. ಅದು ಕರೆಕ್ಟ್ ಇದ್ದರೆ ನಿಮಗೆ ಸಹಾಯ ಮಾಡಬಲ್ಲೆ." ಎಂದ.
ಅವನನ್ನು ಅಡಿಯಿಂದ ಮುಡಿಯವರೆಗೆ ನೋಡಿ ಅವಳು ತುಂಬಿ ಹರಿಯುವ ಗಂಗೆಯಂತೆ ಪ್ರಾರಂಭಿಸಿದಳು. ಕ್ಷಾತ್ರ ಅವಳ ರಭಸದ ಸುಳಿಯಲ್ಲಿ ತರಗೆಲೆಯಂತೆ ಸಿಕ್ಕಿಬಿದ್ದ.
"ನೀವು ಮನೆಯಲ್ಲಿ ಒಂಟಿಯಾಗಿ ಇರುತ್ತೀರಿ. ನಿಮಗೆ ಮಾತನಾಡಿಕೊಳ್ಳಲು ಸ್ನೇಹಿತೆಯರಾಗಲಿ, ಒಳ್ಳೆಯ ಮಿತ್ರರಾಗಲೀ ಇಲ್ಲ. ದಿನಾಲೂ ಒಂದೆರಡು ಪ್ಯಾಕ್ ಸಿಗರೆಟ್ ಸೇದುವುದು ನಿಮ್ಮ ಹವ್ಯಾಸ. ಜೀಪ್ ಅನ್ನು ಓಡಿಸುವಾಗ ವಿಂಡೋ ತೆಗೆದು ಹೊರಗಿನ ಪ್ರಪಂಚವನ್ನು ಆನಂದಿಸುವುದಿಲ್ಲ. ಒಬ್ಬಂಟಿತನವೇ ನಿಮಗೆ ಇಷ್ಟ. ಎದುರಿಗಿರುವವರನ್ನು ತುಂಬ ಕೇವಲವಾಗಿ ನೋಡುವುದು ನಿಮ್ಮ ಬುದ್ಧಿ, ಪೋಲಿಸ್ ಡ್ರೆಸ್ ನಿಮಗೆ ಕೊಟ್ಟ ಬಳುವಳಿಯದು. ಎಂತಹದೇ ಕಠಿಣ ಕೆಲಸವಾದರೂ ಹಟ ಹಿಡಿದು ಪರಿಹರಿಸುವುದು ನಿಮ್ಮ ರೂಢಿ.
ಇದನ್ನೆಲ್ಲಾ ಬಿಟ್ಟು ನೀವು ಇಲ್ಲಿಗೆ ಬಂದು ನನ್ನ ಮುಖ ನೋಡುತ್ತಲೇ ...." ಎಂದು ಅವನ ಮುಖ ನೋಡಿದಳು. ಆತ ಆಕೆ ಹೇಳುವುದನ್ನೇ ಕೇಳುತ್ತಿದ್ದ.
"ನಾನೇನೋ ಮಾನಸಿಕ ಆಸ್ಪತ್ರೆಯ ಡಾಕ್ಟರ್ ಮೂವತ್ತೈದೋ ನಲವತ್ತೋ ಆಗಿರುವವಳಾಗಿರುತ್ತಾಳೆ ಎಂದುಕೊಂಡೆ. ಇವಳು ಇಪ್ಪತ್ನಾಲ್ಕರ ಚೆಲುವೆ ಎಂದುಕೊಂಡಿರಿ. ನನ್ನನ್ನು ನೋಡಿ ಈ ಎಳೆಬುದ್ಧಿಯ ಚೆಲುವೆ ನನಗೇನು ಸಹಾಯ ಮಾಡಬಲ್ಲಳು ಎಂದುಕೊಂಡಿರಿ. ನಾನು ಹಿಂದೆ ತಿರುಗುತ್ತಲೇ ನನ್ನನ್ನು ನೋಡಿ 36-24-36 ಎಂದು ಮೆಸರ್ ಮಾಡಿ ಮನಸ್ಸಿನಲ್ಲೇ ನಕ್ಕಿರಿ.
"ಸ್ವಯಂವರಾ ಏ ಬ್ಯೂಟಿ" ಎಂದು ಮನಸ್ಸಿನಲ್ಲೇ ಅಂದುಕೊಂಡಿದ್ದೀರಿ. ಫೈಲ್ ನೋಡುತ್ತಿರುವಾಗ ಹದಿನೈದು ನಿಮಿಷವೂ ನನ್ನನ್ನೇ ನೋಡುತ್ತ ಕಲ್ಪನೆಯಲ್ಲಿ ವಿವರಿಸಿದ್ದೀರಿ. ನಿಮ್ಮ ಫೈಲಿಗೆ ನಾ ಮಾಡಿದ ಅನಾಲಿಸೀಸ್ ಗೆ ಮನಸ್ಸಿನಲ್ಲೇ ಅಭಿನಂದಿಸಿದ್ದೀರಿ ಎನ್ನುವುದಕ್ಕಿಂತ ನನ್ನನ್ನು ಹೇಗೆ ಕಂಟ್ರೋಲಿನಲ್ಲಿ ಇಟ್ಟುಕೊಳ್ಳಬೇಕೆಂದು ಯೋಚಿಸಿದ್ದಿರಿ.
36-24-26 ಕ್ಕೂ 36-24-34 ಕ್ಕೂ ವ್ಯತ್ಯಾಸ ಗೊತ್ತಿಲ್ಲದ ನಿಮಗೆ ಹುಡುಗಿಯರ ಜೊತೆ ಬಳಕೆಯೂ ಅಷ್ಟಕಷ್ಟೆ. ನನಗೆ ಇಪ್ಪತ್ತಾರು ವರ್ಷ, ಇಪ್ಪತ್ನಾಲ್ಕು ಕೂಡ ಅಲ್ಲ. ಅಲ್ಲಿಗೆ ನೀವು ಎಷ್ಟು ತಪ್ಪು ಯೋಚಿಸಿದ್ದೀರಿ ಎಂದು ನೋಡಿ." ಎಂದು ಮುಂದುವರೆಸುವವಳಿದ್ದಳು.
ಅಷ್ಟರಲ್ಲಿ ಕಿಟಾರನೆ ಕಿರುಚಿಕೊಂಡದ್ದು ಕೇಳಿಸಿತು. ಸ್ವಯಂವರಾಳಿಗೆ ಅದು ಸಾಮಾನ್ಯ. ಯಾವುದೋ ಮಾನಸಿಕ ರೋಗಿ ಕೂಗಿಕೊಳ್ಳುತ್ತಿದ್ದಾನೆ ಎಂದುಕೊಂಡಳು. ಆದರೆ ಕ್ಷಾತ್ರ ಎಚ್ಚೆತ್ತಿದ್ದ. ಭಯದಿಂದ ಕೂಗುವುದಕ್ಕೂ, ಹಾಗೆ ಕೂಗುವುದಕ್ಕೂ ಡಿಫರೆನ್ಸ್ ಬಲ್ಲ ಆತ. ಎದ್ದು ಕೂಗು ಬಂದ ಕಡೆ ಓಡಿದ ಕ್ಷಾತ್ರ. ಅವನು ಓಡುವುದನ್ನು, ಆತನ ಆತುರವನ್ನು ಗಮನಿಸಿ ನಕ್ಕಳು ಸ್ವಯಂವರಾ.
ಕಿರುಚಿದ ಸ್ವರವನ್ನು, ಅದರಲ್ಲಿರುವ ಭಯವನ್ನು ಅವಳು ಗಮನಿಸಿದ್ದಳು. ಮಗುವಂತೆ ಅಳುವ ಮುದುಕರನ್ನು, ಗಂಡಸರಂತೆ ಎಗರಿ ಬೀಳುವ ಮಹಿಳಾ ರೋಗಿಗಳನ್ನು ನೋಡಿದ್ದ ಅವಳಿಗೆ ಯಾವುದೋ ರೋಗಿ ಭಯವಾದಂತೆ ಕೂಗುತ್ತಿದ್ದಾಳೆ ಎಂದುಕೊಂಡು, ತಾನು ಅವನ ಬಗ್ಗೆ ಹೇಳಿದ ನಂತರ ಅವನ ಮುಖಚರ್ಯೆ ಓದುವ ಅವಕಾಶ ತಪ್ಪಿ ಹೋಗಿದ್ದಕ್ಕೆ ಕೈ ಕೈ ಹೊಸೆದುಕೊಳ್ಳುತ್ತ ಆತನ ಹಿಂದೆಯೇ ಹೊರಬಂದಳು. ವಿರುದ್ಧ ದಿಕ್ಕಿನಿಂದ ನರ್ಸ್ ಒಬ್ಬಳು ಓಡಿ ಬರುತ್ತಿದ್ದಳು. ಕೊಲೆ, ಕೊಲೆ ಎಂದು ಚೀರುತ್ತ ಉದ್ದನೆಯ ವರಾಂಡದಲ್ಲಿ ಓಡುತ್ತ ಬರುತ್ತಿದ್ದಳು.
ಕ್ಷಾತ್ರ ನರ್ಸ್ ತೋರಿಸಿದ ದಿಕ್ಕಿನೆಡೆಗೆ ಸಾಗುತ್ತಿದ್ದ. ಸ್ವಯಂವರಾಳ ಮುಖದ ಮೇಲಿನ ನಗು ಮಾಯವಾಗಿ ಕಳವಳ ಮೂಡಿತು. ನರ್ಸ್ ತೋರಿಸಿದ ಬಾತ್ ರೂಮ್ ಕಡೆ ಅವಳು ಓಡುತ್ತಲೇ ಹೋದಳು. ಗರಬಡಿದವನಂತೆ ನಿಂತಿದ್ದ ಕ್ಷಾತ್ರ. ಆತ ಒಳಗೆ ಏನು ನೋಡುತ್ತಿದ್ದಾನೆ ಎಂದು ಅರೆ ತೆರೆದಿದ್ದ ಬಾಗಿಲಿನಿಂದ ಇಣುಕಿದಳು ಸ್ವಯಂವರಾ.
ಸಣ್ಣನೆ ಕೂಗಿದಳು. "ಮೈ ಗಾಡ್!! ಸೇವ್ ಮೀ..." ಎನ್ನುತ್ತಾ ಕ್ಷಾತ್ರನ ಮುಖ ನೋಡಿದಳು. ಕ್ಷಾತ್ರನ ಮುಖದಲ್ಲಿ ಆಶ್ಚರ್ಯ ಮತ್ತು ಅಸಮಾಧಾನ ಎರಡೂ ಕಾಣುತ್ತಿತ್ತು.
ಕುತ್ತಿಗೆಯ ನರ ತುಂಡಾಗಿರುವ ಶವ ಆತನನ್ನು ಕೆಣಕುತ್ತಿತ್ತು. ಮರ್ಮಾಂಗವೂ ಘಾಸಿಯಾಗಿದೆ ಎಂಬಂತೆ ಆತನ ಬಿಚ್ಚಿದ ಪ್ಯಾಂಟಿನ ಅರೆ ತೆರೆದ ಜಾಗದಿಂದ ರಕ್ತ ಇಳಿದು ಹೆಪ್ಪುಗಟ್ಟಿತ್ತು.
ಒಂಬತ್ತನೇ ಕೊಲೆ... ಮಾನಸಿಕ ರೋಗಿಯಿಂದ..
ಏನೂ ಮಾತನಾಡದೆ ಮೂಲೆಯಲ್ಲಿ ನಿಂತಿದ್ದಳು ಸ್ವಯಂವರಾ. ಎಂತಹ ಡಾಕ್ಟರ್ ಆದರೂ ತನ್ನ ಆಸ್ಪತ್ರೆಯಲ್ಲಿ ಕೊಲೆಯನ್ನು ನೋಡಿದರೆ ಹಾಗಾಗುವುದು ಸಹಜ. ಅದಲ್ಲದೇ ಈಗಷ್ಟೇ ನೋಡಿದ ಚಿತ್ರಗಳಂತೆ ನಡೆದ ಕೊಲೆಯಿದು. ಯಾರು ಮಾಡಿರಬಹುದು?
ಕ್ಷಾತ್ರ ಹತ್ತಿರ ಬಂದು " ಆಸ್ಪತ್ರೆಯಲ್ಲಿ ಒಟ್ಟು ಎಷ್ಟು ಜನರಿದ್ದಾರೆ??" ಎಂದು ಕೇಳಿದ.
"ರೋಗಿಗಳು, ಸಹ ಉದ್ಯೋಗಿಗಳು, ಡಾಕ್ಟರ್ ಗಳು ಎಲ್ಲರೂ ಸೇರಿ 69 ಜನ".
ಅವಳ ನಿಖರ ಉತ್ತರ ಖುಷಿ ತಂದಿತು ಕ್ಷಾತ್ರನಿಗೆ. "ಸರಿ ಎಲ್ಲರನ್ನೂ ಒಂದೆಡೆ ಸೇರಿಸಿ. ನಾನೀಗ ಬರುವೆ." ಎಂದ.
ಸ್ವಯಂವರಾ ನರ್ಸ್ ಗಳೊಡನೆ ಹೊರನಡೆದಳು. ಕ್ಷಾತ್ರ ಬಾತ್ ರೂಮ್ ಒಳಗೆ ಬಂದ. ಒಂದು ಕಡೆ ಶವರ್ ಬೀಳುತ್ತಿತ್ತು. ಅದನ್ನು ಆಫ್ ಮಾಡಿದ. ಶವ ಅಂಗಾತ ಬಿದ್ದಿತ್ತು. ಕುತ್ತಿಗೆ, ಮರ್ಮಾಂಗ ಎರಡನ್ನು ಬಿಟ್ಟು ದೇಹದ ಮೇಲೆ ಮತ್ತೆಲ್ಲೂ ಗಾಯದ ಗುರುತಿಲ್ಲ. ಹೇಗೆ ಸಾಧ್ಯ? ಇಷ್ಟು ಜನರ ಮಧ್ಯೆ ಉಳಿದವರಿಗೆ ಒಂದು ಚೂರೂ ತಿಳಿಯದಂತೆ ಒಬ್ಬನನ್ನು ಕೊಂದು ಹೋಗಲು ಹೇಗೆ ಸಾಧ್ಯ? ಕೊಲೆಗಾರ ಇಲ್ಲಿಯೇ ಇದ್ದಾನೆ ಕ್ಷಾತ್ರ. ರೋಗಿಗಳ ನಡುವೆಯೇ ಇದ್ದಾನೆ. ಬೇಗನೇ ಕಾರ್ಯಪ್ರವೃತ್ತನಾಗು ಎಂದು ಎಚ್ಚರಿಸಿತು ಅಂತರಾತ್ಮ. ಕ್ಷಾತ್ರನ ಪೋಲಿಸ್ ಮೆದುಳು ಒಮ್ಮೆಲೇ ಎಚ್ಚೆತ್ತುಕೊಂಡಿತು. ಅಲ್ಲಿಂದ ಹೊರಗೊಡಿದ. ಬೇಗನೆ ಆವರಣದ ಮೇನ್ ಗೇಟ್ ಗೆ ಬಂದು ಗಾರ್ಡ್ ನ ಬಳಿ ಬಾಗಿಲು ಹಾಕುವಂತೆ ಹೇಳಿ, ಯಾರಾದರು ಈಗಾಗಲೇ ಹೊರಗೆ ಹೋದರೆ ಎಂದು ಕೇಳಿದ. ಇಲ್ಲ ಎನ್ನುವಂತೆ ಅಡ್ಡಡ್ಡ ತಲೆಯಾಡಿಸಿದ ಗಾರ್ಡ್. ಯಾರನ್ನು ಕೂಡ ಹೊರಗೆ ಬಿಡದಂತೆ ಹೇಳಿ ತಾನು ಮತ್ತೆ ಕೊಲೆ ನಡೆದ ಜಾಗಕ್ಕೆ ಬಂದ. ಕೆಲಸ ಮಾಡುವವರೆಲ್ಲರೂ ಬಂದು ಇಣುಕಲು ಪ್ರಾರಂಭಿಸಿದ್ದರು. ಇದರಿಂದ ಏನಾದರು ಆಧಾರಗಳಿದ್ದರೆ ನಾಶವಾಗುವ ಸಂಬವವಿರುತ್ತದೆಯೆಂದು ಕ್ಷಾತ್ರ ಅವರನ್ನೆಲ್ಲ ಹೊರಗೆ ಕಳಿಸಿ ಸ್ಟೇಷನ್ ಗೆ ಕಾಲ್ ಮಾಡಿದ. ಆತನಿಗೆ ಗೊತ್ತು ಇದು ತನ್ನ ಸುಪರ್ದಿಗೆ ಬರುವ ಏರಿಯಾ ಅಲ್ಲ. ಆದರೆ ತಾನಿರುವ ಹೊತ್ತಿಗೆ ತನಗೆ ಸಂಭಂದಿಸಿದ ಕೇಸ್ ನ ಹಾಗೆ ನಡೆದ ಕೊಲೆ ಹಾಗಾಗಿ ಅತಿಯಾದ ಕಾಳಜಿ ತೆಗೆದುಕೊಂಡ ಆತ.
ಕೊಲೆ ನಡೆದ ಸ್ಥಳವನ್ನು ಆತ ಸೂಕ್ಷ್ಮವಾಗಿ ಗಮನಿಸಿದ. ಕೊಲೆ ನಡೆದು ಒಂದು ತಾಸಗಿರಬಹುದಷ್ಟೆ. ಕುತ್ತಿಗೆ ಕತ್ತರಿಸಿದ್ದರಿಂದ ಚಿಮ್ಮಿದ ರಕ್ತ ಬಾತ್ ರೂಂ ಗೋಡೆಯ ಮೇಲೆ ಬಿದ್ದು ಹೆಪ್ಪುಗಟ್ಟಿದೆ. ಕತ್ತರಿಸಿದ ಮರ್ಮಾಂಗದ ಅಲ್ಲಿ ಬಿದ್ದಿದೆಯಾ ಎಂದು ನೋಡಿದ. ಕಾಣಲಿಲ್ಲ. ಉಳಿದ ಕೆಸಿನಂತೆ ಇಲ್ಲಿಯೂ ಕೂಡ ಮಿಸ್ಸಿಂಗ್.
ತಾನಂದುಕೊಂಡಂತೆ ಯಾವುದೋ ವಿಕ್ರತ ಸೈಕೊಪಾಥ್ ಹೀಗೆ ಕೊಲೆ ಮಾಡುತ್ತಿದ್ದಾನೆ. ಅಲ್ಲದೆ ಈಗ ಆತ ಇ ಹುಚ್ಚರ ಮದ್ಯವೇ ಇದ್ದಾನೆ. ತಾನು ಹುಡುಕುತ್ತಿದ್ದ ಕೊಂಡಿ ಈಗ ತಾನಾಗಿಯೇ ಸಿಕ್ಕಿದೆ. ತಪ್ಪಿಸಿಕೊಳ್ಳಲು ಬಿಡಬಾರದು. ಪಂಜ ಬಿಚ್ಚಿದ ಚಿರತೆಯಂತೆ ಚುರುಕಾದ ಕ್ಷಾತ್ರ.
ಪ್ರಾರ್ಥನಾ ಮಂದಿರದೊಳಗೆ ಎಲ್ಲರನ್ನೂ ಸೇರಿಸಿದ್ದಳು ಸ್ವಯಂವರಾ. ಅಷ್ಟು ಜನ ಮಾನಸಿಕ ರೋಗಿಗಳನ್ನು ಒಂದೆಡೆ ಸೇರಿಸಿದರೆ ಕೇಳಬೇಕೆ? ಸಣ್ಣ ಮಾರ್ಕೆಟ್ ಆಗಿತ್ತದು. ತಮ್ಮದೇ ಭಾವ. ತಮ್ಮದೇ ಜಗತ್ತು.. ಗದ್ದಲದಲ್ಲಿ ಮುಳುಗಿದ್ದರು. ಅಲ್ಲಿನ ಸಹ ಉದ್ಯೋಗಿಗಳು ಅವರನ್ನು ಸಾಲಿನಲ್ಲಿ ನಿಲ್ಲಿಸಲು ಹರಸಾಹಸ ಪಡುತ್ತಿದ್ದರು. ಸ್ವಯಂವರಾ ಕೂಡ ಪ್ರತಿಯೊಬ್ಬರ ಮುಖವನ್ನು ಗಮನಿಸುತ್ತಿದ್ದಳು. ತಾನು ಎದುರಿಗಿದ್ದವರ ಮೈಂಡ್ ರೀಡ್ ಮಾಡಬಲ್ಲೆ ಎಂಬ ಅತಿಯಾದ ವಿಶ್ವಾಸ ಅವಳಿಗೆ.
ಕ್ಷಾತ್ರ ಒಳಗಡೆ ಬಂದ. ಅವನೂ ಒಬ್ಬೊಬ್ಬರನ್ನೇ ಪರೀಕ್ಷಿಸುತ್ತಾ ಬಂದ. ಯಾರ ಮುಖದಲ್ಲೂ ಕೊಲೆ ಮಾಡುವ ಕ್ರೂರತೆಯಾಗಲೀ,ಕೊಲೆ ಮಾಡಿ ಬಂದು ನಿಂತ ಉದ್ವೇಗವಾಗಲೀ ಕಂಡು ಬರಲಿಲ್ಲ. ಹೇಗೆ ಪತ್ತೆ ಹಚ್ಚಲಿ ಇಷ್ಟು ಜನರ ಮಧ್ಯೆ? ಎಂದುಕೊಂಡ. ಪ್ರತಿಯೊಬ್ಬರ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದ ಕ್ಷಾತ್ರ. ಒಂದು ಸಣ್ಣ ಆಧಾರ ಸಾಕು, ಅದೇ ಸಿಗುತ್ತಿಲ್ಲ.
ಎಲ್ಲರನ್ನೂ ನೋಡಿ ಸ್ವಯಂವರಾಳ ಬಳಿ ಬಂದು "ಎಲ್ಲರೂ ಇರುವರಾ? ಇಲ್ಲಾ ಯಾರಾದರೂ ಮಿಸ್ಸಿಂಗ್??" ಎಂದ. ಗುಂಪಿನೆಡೆಗೆ ನೋಡಿ ಒಂದು ಕ್ಷಣ ಯೋಚಿಸಿ "ಓಹ್" ಎನ್ನುತ್ತಾ ಹೊರಗೋಡಿದಳು. ಅವಳ ಹಿಂದೆಯೇ ಓಡಿದ ಕ್ಷಾತ್ರ. ಹಿಂದಿನ ದಿನ ಗಂಡನ್ನು ಹೆಣ್ಣೆಂದು, ಹೆಣ್ಣನ್ನು ಗಂಡೆಂದು ತಿಳಿದುಕೊಳ್ಳುವ ವ್ಯಕ್ತಿ ಅಲ್ಲಿರಲಿಲ್ಲ. ಅವನಿಗೆ ಕೊಟ್ಟಿದ್ದ ರೂಮಿಗೆ ಬಂದಿದ್ದಳು ಸ್ವಯಂವರಾ. ರೂಮ್ ಖಾಲಿ ಹೊಡೆಯುತ್ತಿತ್ತು. ಆ ಕೊಠಡಿಯ ಮೇಲ್ವಿಚಾರಿಕೆಯ ಕಂಪೌಂಡರ್ ಬಂದ. "ಅವನನ್ನು ಕೊನೆಯ ಬಾರಿ ನೋಡಿದ್ದು ಯಾವಾಗ??" ಎಂದು ಕೇಳಿದಳು. "ಬೆಳಿಗ್ಗೆ ಇದ್ದ, ನೋಡಿದ್ದೇನೆ. ಯಾವಾಗ ತಪ್ಪಿಸಿಕೊಂಡಿದ್ದಾನೋ??" ಎಂದನವನು.
ಕ್ಷಾತ್ರ "ಯಾರವನು!?" ಎಂದು ಕೇಳಿದ.
ನಿನ್ನೆಯಷ್ಟೆ ಒಬ್ಬನು ಸೇರಿದ್ದ ಎಂದು ಆತ ನಡೆದುಕೊಂಡ ರೀತಿಯನ್ನೆಲ್ಲ ಹೇಳಿದಳು. "ಹಾಗಾದರೆ ನೋ ಡೌಟ್, ಅವನೇ. ಅವನು ಹೇಗಿದ್ದ ಎಂದು ವಿವರಿಸಬಲ್ಲಿರಾ!? ನಮ್ಮ ಚಿತ್ರ ಬಿಡಿಸುವ ಎಕ್ಸಪರ್ಟ್ ಗಳಿಂದ ಸ್ಕೆಚ್ ತೆಗೆಸೋಣ" ಎಂದ ಕ್ಷಾತ್ರ.
ಅಷ್ಟರಲ್ಲಿ ಇತರ ಸಿಬ್ಬಂದಿಗಳು, ರಿಪೋರ್ಟರ್ ಗಳು ಬಂದು ಸೇರಿದ್ದರು. ಅವರನ್ನು ಭೇಟಿಯಾಗಲು ಅತ್ತ ನಡೆದ ಕ್ಷಾತ್ರ. ಆತನ ಮುಖವನ್ನು ಕಣ್ಣೆದುರು ತಂದುಕೊಳ್ಳಲು ಪ್ರಯತ್ನಿಸಿದಳು. ಒಂದೂ ಸರಿಯಾದ ಚಿತ್ರ ಕಣ್ಣೆದುರು ನಿಲ್ಲುತ್ತಿಲ್ಲ. ಕಲ್ಪನೆ ಮೂಡುತ್ತಿಲ್ಲ. ನಾನೊಬ್ಬನೇ ಅಲ್ಲ, ಸಿಬ್ಬಂದಿಗಳೆಲ್ಲ ಅವನನ್ನು ನೋಡಿದ್ದಾರೆ. ಅವನ ಚಿತ್ರ ತೆಗೆಯ ಬಹುದು.
ಆದರೆ ಒಂದೇ ಪ್ರಶ್ನೆ.. ಆತ ನಿಜವಾಗಿಯೂ ಮಾನಸಿಕ ರೋಗಿಯಾ? ಅಥವಾ ಹಾಗೆ ನಾಟಕವಾಡಿದ್ದಾನಾ? ನಾನು ಅವನನ್ನು ಗ್ರಹಿಸಬೇಕಲ್ಲವೇ?ತನ್ನ ಮೈಂಡ್ ರೀಡಿಂಗ್ ಏನಾಯಿತು? ಕ್ಷಾತ್ರನೆದುರು ಅಷ್ಟೊಂದು ಸ್ಟಂಟ್ ಕೊಟ್ಟಿದ್ದೇನೆ. ಆತ ಮಾನಸಿಕ ರೋಗಿಯೇ ಕೊಲೆ ಮಾಡುತ್ತಿರುವುದು ಎಂದರೆ ತಾನು ಅಲ್ಲವೆಂದು ಅಲ್ಲಗಳೆದಿದ್ದೆ. ಆದರೆ ಈಗ ಕಣ್ಣೆದುರಲ್ಲೇ ಸಾಕ್ಷಿಯಿದೆ. ತಾನೆಲ್ಲಿ ಎಡವಿದೆ? ಅತಿಯಾದ ಆತ್ಮವಿಶ್ವಾಸವಿರಬೇಕು. ಅವರು ಅಷ್ಟೊಂದು ಕೈದಿಗಳ ಜೊತೆ ಹತ್ತಿರದಿಂದ ವ್ಯವಹರಿಸುತ್ತಾರೆ. ನಾನೇ ಅವನನ್ನು ತಪ್ಪು ದಾರಿಗೆ ಎಳೆಯುತ್ತಿದ್ದೆನೆನೋ? ಹಾಗೊಂದು ವೇಳೆ ಆತ ಮಾನಸಿಕ ರೋಗಿಯೇ ಅಲ್ಲದೆ ಕೊಲೆ ಮಾಡಲೇ ಇಲ್ಲಿಗೆ ಬಂದಿದ್ದರೆ ನನ್ನ ಸೂಕ್ಷ್ಮ ಕಣ್ಣಿಗೆ ಅವನ ನಾಟಕ ತಿಳಿದಿರುತ್ತಿತ್ತು. ಅಂದರೆ ಮಾನಸಿಕ ರೋಗಿಯೇ ಆತ. ಅವನಿಂದಲೇ ಸರಣಿ ಕೊಲೆಗಳು ನಡೆಯುತ್ತಿರುವುದು. ತನ್ನ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಅನ್ನಿಸಿತು ಸ್ವಯಂವರಾಳಿಗೆ. ತನ್ನನ್ನು ತಬ್ಬಿ, ಕಣ್ಣಲ್ಲಿ ಕಣ್ಣಿಟ್ಟರು ಆತನ ಮುಖದಲ್ಲಿ ತಾನು ಕಪಟತನ ಹೇಗೆ ಕಂಡು ಹಿಡಿಯದೆ ಹೋದೆ?
ತಲೆ ನೋವು ಪ್ರಾರಂಭವಾಯಿತವಳಿಗೆ. ತನ್ನ ರೂಮಿಗೆ ಬಂದು ಕುಳಿತುಬಿಟ್ಟಳು. ಆಸ್ಪತ್ರೆಯ ಆವರಣ ಗದ್ದಲದಿಂದ ತುಂಬಿತ್ತು. ರೋಗಿಗಳನ್ನೆಲ್ಲ ಒಂದೇ ರೂಮಿನಲ್ಲಿ ಕೂಡಿ ಅವರನ್ನು ನಿಯಂತ್ರಿಸುತ್ತಿದ್ದರು ಸಿಬ್ಬಂದಿಗಳು. ಪೋಲಿಸರು ಏನೇನು ಆಧಾರ ಸಿಗುತ್ತದೆ ಎಂದು ತಡಕಾಡಿದರು. ಶವದ ಫೋಟೊ, ಫಿಂಗರ್ ಪ್ರಿಂಟ್ಸ್, ಇನ್ನಿತರ ಎಲ್ಲ ಕೆಲಸಗಳನ್ನು ಮುಗಿಸಿ, ಶವವನ್ನು ಹೊರಗೆ ತಂದು ಅಂಬುಲೆನ್ಸ್ ಏರಿಸಿದರು. ಅವನ ಕಡೆಯವರಿಗೆ ವಿಷಯ ತಿಳಿಸಿದ್ದರಿಂದ ಸಂಬಂಧಿಕರು, ಬಂಧುಗಳು ಬಂದಿದ್ದರು. ಅವರ ಗೋಳು ಹೇಳ ತೀರದಾಗಿತ್ತು. ತೆಗೆದುಕೊಳ್ಳಬೇಕಾದ ಎಲ್ಲ ಹಂತಗಳೂ ಮುಗಿದ ಮೇಲೆ ಎಲ್ಲರೂ ಅಲ್ಲಿಂದ ನಿಷ್ಕ್ರಮಿಸಿದರು. ಒಬ್ಬ ಚಿತ್ರಕಾರನ ಜೊತೆ ಒಳ ಬಂದ ಕ್ಷಾತ್ರ. "ಈಗ ಅವನು ಹೇಗೆ ಇದ್ದ ಎಂದು ವಿವರಿಸಿ. ನಮ್ಮವನು ಹಾಗೆಯೇ ಚಿತ್ರಿಸುತ್ತಾನೆ" ಎಂದ.
ಅವಳಿಗೆ ಆತನ ಚಿತ್ರ ಸರಿಯಾಗಿ ಕಣ್ಮುಂದೆ ಬರುತ್ತಿಲ್ಲ. ನೋಡಿದ ಕೊಲೆಯ, ಶವದ ಚಿತ್ರವೇ ಕಣ್ಣೆದುರು ಮೂಡುತ್ತಿತ್ತು.
ಆತ ಲ್ಯಾಪಟಾಪ್ ತೆಗೆದು ಕುಳಿತ. ಅವಳು ಹೇಳುತ್ತಾ ಹೋದಳು. ತನ್ನ ಬಳಿ ಆಗದಿದ್ದಾಗ ಮತ್ತೆರಡು ಸಿಬ್ಬಂದಿಗಳನ್ನು ಕರೆತಂದು ಅವರು ತಮಗೆ ಕಂಡ ರೀತಿ ಹೇಳತೊಡಗಿದರು. ಪೂರ್ತಿ ಚಿತ್ರವಾದ ಮೇಲೆ ಸುಮಾರು ಆತನನ್ನೇ ಹೋಲುವ ಚಿತ್ರವೇ ಬಂದಿತ್ತು. ಎಲ್ಲರೂ ಸಹಮತಕ್ಕೆ ಬಂದ ನಂತರ ಆ ಚಿತ್ರವನ್ನು ಸೇವ್ ಮಾಡಿಕೊಂಡು ಹೊರಟುಹೋದ ಆತ.
ಕ್ಷಾತ್ರ, ಸ್ವಯಂವರಾ ಇಬ್ಬರೇ ಉಳಿದಿದ್ದರು ಅಲ್ಲಿ. "ಈಗ ಹೇಳಿ, ಮಾನಸಿಕ ರೋಗಿಯಿಂದನೇ ನಡೆಯುತ್ತಿದೆಯಲ್ಲವೇ ಈ ಕೊಲೆ?" ಎಂದ.
"ಇರಬಹುದು." ಎಂದಳು.
"ಆದಷ್ಟು ಬೇಗ ಅವನನ್ನು ಬಂಧಿಸುತ್ತೇವೆ. ನನ್ನ ನಂಬರ್ ತೆಗೆದುಕೊಳ್ಳಿ ಏನಾದರೂ ಅನುಮಾನ ಬರುವಂತಹ ಸನ್ನಿವೇಶ ಕಂಡರೆ ನನಗೆ ತಿಳಿಸಿ" ಎಂದು ತನ್ನ ನಂಬರ್ ಹೇಳಿದ. ತಾನು ಮೊದಲು ನೋಡಿದ ಸ್ವಯಂವರಾಳಂತೆ ಇರಲಿಲ್ಲ. ಆಕೆ ತುಂಬಾ ಕುಗ್ಗಿದ್ದಳು.
"ಅಂದಹಾಗೆ ನೀವು ನನ್ನ ಬಗ್ಗೆ ಹೇಳಿದ್ದು 99% ನಿಜ" ಎಂದ
"ಥ್ಯಾಂಕ್ಸ್" ಎಂದಳು ಅಷ್ಟೆ.
ಮಾತನಾಡುವ ಉತ್ಸಾಹ ತೋರದಿದ್ದಾಗ "ಯಾವಾಗ ಬೇಕಾದರೂ ಕಾಲ್ ಮಾಡಬಹುದು" ಎನ್ನುತ್ತಾ ಹೊರಟು ನಿಂತ ಕ್ಷಾತ್ರ.
ಅವಳು ಎದ್ದು ಬಾಗಿಲವರೆಗೆ ಬಂದು " ದಿನಾಲೂ ಎರಡಕ್ಕಿಂತ ಹೆಚ್ಚು ಸಿಗರೆಟ್ ಸೇದಬೇಡಿ, ಆರೋಗ್ಯಕ್ಕೆ ಒಳ್ಳೆಯದಲ್ಲ" ಎಂದಳು.
ತಿರುಗಿ ಮುಗುಳ್ನಕ್ಕ ಕ್ಷಾತ್ರ. ಮೆಟ್ಟಿಲು ಇಳಿದು ಹೊರಗೆ ಹೊರಟ. ಅವನನ್ನೇ ನೋಡುತ್ತ ನಿಂತಿದ್ದ ಸ್ವಯಂವರಾ, ಅವನು ಆಸ್ಪತ್ರೆಯ ವರಾಂಡ ದಾಟಿದ ಮೇಲೆ ರೋಗಿಗಳನ್ನು ಗಮನಿಸಲು ಒಳಗೆ ನಡೆದಳು.
ಹೊರಗೆ ಬಂದ ಕ್ಷಾತ್ರ ಅವಳ ರೂಮ್ ಕಡೆ ನೋಡಿದ. ಆದರೆ ಅವಳು ಅಲ್ಲಿರಲಿಲ್ಲ. ಕೈ ಸಿಗರೆಟ್ ಹೊರಗೆಳೆಯಿತು. ಅವಳು ಹೇಳಿದ್ದು ನೆನಪಾಯಿತು. "ದಿನಾಲೂ ಎರಡೇ ಸಿಗರೇಟ್.." ಈಗಾಗಲೇ ಅದು ಮುಗಿದಿದೆ. ನಗು ಮೂಡಿತು ಮುಖದಲ್ಲಿ. ತೆಗೆದ ಸಿಗರೆಟ್ ಮತ್ತೆ ಒಳ ಸೇರಿಸಿ ಜೀಪ್ ಹತ್ತಿದ. ವಿಂಡೋ ಕೆಳಗಿಳಿಸುತ್ತ ಹೊರಗೆ ನೋಡಿದ. ಮುಖದಲ್ಲಿ ನಗು ಹಾಯುತ್ತಿತ್ತು. ಸ್ವಯಂವರಾ.. ಸ್ವಯಂವರಾ.. ಎಂದುಕೊಂಡು ಜೀಪ್ ಸ್ಟಾರ್ಟ್ ಮಾಡಿದ. ಜೋರಾಗಿ ಒಳ ನುಗ್ಗಿದ ಗಾಳಿ ಆತನ ತಲೆ ಕೂದಲಿನ ಕ್ರಾಪನ್ನು ಹಾಳು ಮಾಡಿತು.
ಆದಷ್ಟು ಬೇಗ ಈ ಮಾನಸಿಕ ರೋಗಿಯ ಪತ್ತೆಯಾಗಬೇಕು, ಇಲ್ಲವಾದರೆ ಇನ್ನೆಷ್ಟು ಕೊಲೆಗಳೋ ಎನ್ನುತ್ತಾ ವೇಗ ಹೆಚ್ಚಿಸಿದ.
ಕೊಲೆಗಾರನ ಬಾವಚಿತ್ರ ಈಗ ಆತನ ಬಳಿ ಇದೆ. ಆಸ್ಪತ್ರೆಯ ರಿಜಿಸ್ಟರ್ ಅಲ್ಲಿ ಆತನ ಹೆಸರು ಸಿಕ್ಕಿದೆ. ಆದರೆ ಅದು ನಿಜವೋ ಅಲ್ಲವೋ ಗೊತ್ತಿಲ್ಲ.
ವಿಹಾರಿ ನಿನ್ನನ್ನು ಎಲ್ಲಿದ್ದರು ನಾ ಹಿಡಿಯದೆ ಇರಲಾರೆ ಎಂದುಕೊಂಡು ಮತ್ತು ಜೋರಾಗಿ ಆಕ್ಸಿಲರೇಟರ್ ಒತ್ತಿದ.
ಅದೇ ಸಮಯದಲ್ಲಿ ದೆಹಲಿಯಿಂದ ಮುಂಬೈ ಹೋಗುವ ಫ್ಲೈಟ್ ನಲ್ಲಿ ಕುಳಿತಿದ್ದ ವಿಹಾರಿ. ಸ್ವಯಂವರ ನೆನಪಾದಳು.. ಅನ್ವೇಷಣಾಳ ಮುಖದಂತೆ ಇದೆಯಲ್ಲವಾ ?
ಗಾಡವಾದ ನಿಟ್ಟಿಸಿರು ಬಿಟ್ಟು ಕಣ್ಣು ಮುಚ್ಚಿದ.
...............................ಮುಂದುವರೆಯುತ್ತದೆ..............................
https://www.facebook.com/katarnakkadamabri/

No comments:

Post a Comment