Saturday, July 23, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 27

                                    ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 27

ಶಾಸ್ತ್ರಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟು ಅದಾಗಲೇ ಎರಡು ದಿನ ಕಳೆದು ಹೋಗಿತ್ತು. ಮೂರನೆಯ ದಿನ ಮಧ್ಯಾಹ್ನ ಶಾಸ್ತ್ರಿ ಕುಳಿತು ಯೋಚಿಸುತ್ತಿದ್ದ. "ನಾಳೆ ಮತ್ತೆ ತಾನು ಕೋರ್ಟಿಗೆ ಹೋಗಬೇಕು. ಈ ಬಾರಿ ಪ್ರಸಾದ್ ಸುಮ್ಮನಿರುವುದಿಲ್ಲ. ಸರೋವರಾ ನೀಡಿದ ಹೊಡೆತ ಸಣ್ಣದಲ್ಲ ಆತನಿಗೆ. ಅದಕ್ಕೆ ಸರಿಯಾದ ಪ್ರತ್ಯುತ್ತರಕ್ಕೆ ಆತ ಕಾಯುತ್ತಿರುತ್ತಾನೆ. ಮತ್ತೆ ಪೊಲೀಸರ ಅತಿಥಿ ಆಗುವುದು ಖಂಡಿತ.
ತಾನು ಒಮ್ಮೆ ಪ್ರತಾಪ್ ನ ಕೈಗೆ ಸಿಕ್ಕಿದರೆ ಮುಗಿಯಿತು, ಮತ್ತೆ ಮೇಲೇಳದಂತೆ ಮಾಡಿಬಿಡುತ್ತಾನೆ. ಪ್ರತಾಪ್ ನೀನು ಶಾಸ್ತ್ರಿಯೊಡನೆ ಸರಸವಾಡಬಾರದಿತ್ತು ಎಂದುಕೊಂಡ. ಸರೋವರಳ ಕೈ ಹಿಡಿಯುವಷ್ಟು ಧೈರ್ಯ ಬಂದಿದೆ ಎಂದರೆ..!? ಶಾಸ್ತ್ರಿ ಯಾರೆಂದು ನಿನಗೆ ತೋರಿಸುವ ಅಗತ್ಯವಿದೆ. ಸಮಯ ಸಂದರ್ಭ ತನಗೆ ಅವಕಾಶ ಕಲ್ಪಿಸಿಕೊಡುತ್ತಿಲ್ಲ. ಇನ್ನೊಂದು ಇಪ್ಪತ್ತು ತಾಸು.. ತಾನು ಮತ್ತೆ ಕೋರ್ಟಿನಲ್ಲಿ...
ಹಾಗಾಬಾರದು...!! ಹಾಗಾಗಬಾರದೆಂದರೆ ತಪ್ಪಿಸಿಕೊಳ್ಳಬೇಕು.. ಜೈಲಿನಿಂದ ತಪ್ಪಿಸಿಕೊಳ್ಳಬೇಕು. ತಾನು ಇದುವರೆಗೆ ಯಾವುದೇ ತಪ್ಪು ಮಾಡಿಲ್ಲ. ಅದನ್ನು ಕೋರ್ಟಿನಲ್ಲಿ ಸಾಬೀತು ಪಡಿಸಲಾದರೂ ತಾನು ತಪ್ಪಿಸಿಕೊಳ್ಳಬೇಕು. ಸಾಕ್ಷಿಗಳು ತನಗೆ ವಿರುದ್ಧವಾಗಿದೆ, ಪೊಲೀಸರೂ ತನ್ನ ಪರವಾಗಿಲ್ಲ. ಅದರ ಮೇಲಿಂದ ಘಟಾನುಘಟಿ ಲಾಯರ್. ಹೊರಬರುವುದು ಕಷ್ಟ. ಅದೇನು ಮಾಡಬೇಕೋ ಇಂದೇ ಮಾಡಬೇಕು. ತಪ್ಪಿಸಿಕೊಳ್ಳುವುದೇ ದಾರಿ ಎಂದಾದರೆ ಇದೆ ತನಗೆ ಸಿಗುವ ಕೊನೆಯ ರಾತ್ರಿ. ಎದ್ದು ಆಕಡೆ ಈಕಡೆ ಓಡಾಡ ತೊಡಗಿದ ಶಾಸ್ತ್ರಿ. ತಪ್ಪಿಸಿಕೊಳ್ಳುವ ಯೋಚನೆ ಇಂದು ಮೂಡಿದ್ದಲ್ಲ ಶಾಸ್ತ್ರಿಗೆ!!
ಮೊದಲ ದಿನ ಸರೋವರಾ ಬಂದಾಗ ಅವರಿಬ್ಬರೂ ಸೇರಿ ಕೋರ್ಟಿನಲ್ಲಿ ಹೇಗೆ ವಾದ ಮಾಡಬೇಕೆಂದು ಚರ್ಚಿಸಿದ್ದರು. ಎರಡು ತಾಸಿನ ಮೇಲೂ ಅವರಿಬ್ಬರಿಗೆ ಯಾವುದೇ ದಾರಿ ಕಾಣದ್ದರಿಂದ ಶಾಸ್ತ್ರಿಗೆ ತಿಳಿದುಹೋಗಿತ್ತು ತಾನು ಹೊರಬೀಳದೆ ತನ್ನ ಹಿಂದೆ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಸಾಧ್ಯವಿಲ್ಲ. ಹೇಗಾದರೂ ಹೊರಹೋಗಬೇಕು. ತಪ್ಪು ಮಾಡಿಲ್ಲ ಎಂದು ತೋರಿಸಲಾದರೂ ಹೊರಬೀಳಬೇಕು. ನಿಜವಾದ ಸಂಚನ್ನು ಕಂಡುಹಿಡಿದರೆ ತಾನು ಜೈಲಿನಿಂದ ತಪ್ಪಿಸಿಕೊಂಡಿದ್ದಕ್ಕೆ ಶಿಕ್ಷೆಯಾಗುವುದಿಲ್ಲವೇನೋ? ಆದರೂ ಅದರ ಪ್ರಮಾಣ ಕಡಿಮೆ. ಹಾಗಾಗಿ ಇನ್ನೆರಡು ದಿನದಲ್ಲಿ ಮತ್ತೇನಾದರೂ ಯೋಚನೆ ಬಂದರೆ ಅದನ್ನು ಆಲೋಚಿಸಬಹುದು. ಅದಾಗದೆ ಹೋದಲ್ಲಿ ಮೂರನೇ ದಿನ ತಪ್ಪಿಸಿಕೊಳ್ಳಬೇಕು. ಆ ಯೋಚನೆ ಬರುತ್ತಲೇ ಹೊರಟು ನಿಂತ ಸರೋವರಳನ್ನು ನಾಳೆ ಒಮ್ಮೆ ಗಾಳಿಗುಡ್ಡನ ಭೇಟಿ ಮಾಡಿಸು ಎಂದಷ್ಟೇ ಹೇಳಿದ. ಅವನ ಮನಸ್ಸಿನಲ್ಲಿ ಬಂದ ಯೋಚನೆ ಹೇಳಿದ್ದರೆ ಅವಳು ಖಂಡಿತ ಒಪ್ಪಲಾರಳು. ಅವಳದೇನಿದ್ದರೂ ಸಾತ್ವಿಕ ಮಾರ್ಗ. ನನ್ನದು ಅದೇ ಮಾರ್ಗವೇ.. ಆದರೆ ಸಮಯ ಈಗ ಅದಕ್ಕೆ ಬೆಲೆ ನೀಡುತ್ತಿಲ್ಲ. ನೋಡೋಣ ಏನಾಗುತ್ತದೆ ಎಂದುಕೊಂಡಿದ್ದ.
ಮರುದಿನ ಗಾಳಿಗುಡ್ಡ ಶಾಸ್ತ್ರಿಯನ್ನು ಭೇಟಿ ಮಾಡಿದ್ದ. "ಏನು ಶಾಸ್ತ್ರಿ, ಹೀಗೆ ಮಾಡಿಕೊಂಡೆ? ಅಂದು ನಿನಗೆ ಬೇಲ್ ಸಿಕ್ಕಿತ್ತು. ಸುಮ್ಮನೆ ನಮ್ಮನ್ನು ವಾಪಸ್ ಕಳುಹಿಸಿ ಸಿಕ್ಕಿಹಾಕಿಕೊಂಡೆಯಲ್ಲ.."
"ತಲೆಯಾಡಿಸಿದ ಶಾಸ್ತ್ರಿ, "ಹೌದು, ಗಾಳಿಗುಡ್ಡ ಅವ್ರೇ, ಇದು ಹೀಗಾಗುತ್ತದೆ ಎಂದು ನನಗೂ ತಿಳಿದಿರಲಿಲ್ಲ. ಇದರಲ್ಲಿ ಏನೋ ಷಡ್ಯಂತ್ರ ಇದೆ. ನನಗೊಂದು ಕೆಲಸವಾಗಬೇಕಿದೆ. ಇದರಲ್ಲಿ ಸ್ವಲ್ಪ ರಿಸ್ಕ್ ಇದೆ. ನಿಮ್ಮನ್ನು ತೊಂದರೆಯಲ್ಲಿ ದೂಡಿದಂತೆ ಆಗುತ್ತದೆ. ಇದೊಂದು ಬಾರಿ ನನ್ನ ಜೊತೆ ನೀಡಿ. ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ" ಎಂದ ಶಾಸ್ತ್ರಿ.
"ಅದೇನು ಹೇಳು ಶಾಸ್ತ್ರಿ, ನನ್ನ ಕೈಲಾಗುವಂತದ್ದಾಗಿದ್ದರೆ ಖಂಡಿತ ಮಾಡುತ್ತೇನೆ."
ಸ್ವಲ್ಪ ಹತ್ತಿರ ಬನ್ನಿ ಎನ್ನುವಂತೆ ಸನ್ನೆ ಮಾಡಿದ ಶಾಸ್ತ್ರಿ, ಗಾಳಿಗುಡ್ಡನ ಕಿವಿಯಲ್ಲಿ ತನಗೆ ಬಂದ ಉಪಾಯ ಹೇಳಿ ಮುಗಿಸಿದ. ಅದನ್ನು ಕೇಳಿದ ಕೆಲವು ಕ್ಷಣ ಸುಮ್ಮನೆ ನಿಂತೆ ಇದ್ದ ಗಾಳಿಗುಡ್ಡ.
"ಶಾಸ್ತ್ರಿ, ನೀನು ಮಾಡಿರುವ ಉಪಾಯದಲ್ಲಿ ಅಪಾಯವೇ ಹೆಚ್ಚಿದೆ. ಜೈಲಿನಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಅದೂ ಎರಡೇ ದಿನದಲ್ಲಿ ಜೈಲಿನ ಬಗ್ಗೆ ತಿಳಿದುಕೊಂಡು ಎಸ್ಕೇಪ್ ಪ್ಲಾನ್ ಮಾಡುವುದು ಇನ್ನು ಕಷ್ಟ. ಇನ್ನೊಮ್ಮೆ ಯೋಚಿಸು. ಅದೂ ಅಲ್ಲದೆ ರಾತ್ರಿ ಯಾರಾದರೂ ತಪ್ಪಿಸಿಕೊಳ್ಳಲು ನೋಡಿ ಸಿಕ್ಕಿಬಿದ್ದರೆ Shoot at site order ಇರುತ್ತದೆ. ನೀನ್ಯಾರು ಎಂದು ಯಾರೂ ಕೇಳುವುದಿಲ್ಲ. ಗುಂಡು ಹಾರಿಸಿ ಬಿಡುತ್ತಾರೆ. ಅದಕ್ಕೆ ಇದು ಪೀಕಲಾಟ ತರುವ ಕೆಲಸದಂತೆ ತೋರುತ್ತದೆ ನನಗೆ.." ಎಂದು ತಲೆ ಕೆರೆದುಕೊಂಡ ಗಾಳಿಗುಡ್ಡ.
"ನೀವು ಹೇಳುವುದು ಸರಿಯೇ ಗಾಳಿಗುಡ್ಡ ಅವ್ರೇ, ಅದು ಪ್ಲಾನ್ ಬಿ ಅಷ್ಟೇ. ಇನ್ನೆರಡು ದಿನದಲ್ಲಿ ನಮಗೆ ಇನ್ನೇನಾದರೂ ಉಪಾಯ ಸಿಗಬಹುದು. ಅದಾಗದಿದ್ದರೆ ಕಷ್ಟ. ಒಮ್ಮೆ ವಿಚಾರಿಸಿ ನೋಡಿ. ಯಾರಿದ್ದಾದರೂ ಕೈ ಬಿಸಿ ಮಾಡಿದರೆ ಏನಾದರೂ ಕೆಲಸ ಆಗುತ್ತದೆಯಾ ಎಂದು.."
ಇಲ್ಲದ ಮನಸ್ಸಿನಿಂದಲೇ ತಲೆಯಾಡಿಸುತ್ತಾ ಹೊರನಡೆದ ಗಾಳಿಗುಡ್ಡ.
ಶಾಸ್ತ್ರಿಗೂ ಗೊತ್ತು ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವಕ್ಕೇ ಅಪಾಯ. ಗಾಳಿಗುಡ್ಡನನ್ನು ಜೈಲಿಗೆ ಹಾಕಲೂಬಹುದು. ಖೈದಿಯೊಬ್ಬ ತಪ್ಪಿಸಿಕೊಳ್ಳಲು ಸಹಾಯ ಕೇಳುತ್ತಿದ್ದಾನೆ ಎಂದು. ಸಹಾಯ ಮಾಡಿ ಎಂದು ಪೊಲೀಸರನ್ನು ಕೇಳುವುದು ಮೂರ್ಖತನ. ಆದರೂ ರಿಸ್ಕ್ ತೆಗೆದುಕೊಳ್ಳಲೇಬೇಕು.
ಮರುದಿನ ಗಾಳಿಗುಡ್ಡ ಸಪ್ಪೆ ಮೊರೆ ಹಾಕಿಕೊಂಡು ಬಂದಿದ್ದ. "ಶಾಸ್ತ್ರಿ, ನನ್ನ ಪ್ರಯತ್ನ ನಾನು ಮಾಡಿದೆ ಅದು ಸಫಲವಾಗಲಿಲ್ಲ. ರಾತ್ರಿ ಕಾವಲಿರುವವರು ದಿನವೂ ಬದಲಾಗುತ್ತಾರೆ. ರಾತ್ರಿ ಪಾಳಿ ಯಾರದೆಂದು ಪೊಲೀಸರಿಗೆ ತಿಳಿಯುವುದು ಎರಡು ಘಂಟೆ ಮೊದಲು ಮಾತ್ರ. ರಾತ್ರಿ ಕೂಡ ಸಾಲಾಗಿ ನಾಲ್ಕು ಪಾಳಿ. ಮೂರು ಘಂಟೆಗೊಮ್ಮೆ ಬದಲಾಗುತ್ತಾರೆ. ಅದಲ್ಲದೆ ಜೈಲಿನಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದು ಇಡೀ ಜೈಲಿನ ಚಲನವಲನಗಳನ್ನು ಗಮನಿಸುತ್ತಿರಲು ಒಬ್ಬ 24*7 ಕುಳಿತುಕೊಂಡಿರುತ್ತಾನೆ. ತಪ್ಪಿಸಿಕೊಳ್ಳುವ ಯೋಚನೆ ಬಿಟ್ಟು ಬಿಡು ಶಾಸ್ತ್ರಿ. ಇನ್ನೇನಾದರೂ ನೋಡು.." ಎಂದು ಹೊರ ನಡೆದಿದ್ದ ಗಾಳಿಗುಡ್ಡ.
ಶಾಸ್ತ್ರಿಗೆ ತಾನೇಕೋ ಸೋತು ಹೋದೆ ಎನ್ನಿಸಿತು ಆ ಕ್ಷಣದಲ್ಲಿ.
ಶಾಸ್ತ್ರಿ ಶತಪಥ ಹಾಕುವುದನ್ನು ಮುಂದುವರೆಸಿಯೇ ಇದ್ದ. ಸರೋವರಾ ಇನ್ನೂ ಬಂದಿರಲಿಲ್ಲ. ಬಂದರೂ ಅವಳೇನು ತಾನೇ ಮಾಡಬಲ್ಲಳು? ಸಮಾಧಾನದ ಮಾತುಗಳಷ್ಟೇ. ಅವಳ ಕೈಲಾದ ಸಹಾಯ ಈಗಾಗಲೇ ಮಾಡಿದ್ದಾಳೆ. ನಾಳೆಯು ಕೂಡ ಕೋರ್ಟಿನಲ್ಲಿ ಏನಾದರೂ ಪವಾಡ ನಡೆಯಬೇಕಷ್ಟೆ!! ಎಂದುಕೊಂಡ ಶಾಸ್ತ್ರಿ.
ಮಧ್ಯಾಹ್ನವಾದರೂ ಸರೋವರಾಳ ಸುಳಿವಿಲ್ಲ. ಜೈಲಿನ ಊಟ ಬಂತು. ಮಹಾರಾಷ್ಟ್ರ ಸ್ಪೆಷಲ್ ಪಾವ್ ವಡಾ. ಹೊಟ್ಟೆ ಹಸಿದಿತ್ತು. ಪ್ಲೇಟ್ ಕೈಗೆತ್ತಿಕೊಂಡ. ತಣಿದ ಪಾವ್. ಗಟ್ಟಿಯಾದ ವಡಾ. ಗಂಟಲಲ್ಲಿ ಇಳಿಯಲಿಲ್ಲ. ಹಸಿವು ಕೂಗುತ್ತಿದ್ದರೆ ಇಳಿಸಬೇಕಾಗುತ್ತದೆ. ಮೂಲೆಯಲ್ಲಿದ್ದ ಚೊಂಬಿನಿಂದ ನೀರು ಕುಡಿಯುತ್ತಾ ಆವಿಷ್ಟನ್ನು ತಿಂದು ಮುಗಿಸಿದ. ಏಕೋ ಏನೋ ಎಲ್ಲವೂ ಮುಗಿಯಿತು ಎಂದೆನ್ನಿಸಿಬಿಟ್ಟಿತು. ಪಕ್ಕದಲ್ಲಿದ್ದ ಮರದ ಬೆಂಚಿನ ಮೇಲೆ ಮಲಗಿ ನಿದ್ರೆ ಹೋದ.
ಶಾಸ್ತ್ರಿ.. ಶಾಸ್ತ್ರಿ.. ಸರೋವರಾಳ ಧ್ವನಿ. ಕನಸಿನಲ್ಲಿ ಕರೆದಂತಿತ್ತು ಆತನಿಗೆ. ಮತ್ತೆರಡು ಬಾರಿ ಶಾಸ್ತ್ರೀ.. ಶಾಸ್ತ್ರಿ.. ಎನ್ನುತ್ತಲೇ ನಿದ್ರೆಯ ಅಮಲಿನಿಂದ ಹೊರಬಂದ. ಹೊರಗೆ ಸರೋವರಾ ನಿಂತಿರುವುದು ಕಂಡಿತು. ಗಂಟೆ ಎಷ್ಟಾಗಿದೆಯೋ ತಿಳಿಯಲಿಲ್ಲ. ಇಂತಹ ಸಂಕಟದಲ್ಲಿಯೂ ಅದ್ಹೇಗೆ ಇಷ್ಟು ಸುಖ ನಿದ್ರೆ ಬಂದಿತೆಂದು ಅರ್ಥವಾಗಲಿಲ್ಲ. ಬಾಗಿಲ ಬಳಿ ಬಂದು ನಿಂತ ಸರೋವರಾಳ ಬಳಿ ಕೋಣೆಯ ಬೀಗದ ಕೈ ಇತ್ತು. ತೆಗೆದು ಒಳ ಬಂದಳು. ದಿನವೂ ಅವಳ ಜೊತೆ ಇನ್ಯಾರಾದರೂ ಬಂದು ಬಾಗಿಲು ತೆಗೆದು ಕೊಟ್ಟು ಹೊರಗಿನಿಂದ ಲಾಕ್ ಮಾಡಿ ಹೋಗುತ್ತಿದ್ದರು. ಇಂದು ಅವಳೊಬ್ಬಳೆ ಬಂದಿದ್ದಳು. ಅಷ್ಟು ಸ್ನೇಹ ಸಂಪಾದಿಸಿದ್ದಳು ಹೊರಗಿನ ಜೈಲರ್ ಜೊತೆ ಅವಳು.
"ಶಾಸ್ತ್ರಿ, ಏನಾದರೂ ಹೊಳೆಯಿತಾ? ನನಗಂತೂ ಏನು ಮಾಡಬೇಕೆಂದು ತೋಚುತ್ತಿಲ್ಲ. ನಾಳೆ ಮತ್ತೆ ಕೋರ್ಟಿಗೆ ಹಾಜರಾಗಬೇಕು. ಈ ಮೂರು ದಿನದಲ್ಲಿ ನಾವು ಸಂಪಾದಿಸಿದ್ದಾದರೂ ಏನು?"
ಅಡ್ಡಡ್ಡ ತಲೆಯಾಡಿಸಿದ ಶಾಸ್ತ್ರಿ. "ಈ ಜೈಲೆಂಬ ಕೋಟೆಯಲ್ಲಿ ಕುಳಿತು ಏನು ಯೋಚನೆ ಮಾಡಲಿ ನಾನು? ಇನ್ನೇನಾದರೂ ನಾ ನಿನ್ನನ್ನೇ ನಂಬಿದ್ದೇನೆ. ನಾಳೆ ನಿನ್ನ ವಾದದ ಮೇಲೆ ನನ್ನ ಬದುಕು." ಎಂದು ನಿಡುಸುಯ್ದು ಆಕೆಯ ಮುಖ ನೋಡಿದ. ಅದೇನೋ ಇಬ್ಬರಿಗೂ ಒಮ್ಮೆಲೇ ನಗು ಬಂತು. ಇಬ್ಬರು ಮನಸಾರೆ ನಕ್ಕರು.
"ಮುಂದೆ??" ಎಂದ ಶಾಸ್ತ್ರಿ.
"ಮದುವೆ.. ಮಕ್ಕಳು.."
ಮಗನಿಗೆ ನನ್ನ ಹೆಸರಿಡಲು ಮರೆಯಬೇಡ.."
ಮತ್ತಿಬ್ಬರು ಒಟ್ಟಿಗೆ ನಕ್ಕರು. ಹತಾಶೆಯ ಕೊನೆಯ ಹಂತವದು. ಅಳಲಾರದೆ ಹೀಗೆ ನಗುತ್ತಿದ್ದೇವೆ ಎಂಬುದು ಇಬ್ಬರಿಗೂ ಗೊತ್ತು.
ಅದೆಷ್ಟೋ ನಗೆ ಚಟಾಕಿಗಳು ಹಾದು ಹೋದವು ಇಬ್ಬರ ನಡುವೆ. ಇದೇ ಅವರಿಗೆ ಸಿಗುವ ಕೊನೆಯ ಕ್ಷಣಗಳೇನೋ ಎಂಬಂತೆ ಮಾತನಾಡುತ್ತಲೇ ಉಳಿದರು. ಸಮಯ ಅವರ ಮಾತಿಗಿಂತಲೂ ವೇಗವಾಗಿ ಕಳೆದಿತ್ತು.
ಜೈಲರ್ ಬಂದು ಟೈಮಾಯಿತೆಂದು ಸೂಚನೆ ಕೊಡುವ ಮುನ್ನವೇ ಅವಳು ಹೊರಟು ನಿಂತಿದ್ದಳು.
"ಶಾಸ್ತ್ರಿ, ಮುಂದೇನಾಗುತ್ತದೋ ನಾ ಕಾಣೆ. ನಿನ್ನನ್ನು ನಾನು ನಂಬುತ್ತೇನೆ ಮತ್ತು ನಿನ್ನ ಜೊತೆ ಯಾವಾಗಲೂ ನಾನಿರುತ್ತೇನೆ ಎಂಬುದನ್ನು ಮರೆಯಬೇಡ." ಗಟ್ಟಿಯಾಗಿ ತಬ್ಬಿಕೊಂಡಳು. ಅವಳ ಕೈಲಿದ್ದ ಕರವಸ್ತ್ರವನ್ನು ಶಾಸ್ತ್ರೀಯ ಕೈಲಿ ತುರುಕಿದಳು. ಆಕೆ ಹಾಗೇಕೆ ಮಾಡುತ್ತಿದ್ದಾಳೆ ಎಂದು ತಿಳಿಯದಿದ್ದರೂ ಕರವಸ್ತ್ರವನ್ನು ಸುಮ್ಮನೆ ಕೈಗಳಲ್ಲಿ ಅಡಗಿಸಿಕೊಂಡ ಶಾಸ್ತ್ರಿ. ಹಣೆಗೆ ಒಂದು ಮುತ್ತಿಟ್ಟು ಅವನಿಂದ ದೂರ ಸರಿದಳು ಸರೋವರಾ.
ಅವಳ ಕಣ್ಣಿನಲ್ಲಿ ನೀರು ತುಂಬಿದ್ದನ್ನು ಶಾಸ್ತ್ರಿ ಗಮನಿಸದೆ ಇರಲಿಲ್ಲ. "ಅತ್ತು ಸಾಧಿಸುವುದಾದರೂ ಏನು"? ಎಂದು ಕೇಳಬೇಕೆಂದುಕೊಂಡ. ಅವನ ಮಾತು ಅವನೊಳಗೆ ಉಳಿದುಹೋಯಿತು.
ಹಿಂದೆ ತಿರುಗಿ ನೋಡದೆ ಹೊರನಡೆದು ಬಿಟ್ಟಳು ಸರೋವರಾ.
ಶಾಸ್ತ್ರೀಯ ಮನಸ್ಸು ಭಾರವಾಗಿತ್ತು. ಕರವಸ್ತ್ರ ತನ್ನ ಕೈಲಿರುವುದು ನೆನಪಾಯಿತು. ಮೂಲೆಗೆ ಹೋಗಿ ಗೋಡೆಯ ಬದಿ ಮುಖ ಮಾಡಿಕೊಂಡು ಕರವಸ್ತ್ರ ಬಿಚ್ಚಿ ನೋಡಿದ. ಅಚ್ಚ ಬಿಳಿಯ ಕರವಸ್ತ್ರ. ಎರಡು ಕಡೆ ತಿರುಗಿಸಿ ನೋಡಿದ. ಹೇಳಿಕೊಳ್ಳುವಂತದ್ದು ಏನು ಕಂಡು ಬರಲಿಲ್ಲ. ಏನಾದರೂ ಬರೆದಿರುವುದಾ ಎಂದು ಸೂಕ್ಷ್ಮವಾಗಿ ಗಮನಿಸಿದ. ನೋ! Nothing. ಬಿಳಿಯ ಕರವಸ್ತ್ರವಷ್ಟೇ. ಇದನ್ನು ತನಗೇತಕ್ಕೆ ಕೊಟ್ಟು ಹೋದಳು ಎಂಬುದರ ಅರಿವಾಗಲಿಲ್ಲ. ಹುಡುಗಿಯರು ಮೂಡಿಯಾದರೆ ಏನನ್ನು ಬೇಕಾದರೂ ಮಾಡಬಲ್ಲರು ಎಂದು ಖರ್ಚಿಫನ್ನು ಚಾದರದ ಒಳಗೆ ಇಟ್ಟು ದಿಕ್ಕು ನೋಡುತ್ತಾ ಕುಳಿತ ಶಾಸ್ತ್ರಿ.
*...................................................*...................................................*
ಸ್ವಯಂವರಾ ಬೆಳಿಗ್ಗೆ ಬೇಗನೆ ಎದ್ದು ಬೆಚ್ಚನೆಯ ನೀರಿನಲ್ಲಿ ಅರ್ಧ ಘಂಟೆ ಬಾತ್ ಟಬ್ ನಲ್ಲಿ ಮುಳುಗಿ ಕುಳಿತಳು. ಹಳದಿ ಮಿಶ್ರಿತ ಬಿಳುಪು ಮೈ ಬಣ್ಣ ಅವಳದು. ನೀಳ ಕಾಲುಗಳು.. ಅಷ್ಟೇ ನೀಳ ಕೈಗಳು.. ಉದ್ದನೆಯ ಮೆತ್ತನೆಯ ಕೈ ಬೆರಳುಗಳು.. ತನ್ನ ಸೌಂದರ್ಯವನ್ನು ತಾನೇ ಮೆಚ್ಚಿಕೊಂಡಳು ಸ್ವಯಂವರಾ. ನೀರಿನ ಜೊತೆ ಚೆಲ್ಲಾಟ ಅವಳ ಮನಸ್ಸಿಗೆ ಅದೆಷ್ಟೋ ಸಮಾಧಾನ ನೀಡಿತು.
ನೀರಿನಿಂದ ಮೇಲೆದ್ದು ಬೆಡ್ ರೂಮ್ ಹೋಗಿ ಕನ್ನಡಿಯೆದುರು ನಿಂತಳು. ತಾನೇ ನಾಚಿ ನೀರಾದಳು ಒಮ್ಮೆ. ಒಂದು ಕಣ್ಣನ್ನು ತನ್ನ ಕೈಯಿಂದ ಮುಚ್ಚಿ ಇನ್ನೊಂದು ಕಣ್ಣಿನಿಂದ ತನ್ನ ದೇಹ ನೋಡಿಕೊಂಡಳು. ಲಜ್ಜೆ ಅವಳ ಮುಖದಲ್ಲಿ ಕೆಂಪನ್ನು ಮೂಡಿಸಿತು. ನೀರಿನ ಹನಿಗಳು ಅವಳ ಮೈಯಲ್ಲಿ ಎಲ್ಲಿ ಬೇಕೆಂದರಲ್ಲಿ ತಬ್ಬಿ ನಿಂತಿದ್ದವು. ಅವಳ ಮುಂಗುರುಳಿನಿಂದ ಇಳಿದ ಮುತ್ತಿನ ಹನಿಯೊಂದು ಅವಳ ಕೊರಳನ್ನು ಬಳಸಿ ಎದೆಯ ಗುಳಿಯಲ್ಲಿ ಇಳಿದು ಆಟವಾಡಿ ಮಾಯವಾಯಿತು.
ಇನ್ನು ಸಾಕೆಂಬಂತೆ ಕನ್ನಡಿಯಿಂದ ದೂರವಾಗಿ ಮೈ ಒರೆಸಿಕೊಂಡು ಕಪಾಟಿನಲ್ಲಿದ್ದ ಡ್ರೆಸ್ ಬಳಿ ನಡೆದಳು. ಇವತ್ತು ಕ್ಷಾತ್ರನನ್ನು ಭೇಟಿಯಾಗಿ ತನ್ನ ಒಪ್ಪಿಗೆ ಸೂಚಿಸಬೇಕು ಎಂದು ಅವಳು ನಿರ್ಧರಿಸಿದ್ದಳು. ಮೊದಲು ಆಸ್ಪತ್ರೆಗೆ ಹೋಗಿ ನಂತರ ಕ್ಷಾತ್ರನನ್ನು ಭೇಟಿಯಾಗಲೇ ಅಥವಾ ಕ್ಷಾತ್ರನನ್ನು ಭೇಟಿಯಾಗಿ ನಂತರ ಆಸ್ಪತ್ರೆಗೆ ಹೋಗಲೇ? ಎಂದು ಯೋಚಿಸುತ್ತಿತ್ತು ಅವಳ ಮನ.
ಯಾವುದೇ ಡ್ರೆಸ್ ಕೈಯಲ್ಲಿ ಹಿಡಿದರೂ ಯಾಕೋ ಸರಿ ಎನ್ನಿಸುತ್ತಿಲ್ಲ. ನಿನ್ನೆ ರಾತ್ರಿಗೂ ಇಂದಿಗೂ ಅದೆಷ್ಟು ಬದಲಾವಣೆ ತನ್ನಲ್ಲಿ ಎಂದೆನ್ನಿಸಿತು. ತಂದು ಹಾಕದೆ ಹಾಗೆಯೇ ಇಟ್ಟಿದ್ದ White ಸಲ್ವಾರ್ ಕಮೀಜ್ ಕಣ್ಣಿಗೆ ಬಿತ್ತವಳಿಗೆ. ಅದನ್ನು ತಂದು ಕನ್ನಡಿಯ ಮುಂದೆ ತನ್ನೆದುರು ಹಿಡಿದು ನೋಡಿಕೊಂಡಳು. ಇದನ್ನು ತೊಟ್ಟರೆ ಹೂವಿನ ಬುಟ್ಟಿಯಲ್ಲಿರುವ ಲಿಲ್ಲಿ ಹೂಗಳಂತೆ ಕಾಣುತ್ತೇನೆ ಎಂದೆನ್ನಿಸಿತು.
ತಡ ಮಾಡದೆ ಅದನ್ನು ಧರಿಸಿಕೊಂಡಳು. ಸಲ್ವಾರ್ ನ ಕುತ್ತಿಗೆಯ ಕೆಳ ಭಾಗದಲ್ಲಿಆಕಾಶನೀಲಿ ಬಣ್ಣದ ಎರಡು ಹೂವುಗಳು.. ಅದರ ಸುತ್ತಲೂ ಅಲಂಕರಿಸಲ್ಪಟ್ಟ ಪುಟ್ಟ ಪುಟ್ಟ ಕನ್ನಡಿಗಳ ಸಾಲು.. ಮುಗುಳ್ನಗೆ ಮೂಡಿತು.
ಬಟ್ಟೆಗೆ ಒಪ್ಪುವಂಥ ಎರಡು ನೀಲಿ ಬಣ್ಣದ ಬಳೆಗಳನ್ನು ಹಾಕಿಕೊಂಡು ಮತ್ತೊಂದು ಕೈಗೆ ಬಿಳಿ ಬಣ್ಣದ ಬೆಲ್ಟ್ ಇರುವ ವಾಚ್ ಕಟ್ಟಿಕೊಂಡಳು. ತಾನು ಯಾವತ್ತೂ ಹಾಕದಿರುವ ಇಯರ್ ರಿಂಗ್ ಹಾಕಿಕೊಂಡಳು. ಪುಟ್ಟ ಪುಟ್ಟ ವಜ್ರದ ಹರಳುಗಳಿದ್ದ ಇಯರ್ ರಿಂಗ್ ಅವಳ ಮುಖದಂತೆ ಹೊಳೆಯುತ್ತಿತ್ತು. ತುಂಬಿದ ಕೆನ್ನೆಗಳಿಗೆ ಹೌದೋ ಅಲ್ಲವೋ ಎಂಬಷ್ಟು ತೆಳ್ಳಗೆ ರೋಸ್ ಹಚ್ಚಿಕೊಂಡಳು. ಕಪ್ಪನೆಯ ಕಣ್ಣುಗಳಿಗೆ ಕಾಡಿಗೆ ಹಚ್ಚುವ ಅವಶ್ಯಕತೆಯೇ ಇರಲಿಲ್ಲ.
ತುಟಿಯ ಮೇಲೆ ಸುಮ್ಮನೆ ಒಮ್ಮೆ ನಾಲಿಗೆ ಆಡಿಸಿಕೊಂಡಳು. ಲಿಪ್ ಸ್ಟಿಕ್ ತನಗೆ ಶೋಭೆಯಲ್ಲ ಸಾಕಿಷ್ಟು ಎಂದು ಫೋನ್ ಎತ್ತಿಕೊಂಡು ಕ್ಷಾತ್ರನಿಗೆ ಫೋನ್ ಮಾಡಿದಳು.
"ಕ್ಷಾತ್ರ ನಾನಿಂದು ನಿನಗೆ ಸಿಗಬೇಕು. ಮಾತನಾಡುವುದಿದೆ. ಎಷ್ಟು ಹೊತ್ತಿಗೆ ಫ್ರಿ ಇರುವೆ??"
"Is something special!? ನಿಮಗಾಗಿ ನಾನು ಯಾವಾಗಲೂ Free ನೇ ಮೇಡಂ..!" ಎಂದ ಕ್ಷಾತ್ರ.
ನಗು ಬಂತು ಸ್ವಯಂವರಾಳಿಗೂ. "ಸರಿ ಹಾಗಾದರೆ ನಾ ನಿನಗೆ ಮೆಸೇಜ್ ಮಾಡುತ್ತೇನೆ. ಎಲ್ಲಿ ಸಿಗಬೇಕೆಂದು ಹೇಳು ಸಿಗೋಣ ಬೈ.." ಎಂದಳು.
ಕ್ಷಾತ್ರನು ಬೈ ಎಂದು ಕಾಲ್ ಕಟ್ ಮಾಡಿದ.
ವ್ಯಾನಿಟಿ ಬ್ಯಾಗ್ ಹಿಡಿದು ಹೊರ ಹೊರಟಳು ಸ್ವಯಂವರಾ.
ಅವಳಿಗಾಗಿ ಹೊರಗೆ ಬಾಷಾ ಕಾಯುತ್ತಿದ್ದ್ದಾನೆ ಎಂಬ ಸಣ್ಣ ಸುಳಿವೂ ಸಹ ಆಕೆಗಿರಲಿಲ್ಲ. ಕ್ಷಾತ್ರನಿಗೂ ಕೂಡ..
*...............................................*........................................*
ರಾತ್ರಿ ಹತ್ತು ಗಂಟೆಯಾಗಿತ್ತು. ಅಷ್ಟು ಹೊತ್ತಿಗೆಲ್ಲ ಜೈಲಿನಲ್ಲಿ ಊಟ ಮುಗಿದು ಪೇದೆಯೊಬ್ಬ ಎಲ್ಲ ಸೆಲ್ ನಲ್ಲಿರುವ ಕೈದಿಗಳನ್ನು ನೋಡಿಕೊಂಡು ಹೋದ ಮೇಲೆ ಲೈಟ್ ಆರಿಸಿಬಿಡುತ್ತಾರೆ. ಅಲ್ಲಲ್ಲಿ ಕೆಲವು ಟ್ಯೂಬ್ ಲೈಟ್ ಗಳು ಮಾತ್ರ ಉರಿಯುತ್ತಿರುತ್ತವೆ. ಅದು ಬಿಟ್ಟರೆ ರಸ್ತೆಗಳಲ್ಲಿನ ಬೀದಿ ದೀಪಗಳು. ಮೇನ್ ಗೇಟ್ ಹಾಗೂ ಎತ್ತರದ ಕಾಂಪೌಂಡ್ ನ ನಾಲ್ಕು ಮೂಲೆಗಳಲ್ಲೇ ಪಹರೆಗೆ ನಿಲ್ಲುವವರ ಬಳಿ ಒಂದೊಂದು ಲೈಟ್ ಉರಿಯುತ್ತಿರುತ್ತದೆ. ದೊಡ್ಡದಾದ ಸರ್ಚ್ ಲೈಟ್ ಒಂದು ಸುತ್ತಲೂ ಓಡಾಡಿಕೊಂಡಿತ್ತು. ಹತ್ತು ಗಂಟೆ ಆಯಿತೆಂಬಂತೆ ಪೇದೆ ಶಾಸ್ತ್ರೀಯ ಸೆಲ್ ನ ಎದುರು ಹಾದು ಹೋದ. ಇನ್ನು ನಾಳೆ ಬೆಳಿಗ್ಗೆ ಸೂರ್ಯೋದಯ ತನ್ನ ಬದುಕಿನಲ್ಲಿ ಎಂತಹ ಆಟವಾಡುತ್ತದೆಯೋ ಎಂದುಕೊಂಡು ಮಲಗಲು ತಯಾರಾದ ಶಾಸ್ತ್ರಿ. ಅಷ್ಟರಲ್ಲಿ ಲೈಟ್ ಆಫ್ ಆಯಿತು. ಬೆಳಕಿಗೆ ಹೊಂದಿಕೊಂಡಿದ್ದ ಶಾಸ್ತ್ರಿಯ ಕಣ್ಣುಗಳು ಒಮ್ಮೆಲೇ ಕತ್ತಲಾವರಿಸಿದ್ದರಿಂದ ಏನು ಕಾಣದಂತೆ ಗಾಡಾಂಧಕಾರವಾಯಿತು. ಆ ಹೊತ್ತಿನಲ್ಲಿ ಆತ ಚಾದರ ಕೊಡವಿ ಹೊದೆಯಲು ರೆಡಿಯಾಗುತ್ತಿದ್ದ. ಅಷ್ಟರಲ್ಲಿ ನೆಲದ ಮೇಲೆ ಏನೋ ಹೊಳೆದಂತಾಯಿತು. ಸ್ವಯಂವರಾ ಕೊಟ್ಟ ಕರ್ಚಿಫ್ ಮರೆತು ಹೋಗಿತ್ತು ಅವನಿಗೆ. ಏನೆಂದು ನೋಡಿದಾಗ ಅದೇ ಕರವಸ್ತ್ರ.
ಪಟ್ಟನೆ ಕರವಸ್ತ್ರ ತೆಗೆದುಕೊಂಡು ಏನೆಂದು ನೋಡಿದ. ಹಗಲಿನಲ್ಲಿ ಎಷ್ಟು ನೋಡಿದರೂ ಏನೂ ಕಾಣದ ಕರವಸ್ತ್ರದ ಮೇಲೆ ಈಗ ಸ್ಪಷ್ಟವಾಗಿ ಹೊಳೆಯುವ ಅಕ್ಷರಗಳು. ಸರೋವರಾ ರೇಡಿಯಂ ಪೆನ್ ಉಪಯೋಗಿಸಿ ಬರೆದಿದ್ದಾಳೆ..!!
"ಇಂದು ರಾತ್ರಿ.. ಕಬಾಲಿ.. ಸೆಕೆಂಡ್ ಶೋ.."
ಒಮ್ಮೆಲೇ ಏನೂ ಅರ್ಥವಾಗಲಿಲ್ಲ ಶಾಸ್ತ್ರಿಗೆ. ಇದನ್ನೇಕೆ ನನಗೆ ಬರೆದುಕೊಟ್ಟಳು ಸರೋವರಾ.ಇದರ ಅರ್ಥವೇನು?? ಕರವಸ್ತ್ರ ಮಡಚಿ ಚಾದರದೊಳಗಿಟ್ಟು ಅದರ ಅರ್ಥವೇನೆಂದು ಯೋಚಿಸತೊಡಗಿದ. ಒಮ್ಮೆ ಸಮಾಧಾನದಿಂದ ಯೋಚಿಸಿದಾಗ ನೆನಪಾಯಿತು. ಸೂಪರ್ ಸ್ಟಾರ್ ರಜನಿಯ ಕಬಾಲಿ ಚಿತ್ರದ ಬಿಡುಗಡೆಯಿದೆ. ಎಂದು!? ಎಂದು!? ಪಟಕ್ಕನೆ ಹೊಳೆಯಲಿಲ್ಲ. ತಾನು ಓದಿದ ಪತ್ರಿಕೆಗಳ ಸಾಲುಗಳನ್ನು ನೆನಪು ಮಾಡಿಕೊಳ್ಳತೊಡಗಿದ ಶಾಸ್ತ್ರಿ. ಎಂದೋ ಓದಿದ್ದು ನೆನಪಾಯಿತು.
22nd Friday..
ಅಂದರೆ ಇವತ್ತೇ.. ರಜನಿಯ ಫಿಲ್ಮ್ ಎಂದರೆ ಮುಗಿಯಿತು. ಜನರ ದಂಡೇ ಸೇರುತ್ತದೆ. ಅದು ಮೊದಲ ದಿನ!! ಕೇಳಬೇಕೆ!? ಆದರೆ ಸರೋವರಾ ತನಗೇಕೆ ಇದನ್ನು ಕೊಟ್ಟಳು?? ಅಥವಾ ಕಬಾಲಿ ಸೆಕೆಂಡ್ ಶೋಗೆ ಬಾ ಎಂದು ಪ್ರತಾಪ್ ಅವಳನ್ನು ಕರೆದನೇ??
ಅಷ್ಟರಲ್ಲಿ ತಟಕ್ಕನೆ ಒಂದು ವಿಚಾರ ಅರಿವಾಯಿತು.ಅವನಿರುವ ಜೈಲಿನ ಪಕ್ಕದಲ್ಲೇ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರವಿದೆ. ಬೆಳಿಗ್ಗಿನಿಂದ ಅದರ ಕೇಕೆ ಆಗಾಗ ಕೇಳಿ ಬರುತ್ತಿರುತ್ತದೆ. ಒಂದು ಶೋ ಮುಗಿದು ಜನ ಹೊರಬಿದ್ದರಂತೂ ದೊಡ್ಡ ಜಾತ್ರೆಯೇ ಸೇರಿದಷ್ಟು ಗದ್ದಲ ಕೇಳಿ ಬರುತ್ತಿದೆ.
ಶಾಸ್ತ್ರಿ ಯೋಚಿಸುತ್ತ ಕುಳಿತ.. ಯಾಕೆ?? ಯಾಕೆ?? ಸರೋವರಳ ಉದ್ಧೇಶವೇನು?? ಸೆಕೆಂಡ್ ಶೋ ಶುರುವಾಗುವುದು 11.30 ಕ್ಕೆ. ಒಂದೂವರೆ ಎರಡು ಗಂಟೆಗೆಲ್ಲ ಸಿನಿಮಾ ಮುಗಿಯುತ್ತದೆ. ಅದನ್ನೇಕೆ ಬರೆದಿದ್ದಾಳೆ?? ನನ್ನನ್ನು ಜೈಲಿನಿಂದ ತಪ್ಪಿಸುವ ಆಲೋಚನೆಯೇನಾದರೂ ಇದೆಯಾ!? ಆದರೆ ಅವಳು ಅಂತಹ ಯೋಚನೆ ಮಾಡಲಾರಳು.
ರಾತ್ರಿ ಜೈಲಿನಿಂದ ಕದ್ದೋಡುವುದೂ, ಜೀವವನ್ನು ಗಂಗೆಯಲ್ಲಿ ತೇಲಿ ಬಿಡುವುದೂ ಎರಡು ಒಂದೇ. ಬದುಕಿ ಹೊರಬೀಳುವುದು ಕಷ್ಟ. ನನ್ನ ಜೀವವನ್ನು ಪಣಕ್ಕಿಡುವ ಹಂತಕ್ಕೆ ಹೋಗಲಾರಳು ಅವಳು.
ಮತ್ತೇಕೆ?? ಮತ್ತೇಕೆ ಹೀಗೆ ಬರೆದಿದ್ದಾಳೆ?? ಇನ್ನೊಂದು ಸ್ವಲ್ಪ ವಿವರಣೆ ಏನಾದರೂ ಬರೆಯಬಾರದಿತ್ತೇ.. ಎಂದುಕೊಂಡ. ಒಂದೆರಡು ನಿಮಿಷ ಹಾಗೆಯೇ ಕಣ್ಮುಚ್ಚಿ ಕುಳಿತುಕೊಂಡ. ಮಧ್ಯಾಹ್ನ ಸರೋವರಾ ಬಂದಾಗಿಲಿನಿಂದ ಇಬ್ಬರ ಮಾತುಕತೆಯನ್ನು ಮತ್ತೊಮ್ಮೆ ಮೆಲುಕು ಹಾಕಿದ. ಏನಾದರೂ ಕ್ಲ್ಯೂ ಕೊಟ್ಟಿರುವಳಾ ಮಾತಿನಲ್ಲಿ ಎಂದು. ಅಂತಹ ಯಾವುದೇ ಸೂಚನೆ ಆಕೆಯ ಕಡೆಯಿಂದ ಬಂದಿಲ್ಲ. ಅಂದರೆ!!?
ತಲೆ ಕೆಟ್ಟಂತಾಯಿತು ಶಾಸ್ತ್ರಿಗೆ. ತನ್ನ ಬುದ್ಧಿಗೇನಾಯಿತು?? ಹೀಗಿರಲಿಲ್ಲ ನಾನು!! ಸರೋವರಾಳೆ ನನಗೆ ಸವಾಲಾಗುವ ಚಾಣಾಕ್ಷೆಯಾದಳಲ್ಲ!? ನಾನವಳನ್ನು ಬಹಳ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೆನಾ?? ಯಾವಾಗಲೂ ಅವಳು ಅಳುವ ಗೊಂಬೆಯಾಗಿಯೇ ಕಂಡಿದ್ದಳು. ಕೋರ್ಟಿನಲ್ಲೂ ಲಾಯರ್ ವೇಷ ಧರಿಸಿ ಬಂದಾಗಲೇ ತಾನೇ ಅವಳಷ್ಟು ಡೈನಾಮಿಕ್ ಎಂದು ನನಗೆ ಗೊತ್ತಾಗಿದ್ದು. ಏನೋ ಪ್ಲಾನ್ ಮಾಡಿರುತ್ತಾಳೆ. ಇಲ್ಲದಿದ್ದರೆ ಹೀಗೆ ರೇಡಿಯಂ ಲಿ ಬರೆದ ಕರ್ಚಿಫ್ ಕೊಡುತ್ತಿರಲಿಲ್ಲ. ಬೇರೆ ಯಾರೋ ಸ್ವಯಂವರಳನ್ನು ಫಿಲ್ಮಿಗೆ ಬಾ ಎಂದು ಕರೆಯಲು ಹೀಗೆ ಬರೆದು ಕೊಡುವ ಹರಸಾಹಸ ಮಾಡಬೇಕಿಲ್ಲ. ಅದು ಅಲ್ಲದೆ ಮೊನ್ನೆ ಕೋರ್ಟಿನಲ್ಲಿ ಅಷ್ಟು ನಡೆದ ಮೇಲೆ ಪ್ರತಾಪ್ ಇಷ್ಟು ಬೇಗ ಸರೋವರಳ ಸುದ್ದಿಗೆ ಬರಲಾರ. Something is missing.. think shaastri.. think..
ಅವನ ಮನಸ್ಸಿನಲ್ಲಿ ಸಾವಿರ ಅಶ್ವದ ಕುದುರೆ ಗಾಡಿಯೊಂದು ಓಡತೊಡಗಿತು. ತಟ್ಟನೆ ಆತನಿಗೊಂದು ನೆನಪಾಯಿತು. ಇವತ್ತು ಸರೋವರಾಳಿಗೆ ಪೇದೆ ಬಂದು ಬಾಗಿಲು ತೆಗೆದು ಕೊಟ್ಟಿಲ್ಲ. ಅವಳೇ ಕೀ ತೆಗೆದು ಒಳಗೆ ಬಂದಿದ್ದಾಳೆ. ನನ್ನನ್ನು ತಪ್ಪಿಸುವ ಉಪಾಯ ಮಾಡಿ ಬೀಗ ಸರಿಯಾಗಿ ಹಾಕದೇ ಹೋಗಿರಬಹುದೇ?
ಅದೊಂದು ಯೋಚನೆ ತಲೆಯಲ್ಲಿ ಬರುತ್ತಲೇ ಕುಳಿತಲ್ಲಿಂದ ದಿಢೀರನೆ ಮೇಲೆದ್ದ ಶಾಸ್ತ್ರಿ. ಬಹುತೇಕ ಕತ್ತಲಾವರಿಸಿತ್ತು ಆ ಜಾಗದಲ್ಲಿ. ಮಂದ ಬೆಳಕಿನಲ್ಲೂ ಎದುರಿನ ಸೆಲ್ ನಲ್ಲಿ ಮಲಗಿರುವ ವ್ಯಕ್ತಿ ಕಾಣುತ್ತಿದ್ದ. ಸದ್ದಾಗದಂತೆ ಬಾಗಿಲ ಬಳಿ ಹೋಗಿ ಹೊರಗೆ ಎಲ್ಲಾದರೂ ಪೇದೆ ಬರುತ್ತಿರುವನೇ ಎಂದು ಕಣ್ಣಿಗೆ ಕಾಣುವಷ್ಟು ದೂರ ಎರಡೂ ಕಡೆ ನೋಡಿದ. ಯಾವುದೇ ಸದ್ದು ಕೇಳದ ಕಾರಣ ನಿಧಾನ ಕೈ ಹೊರಗೆ ಹಾಕಿ ಬಾಗಿಲಿಗೆ ಹಾಕಿದ್ದ ಬೀಗ ತಡಕಿದ. ಹಾಕಿಕೊಂಡೇ ಇತ್ತು ಬೀಗ. ಸುಮ್ಮನೆ ಇಲ್ಲದ್ದನ್ನು ಯೋಚಿಸಿ ಮನಸ್ಸಿನಲ್ಲೇ ಮಂಡಿಗೆ ತಿಂದೆ ಎಂದು ಬೇಸರವಾಯಿತು. ಬಾಗಿಲು ಬಿಟ್ಟು ಹಿಂದೆ ಸರಿದು ಶತ ಪಥ ಹಾಕತೊಡಗಿದ.
ಹಾಗಾದರೆ.. ಕಬಾಲಿ ಸೆಕೆಂಡ್ ಷೋ ನ ಅರ್ಥವೇನು? ಹಣೆ ಉಜ್ಜಿಕೊಂಡ. ಏನಾದರೂ ಈ ಹೊತ್ತಿನಲ್ಲಿ ಸರೋವರಾ ಜೈಲಿನ ಗೋಡೆ ಒಡೆದು ಬಂದು ನನ್ನನ್ನು ಹಾರಿಸಿಕೊಂಡು ಹೋಗುವಳೇ??
ಅವನ ಯೋಚನೆಗೆ ಅವನಿಗೆ ನಗು ಬಂತು. ನಾನೇನಾದರೂ ಇಂಗ್ಲೀಷ್ ಸಿನೆಮಾ ನೋಡಿದ್ದು ಜಾಸ್ತಿಯಾಯಿತಾ? ಎಂದುಕೊಂಡ. ಯಾವ ಯೋಚನೆಗೂ ನಿರಾಳವಾಗದ ಮನಸ್ಸು ಹತಾಶೆಗೊಂಡಿತು. ಹತಾಶೆ ನೋವಾಗಿ, ನೋವು ಸಿಟ್ಟಾಗಿ ಪರಿವರ್ತನೆಯಾಗಲು ಬಹಳ ಸಮಯ ಹಿಡಿಯಲಿಲ್ಲ. ಓಡಾಡುತ್ತಿದ್ದ ಶಾಸ್ತ್ರಿ ಬಾಗಿಲ ಬಳಿ ಬಂದು "ಬ್ಲಡಿ ಸೆಕೆಂಡ್ ಶೋ.." ಎನ್ನುತ್ತಾ ಜೋರಾಗಿ ಜಾಡಿಸಿ ಒದ್ದ ಬಾಗಿಲಿಗೆ. ಕಬ್ಬಿಣದ ಬಾಗಿಲು ಸಡಿಲವಾಗಿದ್ದರಿಂದ ಗೋಡೆಯ ಮಧ್ಯೆ ಸಿಕ್ಕಿಸಿದ್ದ ಲಾಕ್ ನ ಸರಳು ಗಲಗಲ ಸಡ್ಡು ಮಾಡಿತು. ಅದು ಅಲ್ಲದೆ ಅದಕ್ಕೆ ಸಿಕ್ಕಿಸಿದ್ದ ಲಾಕ್ ಸಹ ಕಳಚಿ ಎಗರಿ ಬಾಗಿಲಿನಿಂದ ಹೊರಗೆ ದೂರ ಬಿತ್ತು.
ಆ ಸದ್ದಿಗೆ ಎದುರಿನ ರೂಮಿನ ಕೈದಿ ಎದ್ದು ಕುಳಿತುಕೊಂಡದ್ದು ಶಾಸ್ತ್ರಿಗೆ ಕಂಡಿತು. ಪಕ್ಕದ ಸೆಲ್ ಗಳಿಂದ ದೊಡ್ಡ ಕೇಕೆ ಕೇಳಿ ಬಂತು. ಶಾಸ್ತ್ರಿಗೆ ತಾನು ಮಾಡಿದ ತಪ್ಪಿನ ಅರಿವಾಗಿತ್ತು. ಬಾಗಿಲಿಗೆ ಲಾಕ್ ಸುಮ್ಮನೆ ಹಾಕಿಕೊಂಡಿತ್ತು. ಅವನು ಗಟ್ಟಿಯಾಗಿ ಅದನ್ನು ಎಳೆದರೆ ತೆರೆದುಕೊಳ್ಳುತ್ತಿತ್ತು. ಆದರೆ ಅವನು ಬೀಗ ತಡವಿ ಬಂದಿದ್ದ. ಈಗ ಬೀಗ ಎಗರಿ ಬಿದ್ದಿದೆ. ಬಾಗಿಲಿನಿಂದ ಮಾರು ದೂರವೇ ಬಿದ್ದಿದೆ. ಸರಳುಗಳ ಮಧ್ಯದಿಂದ ಕೈ ಹೊರಹಾಕಿ ಬೀಗ ಎಟುಕುತ್ತದೆಯೇ ನೋಡಿದ. ಕೈಯಿಂದ ಒಂದಿಂಚು ದೂರದಲ್ಲಿದೆ. ಅವನಿಗಾದಷ್ಟು ಬಾಗಿಲ ಬಳಿ ಸರಿದು ಬೀಗ ಒಳಗೆ ತೆಗದುಕೊಂಡ. ಗಲಾಟೆ ಕೇಳಿದ್ದರಿಂದ ಅಷ್ಟರಲ್ಲಿ ಲೈಟ್ ಆನ್ ಮಾಡಿದ್ದರು. ದೂರದಲ್ಲೆಲ್ಲೋ ಪೇದೆಯ ಸೀಟಿ ಸದ್ದು ಕೇಳಿಸಿತು. ಅವನು ಈಕಡೆ ಬರುವುದರೊಳಗೆ ಬೀಗವನ್ನು ಮೊದಲಿನಂತೆಯೇ ಹಾಕಿಡಬೇಕು. ಸಿಕ್ಕಿಬಿದ್ದರೆ ಕಥೆ ಮುಗಿಯಿತು. ಕೇವಲ ತನ್ನ ಕಥೆಯಲ್ಲ ಸರೋವರಳದು ಕೂಡ. ಅವಳೇನು ಪ್ಲಾನ್ ಮಾಡಿರುವಳೋ ಅದೆಲ್ಲ ಇಲ್ಲಿಗೆ ಮುಗಿದು ಹೋಗುತ್ತದೆ. ಲೈಟ್ ಹತ್ತಿಕೊಳ್ಳುತ್ತಿದ್ದಂತೆ ಸಿಸಿಟಿವಿಯವ ಈಕಡೆಯೇ ಗಮನ ಹರಿಸುತ್ತಾನೆ. ಕೊಠಡಿಗಳಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುವುದಿಲ್ಲವಾದರೂ ವರಾಂಡ ಮೇಲೆ ನಡೆಯುವ ಘಟನೆಗಳು ಕಾಣಿಸುತ್ತವೆ. ಹಾಗಾಗಿ ಆದಷ್ಟು ಅನುಮಾನ ಬರದಂತೆ ಬಾಗಿಲ ಬಳಿ ನಿಂತ ಹಾಗೆ ಮಾಡುತ್ತಾ ಬೀಗವನ್ನು ಮತ್ತೆ ಸ್ವಸ್ಥಾನಕ್ಕೆ ಸೇರಿಸಿದ.
ಬೀಗ ಹಳೆಯದಾಗಿದ್ದಕ್ಕೋ ಏನೋ ಸುಮ್ಮನೆ ಸಿಗಿಸಿದರೆ ಗಟ್ಟಿಯಾಗಿ ಕುಳಿತುಕೊಳ್ಳುತ್ತಿತ್ತು. ಕತ್ತಲೆಯಲ್ಲಿ ಯಾವ ಕೊಠಡಿಯಿಂದ, ಯಾವ ಕಡೆಯಿಂದ ಸದ್ದು ಬಂತು ಎಂದು ತಿಳಿಯದ್ದರಿಂದ ಎರಡೂ ಕಡೆಗೂ ಬ್ಯಾಟರಿ ಹೊಡೆಯುತ್ತ ರೂಮಿನೊಳಗೆ ನೋಡುತ್ತಾ ಬರುತ್ತಿದ್ದರು. ಶಾಸ್ತ್ರಿ ಸುಮ್ಮನೆ ಹೋಗಿ ಬೆಂಚಿನ ಮೇಲೆ ಕುಳಿತ. ಆತನ ಹೃದಯ ಬಡಿತದ ಸದ್ದು ಆತನಿಗೆ ಕೇಳುವಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು. ಶಾಸ್ತ್ರಿ ಗೋಡೆಯ ಕಡೆ ಮುಖ ಮಾಡಿಕೊಂಡು ಕುಳಿತುಕೊಂಡಿದ್ದ. ಪೇದೆಗಳು ಬರುತ್ತಿದ್ದಾರೆ ಎಂಬಂತೆ ಬೂಟು ಕಾಲಿನ ಸದ್ದು ಹತ್ತಿರದಲ್ಲಿಯೇ ಕೇಳತೊಡಗಿತು. ಶಾಸ್ತ್ರಿಯ ಕೈ ಬೆವರತೊಡಗಿತು. ಪಕ್ಕದ ರೂಮಿನ ಸರಳುಗಳ ಮೇಲೆ ಲಾಠಿಯಿಂದ ಹೊಡೆದ ಸದ್ದು. ಶಾಸ್ತ್ರಿಯ ಸೆಲ್ ನ ಬಾಗಿಲಿಗೆ ಅಷ್ಟು ತಟ್ಟಿದರೆ ಸಾಕು ಬೀಗದ ಕೊಂಡಿ ಮತ್ತೆ ಕಳಚಿ ಬಿಡುತ್ತದೆ.
ಏನು ಮಾಡಬೇಕೋ ತಿಳಿಯಲಿಲ್ಲ. ಅಷ್ಟರಲ್ಲಿ ಎದುರು ರೂಮಿನ ಕೈದಿ ಎದ್ದು ಬಾಗಿಲ ಬಳಿ ಬಂದ. ಈತನೇನಾದರೂ ನಾನು ಕೀ ಎತ್ತಿಕೊಂಡಿರುವುದನ್ನು ನೋಡಿಬಿಟ್ಟಿದ್ದಾನಾ?? ಪೇದೆಯ ಬಳಿ ಹೇಳಿ ಬಿಡುತ್ತಾನಾ?? ಆತಂಕ ಮತ್ತಷ್ಟು ಹೆಚ್ಚಾಯಿತು. ಮುಖದ ಮೇಲೆ ಚಾದರ ಎಳೆದುಕೊಂಡು ಮಲಗಿದ ಶಾಸ್ತ್ರಿ.
ಪೇದೆ ಅವನ ರೂಮಿನೆದುರು ಬಂದಿದ್ದು ತಿಳಿಯಿತು. ಬ್ಯಾಟರಿಯ ಬೆಳಕು ಶಾಸ್ತ್ರಿಯ ರೂಮಿನ ಸರಳುಗಳನ್ನು ದಾಟಿ ಆತನ ಮೇಲೆ ಆಚೀಚೆ ಸರಿಯುತ್ತಿರುವುದು ಚಾದರದೊಳಗಿಂದ ಮಸುಬು ಮಸುಬಾಗಿ ಕಂಡುಬಂತು. ಲಾಠಿ ತೆಗೆದುಕೊಂಡು ಬಾಗಿಲಿಗೆ ಗಟ್ಟಿಸಿದನೋ ಮುಗಿಯಿತು ಕಥೆ ಎಂದುಕೊಂಡ.
"ಏಯ್ ಮಗನೇ, ದೂರ ಸರಿಯೋ ಬಾಗಿಲಿನಿಂದ. ಎನ್ನುತ್ತಾ ಲಾಠಿ ಎದುರು ರೂಮಿನ ಸರಳಿಗೆ ಗಟ್ಟಿಸಿದ ಸದ್ದಾಯಿತು. ಎರಡು ಕ್ಷಣ ಭಾರವಾಗಿ ಕಳೆಯಿತು. ಎದುರು ರೂಮಿನ ಕೈದಿ ದೊಡ್ಡದಾಗಿ ಆಕಳಿಸುತ್ತ ಬಾಗಿಲಿನಿಂದ ದೂರ ಸರಿದ. "ತಿಂದ ಕೊಬ್ಬು ಮಕ್ಕಳಾ ನಿಮಗೆ.. ಉಪವಾಸ ಸಾಯಿಸುತ್ತೀನಿ.." ಎನ್ನುತ್ತಾ ಪೇದೆ ಮುಂದೆ ಸಾಗಿದ.
ಶಾಸ್ತ್ರಿ ಹಾಗೆ ಮಲಗಿಯೇ ಇದ್ದ. ಬರುತ್ತಿರುವ ಚಂಡಮಾರುತವೊಂದು ದಿಕ್ಕು ತಪ್ಪಿ ಬೇರೆಡೆಗೆ ಹೋದ ಅನುಭವವಾಯಿತು. ಐದು ನಿಮಿಷ ಕಳೆದ ನಂತರ ಲೈಟ್ ಆಫ್ ಆಗಿ ಮತ್ತೆ ಕತ್ತಲಾಯಿತು.
ಎದ್ದು ಕುಳಿತ ಶಾಸ್ತ್ರಿ. ಈಗ ಅವನಿಗೆ ಯಾವುದೇ ಅನುಮಾನ ಉಳಿದಿರಲಿಲ್ಲ. ಸರೋವರಾ ತನ್ನನ್ನು ಜೈಲಿನಿಂದ ತಪ್ಪಿಸಲು ಸಂಚು ಮಾಡಿದ್ದಾಳೆ. ಕಬಾಲಿ ಸೆಕೆಂಡ್ ಷೋ ಮುಗಿಯುವ ಗಲಾಟೆಯಲ್ಲಿ ಏನೋ ಮಾಡುವವಳಿದ್ದಾಳೆ.
ಆದರೆ ಏನು? ನಾನು ಮೊದಲೇ ಇಲ್ಲಿಂದ ಹೊರಬೀಳಬೇಕಾ? ಹೊರ ಹೋದರು ಮೆನ್ ಗೇಟಿನಿಂದ ಹೊರಹೋಗುವುದು ಹೇಗೆ? ಅಲ್ಲಿಂದ ಹೊರ ಬಿದ್ದರು ಪೊಲೀಸರು ನನ್ನನ್ನು ಬೇಟೆಯಾಡಿಬಿಡುವುದಿಲ್ಲವೇ?? ಅದೆಷ್ಟೋ ಪ್ರಶ್ನೆಗಳು ಅಸಂಬದ್ಧವಾಗಿ ಅವನ ಸುತ್ತಲೂ ಗಿರಕಿ ಹೊಡೆಯತೊಡಗಿದವು.
ಹತ್ತು ಗಂಟೆಗೆ ಕರೆಂಟ್ ತೆಗೆದಿದ್ದಾರೆ. ಇಷ್ಟೆಲ್ಲ ನಡೆಯುವುದರೊಳಗೆ ಒಂದರ್ಧ ಗಂಟೆ ಕಳೆದಿರಬಹುದು. ಸೆಕೆಂಡ್ ಷೋ ಮುಗಿಯುವುದು ಎರಡು ಗಂಟೆಗೆ. ತಾನು ಹೊರಬೀಳಬೇಕೋ ಬೇಡವೋ ನೋಡೋಣ. ಆದರೆ ಸಮಯವನ್ನು ಕೂಡ ನೆನಪಿಡಬೇಕು. ಈಗ 10.30 ಎಂದುಕೊಂಡರೆ ಇನ್ನು ಮೂರುವರೆ ಗಂಟೆ ಸಮಯವಿದೆ. ಅಂದರೆ 210 ನಿಮಿಷಗಳು. 12600 ಸೆಕೆಂಡ್ ಗಳು.. 12599.... 12598... ಮನಸ್ಸಿನಲ್ಲಿಯೇ ಕೌಂಟ್ ಡೌನ್ ಶುರು ಮಾಡಿದ ಪದ್ಮಾಸನ ಹಾಕಿ ಕುಳಿತು.
ಸರೋವರಾ ನೀನು ಕೇವಲ ಡೈನಾಮಿಕ್ ಅಲ್ಲ. ಡೈನಾಮೈಟ್ ಎಂದುಕೊಂಡ ಮನಸ್ಸು 12500... 12499... 12498...ಎಂದು ಮುಂದೆ ಎಣಿಸಿತು.
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 26

                                     ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 26

ಸ್ವಯಂವರಾ ಯೋಚಿಸುತ್ತ ಮಲಗಿದ್ದಳು. ಮುಂಬೈಯಿಂದ ದೆಹಲಿಗೆ ಬಂದು ಎರಡು ದಿನಗಳೇ ಕಳೆದು ಹೋಗಿತ್ತು. ಆದರೂ ಆಸ್ಪತ್ರೆಯ ಕಡೆ ಹೋಗಬೇಕು ಎಂಬ ಆಲೋಚನೆಯೇ ಬರಲಿಲ್ಲ. ಬಂದರೂ ಏನೋ ಆಲಸಿತನ ಅವಳನ್ನು ಆವರಿಸಿತ್ತು. ಅದಕ್ಕಿಂತಲೂ ಹೆಚ್ಚಾಗಿ ಶಾಸ್ತ್ರಿಯ ಕಥೆ ಏನಾಗಿರಬಹುದು ಎಂಬ ಯೋಚನೆಯೇ ಬಹಳ ಕಾಡುತ್ತಿತ್ತು. ನಾನಿಷ್ಟು ಅಂಜುಬುರುಕಿಯಾ!? ಕೇವಲ ಒಂದು ಕೊಲೆ ನೋಡಿದ್ದಕ್ಕೆ ಸ್ಕಿಜೋಫ್ರೆನಿಯಾ ಆವರಿಸಿಕೊಳ್ಳುವಷ್ಟು ಹೆದರು ಪುಕ್ಕಲು ಮನಸ್ಸಾ ನನ್ನದು!? ಹಾಸಿಗೆಯಲ್ಲಿ ಮಲಗಿದ್ದ ಅವಳು ಮಗ್ಗುಲಾದಳು.
ಜಗತ್ತಿನಲ್ಲಿ ಅದೆಷ್ಟೋ ಕೊಲೆ ಸುಲಿಗೆಗಳು ದಿನಾಲು ನಡೆಯುತ್ತಿರುತ್ತವೆ. ಅದನ್ನು ನೋಡಿದವರೆಲ್ಲ ನನ್ನಂತೆಯೇ ಆಗಿಬಿಡುತ್ತಾರಾ?? ಅದೆಷ್ಟೋ ಜನರು ಕೊಲೆ ಮಾಡಿಯೂ ಏನು ಮಾಡಿರದಂತೆ ಬದುಕುತ್ತಿರುವಾಗ ಕೊಲೆ ನೋಡಿದ ನಾನು ಇಷ್ಟು ಹೆದರುವುದೇಕೆ?? ಮನಸ್ಸು ಸ್ವಲ್ಪ ಸ್ಥಿಮಿತಕ್ಕೆ ಬಂದಿತು. ಕ್ಷಾತ್ರ ನೆನಪಿಗೆ ಬಂದ. ನನ್ನನ್ನು ತುಂಬಾ ಹಚ್ಚಿಕೊಂಡಿದ್ದಾನೆ. ಸೂಕ್ಷ್ಮಗಳನ್ನು ಗಮನಿಸುವ ಮನಸ್ಥಿತಿ ಆತನದಲ್ಲ.. ಅಥವಾ ಪರಿಸ್ಥಿತಿಯ ಒತ್ತಡಗಳು ಆತನನ್ನು ಹಾಗೆ ಮಾಡಿರಬಹುದು. ಒಳ್ಳೆಯ ಮನುಷ್ಯನೇ. ಬಾಯ್ಬಿಟ್ಟು ಮದೆವೆಯಾಗುತ್ತೀಯಾ? ಎಂದು ಕೇಳಿದ್ದಾನೆ. ಆದರೆ ತಪ್ಪೇನು!? ಇನ್ನೆಷ್ಟು ದಿನ ಈ ಒಂಟಿ ಬದುಕು? ಒಂದಲ್ಲ ಒಂದು ದಿನ ಒಬ್ಬನಿಗೆ ಜೋತುಬೀಳಲೇಬೇಕು. ಕ್ಷಾತ್ರ ಯಾಕಾಗಬಾರದು ಎಂದು ಆತನ ಜೊತೆ ನಿಲ್ಲಬೇಕಾ?? ಇಷ್ಟ ಕಷ್ಟಗಳನ್ನು ಯೋಚಿಸಬೇಕಾ??
ಅಂದು ಹುಚ್ಚಾಸ್ಪತ್ರೆಯಲ್ಲಿ ಗಂಡು, ಹೆಣ್ಣು ಎಂದು ಎಲ್ಲರ ತಲೆ ಕೆಡಿಸಿ ಕೊಲೆ ಮಾಡಿ ಹೊರ ನಡೆದ ವ್ಯಕ್ತಿ ನೆನಪಾದ. ಯಾರು ಆತ!!? ಖಂಡಿತ ಶಾಸ್ತ್ರಿಯಂತೂ ಅಲ್ಲ. ಆತನ ಕಣ್ಣುಗಳನ್ನು ನಾ ಮರೆಯಲಾರೆ. ಆ ಕಣ್ಣುಗಳಲ್ಲಿ ಭಾವವೇ ಇಲ್ಲ. ಇಲ್ಲವೇ ಅವನ ಕಣ್ಣುಗಳಲ್ಲಿ ತುಂಬಿದ ಭಾವನೆಗಳು ನಾ ಅರ್ಥಮಾಡಿಕೊಳ್ಳುವುದಕ್ಕಿಂತ ಹೆಚ್ಚಿನದು.
ಯಾರು ಆತ?? ಯಾಕೆ ಕೊಲೆ ಮಾಡಿದ?? ಕ್ಷಾತ್ರ ಹೇಳುವಂತೆ ಮಾನಸಿಕ ರೋಗಿಯಿರಬಹುದೇ? ನಾನೇ ಅರ್ಥ ಮಾಡಿಕೊಳ್ಳದಷ್ಟು ಅರ್ಥಗರ್ಭಿತ ಕಣ್ಣುಗಳು.. ಇಂಥವನೊಬ್ಬ ನನ್ನ ಜೊತೆಗಾರನಾಗಿದ್ದರೆ!! ಮತ್ತೆ ಮಗ್ಗಲು ಬದಲಾಯಿಸಿದಳು. ಹೋಗಿ, ಹೋಗಿ ಒಬ್ಬ ಕೊಲೆಗಾರನನ್ನು ಜೊತೆಗಾರನನ್ನಾಗಿ ಯಾಕೆ ಕಲ್ಪಿಸಿಕೊಳ್ಳುತ್ತಿದ್ದೇನೆ? ಕ್ಷಾತ್ರನಿಗೂ ಅವನಿಗೂ ಎಲ್ಲಿಂದ ಎಲ್ಲಿಯ ಹೋಲಿಕೆ!?
ಇನ್ನು ಯೋಚಿಸುವುದು ಬೇಡ. ಕ್ಷಾತ್ರನಿಗೆ ಓಕೆ ಎಂದು ಬಿಡುತ್ತೇನೆ ಎಂದುಕೊಂಡಳು. ಜೀವನದಲ್ಲಿ ಒಂದು ಬಹುಮುಖ್ಯ ನಿರ್ಧಾರ ಮಾಡಿದಾಗ ಖುಷಿಯಾಗಬೇಕು ಇಲ್ಲವೇ ದುಃಖವಾಗಬೇಕು. ಎರಡು ಇಲ್ಲವಾದರೆ ಅದು ಮುಖ್ಯ ನಿರ್ಧಾರವಾಗಿರಲು ಸಾಧ್ಯವಿಲ್ಲ.
ನನಗೆ ಖುಷಿಯಾಯಿತಾ?? No.. ದುಃಖ..!! ಯೋಚಿಸುತ್ತ ಮತ್ತೆ ಮಗ್ಗಲು ಬದಲಾಯಿಸುವ ಮುನ್ನ ನಿದ್ರೆ ಅವಳನ್ನು ಆವರಿಸಿತ್ತು.
ನಿದ್ರೆಯಲ್ಲಿ ಅವಳ ಮುಗ್ಧ ಹಾಗೂ ಮುದ್ದು ಮುಖ ತುಂಬಾ ಸುಂದರವಾಗಿ ಮೂಡಿತು. ಆ ಮುದ್ದು ಮುಖ ಕ್ಷಾತ್ರನ ಕನಸಿನಲ್ಲಿ ಕಾಣಿಸಿಕೊಂಡಿತು...
*................................................*......................................................*
WIH.. Wallet Investment Holdings.. ವಿಹಾರಿಯ ಬೆರಳುಗಳು ಕಂಪ್ಯೂಟರ್ ಕೀ ಮೇಲೆ ಸರಸರನೆ ಓಡಾಡಿಕೊಂಡಿದ್ದವು. WIH ಸರ್ವರ್ ಮಷಿನ್ ಒಳಗೆ ಸೇರಿಕೊಂಡಿದ್ದ ಆತ. ಜಗತ್ತಿನ ಅತ್ಯಂತ ಸೆಕ್ಯೂರ್ಡ್ ಸರ್ವರ್ ಗಳಲ್ಲಿ ಒಂದು. ಆದರೆ ವಿಹಾರಿಗೆ ಸವಾಲಾಗುವ ಸೆಕ್ಯೂರಿಟಿ ಫೈರ್ ವಾಲ್ ಗಳಿಲ್ಲ ಎಂದೇ ಹೇಳಬಹುದು. ಒಮ್ಮೆ ಅದರ ಫೈರ್ ವಾಲ್ ಭೇದಿಸಿ ಒಳಸೇರಿಕೊಂಡ ವಿಹಾರಿ ಪ್ರಿಯಂವದಾ ರಾಜ್ ಎಂದು ಸರ್ಚ್ ಮಾಡಿದ್ದ. ಯಾವುದೇ ಮಾಹಿತಿ ಕಂಡು ಬರಲಿಲ್ಲ. ಮತ್ತೆ ತಲೆ ಬಿಸಿ ಶುರುವಾಗಿತ್ತು ವಿಹಾರಿಗೆ ಯಾವ ಹೆಸರಿನಲ್ಲಿ ಹಣ ಇಟ್ಟಿರಬಹುದು ಪ್ರಿಯಂವದಾ ರಾಜ್? ದುಟ್ಟಿರಬಹುದಾ ಅಥವಾ ಇನ್ಯಾವುದೋ ಮುಖ್ಯ ಮಾಹಿತಿಯನ್ನು ಇಟ್ಟಿರಬಹುದಾ?? ಇಲ್ಲವೇ ನನ್ನ ತಲೆಯಲ್ಲಿ ಹುಟ್ಟಿಕೊಂಡ ಸಂಶಯಗಳೆಲ್ಲಾ ಸುಳ್ಳಿರಬಹುದಾ?? ಯೋಚನೆ ಮಾಡುತ್ತಲೇ HIM ಎಂದು ಹುಡುಕಿದ. "One record found".
ಕುಳಿತಿದ್ದಲ್ಲಿಂದ ಎದ್ದು ಕುಣಿಯಬೇಕು ಎನ್ನುವಂತಾಯಿತು. ನಿಜವಾದ HIM ಇಲ್ಲಿದೆ. ಗುಡ್.. ಅಂದರೆ ಹಿಮಾಂಶುವಿಗೆ ಏನಾದರೂ ಮಾಹಿತಿ ನೀಡಲು HIM ಎಂದು ಬರೆದಿದ್ದಾಳೆಯೇ?? ಆತನಿಗೆ WIH ನಲ್ಲಿ ತಾಯಿಯ ಖಾತೆ ಇರುವುದು ಗೊತ್ತಿರಬಹುದು. ಅದಕ್ಕೆ ಉಳಿದ ಮಾಹಿತಿ ನೀಡಲು HIM ಎಂದು ಬರೆದಿದ್ದಾಳೆ. ಇದನ್ನು ಸಮ್ಮಿಶ್ರ ನೋಡಿದ್ದಾನೆ. ನಾನೀಗ ಸಮ್ಮಿಶ್ರನಿಗೆ ಹೇಳಿದರೆ ಆತ ಏನು ಮಾಡಬಹುದು? ಹಿಮಾಂಶುವಿಗೆ ಇದರ ಬಗ್ಗೆ ಹೇಳಬಹುದಾ? ಅಥವಾ ತಾನು ದುರುಪಯೋಗಪಡಿಸಿಕೊಂಡು ಕೈಎತ್ತಿಬಿಡಬಹುದಾ?? ಸಮ್ಮಿಶ್ರನನ್ನು ನಾನೆಷ್ಟು ನಂಬಬಹುದು? ಯೋಚನೆ ಮುಂದೆ ಸಾಗಿಕೊಂಡೆ ಇತ್ತು. ಅದೇನೇ ಇರಲಿ, ಇದರಲ್ಲಿ ನಿಜವಾಗಿಯೂ ಇರುವುದು ಏನು ಎಂದು ನೋಡಲು HIM ಅಕೌಂಟ್ ಒಳಗೆ ಏನಿದೆ ತಿಳಿದು ಕೊಳ್ಳಬೇಕು. ಆತ ಮತ್ತೆ WIH ನ ಎಡ್ಮಿನ್ ಸ್ಕ್ರೀನ್ ತೆಗೆದು ಅದರಲ್ಲಿ HIM ಎಂದು ಬರೆದು ಸರ್ಚ್ ಹೊಡೆದ. ಪರದೆಯ ಮೇಲೆ ಪಟಪಟನೆ ಅಕ್ಷರಗಳು ಮೂಡಿದವು.
Welcome raj, Please enter your password to continue..
ಇದೇನು ನಾನು ಎಡ್ಮಿನ್ ಸ್ಕ್ರೀನ್ ನಲ್ಲಿದ್ದರೂ ಪಾಸ್ ವರ್ಡ್ ಕೇಳುತ್ತಿದೆ. ಕೇವಲ ರಾಜ್ ಮಾತ್ರ ಡಿಟೇಲ್ಸ್ ನೋಡಬಹುದು. ಸಾಧಾರಣವಾಗಿ ಬ್ಯಾಂಕ್ ಗಳಲ್ಲಿ ಖಾತೆದಾರನ ಹೆಸರೊಂದಿದ್ದರೆ ಮ್ಯಾನೇಜರ್ ಗಳು ಅಥವಾ ಎಡ್ಮಿನ್ ಗಳು ಖಾತೆಯ ಮಾಹಿತಿಗಳನ್ನು ನೋಡಬಹುದು. ಕಪ್ಪುಧಂಧೆಯ ಈ ಬ್ಯಾಂಕ್ ಗಳಲ್ಲಿ ಎಡ್ಮಿನ್ ಗಳು ಕೂಡ ಎಕೌಂಟ್ ಗಳ ಮಾಹಿತಿಗಳನ್ನು ನೋಡುವಂತಿಲ್ಲ.
ಇದಪ್ಪಾ ಮಾತಂದ್ರೆ.. ಮತ್ತೆ ತಲೆಬಿಸಿ ವ್ಯವಹಾರ.. ಈಗ ಮತ್ತೆ ಪಾಸ್ ವರ್ಡ್ ಕ್ರ್ಯಾಕ್ ಮಾಡಬೇಕು. ಒಟ್ಟಿನಲ್ಲಿ ಈ ಸಮ್ಮಿಶ್ರ ನನಗೆ ಒಳ್ಳೆಯ ತಲೆಬಿಸಿ ತಂದಿಟ್ಟ ಎಂದುಕೊಂಡು ಮತ್ತೆ ಕೆಲಸ ಮುಂದುವರೆಸಿದ ವಿಹಾರಿ.
*...................................................*.....................................................*
ಪ್ರತಾಪ್ ಕಡೆ ಕೆಂಗಣ್ಣು ಬೀರುತ್ತಲೇ ಎದ್ದು ನಿಂತ ಜಾನಕಿರಾಮ್ "ಆಬ್ಜೆಕ್ಷನ್ ಯುವರ್ ಆನರ್."
ಆತ ಇಷ್ಟು ಹೇಳುತ್ತಲೇ ಪ್ರತಾಪ್ ಹಸನ್ಮುಖನಾದ. ಜಾನಕಿರಾಮ್ ರ ಕೆಂಗಣ್ಣು ಆತನನ್ನು ಬಿಡಲಿಲ್ಲ. ತನ್ನಿಂದ ತಪ್ಪಾಯಿತು ಎಂದುಕೊಂಡು ಸುಮ್ಮನೆ ಕುಳಿತ ಪ್ರತಾಪ್. ಜಾನಕಿರಾಮ್ ಒಂದು ಗಾಢವಾದ ನಿಟ್ಟುಸಿರು ಬಿಟ್ಟು ಪ್ರಾರಂಭಿಸಿದರು. ಜಾನಕಿರಾಮ್ ಆಬ್ಜೆಕ್ಷನ್ ಎನ್ನುತ್ತಲೇ ಸರೋವರಲ್ಲಿಗೆ ಬೆವರು ಕಿತ್ತು ಬಂದಿತ್ತು. ತಾನಿಷ್ಟು ಹೊತ್ತು ಮಾಡಿದ ಪ್ರಯತ್ನವೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ಕರಡಿದಂತಾಯಿತೇ ? ಎಂದುಕೊಂಡಳು. ಅದೇ ಯೋಚನೆ ಶಾಸ್ತ್ರಿಯ ಅಂತರಂಗದಲ್ಲೂ ಹಾದು ಹೋಯಿತು.
"ಯುವರ್ ಆನರ್.. ಸರೋವರಾ ಹೇಳುತ್ತಿರುವುದೆಲ್ಲ ಸರಿ. ನ್ಯಾಯಾಂಗದ ಮೇಲೆ ಅವಳಿಗಿರುವ ಅಭಿಮಾನ ಹಾಗೂ ಪ್ರೀತಿಯೂ ಅನುಕರಣೀಯ. ಆದರೆ ಹದಿನೈದು ದಿನ ಎಂಬುದು ತುಂಬಾ ಹೆಚ್ಚಿನ ಸಮಯ. ಅವಳಿಗೆ ಅಷ್ಟು ವಿಚಾರಿಸಿಕೊಳ್ಳುವ ವಿಷಯವಿದ್ದರೆ ಮೂರು ದಿನದ ಸಮಯ ನನಗೆ ಒಪ್ಪಿಗೆಯಿದೆ."
ಸರೋವರಾಳಿಗೆ ಸ್ವಲ್ಪ ಸಮಾಧಾನವಾಯಿತು. ಹೇಗಾದರೂ ಮಾಡಿ ಒಂದು ವಾರದ ಸಮಯ ಪಡೆಯಬೇಕು. ಅಷ್ಟರಲ್ಲಿ ಮತ್ತೇನನ್ನಾದರೂ ಯೋಚಿಸಬಹುದು ಎಂದುಕೊಳ್ಳುತ್ತ ಎದ್ದು ನಿಲ್ಲಬೇಕು.. ಅದರ ಮೊದಲು ಶಾಸ್ತ್ರಿಯ ಮುಖ ನೋಡಿದಳು. ಶಾಸ್ತ್ರಿ Thumbs up ಮಾಡಿದ. ಅಂದರೆ ಮೂರು ದಿನ ಸಾಕೆಂದೇ?? ಯಾಕೆ ಹಾಗೆ ಹೇಳುತ್ತಿದ್ದಾನೆ ಎಂದು ಅರ್ಥವಾಗಲಿಲ್ಲ ಅವಳಿಗೆ.
ಜಾನಕಿರಾಮ್ ಹಾಗೇಕೆ ಹೇಳಿದ್ದಾರೆಂದು ಶಾಸ್ತ್ರಿ ಗ್ರಹಿಸಿ ಬಿಟ್ಟಿದ್ದ. ಏನಾದರೂ ಪ್ರತಾಪ್ ಎದ್ದು ನಿಲ್ಲದಿದ್ದರೆ ನ್ಯಾಯಾಂಗ ಬಂಧನ ಸಾಧ್ಯವೇ ಇಲ್ಲ ಎಂದು ಹೇಳುವವರಿದ್ದರು ಜಾನಕಿರಾಮ್. ಅಷ್ಟರಲ್ಲಿ ಪ್ರತಾಪ್ ಮಾಡಿದ ತಪ್ಪಿನಿಂದ ಸಿಟ್ಟುಗೊಂಡು ಸರೋವರಾಳಿಗೆ ಮೂರು ದಿನ ಸಮಯ ಕೊಡಲು ನಿರ್ಧರಿಸಿದ್ದರು. ಈಗೇನಾದರೂ ಸರೋವರಾ ಮತ್ತೆ ವಿರೋಧಿಸಿ ಮಾತನಾಡಿದರೆ ಆ ಮೂರು ದಿನ ಸಮಯವು ಕೈತಪ್ಪಿ ಹೋಗುತ್ತದೆ. ಆ ಮೂರು ದಿನದಲ್ಲಿ ತಾನೇನು ಮಾಡಬಲ್ಲೆ ಎಂಬ ಯೋಚನೆ ಆತನಿಗೆ ಬಂದರೂ ಸಿಕ್ಕಷ್ಟಾದರೂ ಸಿಕ್ಕಿತಲ್ಲ ಎಂದು ಶಾಸ್ತ್ರಿ ಸರೋವರಾಳಿಗೆ ಆ ರೀತಿ ಸನ್ನೆ ಮಾಡಿದ್ದ.
ಸರೋವರಾಳಿಗೆ ಶಾಸ್ತ್ರಿ ಏಕೆ ಹಾಗೆ ಸನ್ನೆ ನೀಡಿದ ಎಂದು ತಿಳಿಯಲಿಲ್ಲವಾದರೂ ಅವನ ಮಾತನ್ನು ಮೀರುವ ಸಾಹಸಕ್ಕೆ ಹೋಗಲಿಲ್ಲ ಅವಳು.
"ಯುವರ್ ಆನರ್, ಜಾನಕಿರಾಮ್ ರಂಥ ಹಿರಿಯರು ನನ್ನ ಮೇಲೆ ಇಷ್ಟಾದರೂ ಅಭಿಮಾನ ತೋರಿಸಿ ಮೂರು ದಿನದ ಸಮಯ ಕೊಡುತ್ತಿರುವುದಕ್ಕೆ ಧನ್ಯವಾದಗಳು. ಮೂರು ದಿನದಲ್ಲಿ ನಾನು ಪೂರ್ತಿ ವಿವರ ಸಂಗ್ರಹಿಸಿ ಮತ್ತೆ ಕೋರ್ಟ್ ಗೆ ನನ್ನ ಕಕ್ಷಿದಾರನನ್ನು ಹಾಜರು ಪಡಿಸುತ್ತೇನೆ. ಇದಕ್ಕೆ ನನ್ನ ಒಪ್ಪಿಗೆಯಿದೆ.." ಎಂದಳು.
ಪ್ರತಾಪ್ ಕುಳಿತಲ್ಲಿಯೇ ಮಿಸುಕಾಡಿದ. ಆದರೆ ಮತ್ತೆ ಮರುಮಾತನಾಡಿದರೆ ಜಾನಕಿರಾಮ್ ಏನೆನ್ನುತ್ತಾರೋ? ಮೂರು ದಿನದಲ್ಲಿ ಶಾಸ್ತ್ರಿ ತಾನೇ ಏನು ಮಾಡಬಲ್ಲ? ಮೂರು ದಿನ ತಾನೇ? ನೋಡೋಣ.. ಎಂದುಕೊಂಡು ಸುಮ್ಮನೆ ಕುಳಿತ.
ಇಬ್ಬರು ಲಾಯರ್ ಗಳ ಒಪ್ಪಿಗೆ ಇರುವುದರಿಂದ ಜಡ್ಜ್ ಮುಂದೆ ಯೋಚಿಸದೆ "ಸರಿ ಹಾಗಿದ್ದರೆ ಈ ಕೇಸ್ ಅನ್ನು ಮೂರು ದಿನಗಳ ನಂತರ ಮತ್ತೆ ಕೇಳಲಾಗುವುದು " ಎಂದು ಷರಾ ಹಾಕಿ ಮೇಲೆದ್ದರು. ಸಧ್ಯಕ್ಕೆ ಬೀಸುವ ದೊಣ್ಣೆ ತಪ್ಪಿತು ಎಂದುಕೊಂಡ ಶಾಸ್ತ್ರಿ. ಸರೋವರಾ ಯಾವುದಕ್ಕೂ ಇರಲಿ ಎಂದು ಜಾನಕಿರಾಮ್ ಬಳಿ ಹೋಗಿ ಮತ್ತೆ ನಮಸ್ಕರಿಸಿ ಥ್ಯಾಂಕ್ಸ್ ಎಂದಳು.
ಸುಮ್ಮನೆ ಒಂದು ನಗು ನಕ್ಕು ಅವಳ ಬೆನ್ನು ತಟ್ಟಿ ಹೊರನಡೆದ ಜಾನಕಿರಾಮ್. ಅಲ್ಲಿಯೇ ಪಕ್ಕದಲ್ಲಿ ಅವರ ಜೊತೆ ಮಾತನಾಡಬೇಕು ಎಂದು ಬಂದು ನಿಂತ ಪ್ರತಾಪ್ ನನ್ನು ನಿರ್ಲಕ್ಷಿಸಿ ದುಡುದುಡು ಹೊರನಡೆದಿದ್ದರು. ಸರೋವರಾ ಆತನ ಮುಖ ನೋಡಿದಳು. ಆತ ತಲೆ ತಗ್ಗಿಸಿ ಜಾನಕಿರಾಮ್ ರ ಹಿಂದೆ ನಡೆದ.
ಇಬ್ಬರು ಕಾನಸ್ಟೆಬಲ್ ಗಳು ಬಂದು ಶಾಸ್ತ್ರಿಯನ್ನು ಕರೆದುಕೊಂಡು ಹೊರಟರು. ಹತ್ತಿರದಲ್ಲಿಯೇ ಇದ್ದ ಡೊಂಗ್ರಿ ಜೈಲಿಗೆ ಒಯ್ಯುತ್ತಾರೆ ಶಾಸ್ತ್ರಿಯನ್ನು. ಮೂರು ದಿನವೂ ಸರೋವರಾ ಎರಡು ಘಂಟೆ ಸಮಯ ಕಳೆಯಬಹುದು ಆತನ ಜೊತೆ. ಸರೋವರಾ ಆತನ ಬಳಿ ಬಂದು ನಾಳೆ ಸಿಗುತ್ತೇನೆ ಶಾಸ್ತ್ರಿ. ನೋಡೋಣ.. ನಮ್ಮಿಂದ ಏನು ಮಾಡಲು ಸಾಧ್ಯವೆಂದು.. ಎಂದಳು. ಶಾಸ್ತ್ರಿ ತಲೆಯಾಡಿಸಿದ.
"ಸರೋವರಾ, ನಾಳೆ ಬರುವಾಗ ಒಂದು ತಿಂಗಳ ನ್ಯೂಸ್ ಪೇಪರ್ ತರಬಲ್ಲೆಯಾ?? ಇಲ್ಲವೇ ಒಂದು ಲ್ಯಾಪ್ ಟಾಪ್ ಮತ್ತು Dongle ವ್ಯವಸ್ಥೆ ಮಾಡಿದರೆ ಇನ್ನು ಒಳ್ಳೆಯದು.." ಎಂದ ಶಾಸ್ತ್ರಿ.
ಸರೋವರಾ ಮುಗುಳ್ನಕ್ಕಳು. "ಅದೇನು ನಿನ್ನ ಮಾವನ ಮನೆ ನೋಡು ಅದೆಲ್ಲವನ್ನು ಬಿಡಲು. ನೀನು ನಡೆದದ್ದೆಲ್ಲವನ್ನು ಹೇಳು ನಾವೇನಾದರೂ ಮಾಡಲಾಗುತ್ತದೋ ಯೋಚಿಸೋಣ."
ಕಾನಸ್ಟೆಬಲ್ ಶಾಸ್ತ್ರಿಯ ಕೈಗೆ ಕೋಳ ಹಾಕಿ ಮುಂದಕ್ಕೆ ಕರೆದೊಯ್ದ. ಸರೋವರಾ ನೋಡುತ್ತಲೇ ನಿಂತಳು. ಶಾಸ್ತ್ರಿ ಪೊಲೀಸ್ ವ್ಯಾನ್ ಹತ್ತಿದ. ವ್ಯಾನ್ ಮುಂದೆ ಸಾಗುತ್ತಿದ್ದರೆ ಕಂಬನಿ ತುಂಬಿದ ಅವಳ ಕಣ್ಣುಗಳು ಹೋಗುತ್ತಿರುವ ವ್ಯಾನನ್ನೇ ಹಿಂಬಾಲಿಸಿತು. ಚಿತ್ರ ಮಸುಬು ಮಸುಬಾಗಿ ಕಂಡಿತು.
ಜಾನಕಿರಾಮ್ ಹಿಂದೆಯೇ ನಡೆದು ಬಂದ ಪ್ರತಾಪ್ ಸರ್, ಒಂದು ಮಾತು.. ಎಂದ. ಆಗಷ್ಟೇ ಜಾನಕಿರಾಮ್ ತಮ್ಮ ಮೊಬೈಲ್ ತೆಗೆದು ಪ್ರತಾಪ್ ನ ಮೆಸೇಜ್ ನೋಡಿದರು.
ಮೆಸೇಜ್ ಓದದೇ "ಏನು ಪ್ರತಾಪ್?? ಕೋರ್ಟಿನಲ್ಲಿ ಹೇಗೆ ವಾದಿಸಬೇಕೆಂದು ನೀವು ನನಗೆ ಹೇಳಿಕೊಡಬೇಕಾಗಿಲ್ಲ. ನನ್ನ ತಲೆ ನೆರೆತದ್ದು ಕೋರ್ಟಿನಲ್ಲಿಯೇ.. " ಎಂದು ಸಿಡುಕಿದರು.
"ಸರ್, ಅದು ಹಾಗಲ್ಲ. ನಾನು ಒಂದು ವಿಷಯ ನಿಮಗೆ ಹೇಳಬೇಕೆಂದಿದ್ದೆ. ಲಾಯರ್ ಆಗಿ ಬಂದಿದ್ದಾಳಲ್ಲಾ ಸರೋವರಾ, ಅವಳು.. ಶಾಸ್ತ್ರಿಯ ಪ್ರೇಯಸಿ. ಅವನ ಮೇಲೆ ಮೊದಲು ಕಂಪ್ಲೇಂಟ್ ಕೊಟ್ಟವಳು ಅವಳೇ" ಎಂದು ಅವರ ಮುಖ ನೋಡಿದ.
ಅಷ್ಟರಲ್ಲಿ ಜಾನಕಿರಾಮ್ ಪ್ರತಾಪ್ ಕಳಿಸಿದ್ದ ಮೆಸೇಜ್ ಕೂಡ ಓದಿದ್ದರು. ತನ್ನನ್ನು ಹೇಗೆ ಖೆಡ್ಡಾಕ್ಕೆ ಕೆಡವಿದಳು ಎಂದುಕೊಂಡಾಗ ಅವರಿಗೆ ತಕ್ಷಣ ಏನು ಹೇಳಬೇಕು ತಿಳಿಯಲಿಲ್ಲ. ಸುಮ್ಮನೆ ತಲೆಯಾಡಿಸಿದರು ಜಾನಕಿರಾಮ್. "ಓಹೋ.. ಹೀಗೂ ಇತ್ತೇ?? ಸರಿ ತೊಂದರೆಯೇನಿಲ್ಲ. ಅವನಿಗೆ ಬೇಲ್ ಸಿಗಲು ಸಾಧ್ಯವೇ ಇಲ್ಲ. ಮೂರು ದಿನದ ನಂತರ ನೀನೇ ಕರೆದೊಯ್ಯುವಂತೆ." ಎಂದು ಸಮಾಧಾನದ ಉತ್ತರವನ್ನೇ ನೀಡಿದರು. ಆದರೆ ಅವರ ಅಂತರಂಗ ಕುದಿಯುತ್ತಿತ್ತು. ಟ್ರಿಕ್ ಮಾಡಿ ತನ್ನಿಂದ ಸಮಯ ತೆಗೆದುಕೊಂಡರು. ತನ್ನ ಸರ್ವಿಸ್ ನಲ್ಲಿಯೇ ಹೀಗೊಂದು ಘಟನೆ ನಡೆದಿರಲಿಲ್ಲ. ಸರೋವರಾ.. ಶಾಸ್ತ್ರಿ.. You guys will pay for it.. ಎಂದುಕೊಂಡರು. ಅಷ್ಟರಲ್ಲಿ ಸರೋವರಾ ಅವರ ಎದುರಿನಲ್ಲಿಯೇ ಬಂದಳು. ಮತ್ತದೇ ನಗು ನಕ್ಕಳವಳು. ಈ ಬಾರಿ ಜಾನಕಿರಾಮ್ ನಗಲಿಲ್ಲ. ಅವರ ಮುಖದ ಕೆಂಪನ್ನು ನೋಡಿಯೇ ವಿಷಯ ಇವರಿಗೆ ತಿಳಿಯಿತು ಎಂಬುದರ ಅರಿವಾಯಿತು ಅವಳಿಗೆ. ತಲೆ ತಗ್ಗಿಸಿ ಆಕೆ ಸುಮ್ಮನೆ ಮುಂದೆ ನಡೆದಳು. ಜಾನಕಿರಾಮ್ "ಸಿಗು ನೀನು ಇನ್ನೊಮ್ಮೆ ಕೋರ್ಟಿನಲ್ಲಿ" ಎನ್ನುವಂತೆ ಅವಳನ್ನೇ ನೋಡುತ್ತಾ ಉಳಿದ. ದೂರ ದೂರ ನಡೆದ ಸರೋವರಾ ಮಸುಬು ಮಸುಬಾಗಿ ಕಂಡಳು ಜಾನಕಿ ರಾಮ್ ರಿಗೆ.
ಇನ್ನು ಅವರಿಬ್ಬರು ಕೋರ್ಟಿನಲ್ಲಿ ಸಿಗಲು ಬಹಳಷ್ಟು ದಿನವೇ ಕಾಯಬೇಕು ಎಂದು ಜಾನಕಿ ರಾಮ್ ರಿಗೆ ಆ ಕ್ಷಣದಲ್ಲಿ ತಿಳಿದಿರಲಿಲ್ಲ. ಅವರಿಗೇ ಏನು?? ಶಾಸ್ತ್ರಿ ಮತ್ತು ಸರೋವರಾಳಿಗೂ ಆ ವಿಷಯದ ಅರಿವಿರಲಿಲ್ಲ.
*.................................................*............................................................*
ಪಾಸ್ ವರ್ಡ್ ಹ್ಯಾಕ್ ಮಾಡಲು ಮತ್ತೆ ಸರ್ವರ್ ಮಷಿನ್ ಗಳನ್ನು ಉಪಯೋಗಿಸುವುದೇ ಎಂದು ಯೋಚಿಸಿದ ವಿಹಾರಿ. ಯಾಕೋ ಅವನ ಮನಸ್ಸು ಈ HIM ಒಳಗೇ ಈ ಪಾಸ್ ವರ್ಡ್ ಕೂಡ ಅಡಕವಾಗಿದೆ ಎಂದು ಹೇಳಲು ಪ್ರಾರಂಭಿಸಿತ್ತು. ಯಾಕೆಂದರೆ ಇದೇ 'HIM' 'WIH' ಆಗಿ ಆತನಿಗೆ ಬ್ಯಾಂಕ್ ಹೆಸರು ನೀಡಿತ್ತು. ಎರಡನೆಯದಾಗಿ ಎಕೌಂಟ್ ಹೆಸರು HIM. ಮಗನ ಹೆಸರಿನ ಮೊದಲ ಮೂರು ಇನ್ಷಿಯಲ್ ಸ್ಪೆಲ್ ಇಟ್ಟಿದ್ದಾಳೆ. ಆದರೆ HIM ನಲ್ಲೇ ಏನೋ ಇದೆ. ಈ ಎಕೌಂಟ್ ಒಳಗೆ ಏನಿರಬಹುದು? ಕೇವಲ ದುಡ್ಡು ಮಾತ್ರ ಅಲ್ಲ. ಇತರ ಸೀಕ್ರೆಟ್ ಗಳನ್ನು ಕೂಡ ಕಾಯುತ್ತವೆ ಇಂತಹ ಬ್ಯಾಂಕ್ ಗಳು. ಹಾಗಾಗಿ ಒಳಗೆ ಏನಿದೆ ಎಂದು ಹೇಳಲಾಗದು. ಆದರೆ ಊಹಾಪೋಹಗಳ ಪ್ರಕಾರ ಪ್ರಿಯಂವದಾ ರಾಜ್ ಅದೆಷ್ಟೋ ಕಪ್ಪು ಹಣವನ್ನು ಕೂಡಿಟ್ಟಿದ್ದಾಳೆ. ಕಪ್ಪು ಧಂಧೆಯೊಂದು ಇರದಿದ್ದರೆ ಭಾರತದ ಪರಿಸ್ಥಿತಿ ಹೇಗಿರುತ್ತಿತ್ತೋ?? ಎಲ್ಲರೂ ಕಳ್ಳರೇ. Money.. Black money.. ಕುಳಿತಿದ್ದ ಖುರ್ಚಿಯಲ್ಲಿ ಸುಮ್ಮನೆ ಹಿಂದೆ ಮುಂದೆ ಜೋಲಿ ಹೊಡೆಯತೊಡಗಿದ. Money.. Black money..
ಒಮ್ಮೆಲೇ ಶಾಕ್ ತಗುಲಿದಂತಾಯಿತು. HIM.. M for money.. HI Money..
ತಟಕ್ಕನೆ ಎದ್ದು ಕುಳಿತು ಪಾಸ್ ವರ್ಡ್ HI Money ಎಂದು ಹೊಡೆದ.
ಮುಂದಿನ ಕ್ಷಣ ಆತನ ಪರದೆಯ ಮೇಲೆ ಮೂಡಿದ ಅಕ್ಷರಗಳನ್ನು ಆತನೇ ನಂಬದಾದ. ಆತನಿಗೆ ತಾನು ನೋಡುತ್ತಿರುವುದು ಸುಳ್ಳಾ?? ನಿಜವಾ?? ಏನೆಂದು ಅರ್ಥವಾಗದಾಗಿತ್ತು.
ಪ್ರಿಯಂವದಾ ರಾಜ್, ಇಂಡಿಯಾ. ಎಮೌಂಟ್- 25,00,00,00,00,00,00,00,00,000. ಅದನ್ನು ಹೇಗೆ ಓದಬೇಕೆಂದು ತಿಳಿಯಲಿಲ್ಲ ಆತನಿಗೆ.
ಸುಧಾರಿಸಿಕೊಂಡು ಓದತೊಡಗಿದ. ಅಲ್ಲಲಿ ಕಾಮಾ ಹಾಕಿಕೊಂಡು ಕೊನೆಯಲ್ಲಿ ಬಂದ ಮೊತ್ತ ಇಪ್ಪತೈದು ಲಕ್ಷ ಸಾವಿರ ಕೋಟಿ ಡಾಲರ್. ಆತನ ತಲೆ ಸಂವೇದನೆ ನೀಡುವುದನ್ನೇ ನಿಲ್ಲಿಸುವುದರಲ್ಲಿತ್ತು. ಒಂದು HIM ನ ಹಿಂದೆ ಇಷ್ಟು ದುಡ್ಡು. ಈಗ ಪ್ರಿಯಂವದಾ ರಾಜ್ ಸತ್ತರೆ ಇದರ ನಾಮಿನಿ ಯಾರಿರಬಹುದು? ಪಟಪಟನೆ ಇನ್ನುಳಿದ ಡಿಟೇಲ್ ನೋಡತೊಡಗಿದ.
ಇಷ್ಟು ದುಡ್ಡನ್ನು ಹೇಗೆ ಕಸ್ಟಮ್ ಕಣ್ಣು ತಪ್ಪಿಸಿ ಹೊರಗೆ ಒಯ್ದಿರಬಹುದು? ಇದರಲ್ಲಿ ಒಂದು ಪೈಸೆ ಕೂಡ Online transaction ಮಾಡಿದ ಹಣವಲ್ಲ. ಇದೆಲ್ಲವೂ ಇಂಡಿಯಾ ಗವರ್ನ್ ಮೆಂಟ್ ಗೆ ತಿಳಿಯದಂತೆ ಹೊರಗೆ ಹಾರಿದ ಹಣ. ಹೇಗೆ ಸಾಧ್ಯ??
ವಿಹಾರಿಗೆ ನಗು ಬಂತು. ಪ್ರಿಯಂವದಾ ರಾಜ್ ತಾನೇ ಒಂದು ಗವರ್ನ್ ಮೆಂಟ್ ಇದ್ದಂತೆ. ಪ್ರತಿ ಸಲ ತನ್ನ ಪ್ರೈವೇಟ್ ಫ್ಲೈಟ್ನಲ್ಲಿ ಹೊರಹಾರಿದಾಗ ಫ್ಲೈಟ್ ತುಂಬ ದುಡ್ಡೇ ಹೊತ್ತು ತಂದಿರಬೇಕು. ಅವಳ ಫ್ಲೈಟ್ ಚೆಕ್ ಮಾಡುವ ಯೋಗ್ಯತೆ ಯಾರಿಗೆ ತಾನೇ ಇದೆ? ಇವಿಷ್ಟು ಹಣವನ್ನು ಯಾಕಾದರೂ ಕೂಡಿಟ್ಟಿದ್ದಾಳೆ. ಈಗ ಸಾಯಲು ಬಿದ್ದಿದ್ದಾಳೆ.
ಕಂಪ್ಯೂಟರ್ ನಲ್ಲಿ ಉಳಿದ ವಿಚಾರಗಳನ್ನು ಓದುತ್ತಿದ್ದ ವಿಹಾರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ನಾಮಿನಿಯ ಹೆಸರೇ ಇಲ್ಲ. ಪ್ರಿಯಂವದಾ ಸತ್ತರೆ ಹಣ ಬರುವುದು ಹಿಮಾಂಶುವಿಗೆ. ಆದರೆ ಇಂತಹ ಕಪ್ಪು ದಂಧೆ ಯಾರನ್ನು ನಂಬುವುದಿಲ್ಲ. ನಾಮಿನಿ ಇಲ್ಲದಿದ್ದರೆ ಅವೆಷ್ಟು ದುಡ್ಡು ಕೊಳೆತರು, ಲಡ್ಡಾಗಿ ಮಣ್ಣಾದರೂ ಯಾರೂ ಮುಟ್ಟಲಾರರು. ಹಾಗಾಗಿದ್ದಲ್ಲಿ ಯಾಕೆ ಪ್ರಿಯಂವದಾ ಹಿಮಾಂಶುವಿನ ಹೆಸರು ಬರೆದಿಲ್ಲ? ಇದೊಳ್ಳೆ ಕಗ್ಗಂಟು ಆಯಿತಲ್ಲ ಎಂದುಕೊಂಡ ವಿಹಾರಿ.
ನನಗೆ ಸಮ್ಮಿಶ್ರ ಕೊಟ್ಟ ಕೆಲಸವನ್ನಂತೂ ಮಾಡಿ ಮುಗಿಸಿದ್ದೇನೆ. ಮುಂದೇನು ಮಾಡುವುದು? ಇದರ ಬಗ್ಗೆ ಸಮ್ಮಿಶ್ರನಿಗೆ ಹೇಳಿದರು ಕೂಡ ಆತ ಏನು ಮಾಡಬಲ್ಲ? ಇದರ ಒಂದು ಪೈಸೆ ಕೂಡ ಆತ ಉಪಯೋಗಿಸಿಕೊಳ್ಳಲಾರ. ಆದರೆ ಮೊದಲು ಈ ಬ್ಲ್ಯಾಕ್ ಮನಿಯನ್ನೆಲ್ಲ ವೈಟ್ ಮಾಡಬೇಕು. ಅದು ಅಷ್ಟು ಸುಲಭದಲ್ಲಿ ಸಾಧ್ಯವಿಲ್ಲ.
ಹವಾಲಾ ದಂಧೆ ಎಷ್ಟು ಮುಂದುವರೆದರೂ ಒಂದು ಸಾವಿರ ಕೋಟಿಗಳನ್ನು ಬ್ಲ್ಯಾಕ್ ಟು ವೈಟ್ ಮಾಡುವುದೇ ಹೊರತೂ ಹೀಗೆ ಓದಲು ಬಾರದ ಸಂಖ್ಯೆಗಳನ್ನಲ್ಲ. ಅಷ್ಟರಲ್ಲಿ ಒಂದು ಯೋಚನೆ ಹೊಳೆಯಿತು. ಇವಿಷ್ಟು ದುಡ್ಡನ್ನು ತಾನು ಲಪಟಾಯಿಸಿ ಬಿಟ್ಟರೆ ಹೇಗೆ? ಒಮ್ಮೆಲೇ ಮನಸ್ಸು ಖುಷಿಗೊಂಡಿತು. ಜಗತ್ತಿನ ಅತ್ಯಂತ ದೊಡ್ಡ ಹಗರಣ ಮಾಡುವ ತನ್ನ ಯೋಚನೆ ಹೀಗೆ ಫಲಪ್ರದವಾಗುತ್ತದೆ ಎಂದುಕೊಂಡಿರಲಿಲ್ಲ. ಅನ್ವೇಷಣಾ ತನ್ನ ಜೊತೆ ಇದ್ದರೆ ಏನೆಂದುಕೊಳ್ಳುತ್ತಿದ್ದಳೋ!?
ನಾನೀ ಹಣವನ್ನು ಲಪಟಾಯಿಸುವುದಾದರೂ ಹೇಗೆ? ಏಕೆಂದರೆ ತನ್ನೆದುರು ಕಾಣುವ ಸಂಖ್ಯೆ ಚಿಕ್ಕ ಪುಟ್ಟ ಬ್ಯಾಂಕ್ ಗಳಂತೆ ಟ್ರಾನ್ಸ್ ಫರ್ ಮಾಡಲು ಬರುವ ಹಣವಲ್ಲ. ಇದು ಕೇವಲ ಇನ್ ಫಾರ್ಮೇಶನ್. ಒಂದು ರೂಪಾಯಿ ತೆಗೆದುಕೊಳ್ಳುವುದಾದರೂ ಹಾರ್ಡ್ ಕ್ಯಾಶ್ ತೆಗೆದುಕೊಳ್ಳಬೇಕಾಗುತ್ತದೆ ಹೊರತೂ Online transfer ಆಗುವುದಿಲ್ಲ. ಹೇಗೆ!? ಹೇಗೆ ತೆಗೆದುಕೊಳ್ಳುವುದು?
ಒಂದು ಯೋಚನೆ ಹೊಳೆಯಿತು ವಿಹಾರಿಗೆ. ನಾಮಿನಿಯ ಜಾಗದಲ್ಲಿ ತನ್ನ ಡಿಟೇಲ್ ಸೃಷ್ಟಿ ಮಾಡಿ ಲಿಂಕ್ ಕೊಟ್ಟುಬಿಟ್ಟ. ಏನಾದರೂ ಪ್ರಿಯಂವದಾ ರಾಜ್ ಸತ್ತು ಬಿಟ್ಟರೆ ಇವಿಷ್ಟು ಹಣ ತನ್ನ ಹೆಸರಿಗೆ. ಸಾಯದೆ ಏನಾದರೂ ಆಕೆ ಮತ್ತೆ ಈ ಡಿಟೇಲ್ಸ್ ನೋಡಿದರೆ ಏನಾಗಬಹುದು?
ಪೊಲೀಸರಿಗಂತೂ ಹೇಳಲು ಸಾಧ್ಯವಿಲ್ಲ. ಹೆಚ್ಚೆಂದರೆ ತನ್ನ ಜೊತೆ ಸಂಧಾನ. ಇಲ್ಲದಿದ್ದರೆ ಕೊಲ್ಲಿಸುತ್ತಾಳೆ. ಅದನ್ನು ಆ ಕಾಲಕ್ಕೆ ನೋಡಿದರಾಯಿತು.
ಪಟಪಟನೆ ಆವಿಷ್ಟನ್ನು ಮಾಡಿ ಸೆಟ್ ಮಾಡಿಬಿಟ್ಟ. ನೂರಾರು ಪೇಜ್ ಇದ್ದ ಒಂದು PDF Document ಇತ್ತು. ಅದರ ಮೇಲೆ ಸುಮ್ಮನೆ ಕಣ್ಣಾಡಿಸಿದ. ದುಡ್ಡನ್ನು ಹೇಗೆ ತೆಗೆಯಬೇಕು ಎಂಬ ವಿವರಗಳೆಲ್ಲ ವಿಹಾರಿಯ ಮನದಲ್ಲಿ ಅಚ್ಚಾಯಿತು.
ತನ್ನ ಕೆಲಸದ ಮೇಲೆ ಪೂರ್ತಿ ನಂಬಿಕೆ ಬಂದ ಮೇಲೆ ಎಲ್ಲವನ್ನು ಸೇವ್ ಮಾಡಿ ಫೈರ್ ವಾಲ್ ನಿಂದ ಹೊರಬಿದ್ದ ವಿಹಾರಿ.
ಎರಡು ದಿನದಿಂದ ಎಡಬಿಡದೆ ಕಂಪ್ಯೂಟರ್ ನೋಡುತ್ತ ಕುಳಿತಿದ್ದರಿಂದ ಆತನ ಕಣ್ಣುಗಳು ಕೆಂಪಾಗಿ ಉರಿಯುತ್ತಿತ್ತು. ಅಸಾಧ್ಯವನ್ನೇ ಬೇಧಿಸಿದಂತೆ ಅನ್ನಿಸಿತವನಿಗೆ.
ಒಂದರ್ಥದಲ್ಲಿ ಇದೇ ಪ್ರಪಂಚದ ದೊಡ್ಡ ಗೋಲ್ ಮಾಲ್ ಇರಬಹುದೇನೋ!! ಪ್ರಿಯಂವದಾ ರಾಜ್ ಸತ್ತರೆ ತನಗೆ ಬರುವ ಹಣದ ಬಗ್ಗೆ ಯೋಚನೆ ಮಾಡಿದರೆ ತಲೆ ಕೆಡುತ್ತಿತ್ತು ಆತನಿಗೆ.
ಇನ್ನುಳಿದಿರುವುದು ಸಮ್ಮಿಶ್ರನಿಗೆ ಇರುವ ವಿಷಯ ಹೇಳುವುದು... ಆತನ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳುವುದು...
ಒಂದು ಗಾಢವಾದ ಉಸಿರೆಳೆದುಕೊಂಡು ಸಮ್ಮಿಶ್ರನಿಗೆ ಫೋನಾಯಿಸಿದ ವಿಹಾರಿ. ಆ ಕಡೆಯಿಂದ ಕಾಲ್ ಕಟ್ ಆಯಿತು. ಇನ್ನು ಸಮ್ಮಿಶ್ರ ಬರುವವರೆಗೆ ಕಾಯುವುದಷ್ಟೇ ಕೆಲಸ. ಕಣ್ಣು ಮುಚ್ಚಿದ ವಿಹಾರಿ.
ನಿದ್ರೆ ಆತನನ್ನು ತನ್ನ ತೆಕ್ಕೆಗೆ ಎಳೆದುಕೊಂಡಿತು.. ಜೈಲು ಆತನನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಯ್ದಿದೆ ಎಂದು ಆತನಿಗೆ ಆ ನಿಮಿಷದಲ್ಲಿ ಗೊತ್ತಿರಲಿಲ್ಲ
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 25

                                    ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 25

ವಿಹಾರಿಯ ತಲೆ ಕಾದ ಕುಲುಮೆಯಂತಾಗಿತ್ತು. ಎರಡು ದಿನದಿಂದ ಆತ ಎಡಬಿಡದೆ HIM ಸಂಕೇತದ ಹಿಂದೆ ಬಿದ್ದಿದ್ದ. ಸಮ್ಮಿಶ್ರ ಬಲವಂತವಾಗಿ ವಿಹಾರಿಯ ಬಳಿ ಆ ಕೆಲಸ ಮಾಡುವಂತೆ ಮಾಡಿದ್ದ. ಅದರೊಳಗಿನ ಗೂಡಾರ್ಥವೇನು ಎಂದು ಕಂಡು ಹಿಡಿಯಲು ಮೊದಲಿಗೆ ಆತನಿಗೆ ಮನಸ್ಸಿರಲಿಲ್ಲ. ಎರಡು ದಿನದ ನಂತರ ವಿಹಾರಿಗೆ ಅದೊಂದು ರೀತಿಯ ಜಿದ್ದು ಹುಟ್ಟಿಕೊಂಡಿತು.
ಹ್ಯಾಕಿಂಗ್ ಎಂಬುದು ಜಾದೂ ಅಲ್ಲ. ಅದೊಂದು ಕಲೆ. ತಲೆಯೊಳಗಿನ ಲಾಜಿಕ್ ಸ್ಕಿಲ್ ಎಷ್ಟು ಉತ್ತಮವಾಗಿದೆ ಹಾಗೂ ಮಾಹಿತಿ ಸಂಗ್ರಹಣೆ ಹೇಗಿದೆ ಎಂಬುದರ ಮೇಲೆ ಹ್ಯಾಕಿಂಗ್ ಮಹಲು ಎದ್ದು ನಿಲ್ಲುತ್ತದೆ. ಸೂಪರ್ ಸಾನಿಕ್ ವೇಗದಲ್ಲಿ ಕೆಲಸ ಮಾಡುವ ಕಂಪ್ಯೂಟರ್, ಹ್ಯಾಕರ್ ಉಪಯೋಗಿಸುವ ಕೀ ವರ್ಡ್ ಗಳನ್ನು ಬಳಸಿಕೊಂಡು ಮಹತ್ವದ ದಾಖಲೆಗಳನ್ನು ಚಿಂದಿ ಮಾಡಿ ಬಿಡಬಲ್ಲದು. ಫೈರ್ ವಾಲ್ ಗಳನ್ನು, IP Address ಗಳನ್ನು ಬೇಧಿಸಿಇನ್ನೊಬ್ಬರ ಮಷಿನ್ ಗಳಲ್ಲಿರುವ ಡಾಟಾ, ಅದರ ಮಹತ್ವ, ಅದರ ಒಳ ಅರ್ಥಗಳು ಎಲ್ಲವನ್ನೂ.. ಮನಸ್ಸು ಮಾಡಿದರೆ ಒಬ್ಬ ಹ್ಯಾಕರ್ ಎಲ್ಲವನ್ನೂ ಬದಲಾಯಿಸಿಬಿಡಬಲ್ಲ.
"HIM". "HIM". ಸಾಯುವ ಸಮಯದಲ್ಲಿ ಏಕೆ ಹೀಗೆ ಬರೆದಿಟ್ಟಳು? ಆಕೆ ಸಾಯದೆ ಕೋಮಾದಲ್ಲಿ ಇರಬಹುದು ನಿಜ. ಆದರೆ ಆಕೆ ಮಾತ್ರ ತಾನು ಸಾಯುತ್ತೇನೆ ಎಂದು ತಿಳಿದುಕೊಂಡೇ ಏನನ್ನೋ ಬರೆಯಲು ಹೊರಟಿದ್ದಾಳೆ. ತನಗೆ ಗುಂಡು ಹೊಡೆದವರು ಯಾರೆಂದು ಆಕೆಗೆ ತಿಳಿದಿತ್ತಾ?? ಅದರ ಬಗ್ಗೆ ಮಾಹಿತಿ ನೀಡಲು ಹೊರಟಿದ್ದಳಾ?? ಅಥವಾ??
ಪ್ರಿಯಂವದಾ ರಾಜ್.. ಊಹಾಪೋಹಗಳ ಪ್ರಕಾರ ವಿದೇಶಿ ಬ್ಯಾಂಕ್ ಗಳಲ್ಲಿ ಅದೆಷ್ಟೋ ಕೋಟಿ ಕಪ್ಪು ಹಣ ಇದೆ ಆಕೆಯ ಬಳಿ. ಅದು ನಿಜವಾ? ಸುಳ್ಳಾ?? ಯಾರೊಬ್ಬರಿಗೂ ಗೊತ್ತಿಲ್ಲ. ಆಕೆಯ ವಿರೋಧಿಗಳು ಈ ಬಗ್ಗೆ ಹೇಳುತ್ತಾರಾಗಲೀ ಅದು ಎಲ್ಲಿದೆ? ಯಾವ ರೂಪದಲ್ಲಿದೆ?? ಅವರಿಗೆ ಕೂಡ ತಿಳಿದಿಲ್ಲ. ಆ ವಿಷಯ ನೆನಪಾಯಿತು ವಿಹಾರಿಗೆ. ಏನಾದರೂ ಕಪ್ಪು ಹಣದ ಬಗ್ಗೆ ಬರೆದಿಟ್ಟಿದ್ದಾಳಾ? ಯೋಚನೆ ಬಂದೊಡನೆ ವಿಹಾರಿಯ ಮನಸ್ಸು ಪ್ರಪಂಚದ ದೊಡ್ಡ ಹಗರಣ ಮಾಡಬೇಕು ಎಂಬ ತನ್ನ ಯೋಚನೆಯೆಡೆಗೆ ತಿರುಗಿತು. ಅದು ಏನೇ ಇರಲಿ, "HIM" ಎನ್ನುವ ಕೋಡ್ ವರ್ಡ್ ಬಿಡಿಸುವವರೆಗೆ ಸಮಾಧಾನವಿಲ್ಲ ಎಂದುಕೊಂಡು ತನ್ನ ಕೆಲಸದ ಕಡೆ ಮತ್ತಷ್ಟು ಗಮನ ಹರಿಸಿದ.
ಅವನಿಗೆ ತೋಚುವ ಎಲ್ಲ ಕಾಂಬಿನೇಷನ್ ಗಳನ್ನು ಅದಾಗಲೇ ಟ್ರೈ ಮಾಡಿ ಮುಗಿಸಿದ್ದ. ಹಿಮಾಂಶು, ಪ್ರಿಯಂವದಾ, ಸಮ್ಮಿಶ್ರ, ಪಾಲಿಟಿಕ್ಸ್.. ಹೀಗೆ ಹಲವಾರು ಕೀ ವರ್ಡ್ ಗಳನ್ನು HIM ಜೊತೆ ಸೇರಿಸಿ ಅದಕ್ಕೆ ಇಂಗ್ಲೀಷ್ ವರ್ಣಾಕ್ಷರಗಳು, ಸಂಖ್ಯೆಗಳು, ಹೀಗೆ ಅನೇಕ ಕಾನ್ಸೆಪ್ಟ್ ಗಳನ್ನು ಹಿಂದೆ ಮುಂದೆ ಜೋಡಿಸಿ ಏನಾದರೂ ಒಂದು ಅರ್ಥಪೂರ್ಣ ವರ್ಡ್ ಆಗಲೀ, ಅಥವಾ ವಾಕ್ಯವಾಗಲೀ, ಇಲ್ಲವೇ ಸಂಖ್ಯೆಯಾಗಲೀ ಸಿಗುತ್ತದಾ ಎಂದು ಹುಡುಕುತ್ತಲೇ ಇದ್ದ ವಿಹಾರಿ.
ಮೊದಮೊದಲು ಸಮ್ಮಿಶ್ರನಿಂದ ಪಾರಾದರೆ ಸಾಕು ಎಂದು ಶುರು ಮಾಡಿದ ಹ್ಯಾಕಿಂಗ್ ಈಗ ಆತನಿಗೊಂದು ಚಾಲೆಂಜ್ ಆಗಿಬಿಟ್ಟಿತ್ತು. ಅದೆಂತಹ ಸೈಫರ್ ಗಳನ್ನು ಡಿಸೈಫರ್ ಮಾಡಿಲ್ಲ ವಿಹಾರಿ. ಆದರೆ ಈ ಕೋಡ್ ಮಾತ್ರ ಆತನನ್ನು ಸತಾಯಿಸುತ್ತಿತ್ತು. ಛಲ ಬಿಡದ ತ್ರಿವಿಕ್ರಮನಂತೆ ತನ್ನ ಪ್ರಯತ್ನ ಮುಂದುವರೆಸಿದ ವಿಹಾರಿ.
*..........................................*.......................................................*
ಕೋರ್ಟಿನಲ್ಲಿ ಒಂದು ರೂಮು ಆರೋಪಿಗಳ ಹಾಗೂ ಲಾಯರ್ ಗಳ ಭೇಟಿಗೆಂದೇ ಇರುತ್ತದೆ. ಶಾಸ್ತ್ರಿಯನ್ನು ಅಲ್ಲಿ ತಂದು ಕೂರಿಸಿದ್ದರು. ಹತ್ತು ನಿಮಿಷಗಳ ನಂತರ ಅಲ್ಲಿಗೆ ಬಂದಳು ಸರೋವರಾ. ಅವಳು ಅಲ್ಲಿಗೆ ಬರುತ್ತಲೇ ಶಾಸ್ತ್ರೀಯ ಕೈ ಕೋಳವನ್ನು ಪಕ್ಕದಲ್ಲಿದ್ದ ಕಬ್ಬಿಣದ ಸರಳಿಗೆ ಲಾಕ್ ಮಾಡಿ ಹೊರನಡೆದ ಕಾನಸ್ಟೆಬಲ್. ತಮ್ಮಿಬ್ಬರ ಬಳಿ ಇನ್ನು ಅರ್ಧ ಘಂಟೆ ಸಮಯ ಇದೆ. ಅಷ್ಟರೊಳಗೆ ಎಷ್ಟಾಗುತ್ತದೋ ಅಷ್ಟು ಮುಂದಿನ ಯೋಚನೆ ಮಾಡಿಕೊಳ್ಳಬೇಕು ಎಂಬುದು ಇಬ್ಬರಿಗೂ ಗೊತ್ತು. ಶಾಸ್ತ್ರಿ ಎಂದಿನ ಲಯದಲ್ಲಿರದೆ ತಲೆ ತಗ್ಗಿಸಿ ಕುಳಿತಿದ್ದ.
ಒಂದು ನಿಮಿಷ ಸುಮ್ಮನೆ ಕುಳಿತ ಸರೋವರಾ ಮಾತು ಶುರುವಿಟ್ಟಳು. "ಏನು ಶಾಸ್ತ್ರಿ? ನೀನು ಕ್ರಾಂತಿ ಮಾಡುವ ಮನುಷ್ಯನಲ್ಲವೇ? ಇಷ್ಟಕ್ಕೆ ತಲೆ ತಗ್ಗಿಸಿ ಕುಳಿತರೆ ಹೇಗೆ?"
ಶಾಸ್ತ್ರಿ ಮುಖವೆತ್ತಿ ಅವಳ ಮುಖ ನೋಡಿದ. ಮುಗುಳ್ನಗುತ್ತಿದ್ದಳು ಸರೋವರಾ. ತಾವಿಬ್ಬರು ಕೋರ್ಟಿನಲ್ಲಿದ್ದೇವೆ, ಹೊರಗಡೆ ಪೊಲೀಸರು ತಮ್ಮನ್ನು ಕಾಯುತ್ತಿದ್ದಾರೆ ಇವೆಲ್ಲವನ್ನು ಮರೆತು ಶಾಸ್ತ್ರಿ ಸರೋವರಳ ಬಳಿ ಸರಿದು ಒಂದೇ ಕೈಯಿಂದ ತಬ್ಬಿಕೊಂಡ. ಆತನ ಅಪ್ಪುಗೆಯೇ ಆಕೆಗೆ ಎಲ್ಲವನ್ನೂ ವಿವರಿಸಿತ್ತು. " ಶಾಸ್ತ್ರಿ, ಇದೇನು ಲಾಲಬಾಗ್ ಎಂದುಕೊಂಡೆಯಾ ಹೀಗೆ ಅಪ್ಪಿಕೊಳ್ಳಲು?? ನನಗಲ್ಲದಿದ್ದರು ನನ್ನ ಮೈಮೇಲಿರುವ ಈ ಕಪ್ಪು ಕೋಟಿಗಾದರೂ ಮರ್ಯಾದೆ ಬೇಡವಾ? ನೀನು ವಿಚಾರಣಾಧೀನ ಕೈದಿ, ನಾನು ಲಾಯರ್. ದೂರ ಸರಿ.." ಮತ್ತಷ್ಟು ಸತಾಯಿಸಿದಳು ಸರೋವರಾ. ಆದರೆ ಆತನ ತಬ್ಬುವಿಕೆಯಿಂದ ಹೊರಬರುವ ಪ್ರಯತ್ನ ಮಾತ್ರ ಅವಳು ಮಾಡಲೇ ಇಲ್ಲ. ಎರಡು ಪುಟ್ಟ ಹಕ್ಕಿಗಳು ಆಸ್ಥೆಯಿಂದ ಕಟ್ಟಿಕೊಂಡ ಸುಂದರವಾದ ಗೂಡನ್ನು ಮಳೆರಾಯ ಕೊಚ್ಚಿಹಾಕಿದಾಗ, ಒಬ್ಬರಿಗೊಬ್ಬರು ಆತು ಕುಳಿತುಕೊಂಡು ತಮಗೆ ತಾವೇ ಸಮಾಧಾನ ಹೇಳಿಕೊಳ್ಳುವ ಸ್ಥಿತಿಯಂತಿತ್ತು ಸರೋವರಾ ಮತ್ತು ಶಾಸ್ತ್ರಿಯ ಹಾವಭಾವ.
"ಸರೋವರಾ, ನಿನಗೆ ನನ್ನ ಮೇಲೆ ನಂಬಿಕೆ ಇದೆ ಅಲ್ಲವಾ??" ತಗ್ಗಿದ ದನಿಯಲ್ಲಿ ಕೇಳಿದ ಶಾಸ್ತ್ರಿ. ಈಗ ಶಾಸ್ತ್ರಿಯ ಮುಖವನ್ನು ನೋಡಿದ ಸರೋವರಾ ಯೋಚಿಸದೆ ಶಾಸ್ತ್ರಿಯ ತುಟಿಗೆ ತುಟಿ ಸೇರಿಸಿದಳು.
ಅದೊಂದು ಭರವಸೆ. ನಂಬಿಕೆ ಇಲ್ಲದಿದ್ದರೆ ನಾನೇಕೆ ಹೀಗೆ ಬರುತ್ತಿದ್ದೆ ಎಂಬ ಭಾವ.. ಅಷ್ಟೇ ಸಾಕಿತ್ತು ಶಾಸ್ತ್ರಿಗೆ. ಕೆಲವೊಮ್ಮೆ ಕ್ರಿಯೆಗಳು ಮಾತಿಗಿಂತ ಹೆಚ್ಚಿನ ಅರ್ಥವನ್ನು ನೀಡುತ್ತವೆ.
ಇನ್ನು ಉಳಿದಿರುವ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂಬ ಅರಿವು ಇಬ್ಬರಲ್ಲೂ ಇತ್ತು.
ದೂರ ಸರಿದು ಕುಳಿತ ಶಾಸ್ತ್ರಿ ಮಾತಿಗೆ ಪ್ರಾರಂಭಿಸಿದ. "ನೀನು ಲಾಯರ್ ವೃತ್ತಿ ಯಾವಾಗಿನಿಂದ ಪ್ರಾರಂಭಿಸಿದೆ ನನಗೆ ತಿಳಿಯದೆ ಎಂದುಕೊಂಡೆ. ಇವತ್ತೇ ಮೊದಲ ದಿನ ಎಂದು ಆಮೇಲೆ ತಿಳಿಯಿತು. ಹೇಳು ಮುಂದೇನು ಮಾಡಲಿರುವೆ.."
"ನನ್ನ ಜೀವಮಾನದಲ್ಲಿ ಹೀಗೆ ಕಪ್ಪು ಕೋಟ್ ಧರಿಸುತ್ತಿದ್ದೆನೋ ಇಲ್ಲವೋ ನಿನ್ನಿಂದ ಅದು ಕೂಡ ಸಾಕಾರವಾಯಿತು. ಪ್ರಿಯತಮ ಇದ್ದರೆ ಹೀಗಿರಬೇಕು ನೋಡು.." ಎನ್ನುತ್ತಾ ಮತ್ತೆ ಮುಗುಳ್ನಕ್ಕಳವಳು. ಅವಳ ನಗು ಶಾಸ್ತ್ರಿಯನ್ನು ಮತ್ತೆ ಸಹಜ ಸ್ಥಿತಿಗೆ ಮರಳುವಂತೆ ಮಾಡುತ್ತಿತ್ತು. ಆತನಿಗೆ ಬೇಕಾಗಿರುವುದು ಅದೇ; ನೀರಿನಲ್ಲಿ ಮುಳುಗುತ್ತಿರುವವನಿಗೆ ಹುಲ್ಲು ಕಡ್ಡಿಯೂ ಆಸರೆಯೇ. ಶಾಸ್ತ್ರಿಯಂಥವನಿಗೆ ಆ ಹುಲ್ಲು ಕಡ್ಡಿಯನ್ನು ಮರದ ದಿಮ್ಮಿಯಂತೆ ಹೇಗೆ ಬಳಸಿಕೊಳ್ಳಬೇಕೆಂಬುದು ಗೊತ್ತು.
"ನಿನಗೆ bail ಕೊಡಿಸುತ್ತೇನೆ. ಮುಂದಿನದು ಮುಂದೆ." ತುಂಬಾ ಮುಗ್ಧವಾಗಿ ಕಂಡಳವಳು. ಶಾಸ್ತ್ತ್ರಿಗೆ ಗೊತ್ತು. ಜಾನಕಿರಾಮ್ ಕುಡಿ ಚಿಗುರನ್ನು ಚಿವುಟಿದ ಹಾಗೆ ಚಿವುಟಿ ಬಿಡಬಲ್ಲ ಈಕೆಯ ವಾದವನ್ನು. ಈಗೇನೋ ಸರೋವರಾ ಆತನನ್ನು ಹೊಗಳಿ ಅಟ್ಟಕ್ಕೇರಿಸಿದ್ದಕ್ಕೆ ಹಾಗೂ ತನಗೆ ಅದರಿಂದ ಯಾವುದೇ ನಷ್ಟವಿಲ್ಲದ್ದರಿಂದ ಸುಮ್ಮನೆ ಇರುವನೇ ಹೊರತೂ ಈಕೆ bail ಎಂಬ ಒಂದು ಶಬ್ಧ ಉಪಯೋಗಿಸಿದರೆ ಸಾಕು ತಾನು ಪೊಲೀಸ್ ಕಸ್ಟಡಿಯ ಒಳಗೆ ಇರುವುದು ಗ್ಯಾರೆಂಟಿ.
ಹಾಗಾಗಬಾರದು.. ನನಗೆ ಸ್ವಲ್ಪ ಸಮಯ ಬೇಕು ಯೋಚಿಸಲು.. ಪ್ರತಿತಂತ್ರ ಹೂಡಲು.. ಹೇಗೆ ಸಾಧ್ಯ!? ಪ್ರಸಾದರ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಹೇಗೆ ಸಾಧ್ಯ!? ಇದೇ ವಿಷಯವನ್ನು ಸರೋವರಾಳಿಗೂ ಹೇಳಿದ ಶಾಸ್ತ್ರಿ.
ಶಾಸ್ತ್ರಿ ಹೇಳಿದ ಮಾತು ಆಕೆಗೂ ತಪ್ಪೇನೆಂದು ಅನ್ನಿಸಲಿಲ್ಲ. ವಾದ ಮಾಡಿ ತನಗೇನು ಅಭ್ಯಾಸವಿಲ್ಲ. ಪ್ರಸಾದರ ಎದುರು ಒಂದು ಪಾಯಿಂಟ್ ಕೂಡ ಜಡ್ಜ್ ಗೆ ಮನವರಿಕೆ ಮಾಡಿಸಲಾರೆ. ಏನು ಮಾಡುವುದು??
ಇಬ್ಬರು ಯೋಚನೆಯಲ್ಲಿ ಮುಳುಗಿದರು. ಹೊರಗಡೆಯಿಂದ ಕಾನಸ್ಟೆಬಲ್ ಬಾಗಿಲು ತಟ್ಟಿದ ಸದ್ದು ಕೇಳಿತು. ಅರ್ಧ ಘಂಟೆ ಆಗಿತ್ತು. ಇನ್ನೇನು ನಿರ್ಧಾರ ತೆಗೆದುಕೊಂಡರೂ ಬೇಗ ನಿರ್ಧರಿಸಬೇಕು. ಒಂದೆರಡು ನಿಮಿಷದಲ್ಲಿ ಕಾನಸ್ಟೆಬಲ್ ಒಳಗೆ ಬಂದು ಶಾಸ್ತ್ರಿಯನ್ನು ಕರೆದೊಯ್ಯುತ್ತಾನೆ. ಮತ್ತೆ ಶಾಸ್ತ್ರಿಯನ್ನು ನೋಡುವುದು ಇನ್ಯಾವಾಗಲೋ?? ಪೊಲೀಸ್ ಕಸ್ಟಡಿಗೆ ತೆಗೆದುಕೊಂಡರೆ ಪ್ರತಾಪ್ ಇನ್ನೆಷ್ಟು ಹಿಂಸೆ ಕೊಡುತ್ತಾನೋ?? ಸರೋವರಾಳ ಕಣ್ಣಿಂದ ನೀರು ತುಳುಕಿತು ಈಗ. ಸರೋವರಾ ಈಗ ಅಳುವ ಸಮಯವಲ್ಲ. ಯೋಚಿಸುವ ಸಮಯ.
ಸರೋವರಾ ಶಾಸ್ತ್ರಿಯ ಮುಖ ನೋಡಿ, "ಶಾಸ್ತ್ರಿ, ನಿನ್ನೆ ಪ್ರತಾಪ್ ಬಂದಿದ್ದ ಸಂಜೆ, ನಾನು ನಿನಗಾಗಿ ಪಾರ್ಕಿನಲ್ಲಿ ಕುಳಿತಿದ್ದೆ. ನಿನ್ನನ್ನು ಭಂಧಿಸಿದ್ದನ್ನು ಅವನೇ ಹೇಳಿದ. ಕೊನೆಯಲ್ಲಿ ಕೈ ಹಿಡಿದುಕೊಂಡ. ಆದರೆ ಆ ಸ್ಪರ್ಶದಲ್ಲಿ ನನಗೆ ಒಳ್ಳೆಯ ಭಾವ ಕಾಣಲಿಲ್ಲ." ಹಾಗೊಂದು ಮಾತು ಸರೋವರಾ ಹೇಳಿ ಮುಗಿಸಲಿಲ್ಲ ಶಾಸ್ತ್ರಿ ಬದಲಾಗಿಬಿಟ್ಟ. ಆತನ ಮುಖದ ಕೆಂಪನ್ನು ಸರೋವರಾ ಕೂಡ ನೋಡದಾದಳು.
ಅಷ್ಟರಲ್ಲಿ ಒಳಬಂದ ಕಾನಸ್ಟೆಬಲ್ "ಮೇಡಂ, ಟೈಮ್ ಆಯಿತು.."
ತಾನಿನ್ನು ಜಾನಕಿರಾಮ್ ರ ವಿರುದ್ಧ bail ಗಾಗಿ ವಾದಿಸಬೇಕು. ಅದು ಸಾಧ್ಯವಿಲ್ಲ. ಶಾಸ್ತ್ರಿ ಪೊಲೀಸ್ ಕಸ್ಟಡಿಯ ಪಾಲಾಗುತ್ತಾನೆ. ಸರೋವರಾಳ ಮನಸ್ಸು ಮರುಗುತ್ತಿತ್ತು.
ಶಾಸ್ತ್ರಿ ಸರೋವರಾಳ ಕಡೆ ನೋಡಿ "ಸರೋವರಾ, ನನ್ನನ್ನು ಜೈಲಿಗೆ ಹಾಕಿಸು.." ಎಂದ. ಆ ಹೊತ್ತಿಗೆಲ್ಲ ಕಾನಸ್ಟೆಬಲ್ ಶಾಸ್ತ್ರಿಯ ಕೈಕೋಳವನ್ನು ಸರಳಿನಿಂದ ಬಿಡಿಸುತ್ತಿದ್ದ.
ಶಾಸ್ತ್ರಿ ಹೀಗೇಕೆ ಹೇಳುತ್ತಿದ್ದಾನೆ ಕೇಳಲು ಸಮಯವಿಲ್ಲ. ಪೂರ್ತಿ ಬಿಡಿಸಿ ಹೇಳಲು ಕಾನಸ್ಟೆಬಲ್ ಅಲ್ಲಿಯೇ ಇದ್ದಾನೆ. ಶಾಸ್ತ್ರಿಯ ಮನಸ್ಸನ್ನು ತಾನೀಗ ಅರಿಯಬೇಕು.
ಶಾಸ್ತ್ರಿಯ ಮುಖವನ್ನೇ ನೋಡುತ್ತಿದ್ದಳು ಸರೋವರಾ. ಮತ್ತದೇ ಮಾತು ಹೇಳಿದ ಶಾಸ್ತ್ರಿ.
"ಸರೋವರಾ, ನನ್ನನ್ನು ಜೈಲಿಗೆ ಹಾಕಿಸು. ಮುಂದಿನದು ನಾನು ನೋಡಿಕೊಳ್ಳುತ್ತೇನೆ..." ಕಣ್ಣು ಮಿಟುಕಿಸಿದ.
ಕಾನಸ್ಟೆಬಲ್ ಆತನನ್ನು ಹೊರಗೆಳೆದುಕೊಂಡು ಹೋದ. ರೂಮಿನಲ್ಲಿ ಒಂಟಿಯಾಗಿ ನಿಂತಳು ಸರೋವರಾ. ಶಾಸ್ತ್ರಿ ಹೇಳಿದ ಮಾತಿನ ಅರ್ಥವೇನು ಎಂಬುದನ್ನು ಹುಡುಕುತ್ತ ಆಕೆಯ ಮನಸ್ಸು ಆಕೆಯನ್ನು ಬಿಟ್ಟೋಡಿತು..
*..........................................................*...........................................................*
ವಿಹಾರಿ ತಲೆ ಕೆಡಿಸಿಕೊಂಡು ಹುಡುಕುತ್ತಲೇ ಇದ್ದ. HIM ಎಂಬ ಶಬ್ಧದಿಂದ ಯಾವುದೇ ಮಾಹಿತಿಯನ್ನು ಪಡೆಯಲಾಗದೆ ಸೋತು ಹೋದೆ ಎಂದೆನಿಸಿತು ಒಮ್ಮೆ. ಪ್ರಿಯಂವದಾ ರಾಜ್ ಎಷ್ಟೇ ರಾಜಕೀಯ ಚತುರೆಯಾಗಿದ್ದರೂ ಸೈಫರ್, ಡಿಸೈಫರ್, ಕಂಪ್ಯೂಟರ್ ಅಂತಹ ವಿಷಯಗಳಲ್ಲಿ ಇಷ್ಟು ಆಳದ ಜ್ಞಾನ ಹೊಂದಿರಲು ಸಾಧ್ಯವಿಲ್ಲ. ತಾನೇನೋ ಮಿಸ್ ಮಾಡುತ್ತಿದ್ದೇನೆ ಎಂದೆನ್ನಿಸಿತು ಆತನಿಗೆ. ಸಾಧಾರಣವಾಗಿ ವ್ಯಕ್ತಿಯೊಬ್ಬ ತಮ್ಮ ಮೇಲ್ ಅಥವಾ ಬ್ಲಾಗ್ ಎಕೌಂಟ್ ಗಳ ಲಾಗಿನ್ ಗೆ ತನ್ನ ಹೆಸರು ಅದರ ಜೊತೆಗೆ ಕೆಲವು ಸ್ಪೆಷಲ್ ಕ್ಯಾರೆಕ್ಟರ್ ಗಳನ್ನು ಹಾಗೂ ಅಂಕೆಗಳನ್ನು ಉಪಯೋಗಿಸುತ್ತಾರೆ. ಇನ್ನು ಕೆಲವರು ತಮ್ಮ ಪ್ರೇಯಸಿಯ, ಹೆಂಡತಿಯ ಅಥವಾ ಊರಿನ ಹೆಸರಿನ ಸ್ಪೆಲ್ ಜೊತೆ ಇತರ character ಗಳನ್ನು ಉಪಯೋಗಿಸುತ್ತಾರೆ. ನೆನಪಿಡಲು ಸುಲಭ ಎಂಬುದು ಅವರ ಯೋಚನೆ. ಇದನ್ನು ಹ್ಯಾಕರ್ ಗಳು ಮನಗಂಡಿದ್ದಾರೆ. ವಿಹಾರಿಯ ಎದುರಿನಲ್ಲಿರುವ ಸರ್ವರ್ ಮಷಿನ್ ಒಂದು ನಿಮಿಷದಲ್ಲಿ ಬರೋಬ್ಬರಿ ಒಂದು ಬಿಲಿಯನ್ ಕಾಂಬಿನೇಷನ್ ಗಳನ್ನು ರೂಪಿಸಬಲ್ಲದು. ಅಂಥ ಸೂಪರ್ ಫಾಸ್ಟ್ ಮಷಿನ್ ಗೆ ಇಂಥ ಕಾಮನ್ ಪಾಸ್ ವರ್ಡ್ ಹುಡುಕುವುದು ಅಥವಾ ಬಿಡಿಸುವುದು ಒಂದು ಆಟದಂತೆಯೇ. ಅಂತದ್ದರಲ್ಲಿ ವಿಹಾರಿ ಎರಡು ದಿನ ಮಷಿನ್ ಜೊತೆ ತಾನೂ ತಲೆ ಕೆಡಿಸಿಕೊಂಡರು ಏನು ಸಿಕ್ಕಿಲ್ಲ.
ಅದಕ್ಕೆ ಆತನಿಗೆ ತಲೆ ಕೆಡುವಂತಾಗಿತ್ತು. ಇನ್ನು ತಾನು ಸಮ್ಮಿಶ್ರನ ಬಳಿ ಇರುವ ವಿಚಾರ ಹೇಳಿದರೆ ಮುಂದೆ ಆತ ಏನು ಹೇಳುತ್ತಾನೋ ನೋಡಬೇಕು. ತನ್ನ ಮಾತನ್ನು ಆತ ನಂಬುವುದು ಕಷ್ಟವೇ. ಸಮ್ಮಿಶ್ರನ ಮಾತು ಹಾಗಿರಲಿ ವಿಹಾರಿಗೆ ಈ ಸೋಲನ್ನು ಸಹಿಸಲಾಗುತ್ತಿಲ್ಲ. ಸ್ವಲ್ಪ ಹೊತ್ತಿನ ಬಿಡುವು ಬೇಕೆನ್ನಿಸಿತು ಆತನಿಗೆ.
ಕಾಫಿ ಮಷಿನ್ ಇಂದ ಕಾಫಿ ಹಿಡಿದುಕೊಂಡು ಬಾಲ್ಕನಿಗೆ ಬಂದ ವಿಹಾರಿ ರೋಲಿಂಗ್ ಚೇರ್ ಮೇಲೆ ಕುಳಿತು ಸುಮ್ಮನೆ ಯೋಚಿಸುತ್ತ ಉಳಿದ.
HIM..
HIM..
HIM..
ಬ್ಲಡಿ ಹಿಮ್ ಎಂದುಕೊಂಡು ಅದರ ಸ್ಪೆಲ್ ಹಿಂದೆ ಮುಂದೆ ಮಾಡಿ ನೋಡಿದ. MIH, MHI, IHM, IMH... ಬ್ಲಡಿ ಹಿಮ್.. ಇವೆಲ್ಲ ಕಾಂಬಿನೇಷನ್ ಗಳನ್ನು ಸರ್ವರ್ ಚೆಕ್ ಮಾಡಿ ಇರುತ್ತದೆ. ಪ್ರಿಯಂವದಾ ರಾಜ್.. ಅದೆಂತಹ code word ಬರೆದಿದ್ದೀಯಾ ತಾಯಿ.. ಎಂದುಕೊಳ್ಳುತ್ತ ಕಾಫಿಯ ಗುಟುಕು ಹೀರಿದ. ಹೊರಗೆ ಕತ್ತಲು ನಿಧಾನವಾಗಿ ಆವರಿಸುತ್ತಿತ್ತು. ಮೇನ್ ರೋಡಿನಿಂದ ಅದೆಷ್ಟು ದೂರದಲ್ಲಿದೆಯೋ ಮನೆ.. ವಾಹನಗಳ ಸದ್ದಿಲ್ಲ. ಮನೆಯ ಸುತ್ತಲೂ ಮರಗಳು ತುಂಬಿವೆ. ತಂಪನೆಯ ಗಾಳಿ ಬೀಸುತ್ತಿದೆ. ಸಮ್ಮಿಶ್ರನ ಭೇಟಿಯಾಗಿ ಎರಡು ದಿನವಾಯಿತು. ಅದರ ನಂತರ ಅವನ ಸುಳಿವಿಲ್ಲ. ತನ್ನ ಉತ್ತರಕ್ಕಾಗಿ ನಿರೀಕ್ಷಿಸುತ್ತಿರಬಹುದಾ?? ನಾನೀಗ ಸೋತು ಹೋದೆ ಎಂದರೆ ನನ್ನನ್ನು ಬಿಟ್ಟು ಬಿಡುತ್ತಾನಾ? ಅಥವಾ?? ಇರುವ ಸಾಕ್ಷ್ಯಾಧಾರಗಳಿಂದ ತನ್ನನ್ನು ಜೈಲು ಪಾಲು ಮಾಡುತ್ತಾನಾ?? ಸಾಕ್ಷ್ಯಾಧಾರಗಳನ್ನು ನಾನೇ ಅಳಿಸಿ ಬಿಟ್ಟೆನಲ್ಲ.. ಇನ್ನೆಲ್ಲಿಯ ಸಾಕ್ಷ್ಯಾಧಾರ?? ಸಮ್ಮಿಶ್ರ ತನ್ನನ್ನೇನು ಮಾಡಲಾರ ಎಂದೆನ್ನಿಸಿತು. ಮತ್ತೊಂದು ಗುಟುಕು ಕಾಫಿ ಹೀರಿದ.
ಅನ್ವೇಷಣಾ ನೆನಪಾದಳು. ಅವಳೊಬ್ಬಳಿದ್ದರೆ ಈಗ!! ಎಷ್ಟು ಚಂದದ ಹುಡುಗಿ.. ಮತ್ತೆ ಮುಂದೆ ಯೋಚಿಸದಾದ ಆತ. ಅನ್ವೇಷಣಾ ನೆನಪಾದರೆ ಮನಸ್ಸು ತುಂಬಾ ಅವಳೇ ತುಂಬಿಕೊಳ್ಳುತ್ತಾಳೆ. ಆದ್ದರಿಂದಲೇ ಅವಳ ನೆನಪುಗಳಿಂದಲೂ ದೂರವಿರುತ್ತಾನೆ ವಿಹಾರಿ. ಆಗುವ ಕೆಲಸವು ಅಲ್ಲಿಗೆ ನಿಲ್ಲುತ್ತದೆ ಅವಳು ಮನಸ್ಸಿನಲ್ಲಿ ತುಂಬಿಕೊಂಡರೆ.
ಗುಟುಕು ಕಾಫಿ ಗಂಟಲು ಬಿಸಿ ಮಾಡುತ್ತಿದ್ದರೆ ಕುರ್ಚಿಗೆ ಒರಗಿ ಕಣ್ಮುಚ್ಚಿಕೊಂಡ. ಕಂಗಳ ಎದುರು HIM. ಎರಡು ದಿನದಿಂದ ಅದೊಂದೇ ಶಬ್ಧ ಅವನ ಯೋಚನೆಗಳಲ್ಲಿ.. ಮನಸ್ಸಿನಲ್ಲಿ.. ಅದೇ ಶಬ್ದವನ್ನು 2 ದಿನ ಯೋಚಿಸುತ್ತಲೇ, ನೋಡುತ್ತಲೇ ಇರುವುದರಿಂದಲೇನೋ ರೆಟಿನಾದ ಮೇಲೆ ಮತ್ತದೇ ಶಬ್ಧ ಮೂಡಿತು. ಕಣ್ಣು ಮುಚ್ಚಿದರು ಬಿಡದಾಯಿತಲ್ಲ HIM ಎಂದು ಕೊಂಡು ಕಣ್ಣು ತೆರೆಯಬೇಕು ಅಷ್ಟರಲ್ಲಿ ಶಾಕ್ ಹೊಡೆದ ಹಾಗಾಯಿತು ಆತನಿಗೆ. WIH.. ಕಣ್ಣಿನ ಪರದೆಯ ಮೇಲೆ HIM ಬದಲಾಗಿ WIH. ತಾನು ಮಾಡಿದ ತಪ್ಪೇನು ಎಂಬುದು ಅರ್ಥವಾಗಿ ಹೋಯಿತು ಆತನಿಗೆ. coffe ಕಪ್ ಕೆಳಗಿಟ್ಟು ಕೆಳಗೋಡಿ ಬಂದ. ಕಂಪ್ಯೂಟರ್ ಕೂಡ HIM ನ ಇತರೆ ಕಾಂಬಿನೇಷನ್ ಗಳನ್ನು ನೋಡಿಕೊಂಡು ಓಡುತ್ತಲೇ ಇತ್ತು. ಆದದ್ದಾಗಲಿ ಎಂದು ಅದನ್ನು ಅಲ್ಲಿಗೆ ನಿಲ್ಲಿಸಿ ಪಕ್ಕದಲ್ಲೇ ಇದ್ದ ಲ್ಯಾಪ್ ಟಾಪ್ ತೆಗೆದು ಗೂಗಲ್ ಮಾಡಿದ. WIH. 1,28,00,000. result ನೀಡಿತು google. ಓಹ್..!! ಅವನ ದೃಷ್ಟಿ ಒಂದೆಡೆ ನಿಂತು ಬಿಟ್ಟಿತು. Wallet Investment Holdings. (ಹೆಸರು ಬದಲಾಯಿಸಲಾಗಿದೆ.)
WIH.. Wallet Investment Holdings.. Switzerland.. ಯುರೇಕಾ ಎಂದು ಕೂಗಿಕೊಂಡು ಹೊರಗೆ ಓಡಿಬಿಡಬೇಕು ಎನ್ನಿಸಿಬಿಟ್ಟಿತು ವಿಹಾರಿಗೆ. ಪ್ರಿಯಂವದಾ ರಾಜ್ ಳ ಕಪ್ಪು ಹಣವೆಲ್ಲ ಈ WIH ನ ಒಳಗೆ ಬಂಧಿಯಾಗಿದೆ. ಸಂದೇಹವೇ ಇಲ್ಲ. ಇನ್ನುಳಿದಿರುವುದು ಒಂದೇ. WIH ನ ಸರ್ವರ್ ಹ್ಯಾಕ್ ಮಾಡಿ ಅದರೊಳಗೆ ರಾಜಳ ಎಕೌಂಟ್ ಇದೆಯಾ ನೋಡಬೇಕು.
ಈಗ ವಿಹಾರಿಯಲ್ಲಿ ಮತ್ತೆ ಲವಲವಿಕೆ ಮೂಡಿತು. ಜಗತ್ತಿನ ಅದೆಷ್ಟೋ ದಿಗ್ಗಜರ ಕಪ್ಪು ಹಣವನ್ನು ಕೂಡಿಟ್ಟುಕೊಂಡ WIH ನ ಸರ್ವರ್ ಒಳಗೆ ನಡೆಯಲು ವಿಹಾರಿಯ ಪ್ರಯತ್ನ ಪ್ರಾರಂಭವಾಯಿತು. WIH ನ ಫೈರ್ ವಾಲ್ ಗಳನ್ನು ದಾಟಿಕೊಂಡು ಹೋಗಲು Trozon ಒಂದನ್ನು ಬರೆದು ಹರಿಬಿಟ್ಟ ವಿಹಾರಿ. ಅದೆಷ್ಟೋ ಕೋಟಿ ಹಣಕ್ಕೆ ತಾನು ಬಹಳ ಹತ್ತಿರವಿದ್ದೇನೆ ಎಂದು ಆ ಕ್ಷಣದಲ್ಲಿ ವಿಹಾರಿಗೆ ತಿಳಿದಿರಲಿಲ್ಲ.
*...................................................................*...............................................................*
ಮೂರು ಘಂಟೆಗೆ ಮತ್ತೆ ಎಲ್ಲರೂ ಕೋರ್ಟ್ ಹಾಲಿನಲ್ಲಿ ಸೇರಿದ್ದರು. ಈ ಬಾರಿ ಶಾಸ್ತ್ರಿಯ ಪ್ರಕರಣ ಒಂದೇ ಆಗಿದ್ದರಿಂದ ಯಾರು ಜನರಿರಲಿಲ್ಲ. ಒಂದೆಡೆ ಪ್ರತಾಪ್, ಇನ್ನೊಂದೆಡೆ ಜಾನಕಿರಾಮ್ ಕುಳಿತಿದ್ದರೆ ಅವರ ಹಿಂದೆ ಪ್ರಾಕ್ಟೀಸ್ ಮಾಡುವ ನಾಲ್ಕಾರು ಲಾಯರ್ ಗಳು ಕುಳಿತಿದ್ದರು. ಇನ್ನೊಂದೆಡೆ ಸರೋವರಾ ಕುಳಿತು ಶಾಸ್ತ್ರಿ ಹಾಗೇಕೆ ಹೇಳಿದ ಎಂದು ಯೋಚನೆ ಮಾಡುತ್ತಿದ್ದಳು. ಉಳಿದ ಸಿಬ್ಬಂದಿಗಳೆಲ್ಲರೂ ಅವರವರ ಜಾಗದಲ್ಲಿ ಬಂದು ಕುಳಿತಿದ್ದರು.
ಪ್ರತಾಪ್ ನನ್ನನ್ನು ಭೇಟಿಯಾದ ಪ್ರಕರಣ ಕೇಳಿ ಹಾಗೆ ಹೇಳಿದನೇ?? ಉಹುಂ.. ಶಾಸ್ತ್ರಿ ಎಂಥ ಪರಿಸ್ಥಿತಿಯಲ್ಲೂ ಸ್ಥಿಮಿತ ಕಳೆದುಕೊಳ್ಳಲಾರ. ಕೊನೆಯಲ್ಲಿ ಕಣ್ಣು ಮಿಟುಕಿಸಿದ್ದು ಏಕೆ? ತಲೆ ಬಗ್ಗಿಸಿ ಕುಳಿತಿದ್ದ ಆಕೆ ತಲೆ ಎತ್ತಿ ಸುತ್ತಲೂ ನೋಡಿದಳು. ಆಕೆಯನ್ನೇ ನೋಡುತ್ತಿದ್ದ ಪ್ರತಾಪ್ ಮುಖ ಅತ್ತಕಡೆ ಹೊರಳಿಸಿದ. ಜಾನಕಿರಾಮ್ ಸುಮ್ಮನೆ ನೋಡುತ್ತಾ ಕುಳಿತಿದ್ದರು. ಸರೋವರಾ ಅವರ ಕಡೆ ನೋಡುತ್ತಲೇ ಸ್ನೇಹಪೂರ್ವಕ ನಗು ಬೀರಿದರು. ಸರೋವರಾ ಕೂಡ ಒಂದು ಗೌರವಯುತ ನಗು ನಕ್ಕಳು. ಅವಳ ತಲೆಯಲ್ಲಿ ಒಂದೇ ಯೋಚನೆ. ಶಾಸ್ತ್ರಿ ಏನು ಹೇಳಲು ಹೊರಟಿದ್ದ?? ಯಾವ ಸಂಕೇತಕ್ಕಾಗಿ ಕಣ್ಣು ಮಿಟುಕಿಸಿದ?
ಚಕ್ಕನೆ ಅವಳ ಮನದಲ್ಲಿ ಒಂದು ಯೋಚನೆ ಬಂದಿತು. ಓಹ್.. ನಾನೇಕೆ ಇಷ್ಟು ಹೊತ್ತು ಹೀಗೆ ಯೋಚಿಸಿರಲಿಲ್ಲ. ಶಾಸ್ತ್ರಿ ತನಗೆ ಸೂಚನೆ ಕೊಟ್ಟ ಮೂರು ಘಂಟೆಯ ನಂತರ ಈ ವಿಚಾರ ಹೊಳೆಯುತ್ತಿದೆಯಲ್ಲ.. ಈಗ ಆಕೆಯ ಮುಖದ ಮೇಲೆ ನಗು ಮೂಡಿತು. ಶಾಸ್ತ್ರಿ, You are so intelligent. ಎಷ್ಟೆಂದರೂ ತನ್ನ ಪ್ರಿಯತಮ ಅಲ್ಲವೇ?? ಎಂದುಕೊಂಡಳು.
ಅಷ್ಟರಲ್ಲಿ ಜಡ್ಜ್ ಬಂದಿದ್ದರಿಂದ ಎಲ್ಲರೂ ಎದ್ದು ನಿಂತರು. ಎಲ್ಲರಿಗೂ ಕುಳಿತುಕೊಳ್ಳುವಂತೆ ಸೂಚಿಸಿ, ತಾವೂ ಕುಳಿತುಕೊಂಡು ಪೆನ್ ತೆಗೆದು ಟೈಮ್ ನೋಟ್ ಮಾಡಿಕೊಂಡು "ಜಾನಕಿರಾಮ್ ಯು ಕ್ಯಾನ್ ಪ್ರೋಸಿಡ್.." ಎಂದರು.
ಜಾನಕಿರಾಮ್ ಎದ್ದು ನಿಂತು "ನಾನು ಹೇಳುವುದನ್ನೆಲ್ಲ ಬೆಳಿಗ್ಗೆಯೇ ಹೇಳಿಯಾಗಿದೆ. ವಿಚಾರಣಾಧೀನ ವ್ಯಕ್ತಿಯನ್ನು ಹೆಚ್ಚಿನ ವಿಚಾರಣೆಗೋಸ್ಕರ ಪೊಲೀಸ್ ಕಸ್ಟಡಿಗೆ ಒಪ್ಪಿಸಬೇಕು. ಸಾಕ್ಷಿಗಳನ್ನು ಬದಲಾಯಿಸುವ ಭಯವಿರುವುದರಿಂದ ವ್ಯಕ್ತಿಯು ಯಾವುದೇ ಕಾರಣಕ್ಕೂ ಬೇಲ್ ಗೆ ಅರ್ಹವಾಗಿಲ್ಲ. ಆ ಕಾರಣದಿಂದ ನನ್ನ ಬೆಳಗ್ಗಿನ ವಾದವನ್ನು ಪರಿಗಣಿಸಿ ವ್ಯಕ್ತಿಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಬೇಕು, ಯುವರ್ ಆನರ್."
ಜಡ್ಜ್ ಸರೋವರಾ ಕಡೆಗೆ ತಿರುಗಿ "ನೀವು ಹೇಳುವುದು ಏನಾದರೂ ಇದೇಯೇನಮ್ಮಾ??" ಎನ್ನುತ್ತಾ ಮುಖ ನೋಡಿದರು.
"ಯೆಸ್.. ಯುವರ್ ಆನರ್.." ಎನ್ನುತ್ತಾ ಎದ್ದು ನಿಂತಳು ಸರೋವರಾ.
ಇವಳೇನು ವಾದ ಮಾಡುವಳು ಎಂದು ಕುತೂಹಲದಿಂದ ಜಾನಕಿರಾಮ್ ಕೂಡ ಅವಳತ್ತಲೇ ನೋಡುತ್ತಿದ್ದ.
"ಯುವರ ಆನರ್, ಜಾನಕಿರಾಮ್ ಪ್ರಸಾದ್ ಹೇಳಿದಂತೆ ಆರೋಪಿಯು ಬಹಳ ಬುದ್ಧಿವಂತ. ನಾನವನ ಜೊತೆ ಮಾತನಾಡಿದ ಮೇಲೆ ನನಗೂ ಅದರ ಸ್ಪಷ್ಟ ಅರಿವಾಗಿದೆ." ಎನ್ನುತ್ತಾ ಶಾಸ್ತ್ರೀಯ ಮುಖ ನೋಡಿದಳು. ಶಾಸ್ತ್ರಿಯು ಆಶ್ಚರ್ಯಚಕಿತನಾಗಿ ನೋಡಿದ. ಏನು ಹೀಗೆ ವಾದ ಮಾಡುತ್ತಿರುವಳಲ್ಲ ಎಂಬಂತಿತ್ತು ಆತನ ಮುಖದ ಭಾವ.
ಸರೋವರಾ ಮುಂದುವರೆಸಿದಳು.
"ಅರ್ಧ ಘಂಟೆ ಆರೋಪಿಯ ಜೊತೆ ಮಾತನಾಡಿದ ಮೇಲೆ ಈತ ಹೊರಬಿದ್ದರೆ ಸಾಕ್ಷಿಗಳ ಮೇಲೆ ಹಾಗೂ ಸಿಕ್ಕ ಆಧಾರಗಳ ಮೇಲೆ ಪ್ರಭಾವ ಬಿರುತ್ತಾನೆ ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ."
ಆಕೆಯ ಮಾತಿಗೆ ಅಲ್ಲಿದ್ದವರೆಲ್ಲ ಒಮ್ಮೆ ಆಶ್ಚರ್ಯಚಕಿತರಾದರು. ಪ್ರಾಕ್ಟೀಸ್ ಗೆಂದು ಬಂದು ಕುಳಿತ ಯುವ ಲಾಯರ್ ಗಳಂತೂ ತಮ್ಮ ತಮ್ಮಲ್ಲೇ ಗುಸುಗುಸು ಪ್ರಾರಂಭಿಸಿದರು. Bail ಕೊಡಿಸಲು ಬಂದ ಈಕೆ ಹೀಗೇಕೆ ವಾದಿಸುತ್ತಿದ್ದಾಳೆ. ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುತ್ತಿದ್ದಾಳೆ. ಇನ್ನು ಈತನಿಗೆ ಬೇಲ್ ಸಿಕ್ಕಂತೆಯೇ ಎಂದುಕೊಂಡರು ಎಲ್ಲರೂ.
ಸತ್ಯ ಕೋರ್ಟಿನಲ್ಲಿ ವಾದ ಮಾಡುವಾಗ ಉಪಯೋಗಕೆ ಬರುವುದಿಲ್ಲ ಶಿಷ್ಯೆ.. ಎಂದುಕೊಂಡರು ಜಾನಕಿರಾಮ್. ಶಾಸ್ತ್ರಿ ಅದೇ ಆಶ್ಚರ್ಯದ ಭಾವನೆಯ ಮುಖ ಹೊತ್ತು ನಿಂತಿದ್ದ.
ಎಲ್ಲರಿಗಿಂತ ಮೊದಲು ಎಚ್ಚೆತ್ತವನು ಪ್ರತಾಪ್. ಇಲ್ಲೇನೋ ನಡೆಯುತ್ತಿದೆ, ಶಾಸ್ತ್ರಿ ಏನೋ ಸಂಚು ಮಾಡಿದ್ದಾನೆ. ಸರೋವರಾ ಶಾಸ್ತ್ರೀಯ ಪ್ರೇಯಸಿ ಎಂಬುದನ್ನು ನಾನು ಜಾನಕಿರಾಮ್ ಗೆ ಹೇಳುವುದನ್ನೇ ಮರೆತಿದ್ದೇನೆ. ಇದನ್ನೀಗಲೇ ಅವರಿಗೆ ಹೇಳಬೇಕು ಎಂದು ಎದ್ದು ನಿಂತ ಪ್ರತಾಪ್.
ಹಾಗೆ ವಾದ ನಡೆಯುತ್ತಿರುವಾಗ ಎದ್ದು ನಿಲ್ಲುವುದು ಕೋರ್ಟಿನ ಗೌರವಕ್ಕೆ ಶೋಭೆ ಅಲ್ಲ. ಜಡ್ಜ್ ಅವನ ಕಡೆ ತಿರುಗುತ್ತಲೇ ಅದನ್ನು ಗಮನಿಸಿದ ಜಾನಕಿರಾಮ್ ಪ್ರತಾಪ್ ಗೆ ಕುಳಿತುಕೊಳ್ಳುವಂತೆ ಸನ್ನೆ ಮಾಡಿದರು. ಆತ ಕುಳಿತುಕೊಳ್ಳುವಂತೆ ಸೂಚನೆ ನೀಡಿದ ಮೇಲೂ ಮಾತನಾಡಲು ಅಥವಾ ಕಾಲ್ತೆಗೆದು ಮುಂದಿಡಲು ಧೈರ್ಯ ಬರಲಿಲ್ಲ. ಪ್ರಸಾದ್ ಗೆ ಸಿಟ್ಟು ಬಂದರೆ ಈ ಕೇಸನ್ನು ಇಲ್ಲಿಗೆ ಬಿಟ್ಟುಬಿಡಬಲ್ಲ. ಹಾಗೊಮ್ಮೆ ಆತ ಕೇಸ್ ಬಿಟ್ಟನೆಂದರೆ ಇನ್ಯಾರು ಆ ಕೇಸ್ ತೆಗೆದುಕೊಳ್ಳುವುದಿಲ್ಲ.
ಹೇಗಾದರೂ ಮಾಡಿ ಸರೋವರಾ ಶಾಸ್ತ್ರೀಯ ಪ್ರೇಯಸಿ ಎಂಬ ಅಂಶ ಪ್ರಸಾದರಿಗೆ ತಿಳಿಸಬೇಕು ಎಂದು ಮೊಬೈಲ್ ತೆಗೆದು ಒಂದು ಲೈನಿನ ಸಂದೇಶ ಬರೆದು ಜಾನಕಿರಾಮ್ಗೆ ಕಳುಹಿಸಿದ.
ಜಾನಕಿರಾಮ್ ಮೊಬೈಲ್ ತೆಗೆದು ನೋಡುತ್ತಾರೇನೋ ಎಂಬ ಆತನ ಆಸೆಗೆ ತಣ್ಣೀರೆರೆಚಿದಂತಾಯಿತು. ಎರಡು ನಿಮಿಷವಾದರೂ ಅವರು ಕಿಸೆಗೆ ಕೈ ಹಾಕಲಿಲ್ಲ. ಸರೋವರಾ ಮುಂದುವರೆಸಿಯೇ ಇದ್ದಳು.
"ಯುವರ ಆನರ್, ಆ ವ್ಯಕ್ತಿ ನನ್ನ ಬಳಿ ಸತ್ಯವನ್ನೇ ಹೇಳಿದ್ದಾನೆ. ಈತನನ್ನು ಹೊರಗೆ ಬಿಟ್ಟರೆ ಸಾಕ್ಷ್ಯಗಳನ್ನು ಹೇಗೆ ಬದಲಾಯಿಸಬಹುದು ಎಂದು ಆತ ನನಗೆ ಹೇಳಿದ್ದಾನೆ. ಆದರೆ ಆತನ ಮಾತಿನ ಪ್ರಕಾರ ಇದೆಲ್ಲ ಸುಳ್ಳು ಆಧಾರಗಳು. ಈತನ ವಿರುದ್ಧ ಇನ್ಯಾರೋ ಕುತಂತ್ರ ಮಾಡಿ ಆಧಾರಗಳನ್ನು, ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ನಾವು ಸಾಕ್ಷಿಗಳನ್ನು, ಆಧಾರಗಳನ್ನು ನಾಶಪಡಿಸಿ ಅಥವಾ ತಿದ್ದುಪಡಿಗೊಳಿಸಿ ಹೊರಬರಲು ನೋಡುವುದು ಅಪರಾಧ. ಮೋಸಕ್ಕೆ ಮೋಸವೇ ಪ್ರಾಯಶ್ಚಿತವಲ್ಲ. ಈತನ ಮಾತನ್ನು ಹಾಗೂ ಸಿಕ್ಕ ಸಾಕ್ಷಾಧಾರಗಳನ್ನು ನೋಡಿದ ಮೇಲೆ ನನಗೇಕೋ ಇದರಲ್ಲೇನೋ ಗೋಲ್ ಮಾಲ್ ಇದೆ ಎಂದೆನ್ನಿಸುತ್ತಿದೆ. ಮೇಲಿಂದ ನೋಡಲು ಈತನೇ ಅಪರಾಧಿ ಎಂದು ಕಂಡು ಬಂದರೂ ಈ ಕೊಲೆ ಆಪಾದನೆಯ ಹಿಂದೆ ಯಾವುದೋ ಶಡ್ಯಂತ್ರ ಇರುವಂತೆ ತೋರುತ್ತಿದೆ. ಹಾಗಾಗಿ.."
ಒಮ್ಮೆ ಜಡ್ಜ್ ಮುಖವನ್ನೂ, ಇನ್ನೊಮ್ಮೆ ಜಾನಕಿರಾಮ್ ಮುಖವನ್ನೂ ನೋಡಿ, "ಈ ಆರೋಪಿಗೆ ಹದಿನೈದು ದಿನ ಜೈಲಿನಲ್ಲಿ ಬಂಧಿಸಿಡಬೇಕಾಗಿ ಕೇಳಿಕೊಳ್ಳುತ್ತೇನೆ.." ಎಂದಳು.
ಜಾನಕಿರಾಮ್ ಒಮ್ಮೆ Objection ಹೇಳಬೇಕೋ ಬೇಡವೋ ಯೋಚಿಸಿದರು. Bail ಕೊಡಲು ಬಂದ ಹುಡುಗಿಯೇ ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಹೇಳುತ್ತಿದ್ದಾಳೆ. ಯಾಕೆ!? 15 ದಿನದಲ್ಲಿ ಪೂರ್ತಿ ಕೇಸ್ ಸ್ಟಡಿ ಮಾಡಲಾ?? ಅಥವಾ ಇದೇನಾದರೂ ಬೇರೆ ಯೋಚನೆಯಾ??
Bail ಸಿಗದಂತೆ ಮಾಡುವುದು ನನ್ನ ಕೆಲಸ.ಇನ್ನು ಪೊಲೀಸ್ ಕಸ್ಟಡಿಯ ವಿಚಾರ ಹದಿನೈದು ದಿನದ ಮೇಲಾದರೂ ಪೊಲೀಸರು ಬೆಂಡೆತ್ತಿ ಬಾಯಿ ಬಿಡಿಸುತ್ತಾರೆ.
ನಾನೀಗ Objection ಹೇಳದಿದ್ದರೂ ನಾನೇನು ಸೋತಂತಲ್ಲ. ಬದಲಾಗಿ ಒಬ್ಬ ಹೊಸ ಲಾಯರ್ ಮನವಿಗೆ ತಾನು ಒಪ್ಪಿಕೊಂಡಂತೆ. ಇದರಿಂದ ಪ್ರಸಾದ್ ರಿಗೆ ಹೃದಯ, ಮನಸ್ಸು ಇದೆ ಎಂದುಕೊಳ್ಳುತ್ತಾರೆ ಎಂದು ಯೋಚಿಸಿ ಸುಮ್ಮನೆ ಕುಳಿತಿದ್ದ ನೋಡೋಣ ಮುಂದೆ ಏನು ಹೇಳುತ್ತಾಳೆ ಎಂದುಕೊಂಡು.
ಪ್ರತಾಪ್ ಗೆ ಮಾತ್ರ ವಿಪರೀತ ಚಡಪಡಿಕೆ ಶುರುವಾಗಿತ್ತು. ಅಷ್ಟರಲ್ಲಿ ಕಾನಸ್ಟೆಬಲ್ ಗಳ ಮಧ್ಯೆ ನಿಂತ ಶಾಸ್ತ್ರಿ "ಯುವರ ಆನರ್.. ಈ ಲಾಯರ್ ನನಗೆ ಅನ್ಯಾಯ ಮಾಡುತ್ತಿದ್ದಾರೆ. Bail ಕೊಡುತ್ತೇನೆ ಎಂದು ನಂಬಿಸಿ ಸತ್ಯ ತಿಳಿದುಕೊಂಡು ಈಗ ಹೀಗೆ ಮಾಡುತ್ತಿದ್ದಾರೆ. ನನಗಿವರು ಬೇಡ.." ಎಂದು ಕೂಗಿಕೊಂಡ.
ಆರ್ಡರ್..
ಆರ್ಡರ್..
ಮರದ ಸುತ್ತಿಗೆಯಿಂದ ಎರಡು ಸಲ ಬಾರಿಸಿ "ರೀ ಮಿಸ್ಟರ್, ನೀವೇನಾದರೂ ಹೇಳುವುದಿದ್ದರೆ ಕಟಕಟೆಯಲ್ಲಿ ನಿಂತು ಹೇಳಿ. ಎಲ್ಲೆಂದರಲ್ಲಿ ನಿಂತು ಕೂಗಲು ಇದು ನಿಮ್ಮ ಮಾವನ ಮನೆಯಲ್ಲ.." ಎಂದರು.
ಶಾಸ್ತ್ರಿ ಕಟಕಟೆಗೆ ಬಂದು ನಿಂತು ಮತ್ತೆ ಅದನ್ನೇ ಹೇಳಿದ.
ಒಮ್ಮೆ ಮೊಬೈಲ್ ನೋಡಿ ಪ್ರಸಾದ್.. ಎಂದು ಕೂಗಬೇಕೆನ್ನಿಸಿತು ಪ್ರತಾಪ್ ಗೆ.
ಸರೋವರಾ ಶಾಸ್ತ್ರಿಯ ಕಡೆ ಕೋಪದ ನೋಟ ಬೀರಿ "ರೀ ಶಾಸ್ತ್ರಿ, ಸುಮ್ಮನೆ ಇರಿ.. ಸುಳ್ಳು ಹೇಳಿ, ಮೋಸ ಮಾಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏನೋ ನಿಮ್ಮ ಮಾತಿನಲ್ಲಿ ಸತ್ಯವಿದೆ ಎಂದು ಅನ್ನಿಸಿದ್ದರಿಂದ ಕೇಸ್ ಮುಂದೆ ನಡೆಸುತ್ತಿದ್ದೇನೆ. ಜಾನಕಿರಾಮ್ ರ ವಿರುದ್ಧ ವಾದ ಮಾಡಲು ಯಾರೂ ಮುಂದೆ ಬರುವುದಿಲ್ಲ. ನಾನು ಬಂದಿದ್ದು ಅದೃಷ್ಟ ಎಂದುಕೊಳ್ಳಿ. ಸತ್ಯದ ದಾರಿಯಲ್ಲಿ ಏನು ಸಾಧ್ಯವೋ ನಾನು ಅದನ್ನು ಮಾಡುತ್ತೇನೆ. ಸುಳ್ಳು ಹೇಳಿ, ಮೋಸ ಮಾಡಿ ನಿಮ್ಮನ್ನು ಗೆಲ್ಲಿಸಲು ನಾನು ಎಲ್ಲರಂತೆ ಲಾ ಕಲಿತು ಬಂದಿಲ್ಲ. ಪವಿತ್ರವಾದ ಕಾನೂನನ್ನು ಪ್ರೀತಿಸಿ ಓದಿದ್ದೇನೆ. ನೀವು ಸುಮ್ಮನಿದ್ದರೆ ನಿಮಗೆ ಒಳಿತು. ಇಲ್ಲ್ಫಿದ್ದರೆ ನಿಮ್ಮ ಕರ್ಮ.." ಎಂದು ಸಿಟ್ಟಿನಿಂದ ಹೋಗಿ ಕುಳಿತುಕೊಂಡಳು.
"ಸ್ಸಾರಿ ಮೇಡಂ.. ಮುಂದುವರೆಸಿ..." ಶಾಸ್ತ್ರಿ ತಲೆ ತಗ್ಗಿಸಿ ನಿಂತ.
ಏನಪ್ಪಾ ನಾಟಕ ಎಂದುಕೊಂಡರು ಜಡ್ಜ್.
ಮತ್ತೆ ಎದ್ದು ನಿಂತ ಸರೋವರಾ, "ಯುವರ ಆನರ್, ನೂರು ಜನ ಅಪರಾಧಿಗಳಿಗೆ ಶಿಕ್ಷೆ ಆಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬ ಧ್ಯೇಯ, ಉದ್ಧೇಶದ ಮೇಲೆ ನಿಂತಿದೆ ನಮ್ಮ ನ್ಯಾಯಾಂಗ. ಅದನ್ನು ಪರಿಗಣಿಸಿ ಈ ವ್ಯಕ್ತಿಯನ್ನು ಹದಿನೈದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಬೇಕೇ ಹೊರತು ಪೊಲೀಸ್ ಕಸ್ಟಡಿಗೆ ನೀಡಬಾರದು ಎಂದು ಕೇಳಿಕೊಳ್ಳುತ್ತೇನೆ. ನಾನು bail ಕೊಡಿ ಎಂದು ವಾದ ಮಾಡಲು, ವಾದ ಮಾಡಿ ಗೆಲ್ಲಲು ಸಾಧ್ಯವೇ ಇಲ್ಲದ ಕಾರಣ ಈ ರೀತಿಯಲ್ಲಾದರೂ ನನಗೆ ಹದಿನೈದು ದಿನದ ಸಮಯ ಸಿಗುವಂತೆ ಮಾಡಬೇಕಾಗಿ ನ್ಯಾಯಾಂಗಕ್ಕೆ ನಾನು ಕೇಳಿಕೊಳ್ಳುತ್ತೇನೆ.
ಹದಿನೈದು ದಿನದ ನಂತರವೂ ಕೂಡ ಈ ವ್ಯಕ್ತಿಯನ್ನು ಪೊಲೀಸ್ ಕಸ್ಟಡಿಗೆ ನೀಡಬಹುದು. ಈತ ಹೇಳಿದ್ದು ಸುಳ್ಳಾದಲ್ಲಿ ನನ್ನದೇನು ಅಭ್ಯಂತರವೂ ಇಲ್ಲ. ಹಾಗಾಗದೆ ಈತ ನಿರಪರಾಧಿಯೇ ಆಗಿದ್ದರೆ ಹದಿನೈದು ದಿನ ಹೊಡೆತ ತಿಂದ ಮೇಲೆ ಅದು ನಮಗೆ ಮನವರಿಕೆ ಆದರೂ ಆಗುವ ಶಿಕ್ಷೆ ಆಗಿ ಹೋಗಿರುತ್ತದೆ.
ಇದನ್ನೆಲ್ಲ ಮನಗಂಡು 15 ದಿನ ಈತನನ್ನು ಜೈಲಿನಲ್ಲಿಡಬೇಕು ಹಾಗೂ ನನಗೆ ಈತನಿಂದ ಇನ್ನು ಹಲವು ವಿಷಯಗಳನ್ನು ತಿಳಿದುಕೊಳ್ಳಬೇಕಾಗಿದ್ದರಿಂದ ಈತನ ಭೇಟಿಗೆ ಸಮಯವನ್ನು ನೀಡಬೇಕು. ಈತನ ಕಡೆಯಿಂದ ಯಾವುದೇ ಸಾಕ್ಷಿ ಆಧಾರಗಳ ತಿದ್ದುಪಡಿ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು." ಎಂದು ಹೇಳಿ ಬಂದು ಕುಳಿತುಕೊಂಡಳು.
ಈಗ ಜಾನಕಿರಾಮ್ ಏನು ಹೇಳುತ್ತಾರೆ ಎಂಬುದರ ಮೇಲೆ ತಮ್ಮ ಪ್ಲಾನಿನ ಏಳು ಬೀಳು ಎಂಬುದು ಶಾಸ್ತ್ರಿ ಮತ್ತು ಸರೋವರಾ ಇಬ್ಬರಿಗೂ ಗೊತ್ತು.
ಇವರ ಸಂಚನ್ನು ಅರಿತವನೆಂದರೆ ಪ್ರತಾಪ್ ಮಾತ್ರ. ಈಗ ಬಿಟ್ಟರೆ ಮುಗಿಯಿತು. 15 ದಿನದಲ್ಲಿ ಜೈಲಿನಲ್ಲಿ ಕುಳಿತು ಶಾಸ್ತ್ರಿ ಹೊರಹೋಗುವ ದಾರಿ ಹುಡುಕಿಬಿಡುತ್ತಾನೆ. ನಂತರ ಜಾನಕಿರಾಮ್ ಅಲ್ಲ, ಯಾರೇ ಬಂದರೂ ಶಾಸ್ತ್ರಿಯನ್ನು ಹಿಡಿಯಲಾರರು. ಆ ಸಮಯವನ್ನು ಈಗ ಇವರು ಕೇಳುತ್ತಿರುವುದು. No.. No.. ಪ್ರಸಾದ್.. ಸುಳಿಗೆ ಸಿಲುಕಬೇಡಿ.. ಇನ್ನು ಕುಳಿತಿದ್ದರೆ ಕೆಲಸ ಕೆಲಸ ಕೆಟ್ಟಂತೆ ಎಂದು ಎದ್ದು ನಿಂತು "ಲಾಯರ್ ಜೊತೆ ಮಾತನಾಡಬೇಕು ಯುವರ ಆನರ್.." ಎಂದ ಪ್ರತಾಪ್. ಪ್ರಸಾದ್ ಪ್ರತಾಪ್ ಕಡೆಗೆ ಕೆಂಗಣ್ಣು ಬೀರಿದರು..
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 24

                                          ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 24

ಕೋರ್ಟಿನ ಹಾಲಿನಲ್ಲಿ ಕಿಕ್ಕಿರಿದು ಜನ ತುಂಬಿದ್ದರು. ಜಡ್ಜ್ ಬಂದವರು ಒಂದರ ಹಿಂದೆ ಒಂದರಂತೆ ಮೂರು ನಾಲ್ಕು ಕೇಸ್ ಗಳನ್ನು ಸಾಗಹಾಕುತ್ತಾರೆ. ಸವಾಲು ಹಾಗೂ ಪಾಠಿ ಸವಾಲುಗಳು, ಅದನ್ನು ನಡೆಸುವ ಲಾಯರ್ ಗಳು ಎಷ್ಟು ಚಾಣಾಕ್ಷರು ಎನ್ನುವುದರ ಮೇಲೆ, ವಾದ ವಿವಾದ ಎಷ್ಟು ಸಮಯ ನಡೆಯುತ್ತದೆ ಎಂಬುದು ನಿರ್ಧಾರವಾಗುತ್ತದೆ. ಎರಡು ಮೂರು ಕೇಸುಗಳಿಗೆ ಸಂಬಂಧಿಸಿದ ಎಲ್ಲ ಜನರು ಹಾಲಿನಲ್ಲಿ ಬಂದು ಸೇರಿದ್ದರಿಂದ ಸ್ವಲ್ಪ ಜಾಸ್ತಿಯೇ ಎನ್ನುವಷ್ಟು ಗಿಜಿಗಿಜಿ ಇತ್ತು.
ಮುಂದಿನ ಬೆಂಚಿನಲ್ಲಿ ಪ್ರತಾಪ್ ಕುಳಿತಿದ್ದ. ಆತನ ಎಡಪಕ್ಕ ಗೋಡೆಯ ಬಳಿ ಇಬ್ಬರು ಕಾನಸ್ಟೇಬಲ್ ಶಾಸ್ತ್ರೀಯ ಕೈಗೆ ಕೋಳ ತೊಡಿಸಿ ಹಿಡಿದು ನಿಂತಿದ್ದರು. ಪೊಲೀಸರ ಕಡೆಯಿಂದ ವಾದ ಮಾಡಲು ಅದಾಗಲೇ ಸರ್ಕಾರದ ಕಡೆಯಿಂದ ಒಬ್ಬ ಲಾಯರನ್ನೂ ಗುರುತು ಮಾಡಿದ್ದ ಪ್ರತಾಪ್. ಆತ ಅಂತಿಂಥ ಲಾಯರ್ ಅಲ್ಲ. ಜಾನಕಿ ರಾಮ್ ಪ್ರಸಾದ್. ಆತ ವಾದ ಮಾಡಲು ಪ್ರಾರಂಭಿಸಿದರೆ ಪ್ರತಿವಾದಿಗಳು ಸುಮ್ಮನೆ ನಿಂತು ಬಿಡುತ್ತಾರೆ. ನ್ಯಾಯಾಂಗವನ್ನು ಆತ ಅರೆದು ಕುಡಿದಿದ್ದಾನೆ. ಕೇವಲ ಅರೆದು ಕುಡಿದಿದ್ದಲ್ಲ, ಕುಡಿದು ಜೀರ್ಣಿಸಿಕೊಂಡಿದ್ದಾನೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಗಳಲ್ಲಿ ವಾದಿಸಿದ ಅನುಭವವಿದೆ. ಯಾವುದೇ ಕಾರಣಕ್ಕೂ ಶಾಸ್ತ್ರಿ ತಪ್ಪಿಸಿಕೊಳ್ಳಬಾರದು. ಪ್ರತಾಪ್ ಚಾನ್ಸ್ ತೆಗೆದುಕೊಳ್ಳುವಂತಿಲ್ಲ ಇಂಥ ಸಂದರ್ಭದಲ್ಲಿ. ಹಾಗಾಗಿ ಜಾನಕಿರಾಮ್ ಗೆ ಒಪ್ಪಿಸಿದ್ದ. ಆತ ಕೇಸ್ ನಡೆಸಲು ಒಪ್ಪಿಕೊಂಡರೆ ಅರ್ಧ ಕೇಸ್ ಗೆದ್ದಂತೆಯೇ ಲೆಕ್ಕ. ಇನ್ನು ಜಡ್ಜ್ ಬಂದಿರದ ಕಾರಣ ಗುಸುಗುಸು ನಡೆದೇ ಇತ್ತು. ಶಾಸ್ತ್ರಿ ನಿಂತಲ್ಲಿಂದಲೇ ಸುತ್ತಲೂ ನೋಡಿದ. ಸಾಲಾಗಿ ಹಾಕಲಾಗಿದ್ದ ಬೆಂಚಿನ ಮೇಲೆ ಕುಳಿತ ಜನರು, ತನ್ನ ಪಕ್ಕದಲ್ಲಿ ನಿಂತಿದ್ದ ಮತ್ತೊಂದಿಷ್ಟು ಆರೋಪಿಗಳು, ಅವರನ್ನು ಹಿಡಿದು ನಿಂತ ಖಾಕಿಗಳು, ಮಧ್ಯದಲ್ಲಿ ಖುರ್ಚಿಯ ಮೇಲೆ ಕುಳಿತು ಲಾ ಬುಕ್ಕಿನ ಯಾವ್ಯಾವುದೋ ಪುಟಗಳಲ್ಲಿ ಮುಖ ಹುದುಗಿಸಿಕೊಂಡಿರುವ ಲಾಯರ್ ಗಳು..
ಶಾಸ್ತ್ರಿ ಆಲೋಚಿಸುತ್ತಿದ್ದ. ತನಗೆ ಈಗ ಸರ್ಕಾರಿ ಲಾಯರ್ ಗತಿ. ಆರೋಪಿಗೆ ದುಡ್ಡು ಕೊಡುವ ಶಕ್ತಿ ಇಲ್ಲದಿರುವಾಗ ಅಥವಾ ಲಾಯರ್ ಗಳನ್ನು ಯೋಜಿಸಿಕೊಳ್ಳಲಾಗದ ಸಂದರ್ಭಗಳಲ್ಲಿ ಸರ್ಕಾರಿ ಲಾಯರ್ ಗಳೇ ಪಾಠಿ ಸವಾಲು ಮಾಡಿಸುತ್ತಾರೆ. ಬಹುತೇಕ ಸಮಯದಲ್ಲಿ ಹೀಗಾದಾಗ ಇಬ್ಬರು ಲಾಯರ್ ಗಳು ಮಾತನಾಡಿಕೊಂಡು ಆದಷ್ಟು ಬೇಗ ಕೇಸ್ ಮುಗಿಸಲು ನೋಡುತ್ತಾರೆ. ಯಾಕೆಂದರೆ ಅವರಿಗೆ ಸಿಗುವುದು ಏನೂ ಇಲ್ಲ. ದುಡ್ಡಿದ್ದರೆ ಕೇಸ್ ನಡೆಯುತ್ತಲೇ ಇರುತ್ತದೆ. ವಾರ, ತಿಂಗಳು, ವರ್ಷ.... ವಾದಿಸುತ್ತಿದ್ದ ಲಾಯರ್, ಸಾಕ್ಷಿ ಹೇಳುವ ಸಾಕ್ಷಿದಾರ ಸತ್ತು ಬಿಡುತ್ತಾರೆ ಆದರೂ ಪ್ರಕರಣಗಳು ದಡ ಸೇರುವುದಿಲ್ಲ. ಸಂಜೆ ಬರುವ ಧಾರಾವಾಹಿಗಳಿಗೂ, ಹಿಂದೂಸ್ಥಾನದ ನ್ಯಾಯಾಂಗ ವ್ಯವಸ್ಥೆಗೂ ಬಹುತೇಕ ಸಾಮ್ಯತೆಯಿದೆ ಎಂದರೂ ತಪ್ಪಿಲ್ಲ. ಎರಡೂ ಮುಗಿಯುವುದಿಲ್ಲ. ಕೈಯಲ್ಲಿ ತಕ್ಕಡಿ, ಕಣ್ಣಿಗೆ ಬಟ್ಟೆ. ನ್ಯಾಯದೇವತೆಯ ಕಣ್ಣಿಗೆ ಅದೇಕೆ ಕಪ್ಪು ಬಟ್ಟೆ??
ಕಪ್ಪು ಅಂಧಕಾರದ ಸಂಕೇತ. ಕಪ್ಪು ಬಟ್ಟೆಯಲ್ಲಿರುವ ಲಾಯರ್ ಗಳು, ಜಡ್ಜ್. ಕಪ್ಪು ಬಟ್ಟೆ ಕಣ್ಣಿಗೆ ಕಟ್ಟಿಕೊಂಡಿರುವ ನ್ಯಾಯ ದೇವತೆ..!! ಕಪ್ಪು ಬಟ್ಟೆ, ಕಣ್ಣಿಗೆ ಕಟ್ಟಿರುವ ಬಟ್ಟೆಯ ಬಣ್ಣವೂ ಅದೇ..
ನ್ಯಾಯಾಂಗವನ್ನು ಪ್ರತಿನಿಧಿಸುವ ಜನರ ಬಟ್ಟೆಗೂ, ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಗಾಡಾಂಧಕಾರಕ್ಕೂ ಮತ್ತೆ ಅದೇ ಸಾಮ್ಯತೆ.
ದುಡ್ಡಿದ್ದವರಿಗೊಂದು ರೀತಿಯ ನ್ಯಾಯ, ದುಡ್ಡಿಲ್ಲದವರಿಗೆ ಇನ್ನೊಂದು ರೀತಿಯ ನ್ಯಾಯ. ತಲೆ ಸಿಡಿಯುವಂತಾಯಿತು ಶಾಸ್ತ್ರಿಗೆ.
ಹಿಂದಿನ ದಿನ ರಾತ್ರಿಯೂ ನಿದ್ದೆ ಮಾಡಿರಲಿಲ್ಲ ಶಾಸ್ತ್ರಿ. ಇಂತಹದೇ ಹತ್ತು ಹಲವು ಯೋಚನೆಗಳು ಕಿತ್ತು ತಿಂದಿವೆ. ಒಬ್ಬ ವ್ಯಕ್ತಿ ಅಸಹಾಯಕ ಪರಿಸ್ಥಿತಿಯಲ್ಲಿ ಸಿಲುಕಿದರೆ ಅಷ್ಟೇ.. ಪರಿಸ್ಥಿತಿ ಮತ್ತು ಯೋಚನೆ ಎರಡೂ ಕಾಡುತ್ತವೆ. ಏನೂ ಯೋಚನೆ ಮಾಡದೆ ಇರಬೇಕೆಂದರೆ ಅದು ಸಾಧ್ಯವಿಲ್ಲ.
ಅಷ್ಟರಲ್ಲಿ ಜಡ್ಜ್ ಒಳಗೆ ಬಂದರು. ಕೋರ್ಟ್ ಹಾಲಿನಲ್ಲಿ ಒಮ್ಮೆ ನಿಶ್ಯಬ್ಧ. ಎಲ್ಲರೂ ಎದ್ದು ನಿಂತು ಜಡ್ಜ್ ಹೋಗಿ ಕುಳಿತುಕೊಳ್ಳುತ್ತಿದ್ದಂತೆ ಮತ್ತೆ ಕುಳಿತುಕೊಂಡರು. ಜನರಿಂದ ತುಂಬಿದ ಕೊಠಡಿಯನ್ನು ಒಮ್ಮೆ ಸುತ್ತಲೂ ನೋಡಿ "ಹಮ್.. ಶುರು ಮಾಡಿ.." ಎಂದರು.
ಕೇಸಿನಲ್ಲಿ ನಡೆಯುವ ಮಾತುಕತೆಗಳನ್ನು ಟೈಪ್ ಮಾಡುವ ಹಾಗೂ ಸಿಕ್ಕ ಸಾಕ್ಷ್ಯಗಳನ್ನು ಜಡ್ಜ್ ಗೆ ಕೊಡಲು ಕುಳಿತ ವ್ಯಕ್ತಿ ಮೊದಲ ಕೇಸಿನ ಆರೋಪಿಯ ಹೆಸರು ಕೂಗಿದ.
ಮುಂದಿನ ಹೆಸರು ಶಾಸ್ತ್ರಿಯದೇ. ಪ್ರತಾಪನಿಗೆ ನಾನೇ ಸಹಾಯ ಮಾಡಿದ್ದೆ. ಆದರೆ ಪೊಲೀಸರು ಎಂದಿಗೂ ಪೊಲೀಸರೇ. ತೋರಿಸಿಬಿಟ್ಟ ಚಾಲಾಕಿತನ. ತಾನು ಕೊಲೆ ಮಾಡಿದ್ದೇನೆ ಎಂದು ನಂಬಿದ್ದಾನಾ?? ಅಥವಾ ಬೇರೇನಾದರೂ ಉದ್ಧೇಶವಿಟ್ಟುಕೊಂಡು ಹೀಗೆ ಮಾಡುತ್ತಿದ್ದಾನಾ?? ನನ್ನನ್ನು ಜೈಲಿಗೆ ಕಳುಹಿಸಿದರೆ ಈತನಿಗೆ ಏನು ಲಾಭ?? ಎದುರಿನಲ್ಲಿ ಪ್ರತಾಪ್ ಕುಳಿತು ಪ್ರಸಾದ್ ರನ್ನೇ ನೋಡುತ್ತಿದ್ದ. ಎಲ್ಲರೂ ಸೆಕ್ಷನ್ ಗಳನ್ನು ನೋಡುತ್ತಿದ್ದರೆ ಪ್ರಸಾದ್ ಸುಮ್ಮನೆ ಕುಳಿತಿದ್ದರು. ತಲೆ ಕೂದಲು ಆಗಲೇ ನೆರೆತಿದೆ. ಅಗಲ ಮುಖದ ಮೇಲೆ ಚೂಪನೆ ಮೂಗು, ಚುರುಕಾದ ಕಣ್ಣುಗಳು, ಮುಖದಲ್ಲಿ ತುಂಬಿರುವ ಆತ್ಮವಿಶ್ವಾಸ.. ಶಾಸ್ತ್ರಿಯ ಮನಸ್ಸು ಮತ್ತಷ್ಟು ಅದುರಿತು.
ತನಗೆ ಯಾವೊಬ್ಬನೂ ಸಹಾಯಕ್ಕೆ ನಿಲ್ಲಲಾರನೇನೋ?? ಸುಮ್ಮನೆ ಯಾರು ತಾನೇ ಬಾಯಿ ನೋವು ಮಾಡಿಕೊಳ್ಳುತ್ತಾರೆ??? ಕೊನೆಯಲ್ಲಿ ಗೆಲ್ಲುವುದು ಆತನೇ.. ಜಾನಕಿರಾಮ್ ಪ್ರಸಾದ್!! ಅದಕ್ಕೆ ಸ್ಪಷ್ಟ ಕುರುಹು ಎಂಬಂತೆ ಇನ್ನು ಯಾರು ಕೂಡ ಅವನ ಬಳಿ ಬಂದು ಏನಾಯಿತು?? ನಡೆದದ್ದೇನು?? ವಿಚಾರಿಸಿಕೊಂಡಿಲ್ಲ.
ತನ್ನ ವಾದ ತಾನೇ ನೋಡಿಕೊಳ್ಳಲಾ?? ಲಾ ಎಂದರೇನು?? ಮಕ್ಕಳಾಟವಾ?? ಸುಮ್ಮನೆ ವಾದ ಮಾಡುವುದಲ್ಲ. ಅದೆಷ್ಟು ಸೆಕ್ಷನ್ ಗಳು? ಅದೆಷ್ಟು ರೂಲ್ ಗಳು?? ತನ್ನನ್ನು ಯಾರೂ ಕೇಳುವುದಿಲ್ಲ. ಪ್ರಸಾದ್ ಗಲ್ಲು ಎಂದರೆ ಗಲ್ಲು.. ಜೀವಾವಧಿ ಎಂದರೆ ಅದೇ.. ಎಂದು ಯೋಚಿಸುತ್ತಿರುವ ಶಾಸ್ತ್ರಿಯ ಮನಸ್ಸಿನಲ್ಲಿ ಒಮ್ಮೆ ಭಯ ಹಾಗೂ ಹತಾಶೆಯ ಛಾಯೆ ಹಾದು ಹೋಯಿತು.
ಅಷ್ಟರಲ್ಲಿ ಮೊದಲನೇ ಕೇಸಿನ ವಾದ ವಿವಾದ ಮುಗಿದು ಮುಂದಿನ ವಿಚಾರಣೆಯ ದಿನಾಂಕ ನಿಗದಿಯಾಗಿತ್ತು.
ಶಾಸ್ತ್ರಿ..
ಶಾಸ್ತ್ರಿ..
ಶಾಸ್ತ್ರಿ..
ಮೂರು ಬಾರಿ ಈತನ ಹೆಸರನ್ನು ಕೂಗುತ್ತಲೇ ಪೇದೆಗಳಿಬ್ಬರೂ ಆತನನ್ನು ವಿಚಾರಣೆ ನಡೆಯುವ ಸ್ಥಳಕ್ಕೆ ಕರೆದೊಯ್ದು ನಿಲ್ಲಿಸಿದರು. ಕೈಗೆ ಹಾಕಿದ ಕೋಳ ಬಿಚ್ಚಲಾಯಿತು. ಒಮ್ಮೆ ಗಾಢವಾದ ಉಸಿರು ಚೆಲ್ಲಿ ಎದ್ದು ನಿಂತ ಜಾನಕಿರಾಮ್. ಜಡ್ಜ್ ಮುಖದಲ್ಲಿ ಕೂಡ ಒಂದು ಪರಿಚಿತ ನಗು ಹಾದು ಹೋಯಿತು.
ಶಾಸ್ತ್ರಿಯತ್ತ ತಿರುಗಿದ ಜಡ್ಜ್ "ನಿನ್ನ ಪರವಾಗಿ ವಾದ ಮಾಡಲು ಯಾರಿದ್ದಾರೆ??" ಎಂದು ಕೇಳಿದ.
"ನನಗೆ ಲಾಯರ್ ನಿಯೋಜಿಸಿಕೊಳ್ಳಲು ಸಮಯವನ್ನೇ ನೀಡಲಿಲ್ಲ." ಎಂದ ಶಾಸ್ತ್ರಿ
"ಹಾಗಾದರೆ ಯಾರಾದರೂ ಸರ್ಕಾರಿ ಲಾಯರ್ ನಿನ್ನ ಪರವಾಗಿ ವಾದಿಸುತ್ತಾರೆ ನಿನಗೆ ಒಪ್ಪಿಗೆ ಇದ್ದರೆ.. " ಎಂದು ಶಾಸ್ತ್ರಿಯ ಮುಖ ನೋಡಿದ ಜಡ್ಜ್.
ತಾನು ನಿಧಾನವಾಗಿ ಉಸುಬಿನೊಳಗೆ ಇಳಿಯುತ್ತಿದ್ದ ಅನುಭವವಾಗತೊಡಗಿತು ಶಾಸ್ತ್ರಿಗೆ. ಅವನಲ್ಲಿ ಇನ್ಯಾವುದೂ ದಾರಿ ಉಳಿಯದ್ದರಿಂದ ಸರಿ ಎನ್ನುವಂತೆ ತಲೆಯಾಡಿಸಿದ.
ಜಡ್ಜ್ ಕುಳಿತಿದ್ದ ಉಳಿದ ಲಾಯರ್ ಗಳ ಕಡೆ ತಿರುಗಿ "ಯಾರಾದರೂ ಈ ಕೇಸ್ ಬಗ್ಗೆ ಆಸಕ್ತಿ ಇದ್ದರೆ ಸ್ವಯಂ ಇಚ್ಛೆಯಿಂದ ಈತನ ಪರವಾಗಿ ವಾದಿಸಲು ಮುಂದೆ ಬರುವುದಾದರೆ ಬನ್ನಿ.." ಎಂದರು.
ಜಡ್ಜ್ ಹಾಗೆನ್ನುತ್ತಲೇ ಜಾನಕಿರಾಮ್ ತಿರುಗಿ ಅಲ್ಲಿರುವ ಲಾಯರ್ ಗಳ ಮೇಲೆ ತೀಕ್ಷ್ಣ ದೃಷ್ಟಿ ಬೀರಿದ. ಯಾರೊಬ್ಬರೂ ಮಾತನಾಡಲಿಲ್ಲ. ಜಡ್ಜ್ ಗೂ ತಿಳಿಯಿತು ಉಳಿದವರ ಉಭಯ ಸಂಕಟ. ಶಾಸ್ತ್ರಿಗೆ ಕೂಡ ಪರಿಸ್ಥಿತಿಯ ಅರಿವಾಗುತ್ತಲೇ ಇತ್ತು. ನನ್ನನ್ನೀಗ ಕಂಬಿಯ ಹಿಂದೆ ದೂಡುತ್ತಾರೆ. ಮೇಲ್ಮನವಿ ಸಲ್ಲಿಸಿ ಮುಂದೆ ಯಾವುದಾದರೂ ಒಳ್ಳೆಯ ಲಾಯರ್ ಹಿಡಿಯಬೇಕು. ಈ ಪ್ರತಾಪ್ ಯಾಕೆ ನನ್ನನ್ನು ನಂಬುತ್ತಿಲ್ಲ?? ನನ್ನನ್ನು ಜೈಲಿಗೆ ಕಳುಹಿಸಲು ಇಂತಹ ಹಟವೇಕೆ?? ಒಂದು ಕೊಲೆ ಕೇಸ್ Solve ಮಾಡಿದೆ ಎಂದು ಬೀಗಲಾ?? ಅಥವಾ ಇನ್ನೇನಾದರೂ??
ಸರೋವರಾ..!!
ಸರೋವರಾಳಿಗೆ ತಿಳಿದರೆ ಏನು ಮಾಡಬಹುದು? ತುಂಬಾ ಭಾವಾವೇಶದ ಹುಡುಗಿ. ಅಳುತ್ತಾಳೆ. ಎಷ್ಟು ದಿನವೆಂದು ಅಳುತ್ತಾಳೆ?? ತನ್ನನ್ನು ಬಿಟ್ಟು ಇನ್ಯಾರ ಗೂಡಿಗೋ ಹಾರುತ್ತಾಳೆ.. ಸರಿಯಿದ್ದಾಗ ಮಾತ್ರ ಪ್ರೀತಿ ಪ್ರೇಮ ಎಲ್ಲ ಚಂದ. ಯಾವ ಹೂವು ಯಾರ ಮುಡಿಗೋ?? ತನಗೆ ನಿಜವಾಗಿಯೂ ಏನೋ ಆಗಿದೆ.. ಜೈಲಿನಲ್ಲಿ ಸಮಸ್ಯೆಯ ಬಗ್ಗೆ ಯೋಚಿಸುವುದನ್ನು ಬಿಟ್ಟು... ಈ ರೀತಿ...
ತಟಕ್ಕನೆ ಒಂದು ವಿಚಾರ ಹೊಳೆಯಿತು. ಪ್ರತಾಪ್ ಗೆ ಏನಾದರೂ ಸರೋವರಳ ಮೇಲೆ ಕಣ್ಣು ಬಿತ್ತಾ?? ಆ ಯೋಚನೆಯೇ ಕಹಿ ಎನ್ನಿಸಿತು ಶಾಸ್ತ್ರಿಗೆ. ಯಾಕಾಗಬಾರದು?? ತಾನೊಬ್ಬ ಜೈಲು ಸೇರಿ ಬಿಟ್ಟರೆ ಇನ್ನಾರು ಗತಿ?? ಸುಲಭವಾಗಿ ಬಲೆ ಬೀಸಬಹುದಲ್ಲ. ಶಾಸ್ತ್ರಿಯ ಕಣ್ಣುಗಳು ಕೆಂಪಾದವು. ಮುಷ್ಠಿ ಬಿಗಿಯಿತು. ನಾನೆಂದುಕೊಂಡಿದ್ದು ನಿಜವೇ ಆದರೆ ಶಾಸ್ತ್ರಿ ಏನೆಂದು ನಿನಗೆ ತೋರಿಸುತ್ತೇನೆ ಪ್ರತಾಪ್ ಎಂದುಕೊಂಡ. ಒಂದು ಸಣ್ಣ ಗ್ಯಾಪ್ ಸಿಕ್ಕರೆ ಸಾಕು ಎಂದುಕೊಂಡು ಈಗ ಸರೋವರಾ ಎಲ್ಲಿರಬಹುದು? ವಿಷಯ ತಿಳಿದಿದ್ದರೆ ಇಲ್ಲಿಗೂ ಬರುತ್ತಿದ್ದಳೇನೋ??
ಕಳ್ಳತನ, ಸುಳ್ಳು, ಅಪರಾಧಗಳು ಅವಳಿಗೆ ಹಿಡಿಸುವುದಿಲ್ಲ. ನನ್ನ ಮುಖವನ್ನು ಆಕೆ ಇನ್ನೆಂದು ನೋಡಲಾರೆನೇನೋ ಎನ್ನಿಸಿತು ಆತನಿಗೆ.
ಅಷ್ಟರಲ್ಲಿ ಜಾನಕಿರಾಮ್ ಕಂಚಿನ ಕಂಠ ಮೊಳಗಿತು. "Your honour.. ಇಲ್ಲಿ ನಿಂತಿರುವ ಆರೋಪಿ ಸಾಮಾನ್ಯ ಆಸಾಮಿ ಅಲ್ಲ. ಭಯಂಕರ ಬುದ್ಧಿವಂತ. ಎಂತಹವರಿಗೆ ಬೇಕಾದರೂ ಚಳ್ಳೆ ಹಣ್ಣು ತಿನ್ನಿಸುವ ಮಹಾ ಚತುರ. ಅಂತಹ ಬುದ್ಧಿಯನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸುವುದು ಬಿಟ್ಟು ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯೋಚಿಸುತ್ತಿದ್ದಾನೆ. ಕೊಲೆಗೆ ಬೇಕಾದ ಸಾಕ್ಷ್ಯಾಧಾರಗಳು, ಸಾಕ್ಷಿದಾರರು ಎಲ್ಲವೂ ಇವೆ. ಪೊಲೀಸರ ಪ್ರಕಾರ ಈತ ಇದೊಂದೇ ಕೊಲೆಯನ್ನು ಮಾಡಿಲ್ಲ. ಇನ್ನು ಅನೇಕ ಕೊಲೆಗಳನ್ನು ಮಾಡಿದ್ದಾನೆ. ಅವುಗಳ ಬಗ್ಗೆ ವಿಷಯ ಮಾಹಿತಿ ಪಡೆಯಲು ಹದಿನೈದು ದಿನಗಳವರೆಗೆ ಈತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡುತ್ತೇನೆ.
ಅಷ್ಟೇ ಅಲ್ಲದೆ ಈತನ ಪರವಾಗಿ ವಾದಿಸಲು ಇತರರು ಬರುತ್ತಿಲ್ಲ ಎಂದರೆ ಎಲ್ಲರೂ ಸಾಕ್ಷಿ ಎಷ್ಟು ಬಲವಾಗಿದೆ ಎಂದು ನೋಡಿದ್ದಾರೆ. ಹಾಗಾಗಿ ಇಂಥ ಸಮಾಜಕ್ಕೆ ಧಕ್ಕೆ ತರುವ ಮನುಷ್ಯರು ನಮ್ಮ ಮಧ್ಯೆ ಇರುವುದು ಸರಿ ಅಲ್ಲ. ಹಾಗಾಗಿ IPC ಸೆಕ್ಷನ್ 307 ಪ್ರಕಾರ ಆರೋಪಿಯನ್ನು ಅಪರಾಧಿ ಎಂದು ಘೋಷಿಸಿ ಉಳಿದ ಮಾಹಿತಿಗಳು ಬಂದ ಮೇಲೆ ಶಿಕ್ಷೆ ಘೋಷಿಸಬೇಕು ಎಂಬುದೇ ನನ್ನ ವಾದ. ಇವತ್ತು ಪೊಲೀಸರು ಈತನನ್ನು ಹದಿನೈದು ದಿನಗಳವರೆಗೆ ತಮ್ಮ ವಶಕ್ಕೆ ನೀಡಲು ಕೇಳುತ್ತಿರುವುದರಿಂದ ನಾನು ಯಾವುದೇ ಸಾಕ್ಷ್ಯವನ್ನು ತಂದಿಲ್ಲ.
ಸಮಾಜದಲ್ಲಿ ಆತಂಕ ಸೃಷ್ಟಿಸುವ ಜನರ ಮೇಲೆ ಕಿಂಚಿತ್ತೂ ಕರುಣೆ ತೋರದೆ ಮನವಿಯನ್ನು ಸ್ವೀಕರಿಸಬೇಕು.. " ಎಂದು ತಲೆಬಾಗಿದ ಜಾನಕಿರಾಮ್ ಪ್ರಸಾದ್.
ಜಡ್ಜ್ ಬಳಿ ಮತ್ತೇನು ಇರಲಿಲ್ಲ ಕೇಳಲು.
"ಮಿ. ಶಾಸ್ತ್ರಿ, ನಿನ್ನ ಪರವಾಗಿ ಯಾರು ವಾದ ಮಂಡಿಸಲು ಬಾರದ ಕಾರಣ ಹಾಗೂ ಪೊಲೀಸರ ಕಡೆಯಿಂದ ಅವರ ವಾದ ಸರಿ ಇರುವುದರಿಂದ ಇನ್ನು ಹದಿನೈದು ದಿನಗಳ ಕಾಲ ನಿನ್ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುತ್ತೇನೆ. ನೀನು ಹದಿನೈದು ದಿನಗಳೊಳಗಾಗಿ ಲಾಯರ್ ನೇಮಿಸಿಕೋ. ಆಗದಿದ್ದರೆ, ನಾನು ಅಂದರೆ ಸರ್ಕಾರ ನಿನಗೊಂದು ಲಾಯರ್ ನೀಡುತ್ತದೆ. ಇನ್ನು ನೀನು ಏನಾದರೂ ಹೇಳುವುದಿದೆಯಾ??" ಮಾತು ಮುಗಿಸಿದ ಜಡ್ಜ್.
ಶಾಸ್ತ್ರಿ ಪ್ರತಾಪ್ ಕಡೆ ನೋಡಿದ. ಪ್ರತಾಪ್ ಶಾಸ್ತ್ರಿಯನ್ನು ನೋಡದೆ ಮತ್ತೆಲ್ಲೋ ಮುಖ ತಿರುಗಿಸಿಕೊಂಡ. ಅಂದರೆ ನಾನು ಕೊಲೆಗಾರ ಅಲ್ಲ ಎಂದು ಇವನಿಗೆ ಗೊತ್ತಾ?? ಅದೆಲ್ಲ ಆಮೇಲೆ. ಈಗ ಜಡ್ಜ್ ಗೆ ಉತ್ತರಿಸಬೇಕು. ಒಪ್ಪಿಕೊಳ್ಳದೆ ಬೇರೆ ದಾರಿಯಿಲ್ಲ. ಮತ್ತೆ ನಾಳೆ ಗಾಳಿಗುಡ್ಡನನ್ನು ಕರೆದು ಲಾಯರ್ ನೇಮಿಸಿಕೊಳ್ಳಬೇಕು. ಅದೇ ಸರಿ ಎಂದು ತಲೆಯಾಡಿಸಬೇಕು. ಅಷ್ಟರಲ್ಲಿ..
ಬಾಗಿಲ ಕಡೆಯಿಂದ ಮಧುರವಾದ ಧ್ವನಿಯೊಂದು ಕೇಳಿ ಬಂತು. "ಯುವರ್ ಆನರ್, ಆರೋಪಿಯ ಪರವಾಗಿ ನಾನು ಪಾಠಿಸವಾಲು ಮಾಡುತ್ತೇನೆ."
ಒಂದು ಕ್ಷಣ ಇಡೀ ಕೋರ್ಟಿನಲ್ಲಿದ್ದವರೆಲ್ಲ ಬಾಗಿಲ ಕಡೆ ತಿರುಗಿ ನೋಡಿದರು. ಓಡೋಡಿ ಬಂದವಳಂತೆ ಏದುಸಿರು ಬಿಡುತ್ತಿದ್ದಳು. ಈಗ ಶಾಕ್ ಆಗುವ ಸರದಿ ಶಾಸ್ತ್ರಿಯದು. ಅಷ್ಟೇ ಅಲ್ಲ ಪ್ರತಾಪ್ ಕೂಡ ಶಾಕ್ ಗೆ ಒಮ್ಮೆ ಎದ್ದು ನಿಂತ. ಬಂದವಳು ಬೇರಾರು ಅಲ್ಲ..
ಸರೋವರಾ...!!
ಲಾಯರ್ ಡ್ರೆಸ್ ಅವಳಿಗೆ ತುಂಬಾ ಸರಿಯಾಗಿ ಹೊಂದಿತ್ತು. ಸುಂದರವಾಗಿ ಕಾಣುತ್ತಿದಳು. ಮನಸ್ಸಿಗೆ ಸ್ವಲ್ಪ ಬೇಸರವಾದರೂ ಕಣ್ಣೀರು ಹಾಕುವ ಸರೋವರಳಾಗಲಿ, ಹಿಂದಿನ ದಿನ ಶಾಸ್ತ್ರಿಯನ್ನು ಬಂಧಿಸಿದ್ದೇನೆ ಎಂದು ಪ್ರತಾಪ್ ಹೇಳಿದಾಗ ಸುಮ್ಮನೆ ಕುಳಿತುಬಿಟ್ಟ ಸರೋವರಾಳಂತಾಗಲಿ ಕಾಣಲಿಲ್ಲ ಆಕೆ ಈಗ. ಶಾಸ್ತ್ರಿಗೆ ಆಶ್ಚರ್ಯವಾಗಿದ್ದು ಅದಕ್ಕೆ. ಅದೆಷ್ಟು ವರ್ಷಗಳಿಂದ ಆಕೆಯ ಜೊತೆಯಲ್ಲಿದ್ದರೂ ಅವಳ ಇನ್ನೊಂದು ಮುಖದ, ಮನಸ್ಸಿನ ಅರಿವಾಗಲಿಲ್ಲವಲ್ಲ ಎಂದುಕೊಂಡ. ತನ್ನ ಬಗ್ಗೆ ಕಂಪ್ಲೇಂಟ್ ಕೊಟ್ಟವಳೂ ಇವಳೇ.. ಈಗ ತನ್ನ ಪರವಾಗಿ ವಾದಿಸಲು ಬಂದವಳು ಇವಳೇ..
ಅಂದರೆ ತಾನು ನಿರಪರಾಧಿ ಎಂದು ಅವಳಿಗೆ ಅನ್ನಿಸಿರಬಹುದಾ?? ಮನಸ್ಸಿಗೆ ಹಾಯ್ ಎನ್ನಿಸಿತು. ಜಗತ್ತೇ ವಿರೋಧಿಸಿ ನಿಂತರು ಪ್ರೇಯಸಿ ಆದವಳು ನಾನು ನಿನ್ನನ್ನು ನಂಬುತ್ತೇನೆ ಹುಡುಗ ಎಂದು ಜೊತೆ ನಿಂತ ಕ್ಷಣ.
ಅರೆ.. ಇವಳು ಯಾವಾಗ ಲಾ ಓಡಿದಳು? ಕೊನೆಯಲ್ಲೊಮ್ಮೆ ಆ ಪ್ರಶ್ನೆ ಉದಯಿಸಿತು ಅವನ ಮನಸ್ಸಿನಲ್ಲಿ. Biology Student ಎಂಬುದು ಗೊತ್ತಿತ್ತು. ತನ್ನ ಜೊತೆ ಓದಿದವಳು. ಆದರೆ Law?? ತನಗೆ ಹೇಳಿಲ್ಲ ಕೂಡ. ಕೇಸು ಗೆಲ್ಲುವುದು ಬಿಡುವುದು ಕೊನೆಗೆ. ಆದರೆ ನಾನು ನಿನ್ನೊಂದಿಗಿದ್ದೇನೆ ಎಂದು ಮೆಸೇಜ್ ಕೊಟ್ಟಳಲ್ಲ, ಅಷ್ಟು ಸಾಕು. ಶಾಸ್ತ್ರಿಯ ಮನಸ್ಸಿನ ದುಗುಡವೆಲ್ಲ ಒಮ್ಮೆಲೇ ಯಾರೋ ಅಳಿಸಿದಂತೆ ದೂರವಾಯಿತು. ಈಗ ಆತನಲ್ಲಿನ ಚತುರ ಎದ್ದು ನಿಂತ. ಇದೇನು ಸಮಸ್ಯೆ ನೋಡಿಯೇ ಬಿಡೋಣ ಎಂದೆನ್ನಿಸಿತು ಶಾಸ್ತ್ರಿಗೆ. ಜಡ್ಜ್ ಎದುರು ಬಂದು ನಿಂತು ನಾನು ಈ ಕೇಸಿನ ಪಾಠಿಸವಾಲು ಮಾಡುತ್ತೇನೆ ಎಂದು ಒಂದು ಅಫಿಡವಿಟ್ ನೀಡಿ ಹಿಂದೆ ಬಂದು ನಿಂತಳು.
ಜಾನಕಿರಾಮ್ ಇವಳ ಕಡೆಯೇ ನೋಡುತ್ತಿದ್ದ. ಇನ್ನು ಪ್ರಾಯದ ಹುಡುಗಿ, ಅದೇನು ಓದಿದ್ದಾಳೋ.. ಬಿಟ್ಟಿದ್ದಾಳೋ ಕಾಲೇಜಿನಲ್ಲಿ. ತನ್ನ ವಿರುದ್ಧ ಇವಳೇನು ವಾದ ಮಾಡುತ್ತಾಳೆ? ಇದೇನೋ ಆಟದಂತೆ ಅನ್ನಿಸಿತು ರಾಮ್ ಪ್ರಸಾದ್ಗೆ. ಸ್ವಲ್ಪ ಮಜಾ ತೆಗೆದುಕೊಳ್ಳೋಣ.. ಮುಂದೇನು ನಡೆಯುತ್ತದೆ ಎಂದು ನೋಡೋಣ ಎಂದು ಸುಮ್ಮನೆ ಕುಳಿತ.
ಜಡ್ಜ್ ಒಮ್ಮೆ ಅವಳ ಕಾಗದ ಪತ್ರ ನೋಡಿ "ಮಿಸ್ ಸರೋವರಾ, ಎಲ್ಲವೂ ಸರಿ.. ಆದರೆ ಹೀಗೆ ನೀವು ಆರೋಪಿಯ ಕಡೆಯಿಂದ ವಾದ ಮಾಡುವವರು ಸಮಯಕ್ಕೆ ಸರಿಯಾಗಿ ಬರಬೇಕಲ್ಲವೇ?? ಕೋರ್ಟಿನ ಸಮಯ ಬಹಳ ಅಮೂಲ್ಯವಾದದ್ದು. ಅದಕ್ಕೆ ನಾವೆಲ್ಲ ಗೌರವ ಕೊಡಬೇಕು.." ಎಂದರು ಜಡ್ಜ್.
ಒಮ್ಮೆ ತನ್ನ ನಡು ಬಗ್ಗಿಸಿ "ಯುವರ್ ಆನರ್, ನಾನು ಕೋರ್ಟಿನ ಹಾಗೂ ತಮ್ಮ ಇಬ್ಬರ ಸಮಯವನ್ನೂ ಗೌರವಿಸುತ್ತೇನೆ. ಅಷ್ಟೇ ಅಲ್ಲದೆ ವಾದ ಮಂಡಿಸುತ್ತಿರುವ ಜಾನಕಿರಾಮ್ ಅವರ ಸಮಯದ ಬೆಲೆ ಎಷ್ಟು ಎಂದು ನನಗೆ ಗೊತ್ತು. ಆದರೆ ನನಗೆ ಈ ಕೇಸಿನ ಬಗ್ಗೆ ತಿಳಿದಿದ್ದು ನಿನ್ನೆ ರಾತ್ರಿಯಷ್ಟೆ. ನನ್ನ ಬಳಿ ಒಂದು ಕಪ್ಪು ಕೋಟ್ ಕೂಡ ಇರಲಿಲ್ಲ. ಈಗ ಅಂಗಡಿ ಬಾಗಿಲು ತೆರೆಯುತ್ತಲೇ ಕೋಟ್ ತೆಗೆದುಕೊಂಡು ಇತ್ತ ಕಡೆ ಬಂದೆ. ಕೋರ್ಟಿನ ಇತರ ನಿಯಮಗಳನ್ನೂ ನಾವು ಪಾಲಿಸಬೇಕಲ್ಲವೇ??"
ಒಮ್ಮೆಲೇ ಕೋರ್ಟಿನಲ್ಲಿ ಗುಸುಗುಸು ಪ್ರಾರಂಭವಾಯಿತು.
"Order!! Order!!" ಜಡ್ಜ್ ತಮ್ಮ ಮುಂದಿದ್ದ ಮರದ ಸುತ್ತಿಗೆಯಿಂದ ಎರಡು ಬಾರಿ ತಟ್ಟಿದರು.
ಎಲ್ಲರೂ ಸುಮ್ಮನಾದರು.
"ಅಂದರೆ ನೀನು ಹೇಳುತ್ತಿರುವುದು ಏನು?? ಈ ಮೊದಲು ಪ್ರಾಕ್ಟೀಸ್ ಮಾಡಿಲ್ಲವೇ?" ಜಡ್ಜ್ ಕುತೂಹಲದಿಂದ ಕೇಳಿದರು.
ತಲೆ ಅಡ್ಡಡ್ಡ ಆಡಿಸಿದಳು ಸರೋವರಾ. "ಇಲ್ಲ ಯುವರ್ ಆನರ್, ಕಾನೂನು ನನ್ನ ಇಷ್ಟದ ವಿಷಯ. ಅದನ್ನು ಸುಮ್ಮನೆ ಓದಿರುವೆ. ಹೊರತಾಗಿ ನನಗೆ ಯಾವುದೇ ಪ್ರಾಕ್ಟೀಸ್ ಆಗಲೀ, ಈ ಮೊದಲು ಕೋರ್ಟಿನಲ್ಲಿ ವಾದ ಮಾಡಿದ ಅನುಭವವಾಗಲಿ ಇಲ್ಲ. ಇದಕ್ಕೆ ಜಾನಕಿರಾಮ್ ಪ್ರಸಾದರ ಅಭ್ಯಂತರವೇನೂ ಇಲ್ಲ ಎಂದುಕೊಳ್ಳುತ್ತೇನೆ.." ಎಂದು ಒತ್ತಿ ಹೇಳಿದಳು.
ಇಲ್ಲದಿದ್ದರೆ ಒಮ್ಮೆ ಆತ ಎದ್ದು ನಿಂತು ಕಾನೂನಿನಲ್ಲಿ ಹಾಗಿದೆ, ಹೀಗಿದೆ, ಅವರು ವಾದಿಸಬಾರದು.. ಇವರು ವಾದಿಸಬಾರದು.. ನಿನ್ನ ಬಳಿ ಡಿಗ್ರಿ ಏನಿದೆ? ಎಂದು ಬಿಟ್ಟರೆ ಮುಗಿದು ಹೋಯಿತು. ಆಕೆ ಮುಂದೆ ವಾದಿಸುವಂತಿಲ್ಲ. ಹಾಗಾಗಿಯೇ ಅವಳು ಮೊದಲು ಜಾನಕಿರಾಮ್ ರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು.
ತನ್ನ ಬಗೆಗಿರುವ ಗೌರವವನ್ನು ನೋಡಿ ಆತನಿಗೆ ಮನಸ್ಸಿನಲ್ಲೇನೋ ಖುಷಿ ಆಯಿತು. ಆದರೆ ಅದನ್ನು ತೋರಗೊಡದೆ " ಸರಿ, ಸರಿ, ಅದೇನು ಬೇಗ ಶುರು ಮಾಡಿ.." ಎಂದ.
ಪ್ರತಾಪನಿಗೆ ಇದೊಂದು ಅರ್ಥವಾಗದೆ ಏನು ನಡೆಯುತ್ತಿದೆ ಇಲ್ಲಿ ಎಂದುಕೊಂಡ. ನಿನ್ನೆ ಶಾಸ್ತ್ರಿ ಜೈಲಿನಲ್ಲಿದ್ದಾನೆ ಎಂದಾಗ ದಿಗ್ಬ್ರಮೆಯಲ್ಲಿ ಕಳೆದುಹೋದ ಸರೋವರಾ ಇವಳೇನಾ?? ನಾನು ಸರೋವರಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಏನೇ ಹೇಳಿದರೂ ಶಾಸ್ತ್ರಿ ಮೆಚ್ಚಿದ ಹುಡುಗಿ ಇವಳು. ಸ್ವಲ್ಪ ಹುಷಾರಾಗಿ ಇರುವಂತೆ ಹೇಳಬೇಕು ಪ್ರಸಾದರಿಗೆ ಎಂದೆನ್ನಿಸಿತು.
ಜಾನಕಿರಾಮ್, ಪ್ರತಾಪ್, ತಲೆ ನೆರೆತ ಜಡ್ಜ್ ಯಾರೂ ಗಮನಿಸದ ಒಂದಂಶವನ್ನು ಗಮನಿಸಿದ್ದ ಶಾಸ್ತ್ರಿ.
ಸರೋವರಾ ಅವನಂದುಕೊಂಡಷ್ಟು ಅಳುಮುಂಜಿಯಾಗಲಿ, ಕೈಲಾಗದವಳಾಗಲಿ ಅಲ್ಲ. ಸ್ಮಾರ್ಟ್ ಗರ್ಲ್. ಆಕೆ ಸುಮ್ಮನೆ ಹಗ್ಗ ಕಟ್ಟುತ್ತಿಲ್ಲ. ಜೇಡರ ಬಲೆ ಹೆಣೆಯುವಂತೆ ನೆಯ್ಯುತ್ತಿದ್ದಾಳೆ. ಮೊದಲಿರುವುದು ಒಂದೇ ಎಳೆ. ನಂತರ ನಿಧಾನವಾಗಿ ಒಂದೊಂದೇ ಎಳೆ ಹೆಣೆದು ನಂತರ ಸಿದ್ಧವಾಗುವುದಿದೆಯಲ್ಲ ಅದು ಬಲೆ..!! ಅದನ್ನು ಶಾಸ್ತ್ರಿ ಗಮನಿಸಿದ್ದ. ಅಂತಹ ಅದೆಷ್ಟೋ ಬಲೆಗಳನ್ನು ನೇಯ್ದ ಚಾಲಾಕಿತನ ಶಾಸ್ತ್ರಿಗಿದೆ.
ಮೊದಲು ಏನೋ ಭಾವೋದ್ವೇಗದಲ್ಲಿ ಬಂದಿದ್ದಾಳೆ ಎಂದುಕೊಂಡಿದ್ದ. ಆದರೀಗ ಅವಳು ಮನಾತನಾಡಿದ್ದು ಕೇಳಿದ ನಂತರ "ಭೇಷ್!! ಸರೋವರಾ.. ಎಂದುಕೊಂಡ ಮನಸ್ಸಿನಲ್ಲಿಯೇ.
ಒಮ್ಮೆ ಸರೋವರಳ ಬಳಿ ಅರ್ಧ ಘಂಟೆ ಮಾತನಾಡಲು ಸಿಕ್ಕರೆ ಸಾಕು. ಅವಳು ನೇಯುವ ಬಲೆಗೆ ತನ್ನ ಸಹಾಯವೇನಿದ್ದರೂ ಮಾಡಬಹುದು ಎಂದುಕೊಂಡ.
ಮತ್ತೆ ಪ್ರಾರಂಭಿಸಿದಳು ಸರೋವರಾ. "ಯುವರ್ ಆನರ್, ಆರೋಪಿಯ ಸ್ಥಾನದಲ್ಲಿರುವ ಶಾಸ್ತ್ರಿ ಎನ್ನುವ ಈತನ ಮೇಲೆ ಕೊಲೆಯ ಆರೋಪವನ್ನು ಹೊರಿಸಲಾಗಿದೆ ಎಂದು ನಿನ್ನೆ ರಾತ್ರಿಯಷ್ಟೇ ತಿಳಿಯಿತು.
ಸಮಯ ಆಗಿ ಹೋಗಿದ್ದರಿಂದ ನನ್ನ ಕಕ್ಷಿದಾರನ ಬಳಿ ಮಾತನಾಡಲಾಗಲೀ, ಮಾಹಿತಿ ಪಡೆಯಲಾಗಲೀ ನನ್ನಿಂದ ಸಾಧ್ಯವಾಗಲಿಲ್ಲ. ಗುರುಗಳ ಸ್ಥಾನದಲ್ಲಿರುವ ಜಾನಕಿರಾಮ್ ಪ್ರಸಾದ್ ರವರು ಕೇಸಿನ ಒಂದು ಎಳೆಯನ್ನು ಹಿಡಿದು ಅದರ ತಲೆ ಮುಟ್ಟಿಸುತ್ತಾರಾಗಲಿ ನನ್ನಂತವನ ಬಳಿ ಅದು ಸಾಧ್ಯವಿಲ್ಲ. ಕಾನೂನು ನನ್ನ ಇಷ್ಟದ ವಿಷಯ. ಜಾನಕಿರಾಮ್ ರ ಅದೆಷ್ಟೋ ಕೇಸ್ ಗಳ ವಾದವನ್ನು ನಾನು ಓದುತ್ತ ಓದುತ್ತ ಅವರ Virtual ಶಿಷ್ಯೆಯೇ ಆಗಿಹೋಗಿದ್ದೇನೆ. ಅದು ಹಾಗಿರಲಿ, ನಾನು ಹೇಳುತ್ತಿರುವುದು ಏನೆಂದರೆ ಒಮ್ಮೆಯಾದರೂ ನನ್ನ ಕಕ್ಷಿದಾರನ ಜೊತೆ ಮಾತನಾಡದೆ ಪ್ರಸಾದ್ ರಂತಹ Great ಲಾಯರ್ ಜೊತೆ ವಾದ ಮಾಡುವುದು ಕಷ್ಟ ಸಾಧ್ಯ.ಈ ವಿಷಯವನ್ನು ಪರಿಗಣಿಸಿ ನ್ಯಾಯಾಲಯವು ನನಗೆ ಶಾಸ್ತ್ರಿಯ ಜೊತೆ ಮಾತನಾಡಲು ಒಂದರ್ಧ ಘಂಟೆ ಸಮಯ ಕೊಡಬೇಕು, ಇದಕ್ಕೆ ಗುರುಗಳ ಸ್ಥಾನದಲ್ಲಿರುವ ಪ್ರಸಾದ್ ಒಪ್ಪುತ್ತಾರೆ ಎಂದು ನಾನಂದುಕೊಂಡಿದ್ದೇನೆ. ಈ ಕೇಸಿನ ಮೇಲಿನ ಹೆಚ್ಚಿನ ಆಸ್ಥೆಯಾಗಲೀ, ಆರೋಪಿಯ ಮೇಲಿನ ಯಾವುದೇ ಪ್ರೀತಿಯಾಗಲೀ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿಲ್ಲ. ಹೊರತಾಗಿ ಪ್ರಸಾದ್ ರಂತವರ ಜೊತೆ ವಾದ ಮಾಡುವುದೇ ಒಂದು ಹೆಮ್ಮೆ. ಅದಕ್ಕಾಗಿ ನಾನು ಇಲ್ಲಿಗೆ ಬಂದಿರುವುದು. ಅದನ್ನು ಇಲ್ಲಿಗೆ ಮೊಟಕುಗೊಳಿಸಲಾಗುವುದಿಲ್ಲ ಎಂದು ನನಗೆ ನಂಬಿಕೆಯಿದೆ." ಪ್ರಸಾದ್ ರ ಮುಖವನ್ನು ಆಸ್ಥೆಯಿಂದ ನೋಡಿದಳು ಸರೋವರಾ.
ಎಷ್ಟು ಏರಿಸಲೋ ಸಾಧ್ಯವೋ ಅಷ್ಟು.. ಕೇಸಿನ ಬದಲಾಗಿ ಪ್ರಸಾದರನ್ನು ಹೊಗಳುವ ಕೆಲಸವನ್ನೇ ಮಾಡಿದ್ದ್ದಳು ಅವಳು. ಸ್ವಲ್ಪ ಕಿರಿಕಿರಿ ಎನ್ನಿಸಿದರೂ ಆಕೆ ನೇಯ್ದ ಬಲೆಯಿಂದ ಹೊರ ಬರದಾದರೂ ಪ್ರಸಾದ್. ಅಷ್ಟು ಸುಂದರ ಹೆಣ್ಣೊಬ್ಬಳು ಹೀಗೆ ಇಷ್ಟು ಜನರ ಮುಂದೆ ತನ್ನನ್ನು ಹೊಗಳಿ ಗುರುಗಳ ಸ್ಥಾನವನ್ನು ನೀಡಿದ ಮೇಲೆ ಹೇಗೆ ತಾನೇ ತಳ್ಳಿಹಾಕಲು ಸಾಧ್ಯ??
ಜಡ್ಜ್ ಜಾನಕಿರಾಮ್ ರ ಮುಖ ನೋಡಿದರು. ಜಾನಕಿರಾಮ್ ಸರಿ ಎನ್ನುವಂತೆ ತಲೆಯಾಡಿಸಿದರು.
"ವಾದ ವಿವಾದವನ್ನು ಪರಿಶೀಲಿಸಿ ಎರಡು ಲಾಯರ್ ಗಳ ಸಮ್ಮತಿಯ ಮೇರೆಗೆ ಈ ಮೊಕದ್ದಮೆಯನ್ನು ಮಧ್ಯಾಹ್ನ ಮೂರು ಘಂಟೆಯವರೆಗೆ ಮುಂದೆ ಹಾಕಲಾಗಿದೆ. ಅದರಲ್ಲಿ ಅರ್ಧ ಘಂಟೆಯ ಸಮಯ ಮಾತ್ರ ಆರೋಪಿಯು ತನ್ನ ಲಾಯರ್ ಬಳಿ ಮಾತನಾಡಬಹುದು.
Now court is abandoned.."
ಜಡ್ಜ್ ಎದ್ದು ನಿಂತರು. ಉಳಿದವರು ಕೂಡ ಮೇಲೆದ್ದು ನಿಂತರು. ಈ ಜಡ್ಜ್ ಹೋಗುತ್ತಿದಂತೆಯೇ ಮುಂದಿನ ಕೇಸ್ ನಡೆಸುವ ಜಡ್ಜ್ ಒಳ ಬಂದರು. ಅದೇ ಸಮಯದಲ್ಲಿ ಸರೋವರಾ ಜಾನಕಿರಾಮ್ ರ ಬಳಿ ನಡೆದು ತುಂಬಿದ ಕೋರ್ಟ್ ನ ಎದುರು ಅವರ ಕಾಲು ಮುಟ್ಟಿ ನಮಸ್ಕರಿಸಿ ಗುರುಗಳೇ ಆಶೀರ್ವದಿಸಿ ಎಂದಳು.
ಎಲ್ಲ ತಮ್ಮ ಅಭಿಮಾನ ಎಂದು ಆಕೆಯ ಕೈ ಹಿಡಿದು ಮೇಲೆತ್ತಿದರು ಪ್ರಸಾದ್.
ಕಟಕಟೆಯಿಂದ ಕೆಳಗಿಳಿಯುತ್ತಿದ್ದ ಶಾಸ್ತ್ರಿ ಓರೆಗಣ್ಣಿನಿಂದ ಎಲ್ಲವನ್ನು ನೋಡುತ್ತಿದ್ದ. ಆತನ ಮುಖದಲ್ಲಿ ನಗು ಮೂಡಿತು.
ಪ್ರತಾಪ್ ಕೂಡ ಹೊರನಡೆದು ಹೋಗುವಾಗ ಶಾಸ್ತ್ರಿಯ ಮುಖದ ಮೇಲಿನ ನಗು ನೋಡಿದ. ಆದರೆ ಆ ನಗುವನ್ನು ಪ್ರತಾಪ್ ಸಹಿಸದೆ ಹೋದ...
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 23

                                         ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 23

ಹತ್ತು ಘಂಟೆಯ ಸಮಯ. ಭಾಷಾ.. ಸನ್ನಿ ಚಡ್ಡಾನ ರೈಟ್ ಹ್ಯಾಂಡ್. ದೀನ್ ದಯಾಳು ಮಾನಸಿಕ ಆಸ್ಪತ್ರೆಯ ಎದುರು ನಾಲ್ಕು ಜನ ಸಹಚರರ ಜೊತೆ ನಿಂತಿದ್ದ. ಆಸ್ಪತ್ರೆಯ ಗೇಟಿನಲ್ಲಿ ಇಬ್ಬರು ಗಾರ್ಡ್ ಗಳು ನಿಂತಿದ್ದರು. ಕೊಲೆಯಾದಂದಿನಿಂದ ಆಸ್ಪತ್ರೆಯಲ್ಲೂ ಸೆಕ್ಯೂರಿಟಿ ಹೆಚ್ಚಾಗಿದೆ. ಇಬ್ಬರೂ ಗಾರ್ಡ್ ಗಳು ಯಾವುದೋ ಪೋಲಿ ಸಂಭಾಷಣೆಯಲ್ಲಿ ನಿರತವಾದಂತಿತ್ತು. ಒಬ್ಬನ ಕೈಯಲ್ಲಿ ಲೋಡೆಡ್ AK-47 ತೂಗಾಡುತ್ತಿತ್ತು. ಭಾಷಾ ಯೋಚಿಸುತ್ತಿದ್ದ. ಒಳಗೆ ಹೋಗಿ ವಿಚಾರಿಸುವುದಾ?? ಅಥವಾ ಡಾಕ್ಟರನ್ನು ಹೊರಗೆ ತಗಲು ಹಾಕಿಕೊಳ್ಳುವುದಾ?? ಆಸ್ಪತ್ರೆಯಲ್ಲಿ ಸ್ವಲ್ಪ ಗಲಾಟೆಯಾದರೂ ಕತ್ತು ಹಿಡಿದು ಹೊರಗೆ ಹಾಕಬಲ್ಲರು. ಈ ಸಮಯದಲ್ಲಿ ಪೊಲೀಸರಿಂದ ಆದಷ್ಟು ದೂರವಿರುವುದೇ ಒಳ್ಳೆಯದು ಎಂದುಕೊಂಡ. 
ಭಾಷಾ ಒಬ್ಬ ಹುಡುಗನನ್ನು ಕರೆದು ನೀನು ಒಬ್ಬನೇ ಒಳಹೋಗಿ ಡಾಕ್ಟರ್ ಬಗ್ಗೆ ವಿಚಾರಿಸು ಎಂದ. ಅವನು "ಅಣ್ಣಾ.." ಎಂದು ತಲೆ ಕೆರೆದುಕೊಂಡು ಅಲ್ಲಿಯೇ ನಿಂತುಕೊಂಡ. 
"ಯಾರನ್ನಾದರೂ ಹೊಡಿ ಅನ್ನು.. ಕೈ ಕಾಲು ತೆಗೆ ಅನ್ನು... ಮಾಡುತ್ತೇನೆ. ಈ ವಿಚಾರಿಸುವುದೆಲ್ಲ ನನಗೆ ಗೊತ್ತಾಗಲ್ಲ ಅಣ್ಣಾ..." ನಿಜವನ್ನೇ ಹೇಳಿದಂತಿತ್ತು ಆತ.
ಇವರನ್ನು ಕಳಿಸಿ ಒಂದಕ್ಕೆ ಇನ್ನೊಂದು ಮಾಡುವುದಕ್ಕಿಂತ ತಾನೇ ಹೋಗುವುದು ಒಳ್ಳೆಯದು ಎಂದು ಗೇಟಿನ ಕಡೆ ನಡೆದ ಭಾಷಾ. 
ತಮ್ಮ ಎದುರು ಪ್ರತ್ಯಕ್ಷವಾದ ಅಜಾನುಬಾಹು ವ್ಯಕ್ತಿಯನ್ನು ಕಾಲಿನಿಂದ ತಲೆಯವರೆಗೆ ನೋಡಿ ಏನು ಎನ್ನುವಂತೆ ಮುಖ ಮಾಡಿದರು ಗಾರ್ಡ್. 
"ಡಾಕ್ಟರ್ ನೋಡಬೇಕಾಗಿತ್ತು. ನನ್ನ ತಮ್ಮನಿಗೆ ಹುಚ್ಚು ಹೆಚ್ಚಾಗಿದೆ. ಇಲ್ಲಿ ಸೇರಿಸಬೇಕಾಗಿತ್ತು.." ಜಾಸ್ತಿಯೇ ತಲೆ ಓಡಿಸಿದ ಭಾಷಾ. 
"ದೊಡ್ಡ ಡಾಕ್ಟರ್ ಇಲ್ಲಾ. ರಜೆಯ ಮೇಲಿದ್ದಾರೆ. ರಿಸೆಪ್ಷನ್ ಗೆ ಹೋಗಿ ಅಲ್ಲಿ ವಿಚಾರಿಸು.." ಸೆಕ್ಯೂರಿಟಿ ಚೆಕ್ ಮಾಡಿ ಒಳ ಹೋಗುವಂತೆ ಸೂಚಿಸಿದ. ತನ್ನ ಜೊತೆಯಿರುವ ಸಲಕರಣೆಗಳನ್ನೆಲ್ಲ ಮುಂಜಾಗ್ರತಾ ಕ್ರಮವಾಗಿ ಜೀಪಿನಲ್ಲೇ ತೆಗೆದಿಟ್ಟು ಬಂದಿದ್ದ ಭಾಷಾ. ಒಬ್ಬಿಬ್ಬರನ್ನು ಕೊಲ್ಲಲು ಆಯುಧಗಳೇ ಬೇಕಿಲ್ಲ ಆತನಿಗೆ. ಕೈಯಲ್ಲೇ ಗುದ್ದಿ ಕೊಂದು ಬಿಡಬಲ್ಲ. ಅದೇ ಧೈರ್ಯದ ಮೇಲೆ ಒಳನಡೆದ ಭಾಷಾ. 
ಆಸ್ಪತ್ರೆಯ ವರಾಂಡದಲ್ಲಿ ಅಲ್ಲಲ್ಲಿ ರೋಗಿಗಳು, ಅವರ ಜೊತೆ ನರ್ಸ್ ಗಳು ಓಡಾಡಿಕೊಂಡಿದ್ದರು. ಪ್ರತಿಯೊಬ್ಬರದು ಒಂದೊಂದು ರೀತಿಯ ರಿವಾಜುಗಳು. ಅದರ ಬಗ್ಗೆ ಏನು ಗಮನ ಹರಿಸದೆ ರಿಸೆಪ್ಷನ್ ಗೆ ಬಂದು ನಿಂತು ದರ್ಪದಿಂದ "ಯಾರ್ರೀ, ಮ್ಯಾನೇಜರ್ ಇಲ್ಲಿ?? ಡ್ಯೂಟಿ ಮೇಲೆ ಯಾರು ಡಾಕ್ಟರ್ ಇರೋದು ಬನ್ರೀ ಇಲ್ಲಿ.."
ಯಾವುದೋ ಯೋಚನೆಯಲ್ಲಿ ಕುಳಿತಿದ್ದ ರಿಸೆಪ್ಷನ್ ಹುಡುಗಿ ಒಮ್ಮೆಲೇ ತಡಬಡಿಸಿ ಎದ್ದು ನಿಂತಳು. ಎದುರು ನಿಂತಿದ್ದ ಅಜಾನುಬಾಹುವನ್ನು ಕಂಡೇ ಅವಳ ಅರ್ಧ ಜಂಗಾಬಲ ಉಡುಗಿ ಹೋಯಿತು. 
"ಎಲ್ಲಿ ಡಾಕ್ಟರ್??" ಎದುರಿದ್ದ ಕಾಲಿಂಗ್ ಬೆಲ್ ಬಾರಿಸಿ ಮತ್ತೆ ಕೇಳಿದ. 
"ಸಾರ್, ದೊಡ್ಡ ಡಾಕ್ಟರ್ ರಜೆಯ ಮೇಲಿದ್ದಾರೆ. ಉಳಿದವರು ನರ್ಸ್ ಗಳು. ಇಲ್ಲಿ ಯಾವುದೇ ಎಮರ್ಜೆನ್ಸಿ ಕೇಸ್ ಗಳು ಬರದ ಕಾರಣ ಬೇರೆ ಡಾಕ್ಟರ್ ಇಲ್ಲ. ಅವರ Substitution ಒಬ್ಬರಿದ್ದಾರೆ. ಅವರಿನ್ನೂ ಬಂದಿಲ್ಲ. ನೀವು??" ಹೆದರುತ್ತಲೇ ಹೇಳಿದಳಾಕೆ.
"ಹೊಸದಾಗಿ ಬಂದ ಪೊಲೀಸ್. ಮೊನ್ನೆ ನಡೆಯಿತಲ್ಲ ಕೊಲೆ ಅದರ ಬಗ್ಗೆ ವಿಚಾರಿಸಬೇಕಿದೆ. ನಿಮ್ಮ ಬಳಿ ಏನೇನು ವಿವರಗಳಿವೆ??"
ತಲೆ ಅಡ್ಡಡ್ಡ ಆಡಿಸಿದಳವಳು. "ಸಾರ್, ಅದೆಲ್ಲ ದೊಡ್ಡ ಡಾಕ್ಟರ್ ಚೇಂಬರ್ ಲಾಕರ್ ನಲ್ಲಿದೆ. ಕೀ ಅವರೇ ಇಟ್ಟುಕೊಂಡಿದ್ದಾರೆ."
ಸಿಟ್ಟಿನಿಂದ ತಲೆ ಕೊಡವಿದ ಭಾಷಾ. "ಹಾಗೆಂದರೆ ಹೇಗ್ರಿ?? ವಿವರಗಳಿಲ್ಲ ಎಂದರೆ ನಾವು ಮುಂದೆ ಹೇಗೆ ಇನ್ವೆಸ್ಟಿಗೇಷನ್ ಮಾಡಬೇಕು?? ಹೋಗಲಿ ಯಾವಾಗ ಬರುತ್ತಾರೆ ಅವರು??" ಗಡುಸಾದ ಧ್ವನಿಯು ಮುಂದುವರೆದಿತ್ತು. 
"ಎರಡು ದಿನದಲ್ಲಿ ಬರುತ್ತಾರೆ. ಅವರಿಗೆ ಸ್ವಲ್ಪ ಆರೋಗ್ಯ ಸರಿ ಇಲ್ಲ. ಆ ಕಾರಣದಿಂದ ಬಂದಿಲ್ಲ." ಧ್ವನಿಯಲ್ಲಿ ನಮ್ರತೆ ತುಂಬಿಕೊಂಡು ನುಡಿದಳು. 
ಡಾಕ್ಟರ್ ಇಲ್ಲ ಎಂದ ಮೇಲೆ ತಾನು ಏನು ಮಾಡಿದರು ಬಗೆಹರಿಯದ ಸಮಸ್ಯೆ ಇದು. ಎರಡು ದಿನಗಳಲ್ಲಿ ನಡೆಯುವುದೇನು ಇಲ್ಲ. ಮತ್ತೆರಡು ದಿನ ಬಿಟ್ಟೆ ಬರೋಣ ಎಂದು ಹೊರನಡೆದ ಭಾಷಾ.
*.....................................................*.........................................................*
ಜುಹು ಬೀಚಿನಲ್ಲಿ ಜನರ ಸಂತೆಯೇ ನೆರೆದಿತ್ತು. ಕಡಲೆ, ಸೌತೆಕಾಯಿ, ಅನಾನಸ್ ಹಣ್ಣುಗಳ ಮಾರಾಟ ಭರದಿಂದ ಸಾಗಿತ್ತು. ಜನರ ಗಿಜಿಗಿಜಿ ಒಂದೆಡೆಯಾದರೆ ಸಮುದ್ರರಾಜ ಇನ್ನೊಂದು ಕಡೆಯಿಂದ ತನ್ನ ಉಧ್ಘೋಷ ಮುಂದುವರೆಸಿದ್ದ. ಒಂದರ ಹಿಂದೆ ಒಂದು ಅಲೆಗಳು ಬಂದು ಒಂದಷ್ಟು ಮರಳಿನ ಕಣಗಳನ್ನು ದಡದತ್ತ ದುಡಿ, ಇನ್ನೊಂದಷ್ಟನ್ನು ತನ್ನ ಜೊತೆ ಸೆಳೆದೊಯ್ಯುತ್ತಿತ್ತು. 
ಕ್ಷಾತ್ರ ಮಾತಿಲ್ಲದೆ ಸುಮ್ಮನೆ, ಮೊಳಕಾಲು ನೀರಿನಲ್ಲಿ ಉದ್ದಕ್ಕೆ ನಡೆಯುತ್ತ ಸಾಗಿದ್ದ. ಸ್ವಯಂವರಾ ಕೂಡ ಅವನ ಪಕ್ಕದಲ್ಲಿಯೇ ಸಮವಾಗಿ ನಡೆಯುತ್ತಿದ್ದಳು. ಏನು ಮಾತನಾಡಬೇಕು?? ಎಂಬ ಸ್ಪಷ್ಟ ಕಲ್ಪನೆ ಇಬ್ಬರ ಮನಸ್ಸಿನಲ್ಲೂ ಇರದ ಕಾರಣ ಮೌನದ ಮುಸುಕು ಹಾಗೆಯೇ ಮುಂದುವರೆದಿತ್ತು. 
ಸ್ವಯಂವರಾಳಂತೂ ಕ್ಷಾತ್ರನ ಬಗ್ಗೆ ಯೋಚಿಸುತ್ತಲೇ ಇರಲಿಲ್ಲ. ಆಕೆಯ ಮನದಲ್ಲಿ ಶಾಸ್ತ್ರಿ ಕೊಲೆ ಮಾಡಿದ್ದಾನೆ ಎಂಬ ಕಲ್ಪನೆಯೇ ಸುಳ್ಳು ಎಂಬ ಭಾವವೇ ಸುಳಿದಾಡುತ್ತಿತ್ತು. 
ಅದರ ಬಗ್ಗೆಯೇ ಯೋಚಿಸುತ್ತ ಮುಂದೆ ಸಾಗುತ್ತಿದ್ದಳು. ಕ್ಷಾತ್ರನು ಕೂಡ ಶಾಸ್ತ್ರಿಯ ಮಾತುಗಳನ್ನು ನಂಬಿದ್ದ. ಶಾಸ್ತ್ರಿಯ ಮಾತುಗಳಲ್ಲಿ ಸತ್ಯವಿದೆ ಎಂದು ಅನ್ನಿಸಿದರೂ ಪ್ರತಾಪನನ್ನು ಹೇಗೆ ನಂಬಿಸುವುದು? ಹಾಗಾಗಿಯೇ ಸುಮ್ಮನೆ ಎದ್ದು ಬಂದಿದ್ದ. ತನ್ನ ಸಮಸ್ಯೆಯಿಂದ ಹೊರಬರಲು ಶಾಸ್ತ್ರಿಗೆ ಗೊತ್ತು ಎಂದು ಕ್ಷಾತ್ರನ ಮನಸ್ಸು ಕೂಗಿ ಹೇಳುತ್ತಿತ್ತು. 
ಮುಸ್ಸಂಜೆಯ ಸೂರ್ಯ ಅದಾಗಲೇ ಆಕಾಶಕ್ಕೆ ಕೆಂಪಿನ ಓಕುಳಿ ಚೆಲ್ಲಿ ಅದರ ನಡುವೆ ನಾಟ್ಯವಾಡುತ್ತಿದ್ದ. ನಡೆಯುತ್ತ ನಡೆಯುತ್ತ ಅದೆಷ್ಟು ದೂರ ಬಂದರೋ ಜನರ ಗಲಾಟೆ ಕಡಿಮೆಯಾಗಿತ್ತು.
ದಡದುದ್ದಕ್ಕೂ ಗಾಳಿ ಮರಗಳು ಸಾಲಾಗಿ ನೆಡಲ್ಪಟ್ಟಿದ್ದವು. ಗಾಳಿಗೆ ಸದ್ದು ಮಾಡುತ್ತ ಕೊಳಲಿನ ನಾದದಂತಹ ಉನ್ಮಾದ ಹುಟ್ಟಿಸುವ ಸಿಳ್ಳು ಹಾಕುತ್ತ ತಲೆಹಾಕಿದ್ದವು ಗಾಳಿ ಮರಗಳು.
ನೀರನ್ನು ಬಿಟ್ಟು ತೀರದೆಡೆಗೆ ನಡೆದಳು ಸ್ವಯಂವರಾ. ನಡೆದು ನಡೆದು ಸುಸ್ತಾಗಿತ್ತವಳಿಗೆ. 
ಅವಳು ತೀರದ ಕಡೆ ಹೋಗಿದ್ದನ್ನು ನೋಡಿ ಕ್ಷಾತ್ರನೂ ಅವಳ ಹಿಂದೆಯೇ ನಡೆದ. 
"ಸ್ವಲ್ಪ ಹೊತ್ತು ಕುಳಿತು ವಾಪಸ್ ಹೊರಡೋಣ.. ಇನ್ನೇನು ಕತ್ತಲಾಗುತ್ತದೆ.." 
"ಕತ್ತಲಾದರೆ ಭಯವಾ?? ನೀನು ಪೊಲೀಸ್ ನೊಡನೆ ಇದ್ದಿಯಾ ಸ್ವಯಂವರಾ.." ನಕ್ಕ ಕ್ಷಾತ್ರ.
"ಮಾತು ಮಾತಿಗೆ ಪೊಲೀಸ್ ಎನ್ನುತ್ತೀಯಾ ಕ್ಷಾತ್ರ.. ಸ್ವಲ್ಪ ಹೊತ್ತು ನಿನ್ನ ಪೊಲೀಸ್ ಬಟ್ಟೆ, ಪೊಲೀಸ್ ಬುದ್ಧಿಯಿಂದ ಹೊರಗೆ ಬಂದು ಜಗತ್ತನ್ನು ನೋಡು. ಪೊಲೀಸರು ಕೂಡ ಸೀಮಿತವಾದ ಪರಿಧಿಯನ್ನು ಹೊಂದಿದ್ದಾರೆ ಕ್ಷಾತ್ರ. ನಾಲ್ಕು ಜನ ಬಂದು ನಮ್ಮಿಬ್ಬರನ್ನು ಮುತ್ತಿದರೆ ನೀನೇನು ಮಾಡುತ್ತೀಯಾ?? ಪೊಲೀಸ್ ಎಂದು ನಾಲ್ಕು ಜನರಿಗೂ ಗುಂಡು ಹಾರಿಸುತಿಯಾ? ಅಥವಾ ಹೊಡೆದಾಡಿ ಮೈ ಕೈ ನುಗ್ಗು ಮಾಡಿಕೊಳ್ಳುತ್ತೀಯಾ?? ಕೆಲವೊಂದು ಸಮಯ ಸಂದರ್ಭಗಳು ಪೊಲೀಸರನ್ನು ಕೂಡ ಘಾಸಿ ಮಾಡುತ್ತವೆ. ಗೊತ್ತು ಗುರಿ ಇರದ ಜಾಗದಲ್ಲಿ ನಾವು ಯಾರಾದರೇನು ಸರಿಯಾಗಿದ್ದರೆ ನಡೆಯುವ ಅವಘಡಗಳು ತಪ್ಪುತ್ತವೆ. ಅಲ್ಲವಾ!!?" ಮಾತನಾಡುತ್ತಲೇ ಹೋದಳು ಸ್ವಯಂವರಾ. ಅಯ್ಯೋ.. ತಾನೇನು ಜೋಕ್ ಗೆ ಹೇಳಿದರೆ ಇವಳೇಕೆ ಹೀಗೆ ಸಿಡಿಯುತ್ತಿದ್ದಾಳೆ ಎಂದು ಅರ್ಥವಾಗಲಿಲ್ಲ ಕ್ಷಾತ್ರನಿಗೆ. ತಾನು ಜಾಸ್ತಿಯೇ ಮಾತನಾಡಿದೆನೇನೋ ಎಂದು ಮತ್ತೆ ಸುಮ್ಮನೆ ಕುಳಿತಳು ಸ್ವಯಂವರಾ.
ಒಂದೆರಡು ನಿಮಿಷದ ನಂತರ ಕ್ಷಾತ್ರನೇ ಮಾತನಾಡಿದ. "ಸ್ವಯಂವರಾ ನೀನು ನನ್ನ ಮನೆಯಲ್ಲಿದ್ದಾಗ ನಾನು ನಿನ್ನ ಮನೆಗೆ ಹೋಗಿದ್ದೆ. ಕದ್ದು ಡೈರಿ ಓದುವುದು ಕೆಟ್ಟದ್ದು ಎಂದು ತಿಳಿದಿದ್ದರೂ ನಿನ್ನ ಡೈರಿ ಓದಿದೆ. ನಿನ್ನವರೆಂದು ನಿನಗೆ ಯಾರು ಇಲ್ಲ ಎಂದು ತಿಳಿಯಿತು."
"ಹಂ.." ಎನ್ನುತ್ತಾ ಒಂದು ನಿಡಿದಾದ ಉಸಿರು ಬಿಟ್ಟಳು ಕುಳಿತಲ್ಲಿಯೇ. 
ಮತ್ತೆ ಮೌನ. 
ಏನು ಮಾತನಾಡಬೇಕು?? ನಾನಿವಳನ್ನು ಹೀಗೆ ಇಲ್ಲಿಗೆ ಕರೆದುಕೊಂಡು ಬಂದಿದ್ದೆ ತಪ್ಪು ಎನ್ನಿಸಿತು ಕ್ಷಾತ್ರನಿಗೆ. 
ಸ್ವಯಂವರಾಳ ಮುಖ ನೋಡಿದ. ಮುಳುಗಲು ಸಿದ್ಧನಾದ ಕೆಂಪು ಸೂರ್ಯನನ್ನೇ ತದೇಕಚಿತ್ತಳಾಗಿ ನೋಡುತ್ತಾ ಕುಳಿತಿದ್ದಳು. ಮುಖ ಸ್ವಲ್ಪ ಕಂದಿದ್ದರೂ ಸೌಂದರ್ಯ ಕುಗ್ಗಿಲ್ಲ. ಕೆನ್ನೆಗೆ ತೆಳುವಾಗಿ ಹಚ್ಚಿದ ರೋಸ್, ಕಮಾನಿನಂತಹ ಅವಳ ಹುಬ್ಬುಗಳು, ಅದರ ಮಧ್ಯದಲ್ಲಿ ಪುಟ್ಟದಾದ ಬಿಂದಿ, ಅತ್ತ ಇತ್ತ ಸರಿಯದೆ ಅಚಲವಾಗಿ ಸೂರ್ಯನನ್ನೆ ನೋಡುತ್ತಿದ್ದ ಅವಳ ಕಪ್ಪು ಕಣ್ಣುಗಳು. ಶ್ವೇತ ವರ್ಣದ ಚೂಡಿದಾರಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದಳು. 
ಕೆಲವೊಬ್ಬ ಹುಡುಗಿಯರು ಮಾತ್ರ ಹೀಗೆ ಮನಸ್ಸಿಗೆ ಹತ್ತಿರವಾಗುವಷ್ಟು ಸುಂದರವಾಗಿರಲು ಕಾರಣವೇನು?? ಎಂದುಕೊಂಡ ಕ್ಷಾತ್ರ. ಅವನ ಯೋಚನೆ ಆತನಿಗೆ ನಗು ತರಿಸಿತು. ಎಲ್ಲ ಹುಡುಗಿಯರು ಇಷ್ಟು ಹತ್ತಿರ ಕುಳಿತು ನೋಡಲು ಬಿಡುವುದಿಲ್ಲವೇನೋ!! ಅದಕ್ಕೆ. 
ಸ್ವಯಂವರಾಳ ಹತ್ತಿರ ಸರಿದು, ಮರಳಿನಲ್ಲಿ ರಂಗೋಲಿಯಾಡುತ್ತಿದ್ದ ಅವಳ ಕೈ ಬೆರಳುಗಳನ್ನು ಹಿಡಿದುಕೊಂಡು ಆಟವಾಡತೊಡಗಿದ ಕ್ಷಾತ್ರ. 
ತನ್ನ ಯೋಚನೆಯಿಂದ ಹೊರಬಂದು ಕ್ಷಾತ್ರನ ಮುಖ ನೋಡಿದಳು ಸ್ವಯಂವರಾ. ಆತನ ಭಾವ ಅರ್ಥವಾಗದೆ ಏನು ಇರಲಿಲ್ಲ ಆಕೆಗೆ. ಆದರೆ ಆತನ ಭಾವನೆಗಳಿಗೆ ಸ್ಪಂದಿಸಲು ಆಕೆಯ ಮನಸ್ಸು ಸಹಕರಿಸುತ್ತಿಲ್ಲ. 
"ಸ್ವಯಂವರಾ, ದಿಢೀರ್ ಹೀಗೆ ಹೇಳುತ್ತಿದ್ದೇನೆ ಎಂದುಕೊಳ್ಳಬೇಡ. ನನಗೀಗ ಮೂವತ್ತು. ಪ್ರೀತಿ ಪ್ರೇಮದಲ್ಲಿ ಬಿದ್ದು, ಪ್ರೇಮ ಪತ್ರ ಬರೆದು, ಪ್ರೀತಿ ನಿವೇದನೆ ಮಾಡಿ, ಕನಸಿನಲ್ಲಿ ಕನವರಿಸುವ ವರ್ಷಗಳು ಕಳೆದು ಹೋಗಿವೆ. ಹಾಗಾಗಿ ನಾನೀಗ ನಿನ್ನಲ್ಲಿ ಕೇಳುತ್ತಿರುವುದು ಪ್ರೇಮ ನಿವೇದನೆಯಂತೂ ಅಲ್ಲ. ನೀ ನನ್ನ ಜೀವನ ಸಂಗಾತಿಯಾಗಿ ಬಂದರೆ ಬಹಳ ಖುಷಿ ಪಡುತ್ತೇನೆ. ನನ್ನ ಬೆನ್ನಿಗೂ ಯಾರು ಇಲ್ಲ, ನಿನ್ನ ಬೆನ್ನಿಗೂ ಯಾರು ಇಲ್ಲ. ಒಮ್ಮತಿ, ಸಮ್ಮತಿಗಳು ಬೇಕಾಗಿರುವುದು ನಮ್ಮಿಬ್ಬರ ನಡುವಿನಲ್ಲಿ ಮಾತ್ರ. ನನ್ನ ಮನಸ್ಸನ್ನು ಈಗಾಗಲೇ ನಿನಗೆ ಕೊಟ್ಟಿದ್ದೇನೆ. ಅದು ನಿನಗೂ ಗೊತ್ತು. ಮನಸ್ಸುಗಳನ್ನು ಓದಬಲ್ಲ ಚತುರೆ ನೀನು. ನಾನು ಹಾಗಲ್ಲ. ನಿನ್ನ ಮನಸ್ಸನ್ನು ಭಾವಗಳನ್ನು ಓದಲಾರೆ. ನಿನ್ನ ನಿರ್ಧಾರ ತಿಳಿಸಿದರೆ..." ಎಂದು ಆಕೆಯ ಮುಖ ನೋಡುತ್ತಾ ಕುಳಿತ. 
ಸ್ವಯಂವರಾಳಿಗೆ ಇದೇನು ಹೊಸ ವಿಷಯದಂತೆ ಅನ್ನಿಸಲಿಲ್ಲ. ಕ್ಷಾತ್ರನ ಭಾವಗಳನ್ನು ಅರಿತು ಅದೆಷ್ಟೋ ಸಮಯವಾಗಿತ್ತು. ಈಗ ಕ್ಷಾತ್ರನೇ ಬಾಯಿ ಬಿಟ್ಟು ಕೇಳುತ್ತಿದ್ದಾನೆ. ಕ್ಷಾತ್ರನಂಥವನು ಜೊತೆಯಾಗಿ ನಿಂತರೆ ಅವಳ ಜೀವನದಲ್ಲಿ ಯಾವುದಕ್ಕೂ ಕೊರತೆ ಬಾರದು ಎಂಬುದಂತೂ ನಿಜ. ಹಾಗಿದ್ದೂ ಕ್ಷಾತ್ರ ಮದುವೆಯ ಪ್ರಪೋಸಲ್ ಮುಂದಿಟ್ಟರೂ ಆಕೆಯ ಮನ ಹಿಗ್ಗುತ್ತಿಲ್ಲ. ಹಾಗೆಂದು ಬೇಸರವೂ ಇಲ್ಲ. "ಕೊನೆಯವರೆಗೂ ನೀ ನನ್ನ ಗೆಳೆಯನಾಗಿರು. ನಾನಿನ್ನ ಒಬ್ಬ ಸ್ನೇಹಿತನಾಗಿ ಇಷ್ಟ ಪಡುತ್ತೇನೆಯೇ ಹೊರತು ಇನಿಯನಾಗಿ ಅಲ್ಲ" ಎಂಬ ಟಿಪಿಕಲ್ ಸೆಂಟಿಮೆಂಟ್ ಡೈಲಾಗ್ ಹೇಳಬೇಕು ಎಂದು ಅವಳಿಗೆ ಅನ್ನಿಸಲಿಲ್ಲ. 
"ಕ್ಷಾತ್ರ, ನನಗೆ ಸ್ವಲ್ಪ ಸಮಯ ಕೊಡು. ಕೆಲವು ದಿನಗಳಿಂದ ನನ್ನ ಮನಸ್ಸೇಕೋ ಸರಿ ಇಲ್ಲ. ಅದು ನಿನಗೂ ತಿಳಿದಿದೆ. ಹಾಗಾಗಿ ದಿಢೀರ್ ನಿರ್ಧಾರ ತೆಗೆದುಕೊಳ್ಳಲು ಮನಸ್ಸಿಗೆ ಕಷ್ಟ.. " ಎಂದಳು. 
ಇನ್ನೇನು ಬಯ್ಯುತ್ತಾಳೋ ಎಂದುಕೊಂಡಿದ್ದ ಕ್ಷಾತ್ರನಿಗೆ ಅವಳ ಉತ್ತರ ಸಮಂಜಸವಾಗೇ ಕಂಡಿತು. ಅಂದರೆ ತಾನು ಬೇಡವೆಂದೇನೂ ಇಲ್ಲ ಈಕೆಗೆ. ಸ್ವಲ್ಪ ದಿನ ವೇಟ್ ಮಾಡಿದರಾಯಿತು. ಪೊಲೀಸರು ಯಾರಿಗೆ ಹೆದರುತ್ತಾರೋ, ಬಿಡುತ್ತಾರೋ ಪ್ರೀತಿಸಿಕೊಂಡ ಹುಡುಗಿಯರೆದುರು ಮಾತ್ರ ಎಲ್ಲರೂ ಒಂದೇ. ಮುಗುಳ್ನಗು ಮೂಡಿತು ಕ್ಷಾತ್ರನ ಮನದಲ್ಲಿ. ಆತನ ಯೋಚನೆ ಓದಿದವಳಂತೆ ತಾನೂ ಮುಗುಳ್ನಕ್ಕು ಕ್ಷಾತ್ರನ ಭುಜಕ್ಕೆ ಒರಗಿದಳು ಸ್ವಯಂವರಾ. 
ಕತ್ತಲು ಅವರಿಬ್ಬರನ್ನು ತನ್ನ ಮಾಯೆಯಲ್ಲಿ ಮರೆ ಮಾಡಿತು. ಸಮುದ್ರದ ಉದ್ಘೋಷ ಮುಂದುವರೆದೇ ಇತ್ತು.
*.....................................................*.........................................................*
ತಾಜ್ ಪ್ಯಾಲೇಸ್ ಒಳಗೆ ಬರುತ್ತಲೇ ಗರುಡ ತನಗಾಗಿ ರೆಡಿಯಾಗಿದ್ದ ರೂಮ್ ಗೆ ಚೆಕ್ ಇನ್ ಮಾಡಿದ. ಎಂಥದೇ ಇಂಟಲಿಜೆನ್ಸ್ ವಿಂಗ್ ನವರು ಅವನ ಹಿಂದೆ ಬಿದ್ದಿದ್ದರೂ ಇನ್ನೆರಡು ಘಂಟೆಯಾದರೂ ಬೇಕು ಅವನ ಸುತ್ತ ಬಲೆ ನೇಯಲು. ಅದು ಅಲ್ಲದೆ ಈ ಹೋಟೆಲ್ ನ ಫೋನ್ ಲೈನ್ ಗಳೆಲ್ಲ ಸೆಕ್ಯೂರ್ ಲೈನ್ ಗಳು. ಅಷ್ಟು ಬೇಗ ಟ್ಯಾಪ್ ಕೂಡ ಮಾಡಲು ಸಾಧ್ಯವಿಲ್ಲ. ಎರಡು ಘಂಟೆಗಳಲ್ಲಿ ಮುಂದೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕು. ಅದಲ್ಲದೆ ತಾನು ಬಹಳ ಜಾಗರೂಕನಾಗಿಯೂ ಇರಬೇಕು. ಇನ್ನೆರಡು ಘಂಟೆಗಳಲ್ಲಿ ಇಲ್ಲಿಂದ ಹೊರಬಿದ್ದು ಬಿಟ್ಟರೆ?? ಯೋಚಿಸುತ್ತಲೇ ಇತ್ತು ಆತನ ಸುಪ್ತ ಮನಸ್ಸು.
ಈಗಾಗಲೇ ಹೊರಗೆ ಒಂದೆರಡು ಜನರಂತೂ ಅವನನ್ನು ವಾಚ್ ಮಾಡಲು ನಿಂತಿರುತ್ತಾರೆ. ಹೋಟೆಲ್ ಒಳಗೆ ಕೂಡ ವ್ಯವಸ್ಥೆ ಮಾಡಲು ಇನ್ನೆರಡು ತಾಸು ಬೇಕು. ಅಷ್ಟರಲ್ಲಿ ಇವರ ಕಣ್ಣಿಗೆ ಮಣ್ಣೆರಚಿ ಹೋಗಬೇಕು. ಯೋಚನೆ ಬಂದಿದ್ದೆ ಪಟಪಟನೆ ನಾಲ್ಕು ಫೋನ್ ಮಾಡಿದ. ಒಂದೊಂದು ಫೋನ್ ಬಹಳ ಮಹತ್ವವಾದದ್ದು. ಎರಡು ವಾಕ್ಯಗಳಿಗಿಂತ ಹೆಚ್ಚು ಮಾತನಾಡಲಿಲ್ಲ ಗರುಡ. ಆ ಕಡೆಯವರು ಕೇಳಲಿಲ್ಲ. ಮಾತನಾಡಿದ ಕೆಲಸಗಳು ಮಾತ್ರ ಚಾಚು ತಪ್ಪದೆ ಆಗಿ ಹೋಗುತ್ತವೆ. 
ಒಮ್ಮೆ ಸಮಾಧಾನದ ನಿಟ್ಟುಸಿರು ಬಿಟ್ಟು ಬಾತ್ ರೂಮ್ ಸೇರಿಕೊಂಡ. ಬೆಚ್ಚನೆಯ ಸ್ನಾನ ಮಾಡಬೇಕೆನ್ನಿಸಿತು ಗರುಡನಿಗೆ. ಹೊರಗಡೆ ಸೆಖೆಯಿದ್ದರೂ ಉರಿಯುತ್ತಿರುವ ಏ.ಸಿಗಳು ರೂಮಿನಲ್ಲಿ ತಣ್ಣನೆಯ ವಾತಾವರಣ ಮೂಡಿಸಿದ್ದವು. 
ಷವರ್ ಆನ್ ಮಾಡಿ, ಬಾತ್ ಟಬ್ ನಲ್ಲೂ ನೀರು ಬಿಟ್ಟು ನೀರಿನೊಳಗೆ ಸೇರಿಕೊಂಡ ಗರುಡ. ಮನಸ್ಸಿಗೆ ಅದೆಷ್ಟೋ ಹಿತ ಸಿಕ್ಕಂತಾಯಿತು. ಪ್ರಿಯಂವದಾ ರಾಜ್ ತನ್ನ ಗುರಿಯಿಂದ ತಪ್ಪಿಸಿಕೊಂಡ ದಿನದಿಂದ ಆತನಿಗೆ ಸಮಾಧಾನವಿರಲಿಲ್ಲ. ಹೀಗೆ ಬೇಟೆ ತಪ್ಪಿಸಿಕೊಂಡದ್ದು ಇದೆ ಮೊದಲು. ಬೇಟೆ ತಪ್ಪಿದ್ದಷ್ಟೇ ಅಲ್ಲದೆ ತನ್ನ ಹಿಂದೆ ಬಲೆ ಬೀಸಿದ್ದಾರೆ. ಸ್ವಲ್ಪ ಯಾಮಾರಿದರೂ ಫಿನಿಶ್.. ನೋ ಮೋರ್ ಎಸ್ಕೇಪ್... ಒಮ್ಮೆ ಸಿಕ್ಕಿ ಬಿದ್ದರೆ ಮುಗಿಯಿತು ಇಲ್ಲಸಲ್ಲದ ಅಸಾಸಿನ್ ಕೇಸ್ ಗಳು ಅವನನ್ನು ಹುಡುಕಿಕೊಂಡು ಬರುತ್ತವೆ. ಇಂಟರ್ ಪೋಲ್ ಬೆನ್ನು ಬಿದ್ದರೂ ಬಿದ್ದೀತು. ನೋ... ಹಾಗಾಗಕೂಡದು.. ಪಾರಾಗಬೇಕು... ಪ್ರಿಯಂವದಾ ರಾಜಳನ್ನು ಬಲಿ ಹಾಕಿ ಪಾರಾಗಬೇಕು. ಬಾತ್ ಟಬ್ ನಲ್ಲಿ ಹಬೆಯಾಡುತ್ತಿದ್ದ ನೀರಿನಲ್ಲಿ ಒಮ್ಮೆ ಪೂರ್ತಿಯಾಗಿ ಮುಳುಗಿ ಮೇಲೆದ್ದ ಗರುಡ. 
ಮೈ ಒರೆಸಿಕೊಳ್ಳುತ್ತ ತನ್ನ ಕೆಚ್ಚಾದ ದೇಹ ತಾನೇ ನೋಡಿಕೊಂಡ. ಎಡಭುಜದಲ್ಲೊಂದು ಹೊಲಿಗೆ. ಹೊಟ್ಟೆಯ ಮೇಲೊಂದು ಮಾಸದ ಗಾಯದ ಗುರುತು. ಗತಕಾಲದಲ್ಲಿ ಚೆಲ್ಲಿದ ರಕ್ತದ ನೆನಪಾಯಿತು. ಎರಡೇ ಕ್ಷಣ ತಲೆ ಕೊಡವಿ ವರ್ತಮಾನಕ್ಕೆ ಬಂದುಬಿಟ್ಟ. 
ಮುಂದಿನ ಅರ್ಧ ಘಂಟೆ ಕನ್ನಡಿಯ ಮುಂದೆ ತನ್ನ ಹಾವಭಾವಗಳನ್ನು ಬದಲಿಸುತ್ತಲೇ ಇದ್ದ. 
ಸ್ವಲ್ಪ ಸಮಯದ ಬಳಿಕ ಕನ್ನಡಿಯಲ್ಲಿ ಕಂಡದ್ದು ಪಂಜಾಬಿ ಸಿಖ್.. 
ಗರುಡನಿಗೂ ಅವನಿಗೂ ಎಳ್ಳಷ್ಟೂ ಹೋಲಿಕೆಯಿಲ್ಲ. ಗರುಡನೇ ಗುರುತಿಸದಂತಾದ ಸಿಖ್ ನನ್ನ ನೋಡಿ ಗರುಡನಿಗೆ ನಿರಾಳವಾಯಿತು. ಮತ್ತೊಮ್ಮೆ ನೋಡಿಕೊಂಡ. ತನ್ನ ವೇಷದಲ್ಲಿ ಯಾವುದೇ ಕೊರತೆ ಕಾಣದಿದ್ದಾಗ Lets play.. ಎಂದುಕೊಂಡು ಹೊರಬಿದ್ದ. ಹೋಟೆಲ್ ನಿಂದ ಹೊರಬಿದ್ದು ಎಡಗಣ್ಣಿನಿಂದಲೇ ಸುತ್ತಲೂ ಪರಿಶೀಲಿಸಿದ. 
ಅವನನ್ನು ಇಲ್ಲಿಗೆ ಕರೆದುಕೊಂಡು ಬಂದ ವ್ಯಕ್ತಿ ಕಾರನ್ನು ಅಲ್ಲಿಯೇ ನಿಲ್ಲಿಸಿಕೊಂಡು ಶತಪಥ ಹಾಕುತ್ತಿದ್ದ. ಯಾವ ಭಯವೂ ಇಲ್ಲದೆ ಆತನ ಬಳಿ ಹೋಗಿ "ಪಾಜಿ, ಇಂಡಿಯಾ ಗೇಟ್ ಜಾಣಾ ಹೇ.. "
ಅವನತ್ತಲೇ ದುರುಗುಟ್ಟಿ ನೋಡಿದ ಡ್ರೈವರ್ "I am waiting for somebody else.. ಕಿಸೀ ಔರ್ ಸೆ ಪೂಚೊ..." ಎಂದು ಮುಖ ತಿರುಗಿಸಿದ. 
"ಇಂಗ್ಲೀಷ್ ಮೇ ಬೋಲಾ.. ಹಾ.. ಹಾ.. " ಎನ್ನುತ್ತಾ ಮುಂದೆ ನಡೆದು ಮತ್ತೊಂದು ಟ್ಯಾಕ್ಸಿ ಕರೆದು ಇಂಡಿಯಾ ಗೇಟ್ ಎಂದು ಹತ್ತಿ ಕುಳಿತ. 
ಪಂಜಾಬಿ ಗಡ್ಡ, ಮೀಸೆಯಡಿಯಲ್ಲಿ ಆತ ನಕ್ಕ ನಗು ಯಾರಿಗೂ ಕಾಣಲೇ ಇಲ್ಲ. ಬಲೆಯಿಂದ ತಪ್ಪಿಸಿಕೊಂಡ ಗರುಡ ಈ ಬಾರಿ ತನ್ನೆಲ್ಲ ಶಕ್ತಿ ಯುಕ್ತಿಯೊಂದಿಗೆ ಬೇಟೆಯೆಡೆಗೆ ಅಪ್ಪಳಿಸುವ ಸಿದ್ಧತೆ ನಡೆಸಿತು...
ಇದು ಯಾವುದನ್ನು ಅರಿಯದೆ ಪ್ರಿಯಂವದಾ ರಾಜ್ ಹಾಸಿಗೆಯಲ್ಲಿ ಮಲಗೆ ಇದ್ದಳು. ಮತ್ತೊಮ್ಮೆ ಟಿಕ್.. ಟಿಕ್.. ಟಿಕ್...
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 22

                                     ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 22

"ವಿಹಾರಿ ಮುಚ್ಚುಮರೆಯಿಲ್ಲದೆ ಇರುವ ವಿಷಯಕ್ಕೆ ಬರುತ್ತೇನೆ. ನಿನ್ನಿಂದ ನನಗೊಂದು ಸಹಾಯ ಬೇಕಾಗಿದೆ. ನಿನ್ನನ್ನು ಹೀಗೆ ಅಪಹರಿಸಿಕೊಂಡು ಬಂದಿದ್ದಕ್ಕೆ ಕ್ಷಮೆಯಿರಲಿ." ವಿಷಯಕ್ಕೆ ಬಂದ ಸಮ್ಮಿಶ್ರ.
ಸಮ್ಮಿಶ್ರನ ಮಾತುಗಳನ್ನೇ ಕೇಳುತ್ತಿದ್ದ ವಿಹಾರಿ. ಕೋಪ ಬಂದಿದ್ದರೂ, ತನ್ನನ್ನು ಕರೆದುಕೊಂಡು ಬಂದಿರುವುದು ಯಾವುದೋ ಸಮಸ್ಯೆಯನ್ನು ಬಗೆಹರಿಸಲು ಎಂದು ತಿಳಿದಿದ್ದರಿಂದ ಸ್ವಲ್ಪ ಸಮಾದಾನವಾಯಿತು ಆತನಿಗೆ. ಆದರೆ ದೇಶದ ಕಿಂಗ್ ಮೇಕರ್ ಪ್ರಿಯಂವದಾ ರಾಜ್ ಳಂತವಳ ರೈಟ್ ಹ್ಯಾಂಡ್ ಆಗಿ ಕೆಲಸ ಮಾಡುವ ಸಮ್ಮಿಶ್ರನಿಗೆ ನಾನು ಮಾಡುವ ಸಹಾಯವಾದರೂ ಏನು?? ಎಂದು ಯೋಚಿಸತೊಡಗಿದ. ಈತ ಕೇಳದ ಕೂಡಲೇ ನಾನೇಕೆ ಸಹಾಯ ಮಾಡಬೇಕು ಅಥವಾ ಮಾಡಲು ಒಪ್ಪ ಬೇಕು ಎಂಬ ಅಹಂಕಾರ ಕೂಡ ಎದ್ದು ನಿಂತಿತು.
"ಅದೇನು ಹೇಳಿ ಸಮ್ಮಿಶ್ರ ಅವ್ರೆ.." ಯಾವ ಭಾವವನ್ನು ತೋರಿಸಿಕೊಳ್ಳಲಿಲ್ಲ ವಿಹಾರಿ. 
ಪಕ್ಕದಲ್ಲಿ ನಿಂತಿದ್ದ ಇಬ್ಬರಿಗೂ ಸಮ್ಮಿಶ್ರ ಕಣ್ಸನ್ನೆ ಮಾಡುತ್ತಲೇ ಅವರಿಬ್ಬರೂ ಹೊರಹೋಗಿ ಬಾಗಿಲು ಹಾಕಿಕೊಂಡರು.
"ನೋಡು ವಿಹಾರಿ, ಇದು ತುಂಬ ಗುಪ್ತ ವಿಷಯ. ನನ್ನನ್ನು ಬಿಟ್ಟರೆ ಈ ವಿಷಯ ತಿಳಿದಿರುವುದು ಪ್ರಿಯಂವದಾ ರಾಜ್ ಗೆ ಮಾತ್ರ.ಆದರೆ ಅವರಿಗ ಮಾತನಾಡುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಇ ವಿಷಯ ತಿಳಿಯುತ್ತಿರುವ ಮೂರನೇ ವ್ಯಕ್ತಿ ನೀನು. ಅಂದರೆ ನೀನು ಅರ್ಥ ಮಾಡಿಕೋ. ನನಗೆ ನಿನ್ನ ಮೇಲೆ ನಂಬಿಕೆ ಬಂದಿದೆಯೋ? ಅಥವಾ ನನಗೆ ಸಹಾಯ ಮಾಡುವಂಥ ಮನುಷ್ಯ ನೀನೇ ಎಂದು ನನಗೆ ಹೇಗೆ ಅನ್ನಿಸಿತೋ? ನನಗೆ ತಿಳಿದಿಲ್ಲ. ನಾನು ನಿನ್ನ ಮೇಲಿಟ್ಟಿರುವ ನಂಬಿಕೆ, ಭರವಸೆಗಳನ್ನು ಉಳಿಸಿಕೊಳ್ಳುವುದು, ಬಿಡುವುದು ನಿನ್ನ ಮೇಲಿದೆ."
ಕುತೂಹಲ ಹೆಚ್ಚಾಯಿತು ವಿಹಾರಿಗೆ. ಸಮ್ಮಿಶ್ರ ನನ್ನನ್ನು ಕರೆಸುವುದು, ಯಾರಿಗೂ ತಿಳಿಯದ ವಿಷಯವನ್ನು ನನಗೆ ತಿಳಿಸುವುದು. Some thing is cooking. ಅಷ್ಟೇ ಅಲ್ಲ. Its some thing important. ವಿಹಾರಿಯ ಒಳಗಿನ ಚತುರತೆ ಚುರುಕಾಯಿತು. "ಹೇಳಿ ಸಮ್ಮಿಶ್ರ, ನನ್ನ ಕೈಲಾದ್ದನ್ನು ನಾನು ಮಾಡುತ್ತೇನೆ." ಎಂದ ವಿಹಾರಿ.
ಸಮ್ಮಿಶ್ರ ವಿವರಿಸತೊಡಗಿದ. ಪ್ರಿಯಂವದಾ ರಾಜ್ ಳಿಗೆ ಗುಂಡು ಬಿದ್ದಿದ್ದು, ಅವಳು ಯಾರಿಗೂ ಕಾಣದಂತೆ ಕಾರಿನ ಗಾಜಿನ ಮೇಲೆ "HIM" ಎಂದು ಬರೆದದ್ದು, ಅವನು ಅದನ್ನು ಓದಿ ಅಳಿಸಿ ಹಾಕಿದ್ದು, ಈಗ ಅವಳು ಕೋಮಾದಲ್ಲಿರುವುದು.. ಎಲ್ಲವನ್ನೂ ಹೇಳಿ ಗಾಢವಾದ ನಿಟ್ಟುಸಿರು ಬಿಟ್ಟ. ಪರಿಸ್ಥಿತಿ ಅರ್ಥವಾದ ವಿಹಾರಿಯೂ ನಿಡಿದಾದ ಉಸಿರಾಡಿದ. ಪ್ರಿಯಂವದಾ ರಾಜ್ ಏನಾದರೂ ಕೊನೆಯುಸಿರೆಳೆದರೆ ಎಂತಹ ಸಂಚಲನ ಉಂಟಾಗುತ್ತದೆ ಎಂಬುದನ್ನು ಬಲ್ಲವ ವಿಹಾರಿ. ಆದರೆ ಇಲ್ಲಿ ಅವನು ಮಾಡುವ ಸಹಾಯವೇನು ಎಂಬುದು ಆತನಿಗೆ ತಿಳಿಯಲಿಲ್ಲ. 
ಆತನ ಮನಸ್ಸನ್ನು ಅರಿತವನಂತೆ ಸಮ್ಮಿಶ್ರ, "ವಿಹಾರಿ, ನೀನೊಬ್ಬ ಚತುರ ಹ್ಯಾಕರ್ ಎಂದು ನನಗೆ ತಿಳಿದಿದೆ. ಅದೆಷ್ಟೋ ಕ್ಲಿಷ್ಟವಾದ ಸೈಪರ್ ಗಳನ್ನು ಡಿಸೈಪರ್ ಮಾಡುವ ಚಾಲಾಕಿಯೆಂದು ನನಗೆ ತಿಳಿದು ಬಂದಿದೆ. ಹಾಗಾಗಿ ಈ "HIM" ಕೋಡನ್ನು ಡಿಕೋಡ್ ಮಾಡಿಕೊಡು. ಯಾವ ಅರ್ಥದಲ್ಲಿ ರಾಜ್ ಹಾಗೆ ಬರೆದಿದ್ದಾರೆ ಎಂದು ನನಗೆ ಅರಿತುಕೊಳ್ಳಲು ಕಷ್ಟವಾಗುತ್ತಿದೆ. ಈ ಕೋಡ್ ಹಿಂದಿನ ಅರ್ಥ ತಿಳಿದು ಬಂದರೆ ಅವಳ ಮೇಲೆ ಹತ್ಯೆ ಮಾಡಲು ಪ್ರಯತ್ನಿಸಿದವರು ಯಾರೆಂದು ತಿಳಿಯಬಹುದು."
ಒಂದೆರಡು ನಿಮಿಷ ಯೋಚಿಸುತ್ತ ಕುಳಿತಿದ್ದ ವಿಹಾರಿ. ಸಮ್ಮಿಶ್ರ ಆತನ ಆಲೋಚನೆಗೆ ಭಂಗ ತರದಂತೆ ನೋಡುತ್ತ ಕುಳಿತಿದ್ದ. 
"ಎಲ್ಲವೂ ಸರಿ ಸಮ್ಮಿಶ್ರ, ಆದರೆ ನಾನು ಈ ಕೆಲಸವನ್ನು ಮಾಡಲಾರೆ. ನಿನ್ನ ಸಾಹಸವೆಲ್ಲಾ ನಿಷ್ಪಲವಾಯಿತು ಎಂದು ಬೇಸರವಾಗಬಹುದು ನಿನಗೆ. ಆದರೆ ನಾನು ಈ ಕೆಲಸವನ್ನು ಮಾಡಲಾರೆ ಅಷ್ಟೆ. ನಾನು ಬೇರೆಯವರಿಗಾಗಿ ನನ್ನ ವಿದ್ಯೆಯನ್ನು ಉಪಯೋಗಿಸಲಾರೆ. ಎಂದೋ ಮಾಡಿದ ಶಪಥವಿದೆ.." ಎಂದುಬಿಟ್ಟ ವಿಹಾರಿ.
ಆತ ಹಾಗೆ ಹೇಳುತ್ತಲೇ ಸಮ್ಮಿಶ್ರ ಮೌನದಲ್ಲಿ ಕಳೆದ.
"ಇನ್ನು ನಾನಿಲ್ಲಿ ಕುಳಿತು ಮಾಡುವುದು, ಮಾತನಾಡುವುದು ಏನೂ ಇಲ್ಲ ಸಮ್ಮಿಶ್ರ. ದೇಶದಲ್ಲಿ ನನಗಿಂತ ಅನುಭವಿ, ಚಾಲಾಕಿ ಹ್ಯಾಕರ್ ಗಳಿದ್ದಾರೆ. ಅವರನ್ನು ಸಂಪರ್ಕಿಸು. ನಿನ್ನ ಕೆಲಸ ಆದರು ಆಗಬಹುದು." ಎಂದು ಎದ್ದು ನಿಂತ ವಿಹಾರಿ.
ವಿಹಾರಿ ಎರಡು ಹೆಜ್ಜೆ ಎತ್ತಿಟ್ಟಿರಲಿಲ್ಲ. "ಈ ಕೆಲಸ ನಿನಗಾಗಿ ನೀನು ಮಾಡಿಕೊಳ್ಳುತ್ತಿರುವೆ ಎಂದುಕೋ ವಿಹಾರಿ..." ಈ ಬಾರಿ ಸಮ್ಮಿಶ್ರನ ಮಾತಿನಲ್ಲಿ ತೀಕ್ಷ್ಣತೆಯಿತ್ತು.
ತಿರುಗಿ ನೋಡಿದ ವಿಹಾರಿ. ಸಮ್ಮಿಶ್ರನ ಮುಖದಲ್ಲಿ ಬೇಟೆಗೆ ಸಿದ್ದವಾದ ಚಿರತೆಯ ಕಾಳಜಿಯಿತ್ತು.
"ನಾ ನಿನ್ನೊಡನೆ ಎರಡು ನಿಮಿಷ ಮಾತನಾಡುತ್ತೇನೆ. ಅದರ ನಂತರವೂ ಈ ಕೆಲಸ ನಿನಗೆ ಸಂಬಂಧಿಸಿದ್ದಲ್ಲ ಎಂದು ನಿನಗನ್ನಿಸಿದರೆ ನೀನು ಹೊರಡಬಹುದು."
ಒಮ್ಮೆ ಹುಲಿಯ ಬೋನಿನಲ್ಲಿ ಬಿದ್ದರೆ ಹುಲಿಯ ಅಪ್ಪಣೆಯಿಲ್ಲದೆ ಹೊರಬೀಳುವುದು ಕಷ್ಟ ಎಂಬ ಸತ್ಯದ ಅರಿವಾಯಿತು ಈಗ ವಿಹಾರಿಗೆ. ಒಂದೋ, ಹುಲಿ ಹಸಿದಿರಬಾರದು.. ಇಲ್ಲವೇ ಹುಲಿಯ ಜೊತೆ ಬಡಿದಾಡುವ ಕೆಚ್ಚಿರಬೇಕು. ಈಗ ಹುಲಿ ಹಸಿದಿದೆ. ಬಡಿದಾಡುವುದೊಂದೇ ಉಳಿದ ದಾರಿ. ನೋಡಿ ಬಿಡೋಣ. ಹುಲಿ ಯಾವ ದಿಕ್ಕಿನಿಂದ ಆಕ್ರಮಣ ಮಾಡುತ್ತದೆ ಎಂದು ತಿರುಗಿ ಬಂದು ಕುಳಿತ. 
ಸಮ್ಮಿಶ್ರ ಹೇಳತೊಡಗಿದ. ವಿಹಾರಿಯ ಮುಖದ ಮೇಲೆ ಸಣ್ಣನೆ ಬೆವರು ಮೂಡಿತು.
ಇಷ್ಟೆಲ್ಲಾ ಮಾಹಿತಿಗಳನ್ನು, ಸತ್ಯಗಳನ್ನು ಅರಿತ ಸಮ್ಮಿಶ್ರನಂಥ ವ್ಯಕ್ತಿಗಳು ರಾತ್ರಿ ಹೇಗೆ ನಿದ್ದೆ ಮಾಡುತ್ತಾರೆ ಎಂದು ಯೋಚಿಸುತ್ತಲೇ ಉಳಿದ ವಿಹಾರಿ..
*..................................................*.......................................................*
ಗಾಳಿಗುಡ್ಡ ಮತ್ತು ಲಾಯರ್ ಹತ್ತಿರ ನೀವು ಮನೆಗೆ ಹೋಗಿರಿ, ನನಗೆ ಬೇಲ್ ಅವಶ್ಯಕತೆಯಿಲ್ಲ. ಸಮಯಕ್ಕೆ ಸರಿಯಾಗಿ ಸಹಾಯಕ್ಕೆ ಬಂದಿದ್ದಕ್ಕೆ ಧನ್ಯವಾದಗಳು. ಗಾಳಿಗುಡ್ಡ ಅವ್ರೆ, ನಿಮ್ಮ ಸಹಾಯಕ್ಕೆ ಮತ್ತೊಮ್ಮೆ ಪ್ರತಿಫಲ ಕೊಡುತ್ತೇನೆ ಎಂದು ನಸುನಕ್ಕ ಶಾಸ್ತ್ರಿ.
ನಮ್ಮ ಅವಶ್ಯಕತೆ ಇಲ್ಲದ ಮೇಲೆ ಕರೆಸಿದರಿ ಯಾಕೆ ಗೊಣಗಿಕೊಂಡ lawyer. ಗಾಳಿಗುಡ್ಡ ಶಾಸ್ತ್ರಿಯ ಬೆನ್ನು ತಟ್ಟಿ ಹೊರನಡೆದ. ವಿಷಯ ಇಷ್ಟು ಬೇಗ ಮತ್ತು ಇಷ್ಟು ಸುಲಭವಾಗಿ ಇತ್ಯರ್ಥಗೊಂಡಿದ್ದಕ್ಕೆ ಖುಷಿಗೊಂಡಿದ್ದ ಆತ. ಆತನ ಅನುಭವ ಮತ್ತು ತಿಳುವಳಿಕೆಯಲ್ಲಿ ಪೋಲಿಸ್ ಎಂದರೆ ಕಿರಿಕ್.
ಅವರು ಹೊರನಡೆಯುತ್ತಲೇ "ಸರಿ, ನಾವಿನ್ನು ಹಾಸ್ಪಿಟಲ್ ಗೆ ಹೋಗಿ, ಆ ವಿಡಿಯೋ ಫೋಟೇಜ್ ತೆಗೆಸಿ ನೋಡಿ ಬಿಡೋಣ. ನಿ ಹೇಳಿದ್ದು ನಿಜವೇ ಆಗಿದ್ದಲ್ಲಿ ನಮ್ಮ ತಪ್ಪಿಗೆ ಕ್ಷಮೆ ಯಾಚಿಸುತ್ತೇವೆ. ಆದರೆ ಅಲ್ಲಿಯವರೆಗೆ ನಾ ನಿನ್ನ ನಂಬಲಾರೆ ಶಾಸ್ತ್ರಿ.." ಎಂದು ಪ್ರತಾಪ್ ಜೀಪಿನೆಡೆ ನಡೆದ.
ಕ್ಷಾತ್ರ ಅವರ ಜೊತೆ ನಡೆದ.
ಇನ್ನು ತನಗೇನು ಕೆಲಸ. ಅವರ ಜೊತೆಯೇ ನಡೆದಳು ಸ್ವಯಂವರಾ. ಕ್ಷಾತ್ರ ಕೆಲಸದಲ್ಲಿ ಮುಳುಗಿಬಿಟ್ಟರೆ ಅದೆಷ್ಟು ಸುಲಭವಾಗಿ ಎಲ್ಲವನು ಮರೆತು ಬಿಡುತ್ತಾನೆ ಎಂದುಕೊಂಡಳು ಸ್ವಯಂವರಾ.
ಗಂಡು ಅದೆಷ್ಟೆ ತಲೆಬಿಸಿಯಲ್ಲಿರಲಿ,ಕೆಲಸದಲ್ಲಿರಲಿ, ತನ್ನ ಬಗ್ಗೆ ಗಮನ ಹರಿಸಬೇಕು ಎಂಬ ಹೆಣ್ಣಿನ ಭಾವವನ್ನು ಅರಿತವರು ತುಂಬ ಕಡಿಮೆ ಜನ. ಕ್ಷಾತ್ರನಂತಹ ಪೊಲೀಸ್ ಕೂಡ ಅದರಿಂದ ಹೊರತಾಗಿಲ್ಲ.ಕಳ್ಳರ ಮನಸ್ಥಿತಿಯನು, ನಾಟಕವನ್ನು ಅವನೆಷ್ಟು ಬೇಗ ಗುರುತಿಸುತ್ತಾನೆ ಎಂಬುದು ನಿಜವಾದರೂ, ಸ್ವಯಂವರಾಳ ಮನಸ್ಸಿನ ಕಳವಳಗಳು, ತುಡಿತಗಳು ಕ್ಷಾತ್ರನಿಗೆ ಅರಿಯದೇ ಹೋಯಿತು. ಜೀಪಿನ ಮೇಲೆ ಕುಳಿತ ಅವರೆಲ್ಲ ಶಾಸ್ತ್ರಿ ಹೇಳಿದ ಆಸ್ಪತ್ರೆಯ ಕಡೆ ಹೊರಟಿದ್ದರು. ಪ್ರತಾಪ್ ಡ್ರೈವ್ ಮಾಡುತ್ತಿದ್ದರೆ ಕ್ಷಾತ್ರ ಆತನ ಪಕ್ಕ ಕುಳಿತಿದ್ದ. ಹಿಂದೆ ಸ್ವಯಂವರಾ, ಶಾಸ್ತ್ರಿಕುಳಿತಿದ್ದರು. ಎರಡನೇ ಬಾರಿ ಸ್ವಯಂವರಾ ಶಾಸ್ತ್ರಿಯನ್ನು ಗುರುತಿಸದ ಕಾರಣ ಶಾಸ್ತ್ರಿಯ ಜೊತೆ ಹಿಂದೆ ಕುಳಿತರೆ ತಪ್ಪೆಂದು ಕ್ಷಾತ್ರನಿಗೆ ಅನ್ನಿಸಲಿಲ್ಲ. ಪಕ್ಕದಲಿ ಕುಳಿತಿದ್ದ ಶಾಸ್ತ್ರಿ ಸ್ವಯಂವರಾಳ ಮುಖ ನೋಡಿದ. ಅದೇ ಸಮಯಕ್ಕೆ ಅವಳು ಆತನ ಮುಖ ನೋಡಿದಳು. ಒಂದು ಕ್ಷಣ ಇಬ್ಬರ ಕಣ್ಣುಗಳು ಸಂಧಿಸಿದವು. ಕ್ಷಾತ್ರ ಕೊಟ್ಟ ಏಟುಗಳಿಂದ ಶಾಸ್ತ್ರಿಯ ಮುಖ ಊದಿಕೊಂಡಿತ್ತು. ಅತಿಯಾದ ಬಳಲಿಕೆಯಿಂದ, ಯೋಚನೆಗಳಿಂದ ಸ್ವಯಂವರಾಳ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಮೂಡಿದ್ದವು. ಸಧ್ಯದಲ್ಲಿ ತಮ್ಮಿಬ್ಬರ ಪರಿಸ್ಥಿತಿಯೂ ಒಂದೆ ಎಂದುಕೊಂಡ ಶಾಸ್ತ್ರಿ. ಒಂದು ಕ್ಷಣ ಆಕೆಯ ಕೈಗಳನ್ನು ತನ್ನ ಕೈಗಳಲ್ಲಿ ತೆಗೆದುಕೊಂಡು ಸಂತೈಸಲೇ ಎಂದುಕೊಂಡ ಶಾಸ್ತ್ರಿ. ಇವಳಿಂದಲೇ ತಾನು ಇಂತಹ ಶಿಕ್ಷೆಗೆ ಒಳಗಾಗಿದ್ದೇನೆ ಎಂಬುದನ್ನು ಆತ ಯಾವಾಗಲೋ ಮರೆತಂತಿತ್ತು. ಶಾಸ್ತ್ರಿಯ ಗುಣವೇ ಅಂಥದ್ದು. ಗೊತ್ತಿಲ್ಲದೇ ಆದ ತಪ್ಪುಗಳನ್ನು ಆತ ಬಹುಬೇಗ ಕ್ಷಮಿಸಿ ಬಿಡುತ್ತಾನೆ.ಆದರೆ ಮೋಸ ಮಾಡುವವರನ್ನು ಆತ ಕ್ಷಮಿಸಲಾರ.ಬೆನ್ನು ಬಿದ್ದು ಕಾಡುತ್ತಾನೆ. ಶಾಸ್ತ್ರಿಯ ಮುಖದ ಭಾವನೆ ಅರಿತವಳಂತೆ ಸಣ್ಣ ನಗು ನಕ್ಕಳು ಸ್ವಯಂವರಾ. ಅದೊಂದು ಸಣ್ಣ ನಗು ಅವಳ ಮುಖದಲ್ಲಿ ಹೊಸಕಳೆ ತುಂಬಿ ತುಂಬಾ ಮುದ್ದಾಗಿ ಕಂಡಳು. ಪ್ರತಾಪ್, ಕ್ಷಾತ್ರ ಇಬ್ಬರೂ ತಮ್ಮದೇ ಆಲೋಚನೆಯಲಿ ಕಳೆದುಹೋಗಿದ್ದರು. 
ಶಾಸ್ತ್ರಿ ಹಿಂದೆ ಮುಂದೆ ಯೋಚಿಸದೇ ಸ್ವಯಂವರಾಳ ಕೈಯನ್ನು ಅವನ ಕೈಯಲ್ಲಿ ತೆಗೆದುಕೊಂಡು ಗಟ್ಟಿಯಾಗಿ ಹಿಡಿದುಕೊಂಡ. ಸ್ವಯಂವರಾ ತನ್ನ ಕೈಗಳನ್ನು ಹಿಂದಕ್ಕೆ ಎಳೆದುಕೊಳ್ಳಲಿಲ್ಲ, ಕೂಗಲಿಲ್ಲ, ಭಯಗೊಳ್ಳಲೂ ಇಲ್ಲ. ಶಾಸ್ತ್ರಿಯ ಕೈ ಹಿಡಿತವೇ ಸಾಕಿತ್ತು ಅವನ ಮನಸ್ಸಿನ ಭಾವ ಅರ್ಥವಾಗಲು. Dont be sad!! ಕೈ ಹಿಡಿತದಲ್ಲೂ ಆತನ ಕಂಗಳಲ್ಲೂ ಒಂದೇ ಭಾವ.
ಕ್ಷಾತ್ರನ ಆತ್ಮೀಯತೆಯಲ್ಲಿ, ತಬ್ಬುವಿಕೆಯಲ್ಲಿ ಇದೊಂದು ಭಾವ ಆಕೆಗೆ ಯಾವಾಗಲೂ ಅನುಭವವಾಗಿಲ್ಲ. ಹಾಗೆಂದು ಅವನ ತಬ್ಬುವಿಕೆಯಲ್ಲಿ ಬೇರೆ ಯಾವ ತಪ್ಪರ್ಥಗಳಿವೆಯೆಂದಲ್ಲ. ಅವಳ ಪ್ರತೀ ನೋವಿಗೂ ಸ್ಪಂದಿಸಿದ್ದಾನೆ ಆತ. ಆದರೂ ಏನೋ ಕೊರತೆ. ಅವನ ಸನಿಹದಲ್ಲಿಯೂ ಕೂಡ. ಹೆಣ್ಣೊಬ್ಬಳ ಸೂಕ್ಷ್ಮತೆಯನ್ನು ಅರಿಯುವುದು ಬಹಳ ಕಷ್ಟ. ಕ್ಷಾತ್ರ ಅದನ್ನು ಅರಿಯದೇ ಹೋದ.
ಶಾಸ್ತ್ರಿ ಹೇಳಿದ ಆಸ್ಪತ್ರೆಯೆದುರು ನಿಂತಿತು ಜೀಪ್. ಮುಂದೆ ಮುಂದೆ ನಡೆದ ಪ್ರತಾಪ್. ಕ್ಷಾತ್ರ ಸ್ವಯಂವರಾಳ ಬಳಿ ಬಂದು "ಸ್ವಲ್ಪ ಸಮಯದ ಕೆಲಸವಷ್ಟೆ, ನಂತರ ಹೊರಟುಬಿಡೋಣ.." ಎಂದ ಬಹಳ ಕಕ್ಕುಲತೆಯಿಂದ. ಸರಿ ಎನ್ನುವಂತೆ ತಲೆಯಾಡಿಸಿದಳು. ಶಾಸ್ತ್ರಿ ಪ್ರತಾಪನನ್ನು ಹಿಂಬಾಲಿಸಿದರೆ, ಸ್ವಯಂವರಾ ಕ್ಷಾತ್ರನನ್ನು ಹಿಂಬಾಲಿಸಿದಳು. ನಡೆಯುತ್ತಿರುವ ವಿದ್ಯಮಾನಗಳು ಅವಳಿಗೂ ಈಗ ಅರಿವಾಗಿತ್ತು. ತಾನು ಶಾಸ್ತ್ರಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ತಿಳಿದಿತ್ತು. ಅಷ್ಟಾದ ಮೇಲು ಶಾಸ್ತ್ರಿ ತನ್ನ ಜೊತೆ ನಡೆದುಕೊಂಡ ರೀತಿ ಅವಳನ್ನು ಬೆರಗುಗೊಳಿಸಿತ್ತು. ಈ ಕೊಲೆಗೂ, ಆತನಿಗೂ ಸಂಬಂಧವಿಲ್ಲ ಎಂದು ಆಕೆಯ ಮನಸ್ಸು ಹೇಳುತ್ತಿತ್ತು.
ಮನಸ್ಸಿನ ಭಾವುಕತೆಯ ಆಧಾರದ ಮೇಲೆ ಪೊಲೀಸರು ಕಾರ್ಯ ನಿರ್ವಹಿಸುವುದಿಲ್ಲ.ಕೋರ್ಟ್ ಕೂಡ ಅಷ್ಟೇ. ಸಾಕ್ಷಿ ಕೇಳುತ್ತದೆ ನ್ಯಾಯಾಂಗ.
ಪ್ರತಾಪ್ ರಿಸೆಪ್ಶನ್ ನಲ್ಲಿ ಸಿಸಿಟಿವಿ ಫೋಟೇಜ್ ನೋಡಬೇಕು ಎಂದಾಗ ರಿಸೆಪ್ಶನಿಸ್ಟ್ ಮ್ಯಾನೇಜರ್ ಬಳಿ ಮಾತನಾಡುತ್ತಿದ್ದ. ಬಂದಿರುವವರು ಪೋಲಿಸ್ ಆದ್ದರಿಂದ ಕೊಡುವುದಿಲ್ಲ ಎಂಬುದು ಸಾಧ್ಯವಿಲ್ಲ. ಸ್ವತಃ ಮ್ಯಾನೇಜರ್ ಅವರ ಬಳಿ ಬಂದು ವಿಷಯ ಏನೆಂದು ತಿಳಿದುಕೊಂಡು ಸಿಸಿಟಿವಿ ಮೆಂಟೇನೆನ್ಸ್ ರೂಮಿಗೆ ಕರೆದುಕೊಂಡು ಹೋದ. ಕೊಲೆಯಾದ ಡೇಟಿನ ಸಿಸಿಟಿವಿ ಫೋಟೇಜ್ ತೆಗೆಯಲು ಹೇಳಿದ. ಅಲ್ಲಿ ಗಮನಿಸಲು ಕುಳಿತಿದ್ದ ಹುಡುಗ ಯಾವ ವಿಡಿಯೋ ಎಂದು ತಿಳಿಯದೇ ನೋಡುತ್ತಿದ್ದ. ಆಗ ಶಾಸ್ತ್ರಿ "ಹಾಸ್ಪಿಟಲ್ ನಲ್ಲಿ ಒಟ್ಟೂ ಇಪ್ಪತ್ನಾಲ್ಕು ಕ್ಯಾಮೆರಾಗಳಿವೆ. ಮೇನ್ ಗೇಟ್, ರಿಸೆಪ್ಶನ್, ಬಿಲ್ ಕೌಂಟರ್, ಎಲ್ಲ ಫ್ಲೋರ್ ಗಳಲ್ಲಿ, ಹೀಗೆ.. ರಿಸೆಪ್ಶನ್ ಹಾಗೂ ಬಿಲ್ ಕೌಂಟರ್ ವಿಡಿಯೋ ತೆಗೆಯಿರಿ ಸಮಯ 12 ಮತ್ತು 1 ರ ನಡುವೆ.." ಎಂದ.
ಶಾಸ್ತ್ರಿಯ ಕಾನ್ಫಿಡೆನ್ಸ್ ನೋಡಿ ಕ್ಷಾತ್ರನಂತೂ ಶಾಸ್ತ್ರಿಯ ಮಾತುಗಳನ್ನು ಪೂರ್ತಿಯಾಗಿ ನಂಬಿದ. ಸ್ವಯಂವರಾ ತಾನು ಮಾಡಿದ ತಪ್ಪಿಗೆ ಅದಾಗಲೇ ನೊಂದುಕೊಳ್ಳುತ್ತಿದ್ದಳು. ಈಗ ಅನುಮಾನ ಉಳಿದಿರುವುದು ಕೇವಲ ಪ್ರತಾಪ್ ಗೆ ಮಾತ್ರ. ಅಷ್ಟು ಸುಲಭವಾಗಿ ಆತ ಶಾಸ್ತ್ರಿಯನ್ನು ನಂಬಲಾರ.
Camera managemnet operator ಕಂಪ್ಯೂಟರ್ ಸ್ಕ್ರೀನಿನಲ್ಲಿ ಅವರು ಹೇಳಿದ ಟೈಮ್ ನ ವಿಡಿಯೋ ಹಾಕಿ ತೋರಿಸುತ್ತಿದ್ದ. 
ಒಬ್ಬ ವ್ಯಕ್ತಿಯನ್ನು ಸ್ಟ್ರೆಚರ್ ಮೇಲೆ ಹಾಕಿ ಒಳ ತರುತ್ತಿದ್ದಂತೆ ಇತನೇ ತಾನು ಕರೆತಂದ ವ್ಯಕ್ತಿ ಎಂದು ಗುರುತಿಸಿದ ಶಾಸ್ತ್ರಿ. ಇನ್ನೇನು ನನ್ನ ಮುಖ ಕಾಣಿಸುತ್ತದೆ. ಬಿಡುಗಡೆಗೊಂಡು ಹೊರಗಿರುತ್ತೇನೆ ಎಂದು ಸಮಾಧಾನಗೊಂಡ.
ವ್ಯಕ್ತಿಯೊಬ್ಬ ರಿಸೆಪ್ಶನ್ ನಲ್ಲಿ ನಿಂತು ಮಾತನಾಡುತ್ತಿದ್ದಾನೆ. ಹಿಂದಿರುಗಿದರೆ ಅವನೇ ಶಾಸ್ತ್ರಿ. ರಿಸೆಪ್ಶನ್ ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಹಿಂದಿರುಗಿದ.. ಒಮ್ಮೆಲೇ ಮೈ ಜುಮ್ ಎಂದಿತು ಶಾಸ್ತ್ರಿಗೆ. ವಿಡಿಯೋದಲ್ಲಿ ತಾನಿಲ್ಲ. ನನ್ನ ಬದಲಿಗೆ ಇನ್ಯಾರೋ ಇದ್ದಾರೆ. ಮುಖದಲ್ಲಿ ಬೆವರಿನ ಹನಿಗಳು ಮೂಡಿದವು. ಏನು ಮಾಡಬೇಕೆಂದು ತಿಳಿಯದೇ ಎದುರು ಕುಳಿತಿದ್ದ ಆಪರೇಟರ್ ಅನ್ನು ಎಬ್ಬಿಸಿ ತಾನೇ ಕುಳಿತು ಮತ್ತೆ ಮೊದಲಿನಿಂದ ವಿಡಿಯೋ ನೋಡತೊಡಗಿದ. ಸಂಶಯವೇ ಇಲ್ಲ. ಇವನೇ ನಾನು ಆಸ್ಪತ್ರೆಗೆ ಸೇರಿಸಿದ ವ್ಯಕ್ತಿ. ರಿಸೆಪ್ಶನ್ ನಲ್ಲಿ ಮಾತನಾಡುತ್ತಿರುವುದು ನಾನೇ. ತಿರುಗಿ ನಿಂತರೆ ತಾನಿಲ್ಲ. How is it possible??
ಬಿಲ್ಲಿಂಗ್ ಕೌಂಟರ್ ವಿಡಿಯೋ ತೆಗೆದ ಶಾಸ್ತ್ರಿ. ಅಲ್ಲಿಯೂ ಅಷ್ಟೆ ಹಣ ಪಾವತಿಸುತ್ತಿರುವವರು ಬೇರೆ ಯಾರೋ. ಇನ್ನು ಪ್ರತಾಪ್ ನನ್ನನ್ನು ಉಳಿಸುವುದಿಲ್ಲ. ಗಾಳಿಗುಡ್ಡನನ್ನು ಮನೆಗೆ ಕಳಿಸಿದ್ದೇನೆ. ಏನು ಮಾಡುವುದು? ಯಾರೋ ನನ್ನನ್ನು ಬಲೆಗೆ ಬೀಳಿಸಲು ಹೀಗೆ ಮಾಡಿದ್ದಾರೆ. ಆದರೆ ಯಾರು?? ತನ್ನ ಮೇಲೆ ಯಾಕೆ ಹಗೆ?? ಗಾಳಿಗುಡ್ಡನಿಗೆ ಶೇರು ಮಾರ್ಕೆಟ್ಟಿನಲ್ಲಿ ಮೋಸ ಮಾಡಿದ ಬ್ರೋಕರ್ ಏನಾದರೂ ಇದರ ಹಿಂದಿದ್ದಾನೆಯೆ?? ಯೋಚನೆ ಮುಂದುವರೆಯುವುದರಲ್ಲೇ ಇತ್ತು. ಅಷ್ಟರಲ್ಲಿ ಬಲವಾದ ಹಸ್ತವೊಂದು ತನ್ನ ಭುಜದ ಮೇಲೆ ಬಿದ್ದಾಗ ಈ ಜಗತ್ತಿಗೆ ಬಂದ ಶಾಸ್ತ್ರಿ.
"ಇನ್ನೇನಾದ್ರು ಹೇಳುವುದು, ತೋರಿಸುವುದಿದೆಯಾ ಶಾಸ್ತ್ರಿ?" ಗಡುಸಾಗಿತ್ತು ಪ್ರತಾಪನ ಧ್ವನಿ.
"ಈ ವಿಡಿಯೋವನ್ನು ಎವಿಡೆನ್ಸ್ ಎಂದು ಪರಿಗಣಿಸುತ್ತೇವೆ. ನನಗೆ ಸಿಡಿ ತೆಗೆದುಕೊಡಿ" ಎಂದು ಮ್ಯಾನೇಜರ್ ಗೆ ಹೇಳಿ.. "ಶಾಸ್ತ್ರಿ, ಇನ್ನು ನಾಟಕ ಸಾಕು ಮಾಡು, ನಾನು ಹೇಳಿದಂತೆ ಕೇಳಿದರೆ ನಿನಗೇ ಒಳ್ಳೆಯದು" ಎಂದು ಆತನ ಕಾಲರ್ ಹಿಡಿದು ಹೊರಗೆ ಎಳೆದುತಂದ ಪ್ರತಾಪ್.
ತಾಸಿಗೊಂದು ಥರ ಬದಲಾಗುತ್ತಿರುವ ತನ್ನ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ಅರ್ಥವಾಗಲಿಲ್ಲ ಶಾಸ್ತ್ರಿಗೆ. ಆದರೆ ಈ ಬಾರಿ ಕ್ಷಾತ್ರ ಸಮಾಧಾನದಿಂದಿದ್ದ.
"ಪ್ರತಾಪ್ ನನಗೇಕೋ.." ಎಂದು ಏನನ್ನೋ ಹೇಳಲು ಪ್ರಯತ್ನಿಸಿದ ಕ್ಷಾತ್ರನ ಮಾತನ್ನು ಅರ್ಧಕ್ಕೆ ತುಂಡರಿಸಿ "ಕ್ಷಾತ್ರ, ದೆಹಲಿಯಲ್ಲಿ ನಡೆದ ಕೊಲೆಗೂ, ಈತನಿಗೂ ಯಾವುದೇ ಸಂಬಂಧವಿಲ್ಲ ಎಂದು ನೀನಂದುಕೊಂಡರೆ ನನಗೇನು ಅಭ್ಯಂತರವಿಲ್ಲ. ಆದರೆ ನನ್ನ ಜಾಗದಲ್ಲಿ ನಡೆದ ಕೊಲೆಯ ಬಗ್ಗೆ ವಿಚಾರಣೆ ನಡೆಸುವುದು ನನ್ನ ಕರ್ತವ್ಯ ಹಾಗೂ ಜವಾಬ್ದಾರಿ. ಹಾಗಾಗಿ ನೀನದರಲ್ಲಿ ತಲೆ ಹಾಕಬೇಡ." ಕಡ್ಡಿ ತುಂಡು ಮಾಡಿದಂತೆ ಹೇಳಿದ್ದ ಪ್ರತಾಪ್. ನಿನ್ನ ದಾರಿ ನೀನು ನೋಡಿಕೋ ಎಂದಂತಿತ್ತು ಪ್ರತಾಪ್ ನ ಧಾಟಿ. ಕ್ಷಾತ್ರ ಕೊನೆಯ ಬಾರಿ ಶಾಸ್ತ್ರಿಯ ಮುಖ ನೋಡಿದ. ಶಾಸ್ತ್ರಿ ತಾನೇ ಗೊಂದಲದಲ್ಲಿದ್ದ. ವಿಡಿಯೋ ಹೇಗೆ ತಿರುಚಿದರು? ವಿಡಿಯೋ ನೋಡಲು ಬರುತ್ತೇವೆ ಎಂಬ ಮುಂದಾಲೋಚನೆ ಯಾರಿಗಿರಲು ಸಾಧ್ಯ??" ಯೋಚಿಸುತ್ತಲೇ ಕ್ಷಾತ್ರನ ಮುಖ ನೋಡಿ ಪೇಲವ ನಗೆ ನಕ್ಕ ಶಾಸ್ತ್ರಿ. 
"ಇನ್ನು ನಮಗಿಲ್ಲಿ ಕೆಲಸವಿಲ್ಲ ನಡಿ ಸ್ವಯಂವರಾ.." ಎನ್ನುತ್ತಾ ಮುಂದೆ ನಡೆದ ಕ್ಷಾತ್ರ. ಸ್ವಯಂವರಾ ಮತ್ತೆ ಶಾಸ್ತ್ರಿಯನ್ನು ನೋಡುವ ಸಾಹಸ ಮಾಡಲಿಲ್ಲ. ತಾನು ಶಾಸ್ತ್ರಿಯನ್ನು ಇಲ್ಲದ ಸಮಸ್ಯೆಗೆ ಸಿಗಿಸಿದೇನೆ? ಅದೊಂದೆ ಅವಳನ್ನು ಕಾಡುತ್ತಿದ್ದ ಪ್ರಶ್ನೆ.
ಏನೋ ನಡೆಯುತ್ತಿದೆ ಇಲ್ಲಿ. ತಾನಾಗಿ ತಾನು ವಿಡಿಯೋದ ಮಾತನಾಡಿ ಬಲೆಗೆ ಬೀಳುವ ವ್ಯಕ್ತಿಯಲ್ಲ ಶಾಸ್ತ್ರಿ. ಇಲ್ಲಿ ನಾವಂದುಕೊಂಡಿದ್ದಕ್ಕಿಂತ ಕ್ಲಿಷ್ಟ ಸಮಸ್ಯೆಯಿದೆ. ಶಾಸ್ತ್ರಿ ಅದರಲ್ಲಿ ಸಿಕ್ಕಿಬಿದ್ದಿದ್ದಾನೆ ಅಥವಾ ಶಾಸ್ತ್ರಿಯೇ ಏನನ್ನಾದರೂ ಮುಚ್ಚಿಡುತ್ತಿರಬಹುದು. ನೋಡೋಣ ಪ್ರತಾಪ್ ಏನು ಮಾಡುತ್ತಾನೆ ಎಂದು.. ಯಾವುದಕ್ಕೂ ಈಕಡೆಯೂ ಸ್ವಲ್ಪ ಗಮನವಿರಿಸಬೇಕು ಎಂದುಕೊಳ್ಳುತ್ತ ಹೊರಗೆ ಬಂದು, ಟ್ಯಾಕ್ಸಿ ಹಿಡಿದು ಸ್ವಯಂವರಾಳ ಜೊತೆ ಹಿಂದಿನ ಸೀಟಿನಲ್ಲಿ ಕುಳಿತು ಜುಹೂ ಬೀಚ್ ಎಂದ. ಶಾಸ್ತ್ರಿಯನ್ನು ಹತ್ತಿಸಿಕೊಂಡ ಜೀಪ್ ಮುಂಬೈನ ಟ್ರಾಫಿಕ್ ನಲ್ಲಿ ಮಾಯವಾಯಿತು. ತಾನೆಷ್ಟು ಪಕಡ್ಬಂದಿ ಸಮಸ್ಯೆಯಲ್ಲಿ ಸಿಲುಕಿದ್ದೇನೆ ಎಂಬ ಸಣ್ಣ ಅರಿವು ಶಾಸ್ತ್ರಿಗೆ ಆ ಕ್ಷಣದಲ್ಲಿ ಇರಲಿಲ್ಲ.
*...........................................*..........................................................*
"ವಿಹಾರಿ ಮುಚ್ಚುಮರೆ ಮಾಡಿ ನನಗೆ ಅಭ್ಯಾಸವಿಲ್ಲ. ಅದರಿಂದ ನಿನ್ನ ಮತ್ತು ನನ್ನ ಇಬ್ಬರ ಸಮಯವೂ ಹಾಳು. ನೀನು ಈಗ ನನಗೆ ಸಹಾಯ ಮಾಡಿದರೆ ನಾನು ನಿನಗೊಂದು ಸಹಾಯ ಮಾಡಬಲ್ಲೆ. ನೀನು ಕೊಲೆಗಾರ ಎಂದು ನನಗೆ ಗೊತ್ತು. ನೀನು ಮಾಡಿದ ಕೊಲೆಗಳ ಬಗ್ಗೆ ನನ್ನ ಬಳಿ ವಿವರವಿದೆ." ವಿಹಾರಿಯ ಮುಖ ನೋಡಿದ ಸಮ್ಮಿಶ್ರ. ಮುಳ್ಳಿನ ಖುರ್ಚಿಯ ಮೇಲೆ ಕುಳಿತಂತಿತ್ತು ವಿಹಾರಿಗೆ. ಬಹಳ ಹೊತ್ತಿನಿಂದ ನೋಡುತ್ತಿದ್ದ ಸಸ್ಪೆನ್ಸ್ ಸಿನಿಮಾವೊಂದರ ಮಹತ್ವದ ತೆರೆ ಕಳಚಿ ಬಿದ್ದಂತಿತ್ತು. ನನ್ನ ಕೆಲಸ ಮಾಡು, ಇಲ್ಲವೇ ಜೈಲು ಸೇರು. ಅದನ್ನು ಎಷ್ಟು ಚಂದ ರೀತಿಯಲ್ಲಿ ಹೇಳುತ್ತಿದ್ದಾನೆ. ಮಾಡದಿದ್ದರೆ ನಿನ್ನನ್ನು ನಾನು ಹಿಡಿದುಕೊಡುತ್ತೇನೆ ಎಂದು ಹೆದರಿಸುತ್ತಿಲ್ಲ. ಕೆಲಸ ಮಾಡು, ನಿನ್ನನ್ನು ಬಚಾವು ಮಾಡುತ್ತೇನೆಂದು ಅಭಯ ನೀಡುತ್ತಿದ್ದಾನೆ. ಮಾತುಗಳ ಜೋಡಣೆಯಲ್ಲಿ ಅದೆಂತಹ ಅರ್ಥ ವ್ಯತ್ಯಾಸವಿರುತ್ತದೆ. ಅದಕ್ಕೆ ಅಲ್ಲವೇ ಪ್ರಿಯಂವದಾ ರಾಜ್ ಕೂಡ ಈತನನ್ನು ಹತ್ತಿರಕ್ಕೆ ಬಿಟ್ಟು ಕೊಂಡಿದ್ದು. ಇದನ್ನೆಲ್ಲಾ ಯೋಚಿಸುವುದಕ್ಕಿಂತ ಮುಂದೇನು ಮಾಡಬೇಕು ಎಂದು ಯೋಚಿಸಬೇಕು. 
"ಕೇವಲ ದೆಹಲಿಯ ಆಸ್ಪತ್ರೆಯಲ್ಲಿ ಮಾಡಿದ ಕೊಲೆಯಲ್ಲ, ನೀನು ಮುಂಬೈಯಲ್ಲಿ ಇನ್ನೊಂದು ಕೊಲೆ ಮಾಡಿದೆ ಅದರ ಬಗ್ಗೆಯೂ ಪೊಲೀಸರಿಗೆ ವಿವರ ಸಿಕ್ಕಿದೆ. ಅವರೀಗ ಇನ್ನೊಬ್ಬನ ಮೇಲೆ ಅನುಮಾನಗೊಂಡು ಬಲೆ ಬೀಸಿದ್ದಾರೆ. ಆದರೆ ಅದು ಬಹಳ ಹೊತ್ತು ನಿಲ್ಲುವ ಅನುಮಾನವಲ್ಲ. ಆಮೇಲೆ ಅವರು ಸುಳಿವು ಹಿಡಿದು ನಿನ್ನ ಹಿಂದೆ ಬೀಳುತ್ತಾರೆ. ಪೊಲೀಸರು ಯಾವ ಕಾರ್ನರ್ ನಿಂದ ವಿಚಾರಣೆ ಸ್ಟಾರ್ಟ್ ಮಾಡಿದ್ದಾರೆ ಎಂದು ನಾನು ಹೇಳಬಲ್ಲೆ. ನಿನ್ನ ಬಳಿ ಒಂದು ನಿಮಿಷ ಕಾಲಾವಕಾಶವಿದೆ." ಎಂದಷ್ಟೇ ಹೇಳಿ ಸುಮ್ಮನೇ ಕುಳಿತ ಸಮ್ಮಿಶ್ರ. 
ಜೀವನದಲ್ಲಿ ಒಂದು ನಿಮಿಷದ ಬೆಲೆ ಏನೆಂಬುದನ್ನು ಬಹುತೇಕ ಜನ ಸಾಯುವ ತನಕ ಅರಿಯುವುದಿಲ್ಲ. ನಿಮಿಷದ ಸಾವಿರದ ಒಂದು ಭಾಗದಲ್ಲಿ ಗುರಿ ನೋಡಿ ಟ್ರಿಗರ್ ಒತ್ತುವ ಗರುಡನಿಗೆ, ಪ್ರಿಯಂವದಾ ರಾಜ್ ಳಂಥ ಕಿಂಗ್ ಮೇಕರ್ ಳ ಕ್ಷಣ ಕ್ಷಣಗಳ ಮ್ಯಾನೇಜ್ ಮಾಡುವ ಸಮ್ಮಿಶ್ರನಂಥವರಿಗೆ ನಿಮಿಷವೆಂಬುದು ಬಹು ಅಮೂಲ್ಯ. ವಿಹಾರಿಯ ಬಳಿ ಬೇರೆ ದಾರಿ ಉಳಿದಿಲ್ಲ. ಪ್ರಿಯಂವದಾ ರಾಜ್ ಳಂಥ ಕಿಂಗ್ ಪಿನ್ ಗೆ ಚೆಕ್ ಮೀಟ್ ಮಾಡಿದ ಸಮ್ಮಿಶ್ರ ಆತ. ಮತ್ತೆ ಹತ್ತು ವರ್ಷದ ಅನುಭವವೂ ಆತನ ಸಾಥ್ ನೀಡಿದೆ ಈಗ. ಮತ್ತು ಪಕ್ವವಾಗಿದ್ದಾನೆ ಸಮ್ಮಿಶ್ರ. ಆತ ಚೆಕ್ ಕೊಟ್ಟರೆ ಮುಗಿಯಿತು. ಚೆಕ್ ಎಂಡ್ ಮೀಟ್. 
"ನಿನ್ನ ಒಂದು ನಿಮಿಷ ಮುಗಿಯಿತು ವಿಹಾರಿ.." ಎದ್ದು ನಿಂತ ಸಮ್ಮಿಶ್ರ. 
"ನಾನು ನಿನ್ನ ಕೆಲಸಗಳನ್ನು ಮಾಡಿದ ಮೇಲೂ ಈ ವಿವರಗಳು ಪೋಲೀಸರ ಕೈ ಸೇರುವುದಿಲ್ಲ ಎಂದು ಏನು ಗ್ಯಾರೆಂಟಿ??" 
ನಕ್ಕ ಸಮ್ಮಿಶ್ರ. "ವಿಹಾರಿ ಬ್ರದರ್, ನಾನು ರಾಜಕೀಯ ವಲಯದಲ್ಲಿರುವವನು. ಇದಕ್ಕಿಂತ ದೊಡ್ಡ ಸತ್ಯಗಳು ನನ್ನಲ್ಲಿವೆ. ನೀನು ಮಾಡಿದ್ದು ಸಾಸಿವೆ ಕಾಳಿನಷ್ಟು ಸಣ್ಣ ತಪ್ಪುಗಳಷ್ಟೆ. ತಿಮಿಂಗಲಗಳನ್ನು ನೀನಿನ್ನೂ ನೋಡಿಲ್ಲ. ಈ ಸಮುದ್ರಕ್ಕೆ ನೀನಿಗಷ್ಟೇ ಒಳಕ್ಕೆ ಬರುತ್ತಿದ್ದೀಯಾ.. ಎಲ್ಲಿಯವರೆಗೆ ನೀನು ನನ್ನ ಆಶ್ರಯದಲ್ಲಿರುತ್ತಿಯೋ ಅಲ್ಲಿಯವರೆಗೆ no one can touch you.." ಸಣ್ಣಗೆ ಸಿಳ್ಳೆ ಹಾಕಿದ ಸಮ್ಮಿಶ್ರ. ವಿಹಾರಿಯ ಉತ್ತರವೆನೆಂದು ಆತ ತಿಳಿದುಕೊಂಡಿದ್ದ. ಈಗಲ್ಲ ವಿಹಾರಿಯನ್ನು ಎತ್ತಾಕಿಕೊಂಡು ಬರಲು ಹೇಳಿದಾಗಲೇ ಆತ ಅದನ್ನು ಬಲ್ಲ. ಬಾಗಿಲು ಹಾಕಿಕೊಂಡು ಹೋದ ಇಬ್ಬರೂ ವಾಪಸ್ ಬಂದರು. ಎರಡು ನಿಮಿಷದಲ್ಲಿ ವಿಹಾರಿಯೇದುರು ಕಂಪ್ಯೂಟರ್ ಗಳು ಜೋಡಣೆಯಾದವು. ನೋಡುತ್ತಲೇ ತಿಳಿಯಿತು ಅವೆಷ್ಟು ಸುಪರ್ ಫಾಸ್ಟ್ ಕಂಪ್ಯೂಟರ್ ಗಳೆಂದು. ಸಮ್ಮಿಶ್ರನ ತಲೆಗೆ ಸಾಟಿಯಿದೆಯಾ ಎಂದುಕೊಂಡ. ಸಮ್ಮಿಶ್ರನಿಗೆ ಮೊದಲೇ ಗೊತ್ತಿದೆ ವಿಹಾರಿ ತಪ್ಪಿಸಿಕೊಳ್ಳಲಾರ. ಒಂದಲ್ಲ ಒಂದು ರೀತಿಯಿಂದ ತನ್ನಿಂದ ಕೆಲಸ ಮಾಡಿಸುತ್ತಾನೆ. ಹಾಗಾಗಿಯೇ ಎಲ್ಲ ರೆಡಿ ಮಾಡಿಸಿದ್ದಾನೆ. hats off ಸಮ್ಮಿಶ್ರ ಎಂದುಕೊಂಡ ಮನಸ್ಸಿನಲ್ಲಿಯೇ ವಿಹಾರಿ. 
ಕಂಪ್ಯೂಟರ್ ಸೆಟ್ ಮಾಡಿ ಹೊರಹೋಗುತ್ತಲೇ "ವಿಹಾರಿ, ನಿನ್ನ ಮೊದಲ ಟೆಸ್ಟ್ ಆಗಿ ನಿನ್ನನ್ನು ನೀನು ಉಳಿಸಿಕೋ. ಪೊಲೀಸರು ಏರ ಪೋರ್ಟಿನ ಸಿಸಿಟಿವಿ ಫೋಟೇಜ್ ನೋಡುತ್ತಿದ್ದಾರೆ. ಈಗವರು ಬೇರೆಯವರ ಮೇಲಿನ ಅನುಮಾನದಿಂದ ಅರ್ಧವಷ್ಟೇ ಇನವೆಷ್ಟಿಗೇಶನ್ ಮಾಡಿದ್ದಾರೆ. ಅದಕ್ಕೆ ನೀನಿನ್ನು ಇಲ್ಲೇ ಇರುವೆ. ಅವರು ಫುಲ್ ವಿಡಿಯೋ ನೋಡಿದರೆ ಸಿಗುವುದು ನೀನೇ. ಹಾಗಾಗಿ You know what to do next!!" 
ಅಷ್ಟಲ್ಲದೇ ಮುಂಬೈಯಲ್ಲಿ ನಿನ್ನ ಹತ್ಯಾ ಪ್ರಯತ್ನದ ನಂತರ ಒಬ್ಬ ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾನೆ. ಪೊಲೀಸರ ಸಂಶಯ ಈಗ ಆತನ ಮೇಲೆಯೇ ಇದೆ. 
ಆತನೇ ಆಸ್ಪತ್ರೆಗೆ ಸೇರಿಸಿದ ಎಂಬ ಮಾಹಿತಿಯೇ ಇಲ್ಲದಂತೆ ಮಾಡಿದರೆ!!??"
ಸಮ್ಮಿಶ್ರ ಎಂಥ ಚಾಣಾಕ್ಷ ಎಂದು ತಿಳಿಯಿತು ವಿಹಾರಿಗೆ. ತನ್ನನ್ನು ಉಳಿಸಿಕೊಳ್ಳಲು ಇನ್ನೊಬ್ಬನನ್ನು ಬಲಿ ಕೊಡುವುದು ತಪ್ಪಲ್ಲವಾ?? ಆದರೆ ವಿಹಾರಿಗೆ ಬೇರೆ ದಾರಿ ಕಾಣಲಿಲ್ಲ. ಒಮ್ಮೆ ಆ ಮಾಹಿತಿಗಳನ್ನೆಲ್ಲ ಅಳಿಸಿದರೆ ಮತ್ತೆ ಸಮ್ಮಿಶ್ರ ನಿಗೂ ಸವಾಲ್ ಹಾಕಬಹುದು ಎಂದುಕೊಂಡ ವಿಹಾರಿ. 
"ಈಗ ಉಳಿದಿರುವುದು ಒಂದೇ, Hacking!! Airport cctv database. ಆಸ್ಪತ್ರೆಯ database. ಮಾಹಿತಿ ತಪ್ಪಿಸಬೇಕು, ಅಳಿಸಬೇಕು. ವಿಹಾರಿಯ ಕೈ ಬೆರಳು ಕೀಬೋರ್ಡ್ ನ ಮೇಲೆ ತಲೆಗೆ ಸ್ಫರ್ಧಿಸುವಂತೆ ಓಡತೊಡಗಿತು. ಸಣ್ಣ ಮುಗುಳ್ನಗೆಯೊಂದಿಗೆ ಹೊರಬಿದ್ದ ಸಮ್ಮಿಶ್ರ. 
ಆಸ್ಪತ್ರೆಯ ಸಿಸಿಟಿವಿ ಡೇಟಾದಲ್ಲಿ ಶಾಸ್ತ್ರಿಯ ಮುಖದ ಬದಲು ಇನ್ನೊಬ್ಬ ವ್ಯಕ್ತಿಯ ಮುಖವನ್ನು ಅದೆಷ್ಟು ಚಂದವಾಗಿ ವಿಹಾರಿ ಸೇರಿಸಿದ್ದನೆಂದರೆ? ಪ್ರತಾಪ್, ಕ್ಷಾತ್ರನ ಜೊತೆ ಬಂದು ವಿಡಿಯೋ ನೋಡಿದ ಶಾಸ್ತ್ರಿಯೇ ಅವಾಕ್ಕಾಗಿ ಹೋಗಿದ್ದ.
ವಿಹಾರಿ.. ದಿ ಕಿಲ್ಲರ್.
ಶಾಸ್ತ್ರಿ... ದಿ ಬ್ರಿಲಿಯಂಟ್..!!
ಕ್ಷಾತ್ರ.. ಒನ್ ಮ್ಯಾನ್ ಆರ್ಮಿ..!!
ಸಮ್ಮಿಶ್ರ.. ದಿ ಗೇಂ ಪ್ಲಾನರ್
ಗರುಡ.. ದಿ ಅಸಾಸಿನ್
ಒಬ್ಬರ ಹಾದಿಗಳು ಇನ್ನೊಬ್ಬರ ಹಾದಿಯೊಂದಿಗೆ ಹಾಸುಹೊಕ್ಕಾಯಿತು. ಸಮಯ ವೇಗವಾಗಿ ಓಡತೊಡಗಿತು. ವಿಹಾರಿ ವೀಡಿಯೊಗಳನ್ನು ಬದಲಿಸುವ ಮುನ್ನವೇ ಅದರ ಕಾಪಿಗಳನ್ನು ಸಮ್ಮಿಶ್ರ ತೆಗೆಸಿ ಇಟ್ಟುಕೊಂಡಿದ್ದಾನೆ ಎಂಬ ಸಣ್ಣ ಸಂಶಯವು ವಿಹಾರಿಗೆ ಬರದೆ ಹೋಯಿತು.
*........................................................*...............................................*
ಮಾತುಗಳು ವರ್ಷಿಸುತ್ತವೆ.. ಭಾವಗಳು ಸ್ಪರ್ಷಿಸುತ್ತವೆ.. ಪ್ರತೀ ಉಸಿರು ನಿನ್ನ ನೆನೆದು ಹರ್ಷಿಸುತ್ತದೆ. ನೀರಿನಲೆಗಳ ಮೇಲೆ ಚಂದ್ರನ ಪ್ರತಿಬಿಂಬ ಮೂಡಿ, ರಾತ್ರಿಯಲ್ಲಿ ಅರಳಿದ ಮುದುಡು ತಾವರೆ ತನ್ನ ಕನಸಿನಲ್ಲಿ ಚಂದದ ಬಿಳುಪು ರಾಜಹಂಸದ ಜೊತೆ ಲಲ್ಲೆಗರೆಯುವ ಸುಂದರ ಪ್ರಣಯ ಪ್ರಲಾಪವೊಂದು ನನ್ನ ಮನದಲ್ಲೂ ಆಗಾಗ ರೆಕ್ಕೆ ಬಿಚ್ಚಿ ಹಾರುತ್ತದೆ. ಯೌವ್ವನವು ಇಂದು ಬಂದು ನಾಳೆ ಹೋಗುವ ಸೊಗಸುಗಾರ. ಪ್ರೀತಿಯೆಂಬುದು ಮಾತ್ರ ಕೊನೆಯ ತನಕ ಮಧುರ ನೆನಪುಗಳಾಗಿ, ವರ್ತಮಾನದ ಊರುಗೋಲಾಗಿ ನಮ್ಮ ಜೊತೆ ಉಳಿದು ಹೋಗುವ ದಿವ್ಯ ಆಟಗಾರ. ನೀ ಹುಚ್ಚು ಹುಡುಗ. ನನ್ನ ಮೈ ತಾಕಿದರೆ ಸಾವಿರ ಕನಸುಗಳು, ಸಾವಿರ ವಾಂಛೆಗಳು ಎದ್ದು ನಿಲ್ಲುತ್ತವೆ. ಅದೇಕೆ ನೀ ದೂರ ನಿಲ್ಲುತ್ತೀಯಾ?? ಇವಿಷ್ಟೂ ವರ್ಷಗಳು, ಬೇಸರವಿಲ್ಲದೆ ಕನಸಿನ ನೇಯ್ಗೆ ಹೆಣೆದು, ನನ್ನ ಪ್ರಪಂಚಕ್ಕೆ ಯಾರನ್ನೂ ಬಿಡದೆ, ಕಟ್ಟಿದ ಮಹಲುಗಳನ್ನೇ ಮತ್ತೆ ಮತ್ತೆ ಚಂದವಾಗಿಸಿ ಅದೆಂತಹ ರೂಪುರೇಷೆ ಕೊಟ್ಟಿದ್ದೇನೆ ನೋಡಬೇಕೆನ್ನಿಸುವುದಿಲ್ಲವಾ ನಿನಗೆ??
ನೀ ಸನಿಹ ಬಂದಾಗಲೆಲ್ಲ ನಾ ಕಟ್ಟಿದ ಸುಂದರ ಮಹಲುಗಳ ಬಾಗಿಲನ್ನು ನಿನಗಾಗಿ ತೆರೆಯುವ ಸಾಹಸ ಮಾಡಬೇಕೆಂದೆನ್ನಿಸುತ್ತಿದೆ. ನಿನಗೇಕೆ ಮನಸ್ಸಾಗುತ್ತಿಲ್ಲ?? ನನ್ನಂದ ಸಾಲದೇ!! ಅಥವಾ ಸುಮ್ಮನೆ ಕಾಡಿಸಿ ತಿನ್ನುವ ಸಂಚೆ?? 
ಇದು ಬರೀ ಕಾಮನೆಗಳ ಉದ್ವೇಗವಲ್ಲ ಹುಡುಗಾ. ಭಾವನೆಗಳ ಸುಪ್ತ ಸಮುದ್ರ. ಸಮುದ್ರದ ನೀರಿನಷ್ಟು ಭಾವಗಳು ಎದೆಯಲ್ಲಿ ತುಂಬಿದಾಗ ಅಲೆ ಮೂಡುವುದು ಸಹಜವಲ್ಲವೇ? ನೀನೇ ಹೇಳು.. 
ಅಲೆಅಲೆಯಾಗಿ ನಾ ನಿನ್ನತ್ತ ಸಾಗಿ ಬಂದರೆ ಭಯ ಬೀಳುವಿಯಾ?? ನನ್ನ ಆಸೆಯೇನೋ ಸಹಜವೇ..ದಡಗಳಿಗೆ ಬಡಿದು ಪ್ರತೀ ಕಣಗಳನ್ನು ನನ್ನಲ್ಲಿ ಹುದುಗಿಸಿಕೊಳ್ಳುವ ಆಸೆ. 
ಆದರೆ ಉಪ್ಪು ನೀರಿನಂಥ ಕ್ರೂರತೆ ನನ್ನಲ್ಲಿಲ್ಲ.ನಾನೇನಿದ್ದರೂ ಸಿಹಿ ನೀರು. ನಿನ್ನ ಪ್ರತೀ ಖಾಲಿ ಜಾಗಗಳಲ್ಲಿ ಸಂಚರಿಸಿ ಬೃಂದಾವನ ಸೃಷ್ಟಿಸುತ್ತೇನೆ ಹೊರತಾಗಲೀ, ನಿನ್ನ ಅಸ್ತಿತ್ವವನ್ನು ಪ್ರಶ್ನಿಸುವ ಅಹಂಕಾರ ನನ್ನ ಪ್ರೀತಿಗಿಲ್ಲ. ನಾನಿನ್ನು ತಡೆಯಲಾರೆ ಹುಡುಗಾ... ಬಹುಬೇಗ ಹತ್ತಿರ ಸೇರಿಸಿಕೊ... ಸೆರೆಯಲ್ಲೂ ಹಿತವಿದೆ ಎಂದೆನ್ನಿಸುತ್ತಿದೆ. ಜೀವನದಲ್ಲಿ ಯಾರಿಗೂ ಕೊಡದಿದ್ದನ್ನು ನಿನಗೆ ಕೊಡುತ್ತೇನೆ ಎಂದಿದ್ದೆನಲ್ಲ ನೀನಲ್ಲದೇ ಇನ್ಯಾರಿಗೆ ಕೊಡಲಿ? 
ಬಂದುಬಿಡು ಇನಿಯಾ.. ನನ್ನ ಪ್ರೀತಿಯ ಜಗತ್ತಿಗೆ..... 
ತಾನು ಬರೆದ ಪತ್ರ ಮತ್ತೊಮ್ಮೆ ತಾನೇ ಓದಿಕೊಂಡಳು ಸರೋವರಾ!! ನಾಚಿಕೆ ಭರಿತ ಕೆಂಪು ರಸಿಕತೆ ತುಂಬಿದ ಸುಂದರ ನಗುವೊಂದು ಅವಳ ಮುಖದಲಿ ಹಾದು ಹೋಯಿತು. ಬಹಳ ದಿನಗಳಿಂದ ಜೀವನವೆಖೋ ನೀರಸವೆನ್ನಿಸಿಬಿಟ್ಟಿತ್ತು. ಮಾಡಿದ್ದೇ ಕೆಲಸ ಮಾಡು.. ಸಂಬಳ ತಗೋ.. ಮತ್ತದೇ ಕೆಲಸ.. ಬದುಕು ಇಷ್ಟಕ್ಕೇ ಸೀಮಿತವಾ?? ಎನ್ನಿಸಿಬಿಟ್ಟಿತ್ತು. 
ಶಾಸ್ತ್ರಿಯ ಅಂತರಂಗ ಕೆಣಕಬೇಕು ಎಂದುಕೊಂಡು ಒಂದು ರಸಿಕತೆ ತುಂಬಿದ ಪತ್ರ ಬರೆದುಕೊಂಡು ತಾವು ಸಿಗುವ ಜಾಗಕ್ಕೆ ಬಂದು ಕುಳಿತಿದ್ದಳು.ಶಾಸ್ತ್ರಿ ಎಷ್ಟು ಹೊತ್ತಿಗೆ ಬರುತ್ತಾನೆ?? ಯಾವಾಗ ಪತ್ರ ಓದುತ್ತಾನೆ?? ಪತ್ರ ಓದಿದ ಕೂಡಲೇ ತನ್ನ ಸೊಂಟ ಗಿಲ್ಲುತ್ತಾನಾ? ಇಲ್ಲವೇ ತುಟಿಗೆ ತುಟಿ ಸೇರಿಸಿ ಕುಳಿತು ಬಿಡುತ್ತಾನಾ?? ಮತ್ತಷ್ತು ಕೆಂಪಾಯಿತು ಅವಳ ಮುಖ. 
ಹಿಂದಿನಿಂದ ಸದ್ದಾಯಿತು. ಶಾಸ್ತ್ರಿಯೇ ಬಂದ ಎಂದು ಎದ್ದು ನಿಂತಳು ಸರೋವರಾ ಖುಷಿಯಿಂದ. 
ಪ್ರತಾಪ್..!!
ಪೊಲೀಸ್ ಯುನಿಫಾರ್ಮ್ ನಲ್ಲಿರದೇ ಕ್ಯಾಶುವಲ್ ನಲ್ಲಿ ಬಂದಿದ್ದ. ಒಮ್ಮಲೇ ಅವಳ ಉತ್ಸಾಹಕ್ಕೆ ಯಾರೋ ನೀರೆರೆಚಿದಂತಾಯಿತು. ಕೈಯಲ್ಲಿರುವ ಕಾಗದವನ್ನು ಆದಷ್ಟೂ ಕಾಣದಂತೆ ಮಾಡಲು ಪ್ರಯತ್ನಿಸಿದಳು. ಆಶ್ಚರ್ಯಕರ ಭಾವವೊಂದು ಅವಳ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.
"ಇದೇನಿದು ಪ್ರತಾಪ್ ನೀವಿಲ್ಲಿ???" ಮಾತಿಗಷ್ಟೆ ಕೇಳಿದ್ದು ಅವಳು.
ಪ್ರತಾಪ್ ಕೂಡ ಅವಳ ಗೊಂದಲ ಅರಿತ. 
"ನಿಮ್ಮನ್ನು ನೋಡಿ ಮಾತನಾಡಿ ಹೋಗೋಣ ಎಂದು ಬಂದೆ. ಕುಳಿತುಕೊಳ್ಳಿ ಹೇಳುತ್ತೇನೆ." ಅವಳು ಕುಳಿತಿದ್ದ ಕಲ್ಲು ಬೆಂಚಿನ ಮೇಲೆ ಕುಳಿತ. 
ಶಾಸ್ತ್ರಿ ಇನ್ನೂ ಏಕೆ ಬಂದಿಲ್ಲ?? ಸಮಯಕ್ಕೆ ಬಹಳ ಮಹತ್ವ ಕೊಡುವ ವ್ಯಕ್ತಿ!! ಯಾವಾಗಲೂ ಕಾಯಿಸಿದ ವ್ಯಕ್ತಿಯಲ್ಲ. ಬೇಗ ಬಾ ಶಾಸ್ತ್ರಿ ಎಂದುಕೊಂಡಳು. ಅವಳಲ್ಲೊಂದು ಅನಕಂಫರ್ಟೇಬಲ್ ಚಡಪಡಿಕೆ ಪ್ರಾರಂಭವಾಯಿತು. 
ಒಂದು ನಿಮಿಷ ಸುಮ್ಮನೇ ಕುಳಿತ ಪ್ರತಾಪ ಸರೋವರಾಳ ಕಡೆ ನೋಡಿ, "ನಿಮ್ಮ ಅನಿಸಿಕೆ ಸರಿ, ಶಾಸ್ತ್ರಿ ಒಬ್ಬ ಕೊಲೆಗಾರ.."
ನಿಮಿಷಗಳೇ ಕಳೆದವು ಪ್ರತಾಪ್ ಏನು ಹೇಳಿದ ಎಂದು ಅರ್ಥ ಮಾಡಿಕೊಳ್ಳಲು. 
"You are lying.." ಅವಳ ಕಂಗಳಲ್ಲಿ ನೀರು ತುಳುಕಿತು. 
"ಇಲ್ಲಾ ಸರೋವರಾ, ನಿನ್ನ ಡೌಟ್ ಮೇಲೆ ಇನವೆಷ್ಟಿಗೇಶನ್ ಮಾಡಿದೆ. ಈಗ ಶಾಸ್ತ್ರಿ ಜೈಲಿನಲ್ಲಿದ್ದಾನೆ. ನಾಳೆ ಕೋರ್ಟ್ ಗೆ ಹಾಜರುಪಡಿಸುತ್ತೇನೆ. He is a culprit. 
ಏನು ಹೇಳಬೇಕೆಂದು ತಿಳಿಯಲಿಲ್ಲ ಸರೋವರಾಳಿಗೆ. ಉಕ್ಕಿ ಬರುತ್ತಿರುವ ಅಳುವನ್ನು ತುಟಿ ಕಚ್ಚಿ ತಡೆದುಕೊಂಡಳು. ಕೈಲಿದ್ದ ಕಾಗದ ಅಲ್ಲೇ ಮುದ್ದೆಯಾಗಿ ಹೋಯಿತು. ಮುರಿದು ಬೀಳುತ್ತಿರುವ ಅವಳ ಕನಸುಗಳ ಮಹಲಿಗೆ ಸಾಕ್ಷಿಯೆಂಬಂತೆ ಕಂಡಿತು ಮುದುಡಿದ ಕಾಗದ. ನಡೆದಿದ್ದನ್ನೆಲ್ಲ ವಿವರಿಸಿದ ಪ್ರತಾಪ್. ಆತನ ಮಾತು ಕೇಳಿದ ನಂತರ ಏನು ಮಾತನಾಡಬೇಕು? ಏನು ಮಾಡಬೇಕು ಎಂದು ತಿಳಿಯದೇ ಕುಳಿತಳು ಸರೋವರಾ. ಶೂನ್ಯ ಅವಳನ್ನು ಆವರಿಸಿತು. ಪ್ರತಾಪ್ ಅವಳ ಕೈಯನ್ನು ತನ್ನ ಕೈಯೊಳಗೆ ಸೇರಿಸಿದ. 
"ಸರೋವರಾ, ಆತ ನಿನಗೆ ಒಳ್ಳೆಯ ಸಂಗಾತಿಯಲ್ಲ. ಅಧ್ಯಾಯ ಮುಗಿಸಿ ಬಿಡು. ನಿನ್ನ ನಾನು ಬಲ್ಲೆ. ಒಳ್ಳೆಯ ಜೀವನವಿದೆ ನಿನಗೆ.." 
ಆತನ ಮಾತು ಅರ್ಥವಾಗುವ ಸ್ಥಿತಿಯಲ್ಲಿರಲಿಲ್ಲ ಆಕೆ. ಹಾಗೆಯೇ ಕುಳಿತೇ ಇದ್ದಳು. ಮೌನ ಮುಂದುವರೆಯಿತು. ಸ್ವಲ್ಪ ಸಮಯದ ಬಳಿಕ ಪ್ರತಾಪ್ ತಾನೇ ಆಕೆಯ ಕೈ ಇಂದ ಕೈ ತೆಗೆದು ಹೊರಡುತ್ತೇನೆಂದು ಎದ್ದು ನಿಂತ.
ಸರೋವರಾ ಕುಳಿತೆ ಇದ್ದಳು. ಮೌನದಲ್ಲಿ ಅದ್ದಿ ತೆಗೆದ, ಶಿಲ್ಪಿ ಕೆತ್ತಿದ ಮೂರ್ತಿಯಂತೆ, ಗಾಳಿಯು ಇಲ್ಲದಿರುವಾಗ ಶಾಂತವಾಗಿ ಅಲೆಯಿಲ್ಲದೆ ಚಲಿಸದೆ ನಿಂತ ಸರೋವರದಂತೆ ಮೌನದಲ್ಲಿಯೇ ಇದ್ದಳು ಸರೋವರಾ....
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/