Saturday, July 23, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 26

                                     ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 26

ಸ್ವಯಂವರಾ ಯೋಚಿಸುತ್ತ ಮಲಗಿದ್ದಳು. ಮುಂಬೈಯಿಂದ ದೆಹಲಿಗೆ ಬಂದು ಎರಡು ದಿನಗಳೇ ಕಳೆದು ಹೋಗಿತ್ತು. ಆದರೂ ಆಸ್ಪತ್ರೆಯ ಕಡೆ ಹೋಗಬೇಕು ಎಂಬ ಆಲೋಚನೆಯೇ ಬರಲಿಲ್ಲ. ಬಂದರೂ ಏನೋ ಆಲಸಿತನ ಅವಳನ್ನು ಆವರಿಸಿತ್ತು. ಅದಕ್ಕಿಂತಲೂ ಹೆಚ್ಚಾಗಿ ಶಾಸ್ತ್ರಿಯ ಕಥೆ ಏನಾಗಿರಬಹುದು ಎಂಬ ಯೋಚನೆಯೇ ಬಹಳ ಕಾಡುತ್ತಿತ್ತು. ನಾನಿಷ್ಟು ಅಂಜುಬುರುಕಿಯಾ!? ಕೇವಲ ಒಂದು ಕೊಲೆ ನೋಡಿದ್ದಕ್ಕೆ ಸ್ಕಿಜೋಫ್ರೆನಿಯಾ ಆವರಿಸಿಕೊಳ್ಳುವಷ್ಟು ಹೆದರು ಪುಕ್ಕಲು ಮನಸ್ಸಾ ನನ್ನದು!? ಹಾಸಿಗೆಯಲ್ಲಿ ಮಲಗಿದ್ದ ಅವಳು ಮಗ್ಗುಲಾದಳು.
ಜಗತ್ತಿನಲ್ಲಿ ಅದೆಷ್ಟೋ ಕೊಲೆ ಸುಲಿಗೆಗಳು ದಿನಾಲು ನಡೆಯುತ್ತಿರುತ್ತವೆ. ಅದನ್ನು ನೋಡಿದವರೆಲ್ಲ ನನ್ನಂತೆಯೇ ಆಗಿಬಿಡುತ್ತಾರಾ?? ಅದೆಷ್ಟೋ ಜನರು ಕೊಲೆ ಮಾಡಿಯೂ ಏನು ಮಾಡಿರದಂತೆ ಬದುಕುತ್ತಿರುವಾಗ ಕೊಲೆ ನೋಡಿದ ನಾನು ಇಷ್ಟು ಹೆದರುವುದೇಕೆ?? ಮನಸ್ಸು ಸ್ವಲ್ಪ ಸ್ಥಿಮಿತಕ್ಕೆ ಬಂದಿತು. ಕ್ಷಾತ್ರ ನೆನಪಿಗೆ ಬಂದ. ನನ್ನನ್ನು ತುಂಬಾ ಹಚ್ಚಿಕೊಂಡಿದ್ದಾನೆ. ಸೂಕ್ಷ್ಮಗಳನ್ನು ಗಮನಿಸುವ ಮನಸ್ಥಿತಿ ಆತನದಲ್ಲ.. ಅಥವಾ ಪರಿಸ್ಥಿತಿಯ ಒತ್ತಡಗಳು ಆತನನ್ನು ಹಾಗೆ ಮಾಡಿರಬಹುದು. ಒಳ್ಳೆಯ ಮನುಷ್ಯನೇ. ಬಾಯ್ಬಿಟ್ಟು ಮದೆವೆಯಾಗುತ್ತೀಯಾ? ಎಂದು ಕೇಳಿದ್ದಾನೆ. ಆದರೆ ತಪ್ಪೇನು!? ಇನ್ನೆಷ್ಟು ದಿನ ಈ ಒಂಟಿ ಬದುಕು? ಒಂದಲ್ಲ ಒಂದು ದಿನ ಒಬ್ಬನಿಗೆ ಜೋತುಬೀಳಲೇಬೇಕು. ಕ್ಷಾತ್ರ ಯಾಕಾಗಬಾರದು ಎಂದು ಆತನ ಜೊತೆ ನಿಲ್ಲಬೇಕಾ?? ಇಷ್ಟ ಕಷ್ಟಗಳನ್ನು ಯೋಚಿಸಬೇಕಾ??
ಅಂದು ಹುಚ್ಚಾಸ್ಪತ್ರೆಯಲ್ಲಿ ಗಂಡು, ಹೆಣ್ಣು ಎಂದು ಎಲ್ಲರ ತಲೆ ಕೆಡಿಸಿ ಕೊಲೆ ಮಾಡಿ ಹೊರ ನಡೆದ ವ್ಯಕ್ತಿ ನೆನಪಾದ. ಯಾರು ಆತ!!? ಖಂಡಿತ ಶಾಸ್ತ್ರಿಯಂತೂ ಅಲ್ಲ. ಆತನ ಕಣ್ಣುಗಳನ್ನು ನಾ ಮರೆಯಲಾರೆ. ಆ ಕಣ್ಣುಗಳಲ್ಲಿ ಭಾವವೇ ಇಲ್ಲ. ಇಲ್ಲವೇ ಅವನ ಕಣ್ಣುಗಳಲ್ಲಿ ತುಂಬಿದ ಭಾವನೆಗಳು ನಾ ಅರ್ಥಮಾಡಿಕೊಳ್ಳುವುದಕ್ಕಿಂತ ಹೆಚ್ಚಿನದು.
ಯಾರು ಆತ?? ಯಾಕೆ ಕೊಲೆ ಮಾಡಿದ?? ಕ್ಷಾತ್ರ ಹೇಳುವಂತೆ ಮಾನಸಿಕ ರೋಗಿಯಿರಬಹುದೇ? ನಾನೇ ಅರ್ಥ ಮಾಡಿಕೊಳ್ಳದಷ್ಟು ಅರ್ಥಗರ್ಭಿತ ಕಣ್ಣುಗಳು.. ಇಂಥವನೊಬ್ಬ ನನ್ನ ಜೊತೆಗಾರನಾಗಿದ್ದರೆ!! ಮತ್ತೆ ಮಗ್ಗಲು ಬದಲಾಯಿಸಿದಳು. ಹೋಗಿ, ಹೋಗಿ ಒಬ್ಬ ಕೊಲೆಗಾರನನ್ನು ಜೊತೆಗಾರನನ್ನಾಗಿ ಯಾಕೆ ಕಲ್ಪಿಸಿಕೊಳ್ಳುತ್ತಿದ್ದೇನೆ? ಕ್ಷಾತ್ರನಿಗೂ ಅವನಿಗೂ ಎಲ್ಲಿಂದ ಎಲ್ಲಿಯ ಹೋಲಿಕೆ!?
ಇನ್ನು ಯೋಚಿಸುವುದು ಬೇಡ. ಕ್ಷಾತ್ರನಿಗೆ ಓಕೆ ಎಂದು ಬಿಡುತ್ತೇನೆ ಎಂದುಕೊಂಡಳು. ಜೀವನದಲ್ಲಿ ಒಂದು ಬಹುಮುಖ್ಯ ನಿರ್ಧಾರ ಮಾಡಿದಾಗ ಖುಷಿಯಾಗಬೇಕು ಇಲ್ಲವೇ ದುಃಖವಾಗಬೇಕು. ಎರಡು ಇಲ್ಲವಾದರೆ ಅದು ಮುಖ್ಯ ನಿರ್ಧಾರವಾಗಿರಲು ಸಾಧ್ಯವಿಲ್ಲ.
ನನಗೆ ಖುಷಿಯಾಯಿತಾ?? No.. ದುಃಖ..!! ಯೋಚಿಸುತ್ತ ಮತ್ತೆ ಮಗ್ಗಲು ಬದಲಾಯಿಸುವ ಮುನ್ನ ನಿದ್ರೆ ಅವಳನ್ನು ಆವರಿಸಿತ್ತು.
ನಿದ್ರೆಯಲ್ಲಿ ಅವಳ ಮುಗ್ಧ ಹಾಗೂ ಮುದ್ದು ಮುಖ ತುಂಬಾ ಸುಂದರವಾಗಿ ಮೂಡಿತು. ಆ ಮುದ್ದು ಮುಖ ಕ್ಷಾತ್ರನ ಕನಸಿನಲ್ಲಿ ಕಾಣಿಸಿಕೊಂಡಿತು...
*................................................*......................................................*
WIH.. Wallet Investment Holdings.. ವಿಹಾರಿಯ ಬೆರಳುಗಳು ಕಂಪ್ಯೂಟರ್ ಕೀ ಮೇಲೆ ಸರಸರನೆ ಓಡಾಡಿಕೊಂಡಿದ್ದವು. WIH ಸರ್ವರ್ ಮಷಿನ್ ಒಳಗೆ ಸೇರಿಕೊಂಡಿದ್ದ ಆತ. ಜಗತ್ತಿನ ಅತ್ಯಂತ ಸೆಕ್ಯೂರ್ಡ್ ಸರ್ವರ್ ಗಳಲ್ಲಿ ಒಂದು. ಆದರೆ ವಿಹಾರಿಗೆ ಸವಾಲಾಗುವ ಸೆಕ್ಯೂರಿಟಿ ಫೈರ್ ವಾಲ್ ಗಳಿಲ್ಲ ಎಂದೇ ಹೇಳಬಹುದು. ಒಮ್ಮೆ ಅದರ ಫೈರ್ ವಾಲ್ ಭೇದಿಸಿ ಒಳಸೇರಿಕೊಂಡ ವಿಹಾರಿ ಪ್ರಿಯಂವದಾ ರಾಜ್ ಎಂದು ಸರ್ಚ್ ಮಾಡಿದ್ದ. ಯಾವುದೇ ಮಾಹಿತಿ ಕಂಡು ಬರಲಿಲ್ಲ. ಮತ್ತೆ ತಲೆ ಬಿಸಿ ಶುರುವಾಗಿತ್ತು ವಿಹಾರಿಗೆ ಯಾವ ಹೆಸರಿನಲ್ಲಿ ಹಣ ಇಟ್ಟಿರಬಹುದು ಪ್ರಿಯಂವದಾ ರಾಜ್? ದುಟ್ಟಿರಬಹುದಾ ಅಥವಾ ಇನ್ಯಾವುದೋ ಮುಖ್ಯ ಮಾಹಿತಿಯನ್ನು ಇಟ್ಟಿರಬಹುದಾ?? ಇಲ್ಲವೇ ನನ್ನ ತಲೆಯಲ್ಲಿ ಹುಟ್ಟಿಕೊಂಡ ಸಂಶಯಗಳೆಲ್ಲಾ ಸುಳ್ಳಿರಬಹುದಾ?? ಯೋಚನೆ ಮಾಡುತ್ತಲೇ HIM ಎಂದು ಹುಡುಕಿದ. "One record found".
ಕುಳಿತಿದ್ದಲ್ಲಿಂದ ಎದ್ದು ಕುಣಿಯಬೇಕು ಎನ್ನುವಂತಾಯಿತು. ನಿಜವಾದ HIM ಇಲ್ಲಿದೆ. ಗುಡ್.. ಅಂದರೆ ಹಿಮಾಂಶುವಿಗೆ ಏನಾದರೂ ಮಾಹಿತಿ ನೀಡಲು HIM ಎಂದು ಬರೆದಿದ್ದಾಳೆಯೇ?? ಆತನಿಗೆ WIH ನಲ್ಲಿ ತಾಯಿಯ ಖಾತೆ ಇರುವುದು ಗೊತ್ತಿರಬಹುದು. ಅದಕ್ಕೆ ಉಳಿದ ಮಾಹಿತಿ ನೀಡಲು HIM ಎಂದು ಬರೆದಿದ್ದಾಳೆ. ಇದನ್ನು ಸಮ್ಮಿಶ್ರ ನೋಡಿದ್ದಾನೆ. ನಾನೀಗ ಸಮ್ಮಿಶ್ರನಿಗೆ ಹೇಳಿದರೆ ಆತ ಏನು ಮಾಡಬಹುದು? ಹಿಮಾಂಶುವಿಗೆ ಇದರ ಬಗ್ಗೆ ಹೇಳಬಹುದಾ? ಅಥವಾ ತಾನು ದುರುಪಯೋಗಪಡಿಸಿಕೊಂಡು ಕೈಎತ್ತಿಬಿಡಬಹುದಾ?? ಸಮ್ಮಿಶ್ರನನ್ನು ನಾನೆಷ್ಟು ನಂಬಬಹುದು? ಯೋಚನೆ ಮುಂದೆ ಸಾಗಿಕೊಂಡೆ ಇತ್ತು. ಅದೇನೇ ಇರಲಿ, ಇದರಲ್ಲಿ ನಿಜವಾಗಿಯೂ ಇರುವುದು ಏನು ಎಂದು ನೋಡಲು HIM ಅಕೌಂಟ್ ಒಳಗೆ ಏನಿದೆ ತಿಳಿದು ಕೊಳ್ಳಬೇಕು. ಆತ ಮತ್ತೆ WIH ನ ಎಡ್ಮಿನ್ ಸ್ಕ್ರೀನ್ ತೆಗೆದು ಅದರಲ್ಲಿ HIM ಎಂದು ಬರೆದು ಸರ್ಚ್ ಹೊಡೆದ. ಪರದೆಯ ಮೇಲೆ ಪಟಪಟನೆ ಅಕ್ಷರಗಳು ಮೂಡಿದವು.
Welcome raj, Please enter your password to continue..
ಇದೇನು ನಾನು ಎಡ್ಮಿನ್ ಸ್ಕ್ರೀನ್ ನಲ್ಲಿದ್ದರೂ ಪಾಸ್ ವರ್ಡ್ ಕೇಳುತ್ತಿದೆ. ಕೇವಲ ರಾಜ್ ಮಾತ್ರ ಡಿಟೇಲ್ಸ್ ನೋಡಬಹುದು. ಸಾಧಾರಣವಾಗಿ ಬ್ಯಾಂಕ್ ಗಳಲ್ಲಿ ಖಾತೆದಾರನ ಹೆಸರೊಂದಿದ್ದರೆ ಮ್ಯಾನೇಜರ್ ಗಳು ಅಥವಾ ಎಡ್ಮಿನ್ ಗಳು ಖಾತೆಯ ಮಾಹಿತಿಗಳನ್ನು ನೋಡಬಹುದು. ಕಪ್ಪುಧಂಧೆಯ ಈ ಬ್ಯಾಂಕ್ ಗಳಲ್ಲಿ ಎಡ್ಮಿನ್ ಗಳು ಕೂಡ ಎಕೌಂಟ್ ಗಳ ಮಾಹಿತಿಗಳನ್ನು ನೋಡುವಂತಿಲ್ಲ.
ಇದಪ್ಪಾ ಮಾತಂದ್ರೆ.. ಮತ್ತೆ ತಲೆಬಿಸಿ ವ್ಯವಹಾರ.. ಈಗ ಮತ್ತೆ ಪಾಸ್ ವರ್ಡ್ ಕ್ರ್ಯಾಕ್ ಮಾಡಬೇಕು. ಒಟ್ಟಿನಲ್ಲಿ ಈ ಸಮ್ಮಿಶ್ರ ನನಗೆ ಒಳ್ಳೆಯ ತಲೆಬಿಸಿ ತಂದಿಟ್ಟ ಎಂದುಕೊಂಡು ಮತ್ತೆ ಕೆಲಸ ಮುಂದುವರೆಸಿದ ವಿಹಾರಿ.
*...................................................*.....................................................*
ಪ್ರತಾಪ್ ಕಡೆ ಕೆಂಗಣ್ಣು ಬೀರುತ್ತಲೇ ಎದ್ದು ನಿಂತ ಜಾನಕಿರಾಮ್ "ಆಬ್ಜೆಕ್ಷನ್ ಯುವರ್ ಆನರ್."
ಆತ ಇಷ್ಟು ಹೇಳುತ್ತಲೇ ಪ್ರತಾಪ್ ಹಸನ್ಮುಖನಾದ. ಜಾನಕಿರಾಮ್ ರ ಕೆಂಗಣ್ಣು ಆತನನ್ನು ಬಿಡಲಿಲ್ಲ. ತನ್ನಿಂದ ತಪ್ಪಾಯಿತು ಎಂದುಕೊಂಡು ಸುಮ್ಮನೆ ಕುಳಿತ ಪ್ರತಾಪ್. ಜಾನಕಿರಾಮ್ ಒಂದು ಗಾಢವಾದ ನಿಟ್ಟುಸಿರು ಬಿಟ್ಟು ಪ್ರಾರಂಭಿಸಿದರು. ಜಾನಕಿರಾಮ್ ಆಬ್ಜೆಕ್ಷನ್ ಎನ್ನುತ್ತಲೇ ಸರೋವರಲ್ಲಿಗೆ ಬೆವರು ಕಿತ್ತು ಬಂದಿತ್ತು. ತಾನಿಷ್ಟು ಹೊತ್ತು ಮಾಡಿದ ಪ್ರಯತ್ನವೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ಕರಡಿದಂತಾಯಿತೇ ? ಎಂದುಕೊಂಡಳು. ಅದೇ ಯೋಚನೆ ಶಾಸ್ತ್ರಿಯ ಅಂತರಂಗದಲ್ಲೂ ಹಾದು ಹೋಯಿತು.
"ಯುವರ್ ಆನರ್.. ಸರೋವರಾ ಹೇಳುತ್ತಿರುವುದೆಲ್ಲ ಸರಿ. ನ್ಯಾಯಾಂಗದ ಮೇಲೆ ಅವಳಿಗಿರುವ ಅಭಿಮಾನ ಹಾಗೂ ಪ್ರೀತಿಯೂ ಅನುಕರಣೀಯ. ಆದರೆ ಹದಿನೈದು ದಿನ ಎಂಬುದು ತುಂಬಾ ಹೆಚ್ಚಿನ ಸಮಯ. ಅವಳಿಗೆ ಅಷ್ಟು ವಿಚಾರಿಸಿಕೊಳ್ಳುವ ವಿಷಯವಿದ್ದರೆ ಮೂರು ದಿನದ ಸಮಯ ನನಗೆ ಒಪ್ಪಿಗೆಯಿದೆ."
ಸರೋವರಾಳಿಗೆ ಸ್ವಲ್ಪ ಸಮಾಧಾನವಾಯಿತು. ಹೇಗಾದರೂ ಮಾಡಿ ಒಂದು ವಾರದ ಸಮಯ ಪಡೆಯಬೇಕು. ಅಷ್ಟರಲ್ಲಿ ಮತ್ತೇನನ್ನಾದರೂ ಯೋಚಿಸಬಹುದು ಎಂದುಕೊಳ್ಳುತ್ತ ಎದ್ದು ನಿಲ್ಲಬೇಕು.. ಅದರ ಮೊದಲು ಶಾಸ್ತ್ರಿಯ ಮುಖ ನೋಡಿದಳು. ಶಾಸ್ತ್ರಿ Thumbs up ಮಾಡಿದ. ಅಂದರೆ ಮೂರು ದಿನ ಸಾಕೆಂದೇ?? ಯಾಕೆ ಹಾಗೆ ಹೇಳುತ್ತಿದ್ದಾನೆ ಎಂದು ಅರ್ಥವಾಗಲಿಲ್ಲ ಅವಳಿಗೆ.
ಜಾನಕಿರಾಮ್ ಹಾಗೇಕೆ ಹೇಳಿದ್ದಾರೆಂದು ಶಾಸ್ತ್ರಿ ಗ್ರಹಿಸಿ ಬಿಟ್ಟಿದ್ದ. ಏನಾದರೂ ಪ್ರತಾಪ್ ಎದ್ದು ನಿಲ್ಲದಿದ್ದರೆ ನ್ಯಾಯಾಂಗ ಬಂಧನ ಸಾಧ್ಯವೇ ಇಲ್ಲ ಎಂದು ಹೇಳುವವರಿದ್ದರು ಜಾನಕಿರಾಮ್. ಅಷ್ಟರಲ್ಲಿ ಪ್ರತಾಪ್ ಮಾಡಿದ ತಪ್ಪಿನಿಂದ ಸಿಟ್ಟುಗೊಂಡು ಸರೋವರಾಳಿಗೆ ಮೂರು ದಿನ ಸಮಯ ಕೊಡಲು ನಿರ್ಧರಿಸಿದ್ದರು. ಈಗೇನಾದರೂ ಸರೋವರಾ ಮತ್ತೆ ವಿರೋಧಿಸಿ ಮಾತನಾಡಿದರೆ ಆ ಮೂರು ದಿನ ಸಮಯವು ಕೈತಪ್ಪಿ ಹೋಗುತ್ತದೆ. ಆ ಮೂರು ದಿನದಲ್ಲಿ ತಾನೇನು ಮಾಡಬಲ್ಲೆ ಎಂಬ ಯೋಚನೆ ಆತನಿಗೆ ಬಂದರೂ ಸಿಕ್ಕಷ್ಟಾದರೂ ಸಿಕ್ಕಿತಲ್ಲ ಎಂದು ಶಾಸ್ತ್ರಿ ಸರೋವರಾಳಿಗೆ ಆ ರೀತಿ ಸನ್ನೆ ಮಾಡಿದ್ದ.
ಸರೋವರಾಳಿಗೆ ಶಾಸ್ತ್ರಿ ಏಕೆ ಹಾಗೆ ಸನ್ನೆ ನೀಡಿದ ಎಂದು ತಿಳಿಯಲಿಲ್ಲವಾದರೂ ಅವನ ಮಾತನ್ನು ಮೀರುವ ಸಾಹಸಕ್ಕೆ ಹೋಗಲಿಲ್ಲ ಅವಳು.
"ಯುವರ್ ಆನರ್, ಜಾನಕಿರಾಮ್ ರಂಥ ಹಿರಿಯರು ನನ್ನ ಮೇಲೆ ಇಷ್ಟಾದರೂ ಅಭಿಮಾನ ತೋರಿಸಿ ಮೂರು ದಿನದ ಸಮಯ ಕೊಡುತ್ತಿರುವುದಕ್ಕೆ ಧನ್ಯವಾದಗಳು. ಮೂರು ದಿನದಲ್ಲಿ ನಾನು ಪೂರ್ತಿ ವಿವರ ಸಂಗ್ರಹಿಸಿ ಮತ್ತೆ ಕೋರ್ಟ್ ಗೆ ನನ್ನ ಕಕ್ಷಿದಾರನನ್ನು ಹಾಜರು ಪಡಿಸುತ್ತೇನೆ. ಇದಕ್ಕೆ ನನ್ನ ಒಪ್ಪಿಗೆಯಿದೆ.." ಎಂದಳು.
ಪ್ರತಾಪ್ ಕುಳಿತಲ್ಲಿಯೇ ಮಿಸುಕಾಡಿದ. ಆದರೆ ಮತ್ತೆ ಮರುಮಾತನಾಡಿದರೆ ಜಾನಕಿರಾಮ್ ಏನೆನ್ನುತ್ತಾರೋ? ಮೂರು ದಿನದಲ್ಲಿ ಶಾಸ್ತ್ರಿ ತಾನೇ ಏನು ಮಾಡಬಲ್ಲ? ಮೂರು ದಿನ ತಾನೇ? ನೋಡೋಣ.. ಎಂದುಕೊಂಡು ಸುಮ್ಮನೆ ಕುಳಿತ.
ಇಬ್ಬರು ಲಾಯರ್ ಗಳ ಒಪ್ಪಿಗೆ ಇರುವುದರಿಂದ ಜಡ್ಜ್ ಮುಂದೆ ಯೋಚಿಸದೆ "ಸರಿ ಹಾಗಿದ್ದರೆ ಈ ಕೇಸ್ ಅನ್ನು ಮೂರು ದಿನಗಳ ನಂತರ ಮತ್ತೆ ಕೇಳಲಾಗುವುದು " ಎಂದು ಷರಾ ಹಾಕಿ ಮೇಲೆದ್ದರು. ಸಧ್ಯಕ್ಕೆ ಬೀಸುವ ದೊಣ್ಣೆ ತಪ್ಪಿತು ಎಂದುಕೊಂಡ ಶಾಸ್ತ್ರಿ. ಸರೋವರಾ ಯಾವುದಕ್ಕೂ ಇರಲಿ ಎಂದು ಜಾನಕಿರಾಮ್ ಬಳಿ ಹೋಗಿ ಮತ್ತೆ ನಮಸ್ಕರಿಸಿ ಥ್ಯಾಂಕ್ಸ್ ಎಂದಳು.
ಸುಮ್ಮನೆ ಒಂದು ನಗು ನಕ್ಕು ಅವಳ ಬೆನ್ನು ತಟ್ಟಿ ಹೊರನಡೆದ ಜಾನಕಿರಾಮ್. ಅಲ್ಲಿಯೇ ಪಕ್ಕದಲ್ಲಿ ಅವರ ಜೊತೆ ಮಾತನಾಡಬೇಕು ಎಂದು ಬಂದು ನಿಂತ ಪ್ರತಾಪ್ ನನ್ನು ನಿರ್ಲಕ್ಷಿಸಿ ದುಡುದುಡು ಹೊರನಡೆದಿದ್ದರು. ಸರೋವರಾ ಆತನ ಮುಖ ನೋಡಿದಳು. ಆತ ತಲೆ ತಗ್ಗಿಸಿ ಜಾನಕಿರಾಮ್ ರ ಹಿಂದೆ ನಡೆದ.
ಇಬ್ಬರು ಕಾನಸ್ಟೆಬಲ್ ಗಳು ಬಂದು ಶಾಸ್ತ್ರಿಯನ್ನು ಕರೆದುಕೊಂಡು ಹೊರಟರು. ಹತ್ತಿರದಲ್ಲಿಯೇ ಇದ್ದ ಡೊಂಗ್ರಿ ಜೈಲಿಗೆ ಒಯ್ಯುತ್ತಾರೆ ಶಾಸ್ತ್ರಿಯನ್ನು. ಮೂರು ದಿನವೂ ಸರೋವರಾ ಎರಡು ಘಂಟೆ ಸಮಯ ಕಳೆಯಬಹುದು ಆತನ ಜೊತೆ. ಸರೋವರಾ ಆತನ ಬಳಿ ಬಂದು ನಾಳೆ ಸಿಗುತ್ತೇನೆ ಶಾಸ್ತ್ರಿ. ನೋಡೋಣ.. ನಮ್ಮಿಂದ ಏನು ಮಾಡಲು ಸಾಧ್ಯವೆಂದು.. ಎಂದಳು. ಶಾಸ್ತ್ರಿ ತಲೆಯಾಡಿಸಿದ.
"ಸರೋವರಾ, ನಾಳೆ ಬರುವಾಗ ಒಂದು ತಿಂಗಳ ನ್ಯೂಸ್ ಪೇಪರ್ ತರಬಲ್ಲೆಯಾ?? ಇಲ್ಲವೇ ಒಂದು ಲ್ಯಾಪ್ ಟಾಪ್ ಮತ್ತು Dongle ವ್ಯವಸ್ಥೆ ಮಾಡಿದರೆ ಇನ್ನು ಒಳ್ಳೆಯದು.." ಎಂದ ಶಾಸ್ತ್ರಿ.
ಸರೋವರಾ ಮುಗುಳ್ನಕ್ಕಳು. "ಅದೇನು ನಿನ್ನ ಮಾವನ ಮನೆ ನೋಡು ಅದೆಲ್ಲವನ್ನು ಬಿಡಲು. ನೀನು ನಡೆದದ್ದೆಲ್ಲವನ್ನು ಹೇಳು ನಾವೇನಾದರೂ ಮಾಡಲಾಗುತ್ತದೋ ಯೋಚಿಸೋಣ."
ಕಾನಸ್ಟೆಬಲ್ ಶಾಸ್ತ್ರಿಯ ಕೈಗೆ ಕೋಳ ಹಾಕಿ ಮುಂದಕ್ಕೆ ಕರೆದೊಯ್ದ. ಸರೋವರಾ ನೋಡುತ್ತಲೇ ನಿಂತಳು. ಶಾಸ್ತ್ರಿ ಪೊಲೀಸ್ ವ್ಯಾನ್ ಹತ್ತಿದ. ವ್ಯಾನ್ ಮುಂದೆ ಸಾಗುತ್ತಿದ್ದರೆ ಕಂಬನಿ ತುಂಬಿದ ಅವಳ ಕಣ್ಣುಗಳು ಹೋಗುತ್ತಿರುವ ವ್ಯಾನನ್ನೇ ಹಿಂಬಾಲಿಸಿತು. ಚಿತ್ರ ಮಸುಬು ಮಸುಬಾಗಿ ಕಂಡಿತು.
ಜಾನಕಿರಾಮ್ ಹಿಂದೆಯೇ ನಡೆದು ಬಂದ ಪ್ರತಾಪ್ ಸರ್, ಒಂದು ಮಾತು.. ಎಂದ. ಆಗಷ್ಟೇ ಜಾನಕಿರಾಮ್ ತಮ್ಮ ಮೊಬೈಲ್ ತೆಗೆದು ಪ್ರತಾಪ್ ನ ಮೆಸೇಜ್ ನೋಡಿದರು.
ಮೆಸೇಜ್ ಓದದೇ "ಏನು ಪ್ರತಾಪ್?? ಕೋರ್ಟಿನಲ್ಲಿ ಹೇಗೆ ವಾದಿಸಬೇಕೆಂದು ನೀವು ನನಗೆ ಹೇಳಿಕೊಡಬೇಕಾಗಿಲ್ಲ. ನನ್ನ ತಲೆ ನೆರೆತದ್ದು ಕೋರ್ಟಿನಲ್ಲಿಯೇ.. " ಎಂದು ಸಿಡುಕಿದರು.
"ಸರ್, ಅದು ಹಾಗಲ್ಲ. ನಾನು ಒಂದು ವಿಷಯ ನಿಮಗೆ ಹೇಳಬೇಕೆಂದಿದ್ದೆ. ಲಾಯರ್ ಆಗಿ ಬಂದಿದ್ದಾಳಲ್ಲಾ ಸರೋವರಾ, ಅವಳು.. ಶಾಸ್ತ್ರಿಯ ಪ್ರೇಯಸಿ. ಅವನ ಮೇಲೆ ಮೊದಲು ಕಂಪ್ಲೇಂಟ್ ಕೊಟ್ಟವಳು ಅವಳೇ" ಎಂದು ಅವರ ಮುಖ ನೋಡಿದ.
ಅಷ್ಟರಲ್ಲಿ ಜಾನಕಿರಾಮ್ ಪ್ರತಾಪ್ ಕಳಿಸಿದ್ದ ಮೆಸೇಜ್ ಕೂಡ ಓದಿದ್ದರು. ತನ್ನನ್ನು ಹೇಗೆ ಖೆಡ್ಡಾಕ್ಕೆ ಕೆಡವಿದಳು ಎಂದುಕೊಂಡಾಗ ಅವರಿಗೆ ತಕ್ಷಣ ಏನು ಹೇಳಬೇಕು ತಿಳಿಯಲಿಲ್ಲ. ಸುಮ್ಮನೆ ತಲೆಯಾಡಿಸಿದರು ಜಾನಕಿರಾಮ್. "ಓಹೋ.. ಹೀಗೂ ಇತ್ತೇ?? ಸರಿ ತೊಂದರೆಯೇನಿಲ್ಲ. ಅವನಿಗೆ ಬೇಲ್ ಸಿಗಲು ಸಾಧ್ಯವೇ ಇಲ್ಲ. ಮೂರು ದಿನದ ನಂತರ ನೀನೇ ಕರೆದೊಯ್ಯುವಂತೆ." ಎಂದು ಸಮಾಧಾನದ ಉತ್ತರವನ್ನೇ ನೀಡಿದರು. ಆದರೆ ಅವರ ಅಂತರಂಗ ಕುದಿಯುತ್ತಿತ್ತು. ಟ್ರಿಕ್ ಮಾಡಿ ತನ್ನಿಂದ ಸಮಯ ತೆಗೆದುಕೊಂಡರು. ತನ್ನ ಸರ್ವಿಸ್ ನಲ್ಲಿಯೇ ಹೀಗೊಂದು ಘಟನೆ ನಡೆದಿರಲಿಲ್ಲ. ಸರೋವರಾ.. ಶಾಸ್ತ್ರಿ.. You guys will pay for it.. ಎಂದುಕೊಂಡರು. ಅಷ್ಟರಲ್ಲಿ ಸರೋವರಾ ಅವರ ಎದುರಿನಲ್ಲಿಯೇ ಬಂದಳು. ಮತ್ತದೇ ನಗು ನಕ್ಕಳವಳು. ಈ ಬಾರಿ ಜಾನಕಿರಾಮ್ ನಗಲಿಲ್ಲ. ಅವರ ಮುಖದ ಕೆಂಪನ್ನು ನೋಡಿಯೇ ವಿಷಯ ಇವರಿಗೆ ತಿಳಿಯಿತು ಎಂಬುದರ ಅರಿವಾಯಿತು ಅವಳಿಗೆ. ತಲೆ ತಗ್ಗಿಸಿ ಆಕೆ ಸುಮ್ಮನೆ ಮುಂದೆ ನಡೆದಳು. ಜಾನಕಿರಾಮ್ "ಸಿಗು ನೀನು ಇನ್ನೊಮ್ಮೆ ಕೋರ್ಟಿನಲ್ಲಿ" ಎನ್ನುವಂತೆ ಅವಳನ್ನೇ ನೋಡುತ್ತಾ ಉಳಿದ. ದೂರ ದೂರ ನಡೆದ ಸರೋವರಾ ಮಸುಬು ಮಸುಬಾಗಿ ಕಂಡಳು ಜಾನಕಿ ರಾಮ್ ರಿಗೆ.
ಇನ್ನು ಅವರಿಬ್ಬರು ಕೋರ್ಟಿನಲ್ಲಿ ಸಿಗಲು ಬಹಳಷ್ಟು ದಿನವೇ ಕಾಯಬೇಕು ಎಂದು ಜಾನಕಿ ರಾಮ್ ರಿಗೆ ಆ ಕ್ಷಣದಲ್ಲಿ ತಿಳಿದಿರಲಿಲ್ಲ. ಅವರಿಗೇ ಏನು?? ಶಾಸ್ತ್ರಿ ಮತ್ತು ಸರೋವರಾಳಿಗೂ ಆ ವಿಷಯದ ಅರಿವಿರಲಿಲ್ಲ.
*.................................................*............................................................*
ಪಾಸ್ ವರ್ಡ್ ಹ್ಯಾಕ್ ಮಾಡಲು ಮತ್ತೆ ಸರ್ವರ್ ಮಷಿನ್ ಗಳನ್ನು ಉಪಯೋಗಿಸುವುದೇ ಎಂದು ಯೋಚಿಸಿದ ವಿಹಾರಿ. ಯಾಕೋ ಅವನ ಮನಸ್ಸು ಈ HIM ಒಳಗೇ ಈ ಪಾಸ್ ವರ್ಡ್ ಕೂಡ ಅಡಕವಾಗಿದೆ ಎಂದು ಹೇಳಲು ಪ್ರಾರಂಭಿಸಿತ್ತು. ಯಾಕೆಂದರೆ ಇದೇ 'HIM' 'WIH' ಆಗಿ ಆತನಿಗೆ ಬ್ಯಾಂಕ್ ಹೆಸರು ನೀಡಿತ್ತು. ಎರಡನೆಯದಾಗಿ ಎಕೌಂಟ್ ಹೆಸರು HIM. ಮಗನ ಹೆಸರಿನ ಮೊದಲ ಮೂರು ಇನ್ಷಿಯಲ್ ಸ್ಪೆಲ್ ಇಟ್ಟಿದ್ದಾಳೆ. ಆದರೆ HIM ನಲ್ಲೇ ಏನೋ ಇದೆ. ಈ ಎಕೌಂಟ್ ಒಳಗೆ ಏನಿರಬಹುದು? ಕೇವಲ ದುಡ್ಡು ಮಾತ್ರ ಅಲ್ಲ. ಇತರ ಸೀಕ್ರೆಟ್ ಗಳನ್ನು ಕೂಡ ಕಾಯುತ್ತವೆ ಇಂತಹ ಬ್ಯಾಂಕ್ ಗಳು. ಹಾಗಾಗಿ ಒಳಗೆ ಏನಿದೆ ಎಂದು ಹೇಳಲಾಗದು. ಆದರೆ ಊಹಾಪೋಹಗಳ ಪ್ರಕಾರ ಪ್ರಿಯಂವದಾ ರಾಜ್ ಅದೆಷ್ಟೋ ಕಪ್ಪು ಹಣವನ್ನು ಕೂಡಿಟ್ಟಿದ್ದಾಳೆ. ಕಪ್ಪು ಧಂಧೆಯೊಂದು ಇರದಿದ್ದರೆ ಭಾರತದ ಪರಿಸ್ಥಿತಿ ಹೇಗಿರುತ್ತಿತ್ತೋ?? ಎಲ್ಲರೂ ಕಳ್ಳರೇ. Money.. Black money.. ಕುಳಿತಿದ್ದ ಖುರ್ಚಿಯಲ್ಲಿ ಸುಮ್ಮನೆ ಹಿಂದೆ ಮುಂದೆ ಜೋಲಿ ಹೊಡೆಯತೊಡಗಿದ. Money.. Black money..
ಒಮ್ಮೆಲೇ ಶಾಕ್ ತಗುಲಿದಂತಾಯಿತು. HIM.. M for money.. HI Money..
ತಟಕ್ಕನೆ ಎದ್ದು ಕುಳಿತು ಪಾಸ್ ವರ್ಡ್ HI Money ಎಂದು ಹೊಡೆದ.
ಮುಂದಿನ ಕ್ಷಣ ಆತನ ಪರದೆಯ ಮೇಲೆ ಮೂಡಿದ ಅಕ್ಷರಗಳನ್ನು ಆತನೇ ನಂಬದಾದ. ಆತನಿಗೆ ತಾನು ನೋಡುತ್ತಿರುವುದು ಸುಳ್ಳಾ?? ನಿಜವಾ?? ಏನೆಂದು ಅರ್ಥವಾಗದಾಗಿತ್ತು.
ಪ್ರಿಯಂವದಾ ರಾಜ್, ಇಂಡಿಯಾ. ಎಮೌಂಟ್- 25,00,00,00,00,00,00,00,00,000. ಅದನ್ನು ಹೇಗೆ ಓದಬೇಕೆಂದು ತಿಳಿಯಲಿಲ್ಲ ಆತನಿಗೆ.
ಸುಧಾರಿಸಿಕೊಂಡು ಓದತೊಡಗಿದ. ಅಲ್ಲಲಿ ಕಾಮಾ ಹಾಕಿಕೊಂಡು ಕೊನೆಯಲ್ಲಿ ಬಂದ ಮೊತ್ತ ಇಪ್ಪತೈದು ಲಕ್ಷ ಸಾವಿರ ಕೋಟಿ ಡಾಲರ್. ಆತನ ತಲೆ ಸಂವೇದನೆ ನೀಡುವುದನ್ನೇ ನಿಲ್ಲಿಸುವುದರಲ್ಲಿತ್ತು. ಒಂದು HIM ನ ಹಿಂದೆ ಇಷ್ಟು ದುಡ್ಡು. ಈಗ ಪ್ರಿಯಂವದಾ ರಾಜ್ ಸತ್ತರೆ ಇದರ ನಾಮಿನಿ ಯಾರಿರಬಹುದು? ಪಟಪಟನೆ ಇನ್ನುಳಿದ ಡಿಟೇಲ್ ನೋಡತೊಡಗಿದ.
ಇಷ್ಟು ದುಡ್ಡನ್ನು ಹೇಗೆ ಕಸ್ಟಮ್ ಕಣ್ಣು ತಪ್ಪಿಸಿ ಹೊರಗೆ ಒಯ್ದಿರಬಹುದು? ಇದರಲ್ಲಿ ಒಂದು ಪೈಸೆ ಕೂಡ Online transaction ಮಾಡಿದ ಹಣವಲ್ಲ. ಇದೆಲ್ಲವೂ ಇಂಡಿಯಾ ಗವರ್ನ್ ಮೆಂಟ್ ಗೆ ತಿಳಿಯದಂತೆ ಹೊರಗೆ ಹಾರಿದ ಹಣ. ಹೇಗೆ ಸಾಧ್ಯ??
ವಿಹಾರಿಗೆ ನಗು ಬಂತು. ಪ್ರಿಯಂವದಾ ರಾಜ್ ತಾನೇ ಒಂದು ಗವರ್ನ್ ಮೆಂಟ್ ಇದ್ದಂತೆ. ಪ್ರತಿ ಸಲ ತನ್ನ ಪ್ರೈವೇಟ್ ಫ್ಲೈಟ್ನಲ್ಲಿ ಹೊರಹಾರಿದಾಗ ಫ್ಲೈಟ್ ತುಂಬ ದುಡ್ಡೇ ಹೊತ್ತು ತಂದಿರಬೇಕು. ಅವಳ ಫ್ಲೈಟ್ ಚೆಕ್ ಮಾಡುವ ಯೋಗ್ಯತೆ ಯಾರಿಗೆ ತಾನೇ ಇದೆ? ಇವಿಷ್ಟು ಹಣವನ್ನು ಯಾಕಾದರೂ ಕೂಡಿಟ್ಟಿದ್ದಾಳೆ. ಈಗ ಸಾಯಲು ಬಿದ್ದಿದ್ದಾಳೆ.
ಕಂಪ್ಯೂಟರ್ ನಲ್ಲಿ ಉಳಿದ ವಿಚಾರಗಳನ್ನು ಓದುತ್ತಿದ್ದ ವಿಹಾರಿಗೆ ಮತ್ತೊಂದು ಆಶ್ಚರ್ಯ ಕಾದಿತ್ತು. ನಾಮಿನಿಯ ಹೆಸರೇ ಇಲ್ಲ. ಪ್ರಿಯಂವದಾ ಸತ್ತರೆ ಹಣ ಬರುವುದು ಹಿಮಾಂಶುವಿಗೆ. ಆದರೆ ಇಂತಹ ಕಪ್ಪು ದಂಧೆ ಯಾರನ್ನು ನಂಬುವುದಿಲ್ಲ. ನಾಮಿನಿ ಇಲ್ಲದಿದ್ದರೆ ಅವೆಷ್ಟು ದುಡ್ಡು ಕೊಳೆತರು, ಲಡ್ಡಾಗಿ ಮಣ್ಣಾದರೂ ಯಾರೂ ಮುಟ್ಟಲಾರರು. ಹಾಗಾಗಿದ್ದಲ್ಲಿ ಯಾಕೆ ಪ್ರಿಯಂವದಾ ಹಿಮಾಂಶುವಿನ ಹೆಸರು ಬರೆದಿಲ್ಲ? ಇದೊಳ್ಳೆ ಕಗ್ಗಂಟು ಆಯಿತಲ್ಲ ಎಂದುಕೊಂಡ ವಿಹಾರಿ.
ನನಗೆ ಸಮ್ಮಿಶ್ರ ಕೊಟ್ಟ ಕೆಲಸವನ್ನಂತೂ ಮಾಡಿ ಮುಗಿಸಿದ್ದೇನೆ. ಮುಂದೇನು ಮಾಡುವುದು? ಇದರ ಬಗ್ಗೆ ಸಮ್ಮಿಶ್ರನಿಗೆ ಹೇಳಿದರು ಕೂಡ ಆತ ಏನು ಮಾಡಬಲ್ಲ? ಇದರ ಒಂದು ಪೈಸೆ ಕೂಡ ಆತ ಉಪಯೋಗಿಸಿಕೊಳ್ಳಲಾರ. ಆದರೆ ಮೊದಲು ಈ ಬ್ಲ್ಯಾಕ್ ಮನಿಯನ್ನೆಲ್ಲ ವೈಟ್ ಮಾಡಬೇಕು. ಅದು ಅಷ್ಟು ಸುಲಭದಲ್ಲಿ ಸಾಧ್ಯವಿಲ್ಲ.
ಹವಾಲಾ ದಂಧೆ ಎಷ್ಟು ಮುಂದುವರೆದರೂ ಒಂದು ಸಾವಿರ ಕೋಟಿಗಳನ್ನು ಬ್ಲ್ಯಾಕ್ ಟು ವೈಟ್ ಮಾಡುವುದೇ ಹೊರತೂ ಹೀಗೆ ಓದಲು ಬಾರದ ಸಂಖ್ಯೆಗಳನ್ನಲ್ಲ. ಅಷ್ಟರಲ್ಲಿ ಒಂದು ಯೋಚನೆ ಹೊಳೆಯಿತು. ಇವಿಷ್ಟು ದುಡ್ಡನ್ನು ತಾನು ಲಪಟಾಯಿಸಿ ಬಿಟ್ಟರೆ ಹೇಗೆ? ಒಮ್ಮೆಲೇ ಮನಸ್ಸು ಖುಷಿಗೊಂಡಿತು. ಜಗತ್ತಿನ ಅತ್ಯಂತ ದೊಡ್ಡ ಹಗರಣ ಮಾಡುವ ತನ್ನ ಯೋಚನೆ ಹೀಗೆ ಫಲಪ್ರದವಾಗುತ್ತದೆ ಎಂದುಕೊಂಡಿರಲಿಲ್ಲ. ಅನ್ವೇಷಣಾ ತನ್ನ ಜೊತೆ ಇದ್ದರೆ ಏನೆಂದುಕೊಳ್ಳುತ್ತಿದ್ದಳೋ!?
ನಾನೀ ಹಣವನ್ನು ಲಪಟಾಯಿಸುವುದಾದರೂ ಹೇಗೆ? ಏಕೆಂದರೆ ತನ್ನೆದುರು ಕಾಣುವ ಸಂಖ್ಯೆ ಚಿಕ್ಕ ಪುಟ್ಟ ಬ್ಯಾಂಕ್ ಗಳಂತೆ ಟ್ರಾನ್ಸ್ ಫರ್ ಮಾಡಲು ಬರುವ ಹಣವಲ್ಲ. ಇದು ಕೇವಲ ಇನ್ ಫಾರ್ಮೇಶನ್. ಒಂದು ರೂಪಾಯಿ ತೆಗೆದುಕೊಳ್ಳುವುದಾದರೂ ಹಾರ್ಡ್ ಕ್ಯಾಶ್ ತೆಗೆದುಕೊಳ್ಳಬೇಕಾಗುತ್ತದೆ ಹೊರತೂ Online transfer ಆಗುವುದಿಲ್ಲ. ಹೇಗೆ!? ಹೇಗೆ ತೆಗೆದುಕೊಳ್ಳುವುದು?
ಒಂದು ಯೋಚನೆ ಹೊಳೆಯಿತು ವಿಹಾರಿಗೆ. ನಾಮಿನಿಯ ಜಾಗದಲ್ಲಿ ತನ್ನ ಡಿಟೇಲ್ ಸೃಷ್ಟಿ ಮಾಡಿ ಲಿಂಕ್ ಕೊಟ್ಟುಬಿಟ್ಟ. ಏನಾದರೂ ಪ್ರಿಯಂವದಾ ರಾಜ್ ಸತ್ತು ಬಿಟ್ಟರೆ ಇವಿಷ್ಟು ಹಣ ತನ್ನ ಹೆಸರಿಗೆ. ಸಾಯದೆ ಏನಾದರೂ ಆಕೆ ಮತ್ತೆ ಈ ಡಿಟೇಲ್ಸ್ ನೋಡಿದರೆ ಏನಾಗಬಹುದು?
ಪೊಲೀಸರಿಗಂತೂ ಹೇಳಲು ಸಾಧ್ಯವಿಲ್ಲ. ಹೆಚ್ಚೆಂದರೆ ತನ್ನ ಜೊತೆ ಸಂಧಾನ. ಇಲ್ಲದಿದ್ದರೆ ಕೊಲ್ಲಿಸುತ್ತಾಳೆ. ಅದನ್ನು ಆ ಕಾಲಕ್ಕೆ ನೋಡಿದರಾಯಿತು.
ಪಟಪಟನೆ ಆವಿಷ್ಟನ್ನು ಮಾಡಿ ಸೆಟ್ ಮಾಡಿಬಿಟ್ಟ. ನೂರಾರು ಪೇಜ್ ಇದ್ದ ಒಂದು PDF Document ಇತ್ತು. ಅದರ ಮೇಲೆ ಸುಮ್ಮನೆ ಕಣ್ಣಾಡಿಸಿದ. ದುಡ್ಡನ್ನು ಹೇಗೆ ತೆಗೆಯಬೇಕು ಎಂಬ ವಿವರಗಳೆಲ್ಲ ವಿಹಾರಿಯ ಮನದಲ್ಲಿ ಅಚ್ಚಾಯಿತು.
ತನ್ನ ಕೆಲಸದ ಮೇಲೆ ಪೂರ್ತಿ ನಂಬಿಕೆ ಬಂದ ಮೇಲೆ ಎಲ್ಲವನ್ನು ಸೇವ್ ಮಾಡಿ ಫೈರ್ ವಾಲ್ ನಿಂದ ಹೊರಬಿದ್ದ ವಿಹಾರಿ.
ಎರಡು ದಿನದಿಂದ ಎಡಬಿಡದೆ ಕಂಪ್ಯೂಟರ್ ನೋಡುತ್ತ ಕುಳಿತಿದ್ದರಿಂದ ಆತನ ಕಣ್ಣುಗಳು ಕೆಂಪಾಗಿ ಉರಿಯುತ್ತಿತ್ತು. ಅಸಾಧ್ಯವನ್ನೇ ಬೇಧಿಸಿದಂತೆ ಅನ್ನಿಸಿತವನಿಗೆ.
ಒಂದರ್ಥದಲ್ಲಿ ಇದೇ ಪ್ರಪಂಚದ ದೊಡ್ಡ ಗೋಲ್ ಮಾಲ್ ಇರಬಹುದೇನೋ!! ಪ್ರಿಯಂವದಾ ರಾಜ್ ಸತ್ತರೆ ತನಗೆ ಬರುವ ಹಣದ ಬಗ್ಗೆ ಯೋಚನೆ ಮಾಡಿದರೆ ತಲೆ ಕೆಡುತ್ತಿತ್ತು ಆತನಿಗೆ.
ಇನ್ನುಳಿದಿರುವುದು ಸಮ್ಮಿಶ್ರನಿಗೆ ಇರುವ ವಿಷಯ ಹೇಳುವುದು... ಆತನ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳುವುದು...
ಒಂದು ಗಾಢವಾದ ಉಸಿರೆಳೆದುಕೊಂಡು ಸಮ್ಮಿಶ್ರನಿಗೆ ಫೋನಾಯಿಸಿದ ವಿಹಾರಿ. ಆ ಕಡೆಯಿಂದ ಕಾಲ್ ಕಟ್ ಆಯಿತು. ಇನ್ನು ಸಮ್ಮಿಶ್ರ ಬರುವವರೆಗೆ ಕಾಯುವುದಷ್ಟೇ ಕೆಲಸ. ಕಣ್ಣು ಮುಚ್ಚಿದ ವಿಹಾರಿ.
ನಿದ್ರೆ ಆತನನ್ನು ತನ್ನ ತೆಕ್ಕೆಗೆ ಎಳೆದುಕೊಂಡಿತು.. ಜೈಲು ಆತನನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಯ್ದಿದೆ ಎಂದು ಆತನಿಗೆ ಆ ನಿಮಿಷದಲ್ಲಿ ಗೊತ್ತಿರಲಿಲ್ಲ
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

No comments:

Post a Comment