Saturday, July 23, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 27

                                    ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 27

ಶಾಸ್ತ್ರಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟು ಅದಾಗಲೇ ಎರಡು ದಿನ ಕಳೆದು ಹೋಗಿತ್ತು. ಮೂರನೆಯ ದಿನ ಮಧ್ಯಾಹ್ನ ಶಾಸ್ತ್ರಿ ಕುಳಿತು ಯೋಚಿಸುತ್ತಿದ್ದ. "ನಾಳೆ ಮತ್ತೆ ತಾನು ಕೋರ್ಟಿಗೆ ಹೋಗಬೇಕು. ಈ ಬಾರಿ ಪ್ರಸಾದ್ ಸುಮ್ಮನಿರುವುದಿಲ್ಲ. ಸರೋವರಾ ನೀಡಿದ ಹೊಡೆತ ಸಣ್ಣದಲ್ಲ ಆತನಿಗೆ. ಅದಕ್ಕೆ ಸರಿಯಾದ ಪ್ರತ್ಯುತ್ತರಕ್ಕೆ ಆತ ಕಾಯುತ್ತಿರುತ್ತಾನೆ. ಮತ್ತೆ ಪೊಲೀಸರ ಅತಿಥಿ ಆಗುವುದು ಖಂಡಿತ.
ತಾನು ಒಮ್ಮೆ ಪ್ರತಾಪ್ ನ ಕೈಗೆ ಸಿಕ್ಕಿದರೆ ಮುಗಿಯಿತು, ಮತ್ತೆ ಮೇಲೇಳದಂತೆ ಮಾಡಿಬಿಡುತ್ತಾನೆ. ಪ್ರತಾಪ್ ನೀನು ಶಾಸ್ತ್ರಿಯೊಡನೆ ಸರಸವಾಡಬಾರದಿತ್ತು ಎಂದುಕೊಂಡ. ಸರೋವರಳ ಕೈ ಹಿಡಿಯುವಷ್ಟು ಧೈರ್ಯ ಬಂದಿದೆ ಎಂದರೆ..!? ಶಾಸ್ತ್ರಿ ಯಾರೆಂದು ನಿನಗೆ ತೋರಿಸುವ ಅಗತ್ಯವಿದೆ. ಸಮಯ ಸಂದರ್ಭ ತನಗೆ ಅವಕಾಶ ಕಲ್ಪಿಸಿಕೊಡುತ್ತಿಲ್ಲ. ಇನ್ನೊಂದು ಇಪ್ಪತ್ತು ತಾಸು.. ತಾನು ಮತ್ತೆ ಕೋರ್ಟಿನಲ್ಲಿ...
ಹಾಗಾಬಾರದು...!! ಹಾಗಾಗಬಾರದೆಂದರೆ ತಪ್ಪಿಸಿಕೊಳ್ಳಬೇಕು.. ಜೈಲಿನಿಂದ ತಪ್ಪಿಸಿಕೊಳ್ಳಬೇಕು. ತಾನು ಇದುವರೆಗೆ ಯಾವುದೇ ತಪ್ಪು ಮಾಡಿಲ್ಲ. ಅದನ್ನು ಕೋರ್ಟಿನಲ್ಲಿ ಸಾಬೀತು ಪಡಿಸಲಾದರೂ ತಾನು ತಪ್ಪಿಸಿಕೊಳ್ಳಬೇಕು. ಸಾಕ್ಷಿಗಳು ತನಗೆ ವಿರುದ್ಧವಾಗಿದೆ, ಪೊಲೀಸರೂ ತನ್ನ ಪರವಾಗಿಲ್ಲ. ಅದರ ಮೇಲಿಂದ ಘಟಾನುಘಟಿ ಲಾಯರ್. ಹೊರಬರುವುದು ಕಷ್ಟ. ಅದೇನು ಮಾಡಬೇಕೋ ಇಂದೇ ಮಾಡಬೇಕು. ತಪ್ಪಿಸಿಕೊಳ್ಳುವುದೇ ದಾರಿ ಎಂದಾದರೆ ಇದೆ ತನಗೆ ಸಿಗುವ ಕೊನೆಯ ರಾತ್ರಿ. ಎದ್ದು ಆಕಡೆ ಈಕಡೆ ಓಡಾಡ ತೊಡಗಿದ ಶಾಸ್ತ್ರಿ. ತಪ್ಪಿಸಿಕೊಳ್ಳುವ ಯೋಚನೆ ಇಂದು ಮೂಡಿದ್ದಲ್ಲ ಶಾಸ್ತ್ರಿಗೆ!!
ಮೊದಲ ದಿನ ಸರೋವರಾ ಬಂದಾಗ ಅವರಿಬ್ಬರೂ ಸೇರಿ ಕೋರ್ಟಿನಲ್ಲಿ ಹೇಗೆ ವಾದ ಮಾಡಬೇಕೆಂದು ಚರ್ಚಿಸಿದ್ದರು. ಎರಡು ತಾಸಿನ ಮೇಲೂ ಅವರಿಬ್ಬರಿಗೆ ಯಾವುದೇ ದಾರಿ ಕಾಣದ್ದರಿಂದ ಶಾಸ್ತ್ರಿಗೆ ತಿಳಿದುಹೋಗಿತ್ತು ತಾನು ಹೊರಬೀಳದೆ ತನ್ನ ಹಿಂದೆ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಸಾಧ್ಯವಿಲ್ಲ. ಹೇಗಾದರೂ ಹೊರಹೋಗಬೇಕು. ತಪ್ಪು ಮಾಡಿಲ್ಲ ಎಂದು ತೋರಿಸಲಾದರೂ ಹೊರಬೀಳಬೇಕು. ನಿಜವಾದ ಸಂಚನ್ನು ಕಂಡುಹಿಡಿದರೆ ತಾನು ಜೈಲಿನಿಂದ ತಪ್ಪಿಸಿಕೊಂಡಿದ್ದಕ್ಕೆ ಶಿಕ್ಷೆಯಾಗುವುದಿಲ್ಲವೇನೋ? ಆದರೂ ಅದರ ಪ್ರಮಾಣ ಕಡಿಮೆ. ಹಾಗಾಗಿ ಇನ್ನೆರಡು ದಿನದಲ್ಲಿ ಮತ್ತೇನಾದರೂ ಯೋಚನೆ ಬಂದರೆ ಅದನ್ನು ಆಲೋಚಿಸಬಹುದು. ಅದಾಗದೆ ಹೋದಲ್ಲಿ ಮೂರನೇ ದಿನ ತಪ್ಪಿಸಿಕೊಳ್ಳಬೇಕು. ಆ ಯೋಚನೆ ಬರುತ್ತಲೇ ಹೊರಟು ನಿಂತ ಸರೋವರಳನ್ನು ನಾಳೆ ಒಮ್ಮೆ ಗಾಳಿಗುಡ್ಡನ ಭೇಟಿ ಮಾಡಿಸು ಎಂದಷ್ಟೇ ಹೇಳಿದ. ಅವನ ಮನಸ್ಸಿನಲ್ಲಿ ಬಂದ ಯೋಚನೆ ಹೇಳಿದ್ದರೆ ಅವಳು ಖಂಡಿತ ಒಪ್ಪಲಾರಳು. ಅವಳದೇನಿದ್ದರೂ ಸಾತ್ವಿಕ ಮಾರ್ಗ. ನನ್ನದು ಅದೇ ಮಾರ್ಗವೇ.. ಆದರೆ ಸಮಯ ಈಗ ಅದಕ್ಕೆ ಬೆಲೆ ನೀಡುತ್ತಿಲ್ಲ. ನೋಡೋಣ ಏನಾಗುತ್ತದೆ ಎಂದುಕೊಂಡಿದ್ದ.
ಮರುದಿನ ಗಾಳಿಗುಡ್ಡ ಶಾಸ್ತ್ರಿಯನ್ನು ಭೇಟಿ ಮಾಡಿದ್ದ. "ಏನು ಶಾಸ್ತ್ರಿ, ಹೀಗೆ ಮಾಡಿಕೊಂಡೆ? ಅಂದು ನಿನಗೆ ಬೇಲ್ ಸಿಕ್ಕಿತ್ತು. ಸುಮ್ಮನೆ ನಮ್ಮನ್ನು ವಾಪಸ್ ಕಳುಹಿಸಿ ಸಿಕ್ಕಿಹಾಕಿಕೊಂಡೆಯಲ್ಲ.."
"ತಲೆಯಾಡಿಸಿದ ಶಾಸ್ತ್ರಿ, "ಹೌದು, ಗಾಳಿಗುಡ್ಡ ಅವ್ರೇ, ಇದು ಹೀಗಾಗುತ್ತದೆ ಎಂದು ನನಗೂ ತಿಳಿದಿರಲಿಲ್ಲ. ಇದರಲ್ಲಿ ಏನೋ ಷಡ್ಯಂತ್ರ ಇದೆ. ನನಗೊಂದು ಕೆಲಸವಾಗಬೇಕಿದೆ. ಇದರಲ್ಲಿ ಸ್ವಲ್ಪ ರಿಸ್ಕ್ ಇದೆ. ನಿಮ್ಮನ್ನು ತೊಂದರೆಯಲ್ಲಿ ದೂಡಿದಂತೆ ಆಗುತ್ತದೆ. ಇದೊಂದು ಬಾರಿ ನನ್ನ ಜೊತೆ ನೀಡಿ. ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ" ಎಂದ ಶಾಸ್ತ್ರಿ.
"ಅದೇನು ಹೇಳು ಶಾಸ್ತ್ರಿ, ನನ್ನ ಕೈಲಾಗುವಂತದ್ದಾಗಿದ್ದರೆ ಖಂಡಿತ ಮಾಡುತ್ತೇನೆ."
ಸ್ವಲ್ಪ ಹತ್ತಿರ ಬನ್ನಿ ಎನ್ನುವಂತೆ ಸನ್ನೆ ಮಾಡಿದ ಶಾಸ್ತ್ರಿ, ಗಾಳಿಗುಡ್ಡನ ಕಿವಿಯಲ್ಲಿ ತನಗೆ ಬಂದ ಉಪಾಯ ಹೇಳಿ ಮುಗಿಸಿದ. ಅದನ್ನು ಕೇಳಿದ ಕೆಲವು ಕ್ಷಣ ಸುಮ್ಮನೆ ನಿಂತೆ ಇದ್ದ ಗಾಳಿಗುಡ್ಡ.
"ಶಾಸ್ತ್ರಿ, ನೀನು ಮಾಡಿರುವ ಉಪಾಯದಲ್ಲಿ ಅಪಾಯವೇ ಹೆಚ್ಚಿದೆ. ಜೈಲಿನಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ. ಅದೂ ಎರಡೇ ದಿನದಲ್ಲಿ ಜೈಲಿನ ಬಗ್ಗೆ ತಿಳಿದುಕೊಂಡು ಎಸ್ಕೇಪ್ ಪ್ಲಾನ್ ಮಾಡುವುದು ಇನ್ನು ಕಷ್ಟ. ಇನ್ನೊಮ್ಮೆ ಯೋಚಿಸು. ಅದೂ ಅಲ್ಲದೆ ರಾತ್ರಿ ಯಾರಾದರೂ ತಪ್ಪಿಸಿಕೊಳ್ಳಲು ನೋಡಿ ಸಿಕ್ಕಿಬಿದ್ದರೆ Shoot at site order ಇರುತ್ತದೆ. ನೀನ್ಯಾರು ಎಂದು ಯಾರೂ ಕೇಳುವುದಿಲ್ಲ. ಗುಂಡು ಹಾರಿಸಿ ಬಿಡುತ್ತಾರೆ. ಅದಕ್ಕೆ ಇದು ಪೀಕಲಾಟ ತರುವ ಕೆಲಸದಂತೆ ತೋರುತ್ತದೆ ನನಗೆ.." ಎಂದು ತಲೆ ಕೆರೆದುಕೊಂಡ ಗಾಳಿಗುಡ್ಡ.
"ನೀವು ಹೇಳುವುದು ಸರಿಯೇ ಗಾಳಿಗುಡ್ಡ ಅವ್ರೇ, ಅದು ಪ್ಲಾನ್ ಬಿ ಅಷ್ಟೇ. ಇನ್ನೆರಡು ದಿನದಲ್ಲಿ ನಮಗೆ ಇನ್ನೇನಾದರೂ ಉಪಾಯ ಸಿಗಬಹುದು. ಅದಾಗದಿದ್ದರೆ ಕಷ್ಟ. ಒಮ್ಮೆ ವಿಚಾರಿಸಿ ನೋಡಿ. ಯಾರಿದ್ದಾದರೂ ಕೈ ಬಿಸಿ ಮಾಡಿದರೆ ಏನಾದರೂ ಕೆಲಸ ಆಗುತ್ತದೆಯಾ ಎಂದು.."
ಇಲ್ಲದ ಮನಸ್ಸಿನಿಂದಲೇ ತಲೆಯಾಡಿಸುತ್ತಾ ಹೊರನಡೆದ ಗಾಳಿಗುಡ್ಡ.
ಶಾಸ್ತ್ರಿಗೂ ಗೊತ್ತು ಸ್ವಲ್ಪ ಹೆಚ್ಚು ಕಡಿಮೆಯಾದರೂ ಜೀವಕ್ಕೇ ಅಪಾಯ. ಗಾಳಿಗುಡ್ಡನನ್ನು ಜೈಲಿಗೆ ಹಾಕಲೂಬಹುದು. ಖೈದಿಯೊಬ್ಬ ತಪ್ಪಿಸಿಕೊಳ್ಳಲು ಸಹಾಯ ಕೇಳುತ್ತಿದ್ದಾನೆ ಎಂದು. ಸಹಾಯ ಮಾಡಿ ಎಂದು ಪೊಲೀಸರನ್ನು ಕೇಳುವುದು ಮೂರ್ಖತನ. ಆದರೂ ರಿಸ್ಕ್ ತೆಗೆದುಕೊಳ್ಳಲೇಬೇಕು.
ಮರುದಿನ ಗಾಳಿಗುಡ್ಡ ಸಪ್ಪೆ ಮೊರೆ ಹಾಕಿಕೊಂಡು ಬಂದಿದ್ದ. "ಶಾಸ್ತ್ರಿ, ನನ್ನ ಪ್ರಯತ್ನ ನಾನು ಮಾಡಿದೆ ಅದು ಸಫಲವಾಗಲಿಲ್ಲ. ರಾತ್ರಿ ಕಾವಲಿರುವವರು ದಿನವೂ ಬದಲಾಗುತ್ತಾರೆ. ರಾತ್ರಿ ಪಾಳಿ ಯಾರದೆಂದು ಪೊಲೀಸರಿಗೆ ತಿಳಿಯುವುದು ಎರಡು ಘಂಟೆ ಮೊದಲು ಮಾತ್ರ. ರಾತ್ರಿ ಕೂಡ ಸಾಲಾಗಿ ನಾಲ್ಕು ಪಾಳಿ. ಮೂರು ಘಂಟೆಗೊಮ್ಮೆ ಬದಲಾಗುತ್ತಾರೆ. ಅದಲ್ಲದೆ ಜೈಲಿನಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದು ಇಡೀ ಜೈಲಿನ ಚಲನವಲನಗಳನ್ನು ಗಮನಿಸುತ್ತಿರಲು ಒಬ್ಬ 24*7 ಕುಳಿತುಕೊಂಡಿರುತ್ತಾನೆ. ತಪ್ಪಿಸಿಕೊಳ್ಳುವ ಯೋಚನೆ ಬಿಟ್ಟು ಬಿಡು ಶಾಸ್ತ್ರಿ. ಇನ್ನೇನಾದರೂ ನೋಡು.." ಎಂದು ಹೊರ ನಡೆದಿದ್ದ ಗಾಳಿಗುಡ್ಡ.
ಶಾಸ್ತ್ರಿಗೆ ತಾನೇಕೋ ಸೋತು ಹೋದೆ ಎನ್ನಿಸಿತು ಆ ಕ್ಷಣದಲ್ಲಿ.
ಶಾಸ್ತ್ರಿ ಶತಪಥ ಹಾಕುವುದನ್ನು ಮುಂದುವರೆಸಿಯೇ ಇದ್ದ. ಸರೋವರಾ ಇನ್ನೂ ಬಂದಿರಲಿಲ್ಲ. ಬಂದರೂ ಅವಳೇನು ತಾನೇ ಮಾಡಬಲ್ಲಳು? ಸಮಾಧಾನದ ಮಾತುಗಳಷ್ಟೇ. ಅವಳ ಕೈಲಾದ ಸಹಾಯ ಈಗಾಗಲೇ ಮಾಡಿದ್ದಾಳೆ. ನಾಳೆಯು ಕೂಡ ಕೋರ್ಟಿನಲ್ಲಿ ಏನಾದರೂ ಪವಾಡ ನಡೆಯಬೇಕಷ್ಟೆ!! ಎಂದುಕೊಂಡ ಶಾಸ್ತ್ರಿ.
ಮಧ್ಯಾಹ್ನವಾದರೂ ಸರೋವರಾಳ ಸುಳಿವಿಲ್ಲ. ಜೈಲಿನ ಊಟ ಬಂತು. ಮಹಾರಾಷ್ಟ್ರ ಸ್ಪೆಷಲ್ ಪಾವ್ ವಡಾ. ಹೊಟ್ಟೆ ಹಸಿದಿತ್ತು. ಪ್ಲೇಟ್ ಕೈಗೆತ್ತಿಕೊಂಡ. ತಣಿದ ಪಾವ್. ಗಟ್ಟಿಯಾದ ವಡಾ. ಗಂಟಲಲ್ಲಿ ಇಳಿಯಲಿಲ್ಲ. ಹಸಿವು ಕೂಗುತ್ತಿದ್ದರೆ ಇಳಿಸಬೇಕಾಗುತ್ತದೆ. ಮೂಲೆಯಲ್ಲಿದ್ದ ಚೊಂಬಿನಿಂದ ನೀರು ಕುಡಿಯುತ್ತಾ ಆವಿಷ್ಟನ್ನು ತಿಂದು ಮುಗಿಸಿದ. ಏಕೋ ಏನೋ ಎಲ್ಲವೂ ಮುಗಿಯಿತು ಎಂದೆನ್ನಿಸಿಬಿಟ್ಟಿತು. ಪಕ್ಕದಲ್ಲಿದ್ದ ಮರದ ಬೆಂಚಿನ ಮೇಲೆ ಮಲಗಿ ನಿದ್ರೆ ಹೋದ.
ಶಾಸ್ತ್ರಿ.. ಶಾಸ್ತ್ರಿ.. ಸರೋವರಾಳ ಧ್ವನಿ. ಕನಸಿನಲ್ಲಿ ಕರೆದಂತಿತ್ತು ಆತನಿಗೆ. ಮತ್ತೆರಡು ಬಾರಿ ಶಾಸ್ತ್ರೀ.. ಶಾಸ್ತ್ರಿ.. ಎನ್ನುತ್ತಲೇ ನಿದ್ರೆಯ ಅಮಲಿನಿಂದ ಹೊರಬಂದ. ಹೊರಗೆ ಸರೋವರಾ ನಿಂತಿರುವುದು ಕಂಡಿತು. ಗಂಟೆ ಎಷ್ಟಾಗಿದೆಯೋ ತಿಳಿಯಲಿಲ್ಲ. ಇಂತಹ ಸಂಕಟದಲ್ಲಿಯೂ ಅದ್ಹೇಗೆ ಇಷ್ಟು ಸುಖ ನಿದ್ರೆ ಬಂದಿತೆಂದು ಅರ್ಥವಾಗಲಿಲ್ಲ. ಬಾಗಿಲ ಬಳಿ ಬಂದು ನಿಂತ ಸರೋವರಾಳ ಬಳಿ ಕೋಣೆಯ ಬೀಗದ ಕೈ ಇತ್ತು. ತೆಗೆದು ಒಳ ಬಂದಳು. ದಿನವೂ ಅವಳ ಜೊತೆ ಇನ್ಯಾರಾದರೂ ಬಂದು ಬಾಗಿಲು ತೆಗೆದು ಕೊಟ್ಟು ಹೊರಗಿನಿಂದ ಲಾಕ್ ಮಾಡಿ ಹೋಗುತ್ತಿದ್ದರು. ಇಂದು ಅವಳೊಬ್ಬಳೆ ಬಂದಿದ್ದಳು. ಅಷ್ಟು ಸ್ನೇಹ ಸಂಪಾದಿಸಿದ್ದಳು ಹೊರಗಿನ ಜೈಲರ್ ಜೊತೆ ಅವಳು.
"ಶಾಸ್ತ್ರಿ, ಏನಾದರೂ ಹೊಳೆಯಿತಾ? ನನಗಂತೂ ಏನು ಮಾಡಬೇಕೆಂದು ತೋಚುತ್ತಿಲ್ಲ. ನಾಳೆ ಮತ್ತೆ ಕೋರ್ಟಿಗೆ ಹಾಜರಾಗಬೇಕು. ಈ ಮೂರು ದಿನದಲ್ಲಿ ನಾವು ಸಂಪಾದಿಸಿದ್ದಾದರೂ ಏನು?"
ಅಡ್ಡಡ್ಡ ತಲೆಯಾಡಿಸಿದ ಶಾಸ್ತ್ರಿ. "ಈ ಜೈಲೆಂಬ ಕೋಟೆಯಲ್ಲಿ ಕುಳಿತು ಏನು ಯೋಚನೆ ಮಾಡಲಿ ನಾನು? ಇನ್ನೇನಾದರೂ ನಾ ನಿನ್ನನ್ನೇ ನಂಬಿದ್ದೇನೆ. ನಾಳೆ ನಿನ್ನ ವಾದದ ಮೇಲೆ ನನ್ನ ಬದುಕು." ಎಂದು ನಿಡುಸುಯ್ದು ಆಕೆಯ ಮುಖ ನೋಡಿದ. ಅದೇನೋ ಇಬ್ಬರಿಗೂ ಒಮ್ಮೆಲೇ ನಗು ಬಂತು. ಇಬ್ಬರು ಮನಸಾರೆ ನಕ್ಕರು.
"ಮುಂದೆ??" ಎಂದ ಶಾಸ್ತ್ರಿ.
"ಮದುವೆ.. ಮಕ್ಕಳು.."
ಮಗನಿಗೆ ನನ್ನ ಹೆಸರಿಡಲು ಮರೆಯಬೇಡ.."
ಮತ್ತಿಬ್ಬರು ಒಟ್ಟಿಗೆ ನಕ್ಕರು. ಹತಾಶೆಯ ಕೊನೆಯ ಹಂತವದು. ಅಳಲಾರದೆ ಹೀಗೆ ನಗುತ್ತಿದ್ದೇವೆ ಎಂಬುದು ಇಬ್ಬರಿಗೂ ಗೊತ್ತು.
ಅದೆಷ್ಟೋ ನಗೆ ಚಟಾಕಿಗಳು ಹಾದು ಹೋದವು ಇಬ್ಬರ ನಡುವೆ. ಇದೇ ಅವರಿಗೆ ಸಿಗುವ ಕೊನೆಯ ಕ್ಷಣಗಳೇನೋ ಎಂಬಂತೆ ಮಾತನಾಡುತ್ತಲೇ ಉಳಿದರು. ಸಮಯ ಅವರ ಮಾತಿಗಿಂತಲೂ ವೇಗವಾಗಿ ಕಳೆದಿತ್ತು.
ಜೈಲರ್ ಬಂದು ಟೈಮಾಯಿತೆಂದು ಸೂಚನೆ ಕೊಡುವ ಮುನ್ನವೇ ಅವಳು ಹೊರಟು ನಿಂತಿದ್ದಳು.
"ಶಾಸ್ತ್ರಿ, ಮುಂದೇನಾಗುತ್ತದೋ ನಾ ಕಾಣೆ. ನಿನ್ನನ್ನು ನಾನು ನಂಬುತ್ತೇನೆ ಮತ್ತು ನಿನ್ನ ಜೊತೆ ಯಾವಾಗಲೂ ನಾನಿರುತ್ತೇನೆ ಎಂಬುದನ್ನು ಮರೆಯಬೇಡ." ಗಟ್ಟಿಯಾಗಿ ತಬ್ಬಿಕೊಂಡಳು. ಅವಳ ಕೈಲಿದ್ದ ಕರವಸ್ತ್ರವನ್ನು ಶಾಸ್ತ್ರೀಯ ಕೈಲಿ ತುರುಕಿದಳು. ಆಕೆ ಹಾಗೇಕೆ ಮಾಡುತ್ತಿದ್ದಾಳೆ ಎಂದು ತಿಳಿಯದಿದ್ದರೂ ಕರವಸ್ತ್ರವನ್ನು ಸುಮ್ಮನೆ ಕೈಗಳಲ್ಲಿ ಅಡಗಿಸಿಕೊಂಡ ಶಾಸ್ತ್ರಿ. ಹಣೆಗೆ ಒಂದು ಮುತ್ತಿಟ್ಟು ಅವನಿಂದ ದೂರ ಸರಿದಳು ಸರೋವರಾ.
ಅವಳ ಕಣ್ಣಿನಲ್ಲಿ ನೀರು ತುಂಬಿದ್ದನ್ನು ಶಾಸ್ತ್ರಿ ಗಮನಿಸದೆ ಇರಲಿಲ್ಲ. "ಅತ್ತು ಸಾಧಿಸುವುದಾದರೂ ಏನು"? ಎಂದು ಕೇಳಬೇಕೆಂದುಕೊಂಡ. ಅವನ ಮಾತು ಅವನೊಳಗೆ ಉಳಿದುಹೋಯಿತು.
ಹಿಂದೆ ತಿರುಗಿ ನೋಡದೆ ಹೊರನಡೆದು ಬಿಟ್ಟಳು ಸರೋವರಾ.
ಶಾಸ್ತ್ರೀಯ ಮನಸ್ಸು ಭಾರವಾಗಿತ್ತು. ಕರವಸ್ತ್ರ ತನ್ನ ಕೈಲಿರುವುದು ನೆನಪಾಯಿತು. ಮೂಲೆಗೆ ಹೋಗಿ ಗೋಡೆಯ ಬದಿ ಮುಖ ಮಾಡಿಕೊಂಡು ಕರವಸ್ತ್ರ ಬಿಚ್ಚಿ ನೋಡಿದ. ಅಚ್ಚ ಬಿಳಿಯ ಕರವಸ್ತ್ರ. ಎರಡು ಕಡೆ ತಿರುಗಿಸಿ ನೋಡಿದ. ಹೇಳಿಕೊಳ್ಳುವಂತದ್ದು ಏನು ಕಂಡು ಬರಲಿಲ್ಲ. ಏನಾದರೂ ಬರೆದಿರುವುದಾ ಎಂದು ಸೂಕ್ಷ್ಮವಾಗಿ ಗಮನಿಸಿದ. ನೋ! Nothing. ಬಿಳಿಯ ಕರವಸ್ತ್ರವಷ್ಟೇ. ಇದನ್ನು ತನಗೇತಕ್ಕೆ ಕೊಟ್ಟು ಹೋದಳು ಎಂಬುದರ ಅರಿವಾಗಲಿಲ್ಲ. ಹುಡುಗಿಯರು ಮೂಡಿಯಾದರೆ ಏನನ್ನು ಬೇಕಾದರೂ ಮಾಡಬಲ್ಲರು ಎಂದು ಖರ್ಚಿಫನ್ನು ಚಾದರದ ಒಳಗೆ ಇಟ್ಟು ದಿಕ್ಕು ನೋಡುತ್ತಾ ಕುಳಿತ ಶಾಸ್ತ್ರಿ.
*...................................................*...................................................*
ಸ್ವಯಂವರಾ ಬೆಳಿಗ್ಗೆ ಬೇಗನೆ ಎದ್ದು ಬೆಚ್ಚನೆಯ ನೀರಿನಲ್ಲಿ ಅರ್ಧ ಘಂಟೆ ಬಾತ್ ಟಬ್ ನಲ್ಲಿ ಮುಳುಗಿ ಕುಳಿತಳು. ಹಳದಿ ಮಿಶ್ರಿತ ಬಿಳುಪು ಮೈ ಬಣ್ಣ ಅವಳದು. ನೀಳ ಕಾಲುಗಳು.. ಅಷ್ಟೇ ನೀಳ ಕೈಗಳು.. ಉದ್ದನೆಯ ಮೆತ್ತನೆಯ ಕೈ ಬೆರಳುಗಳು.. ತನ್ನ ಸೌಂದರ್ಯವನ್ನು ತಾನೇ ಮೆಚ್ಚಿಕೊಂಡಳು ಸ್ವಯಂವರಾ. ನೀರಿನ ಜೊತೆ ಚೆಲ್ಲಾಟ ಅವಳ ಮನಸ್ಸಿಗೆ ಅದೆಷ್ಟೋ ಸಮಾಧಾನ ನೀಡಿತು.
ನೀರಿನಿಂದ ಮೇಲೆದ್ದು ಬೆಡ್ ರೂಮ್ ಹೋಗಿ ಕನ್ನಡಿಯೆದುರು ನಿಂತಳು. ತಾನೇ ನಾಚಿ ನೀರಾದಳು ಒಮ್ಮೆ. ಒಂದು ಕಣ್ಣನ್ನು ತನ್ನ ಕೈಯಿಂದ ಮುಚ್ಚಿ ಇನ್ನೊಂದು ಕಣ್ಣಿನಿಂದ ತನ್ನ ದೇಹ ನೋಡಿಕೊಂಡಳು. ಲಜ್ಜೆ ಅವಳ ಮುಖದಲ್ಲಿ ಕೆಂಪನ್ನು ಮೂಡಿಸಿತು. ನೀರಿನ ಹನಿಗಳು ಅವಳ ಮೈಯಲ್ಲಿ ಎಲ್ಲಿ ಬೇಕೆಂದರಲ್ಲಿ ತಬ್ಬಿ ನಿಂತಿದ್ದವು. ಅವಳ ಮುಂಗುರುಳಿನಿಂದ ಇಳಿದ ಮುತ್ತಿನ ಹನಿಯೊಂದು ಅವಳ ಕೊರಳನ್ನು ಬಳಸಿ ಎದೆಯ ಗುಳಿಯಲ್ಲಿ ಇಳಿದು ಆಟವಾಡಿ ಮಾಯವಾಯಿತು.
ಇನ್ನು ಸಾಕೆಂಬಂತೆ ಕನ್ನಡಿಯಿಂದ ದೂರವಾಗಿ ಮೈ ಒರೆಸಿಕೊಂಡು ಕಪಾಟಿನಲ್ಲಿದ್ದ ಡ್ರೆಸ್ ಬಳಿ ನಡೆದಳು. ಇವತ್ತು ಕ್ಷಾತ್ರನನ್ನು ಭೇಟಿಯಾಗಿ ತನ್ನ ಒಪ್ಪಿಗೆ ಸೂಚಿಸಬೇಕು ಎಂದು ಅವಳು ನಿರ್ಧರಿಸಿದ್ದಳು. ಮೊದಲು ಆಸ್ಪತ್ರೆಗೆ ಹೋಗಿ ನಂತರ ಕ್ಷಾತ್ರನನ್ನು ಭೇಟಿಯಾಗಲೇ ಅಥವಾ ಕ್ಷಾತ್ರನನ್ನು ಭೇಟಿಯಾಗಿ ನಂತರ ಆಸ್ಪತ್ರೆಗೆ ಹೋಗಲೇ? ಎಂದು ಯೋಚಿಸುತ್ತಿತ್ತು ಅವಳ ಮನ.
ಯಾವುದೇ ಡ್ರೆಸ್ ಕೈಯಲ್ಲಿ ಹಿಡಿದರೂ ಯಾಕೋ ಸರಿ ಎನ್ನಿಸುತ್ತಿಲ್ಲ. ನಿನ್ನೆ ರಾತ್ರಿಗೂ ಇಂದಿಗೂ ಅದೆಷ್ಟು ಬದಲಾವಣೆ ತನ್ನಲ್ಲಿ ಎಂದೆನ್ನಿಸಿತು. ತಂದು ಹಾಕದೆ ಹಾಗೆಯೇ ಇಟ್ಟಿದ್ದ White ಸಲ್ವಾರ್ ಕಮೀಜ್ ಕಣ್ಣಿಗೆ ಬಿತ್ತವಳಿಗೆ. ಅದನ್ನು ತಂದು ಕನ್ನಡಿಯ ಮುಂದೆ ತನ್ನೆದುರು ಹಿಡಿದು ನೋಡಿಕೊಂಡಳು. ಇದನ್ನು ತೊಟ್ಟರೆ ಹೂವಿನ ಬುಟ್ಟಿಯಲ್ಲಿರುವ ಲಿಲ್ಲಿ ಹೂಗಳಂತೆ ಕಾಣುತ್ತೇನೆ ಎಂದೆನ್ನಿಸಿತು.
ತಡ ಮಾಡದೆ ಅದನ್ನು ಧರಿಸಿಕೊಂಡಳು. ಸಲ್ವಾರ್ ನ ಕುತ್ತಿಗೆಯ ಕೆಳ ಭಾಗದಲ್ಲಿಆಕಾಶನೀಲಿ ಬಣ್ಣದ ಎರಡು ಹೂವುಗಳು.. ಅದರ ಸುತ್ತಲೂ ಅಲಂಕರಿಸಲ್ಪಟ್ಟ ಪುಟ್ಟ ಪುಟ್ಟ ಕನ್ನಡಿಗಳ ಸಾಲು.. ಮುಗುಳ್ನಗೆ ಮೂಡಿತು.
ಬಟ್ಟೆಗೆ ಒಪ್ಪುವಂಥ ಎರಡು ನೀಲಿ ಬಣ್ಣದ ಬಳೆಗಳನ್ನು ಹಾಕಿಕೊಂಡು ಮತ್ತೊಂದು ಕೈಗೆ ಬಿಳಿ ಬಣ್ಣದ ಬೆಲ್ಟ್ ಇರುವ ವಾಚ್ ಕಟ್ಟಿಕೊಂಡಳು. ತಾನು ಯಾವತ್ತೂ ಹಾಕದಿರುವ ಇಯರ್ ರಿಂಗ್ ಹಾಕಿಕೊಂಡಳು. ಪುಟ್ಟ ಪುಟ್ಟ ವಜ್ರದ ಹರಳುಗಳಿದ್ದ ಇಯರ್ ರಿಂಗ್ ಅವಳ ಮುಖದಂತೆ ಹೊಳೆಯುತ್ತಿತ್ತು. ತುಂಬಿದ ಕೆನ್ನೆಗಳಿಗೆ ಹೌದೋ ಅಲ್ಲವೋ ಎಂಬಷ್ಟು ತೆಳ್ಳಗೆ ರೋಸ್ ಹಚ್ಚಿಕೊಂಡಳು. ಕಪ್ಪನೆಯ ಕಣ್ಣುಗಳಿಗೆ ಕಾಡಿಗೆ ಹಚ್ಚುವ ಅವಶ್ಯಕತೆಯೇ ಇರಲಿಲ್ಲ.
ತುಟಿಯ ಮೇಲೆ ಸುಮ್ಮನೆ ಒಮ್ಮೆ ನಾಲಿಗೆ ಆಡಿಸಿಕೊಂಡಳು. ಲಿಪ್ ಸ್ಟಿಕ್ ತನಗೆ ಶೋಭೆಯಲ್ಲ ಸಾಕಿಷ್ಟು ಎಂದು ಫೋನ್ ಎತ್ತಿಕೊಂಡು ಕ್ಷಾತ್ರನಿಗೆ ಫೋನ್ ಮಾಡಿದಳು.
"ಕ್ಷಾತ್ರ ನಾನಿಂದು ನಿನಗೆ ಸಿಗಬೇಕು. ಮಾತನಾಡುವುದಿದೆ. ಎಷ್ಟು ಹೊತ್ತಿಗೆ ಫ್ರಿ ಇರುವೆ??"
"Is something special!? ನಿಮಗಾಗಿ ನಾನು ಯಾವಾಗಲೂ Free ನೇ ಮೇಡಂ..!" ಎಂದ ಕ್ಷಾತ್ರ.
ನಗು ಬಂತು ಸ್ವಯಂವರಾಳಿಗೂ. "ಸರಿ ಹಾಗಾದರೆ ನಾ ನಿನಗೆ ಮೆಸೇಜ್ ಮಾಡುತ್ತೇನೆ. ಎಲ್ಲಿ ಸಿಗಬೇಕೆಂದು ಹೇಳು ಸಿಗೋಣ ಬೈ.." ಎಂದಳು.
ಕ್ಷಾತ್ರನು ಬೈ ಎಂದು ಕಾಲ್ ಕಟ್ ಮಾಡಿದ.
ವ್ಯಾನಿಟಿ ಬ್ಯಾಗ್ ಹಿಡಿದು ಹೊರ ಹೊರಟಳು ಸ್ವಯಂವರಾ.
ಅವಳಿಗಾಗಿ ಹೊರಗೆ ಬಾಷಾ ಕಾಯುತ್ತಿದ್ದ್ದಾನೆ ಎಂಬ ಸಣ್ಣ ಸುಳಿವೂ ಸಹ ಆಕೆಗಿರಲಿಲ್ಲ. ಕ್ಷಾತ್ರನಿಗೂ ಕೂಡ..
*...............................................*........................................*
ರಾತ್ರಿ ಹತ್ತು ಗಂಟೆಯಾಗಿತ್ತು. ಅಷ್ಟು ಹೊತ್ತಿಗೆಲ್ಲ ಜೈಲಿನಲ್ಲಿ ಊಟ ಮುಗಿದು ಪೇದೆಯೊಬ್ಬ ಎಲ್ಲ ಸೆಲ್ ನಲ್ಲಿರುವ ಕೈದಿಗಳನ್ನು ನೋಡಿಕೊಂಡು ಹೋದ ಮೇಲೆ ಲೈಟ್ ಆರಿಸಿಬಿಡುತ್ತಾರೆ. ಅಲ್ಲಲ್ಲಿ ಕೆಲವು ಟ್ಯೂಬ್ ಲೈಟ್ ಗಳು ಮಾತ್ರ ಉರಿಯುತ್ತಿರುತ್ತವೆ. ಅದು ಬಿಟ್ಟರೆ ರಸ್ತೆಗಳಲ್ಲಿನ ಬೀದಿ ದೀಪಗಳು. ಮೇನ್ ಗೇಟ್ ಹಾಗೂ ಎತ್ತರದ ಕಾಂಪೌಂಡ್ ನ ನಾಲ್ಕು ಮೂಲೆಗಳಲ್ಲೇ ಪಹರೆಗೆ ನಿಲ್ಲುವವರ ಬಳಿ ಒಂದೊಂದು ಲೈಟ್ ಉರಿಯುತ್ತಿರುತ್ತದೆ. ದೊಡ್ಡದಾದ ಸರ್ಚ್ ಲೈಟ್ ಒಂದು ಸುತ್ತಲೂ ಓಡಾಡಿಕೊಂಡಿತ್ತು. ಹತ್ತು ಗಂಟೆ ಆಯಿತೆಂಬಂತೆ ಪೇದೆ ಶಾಸ್ತ್ರೀಯ ಸೆಲ್ ನ ಎದುರು ಹಾದು ಹೋದ. ಇನ್ನು ನಾಳೆ ಬೆಳಿಗ್ಗೆ ಸೂರ್ಯೋದಯ ತನ್ನ ಬದುಕಿನಲ್ಲಿ ಎಂತಹ ಆಟವಾಡುತ್ತದೆಯೋ ಎಂದುಕೊಂಡು ಮಲಗಲು ತಯಾರಾದ ಶಾಸ್ತ್ರಿ. ಅಷ್ಟರಲ್ಲಿ ಲೈಟ್ ಆಫ್ ಆಯಿತು. ಬೆಳಕಿಗೆ ಹೊಂದಿಕೊಂಡಿದ್ದ ಶಾಸ್ತ್ರಿಯ ಕಣ್ಣುಗಳು ಒಮ್ಮೆಲೇ ಕತ್ತಲಾವರಿಸಿದ್ದರಿಂದ ಏನು ಕಾಣದಂತೆ ಗಾಡಾಂಧಕಾರವಾಯಿತು. ಆ ಹೊತ್ತಿನಲ್ಲಿ ಆತ ಚಾದರ ಕೊಡವಿ ಹೊದೆಯಲು ರೆಡಿಯಾಗುತ್ತಿದ್ದ. ಅಷ್ಟರಲ್ಲಿ ನೆಲದ ಮೇಲೆ ಏನೋ ಹೊಳೆದಂತಾಯಿತು. ಸ್ವಯಂವರಾ ಕೊಟ್ಟ ಕರ್ಚಿಫ್ ಮರೆತು ಹೋಗಿತ್ತು ಅವನಿಗೆ. ಏನೆಂದು ನೋಡಿದಾಗ ಅದೇ ಕರವಸ್ತ್ರ.
ಪಟ್ಟನೆ ಕರವಸ್ತ್ರ ತೆಗೆದುಕೊಂಡು ಏನೆಂದು ನೋಡಿದ. ಹಗಲಿನಲ್ಲಿ ಎಷ್ಟು ನೋಡಿದರೂ ಏನೂ ಕಾಣದ ಕರವಸ್ತ್ರದ ಮೇಲೆ ಈಗ ಸ್ಪಷ್ಟವಾಗಿ ಹೊಳೆಯುವ ಅಕ್ಷರಗಳು. ಸರೋವರಾ ರೇಡಿಯಂ ಪೆನ್ ಉಪಯೋಗಿಸಿ ಬರೆದಿದ್ದಾಳೆ..!!
"ಇಂದು ರಾತ್ರಿ.. ಕಬಾಲಿ.. ಸೆಕೆಂಡ್ ಶೋ.."
ಒಮ್ಮೆಲೇ ಏನೂ ಅರ್ಥವಾಗಲಿಲ್ಲ ಶಾಸ್ತ್ರಿಗೆ. ಇದನ್ನೇಕೆ ನನಗೆ ಬರೆದುಕೊಟ್ಟಳು ಸರೋವರಾ.ಇದರ ಅರ್ಥವೇನು?? ಕರವಸ್ತ್ರ ಮಡಚಿ ಚಾದರದೊಳಗಿಟ್ಟು ಅದರ ಅರ್ಥವೇನೆಂದು ಯೋಚಿಸತೊಡಗಿದ. ಒಮ್ಮೆ ಸಮಾಧಾನದಿಂದ ಯೋಚಿಸಿದಾಗ ನೆನಪಾಯಿತು. ಸೂಪರ್ ಸ್ಟಾರ್ ರಜನಿಯ ಕಬಾಲಿ ಚಿತ್ರದ ಬಿಡುಗಡೆಯಿದೆ. ಎಂದು!? ಎಂದು!? ಪಟಕ್ಕನೆ ಹೊಳೆಯಲಿಲ್ಲ. ತಾನು ಓದಿದ ಪತ್ರಿಕೆಗಳ ಸಾಲುಗಳನ್ನು ನೆನಪು ಮಾಡಿಕೊಳ್ಳತೊಡಗಿದ ಶಾಸ್ತ್ರಿ. ಎಂದೋ ಓದಿದ್ದು ನೆನಪಾಯಿತು.
22nd Friday..
ಅಂದರೆ ಇವತ್ತೇ.. ರಜನಿಯ ಫಿಲ್ಮ್ ಎಂದರೆ ಮುಗಿಯಿತು. ಜನರ ದಂಡೇ ಸೇರುತ್ತದೆ. ಅದು ಮೊದಲ ದಿನ!! ಕೇಳಬೇಕೆ!? ಆದರೆ ಸರೋವರಾ ತನಗೇಕೆ ಇದನ್ನು ಕೊಟ್ಟಳು?? ಅಥವಾ ಕಬಾಲಿ ಸೆಕೆಂಡ್ ಶೋಗೆ ಬಾ ಎಂದು ಪ್ರತಾಪ್ ಅವಳನ್ನು ಕರೆದನೇ??
ಅಷ್ಟರಲ್ಲಿ ತಟಕ್ಕನೆ ಒಂದು ವಿಚಾರ ಅರಿವಾಯಿತು.ಅವನಿರುವ ಜೈಲಿನ ಪಕ್ಕದಲ್ಲೇ ಮಲ್ಟಿಪ್ಲೆಕ್ಸ್ ಸಿನಿಮಾ ಮಂದಿರವಿದೆ. ಬೆಳಿಗ್ಗಿನಿಂದ ಅದರ ಕೇಕೆ ಆಗಾಗ ಕೇಳಿ ಬರುತ್ತಿರುತ್ತದೆ. ಒಂದು ಶೋ ಮುಗಿದು ಜನ ಹೊರಬಿದ್ದರಂತೂ ದೊಡ್ಡ ಜಾತ್ರೆಯೇ ಸೇರಿದಷ್ಟು ಗದ್ದಲ ಕೇಳಿ ಬರುತ್ತಿದೆ.
ಶಾಸ್ತ್ರಿ ಯೋಚಿಸುತ್ತ ಕುಳಿತ.. ಯಾಕೆ?? ಯಾಕೆ?? ಸರೋವರಳ ಉದ್ಧೇಶವೇನು?? ಸೆಕೆಂಡ್ ಶೋ ಶುರುವಾಗುವುದು 11.30 ಕ್ಕೆ. ಒಂದೂವರೆ ಎರಡು ಗಂಟೆಗೆಲ್ಲ ಸಿನಿಮಾ ಮುಗಿಯುತ್ತದೆ. ಅದನ್ನೇಕೆ ಬರೆದಿದ್ದಾಳೆ?? ನನ್ನನ್ನು ಜೈಲಿನಿಂದ ತಪ್ಪಿಸುವ ಆಲೋಚನೆಯೇನಾದರೂ ಇದೆಯಾ!? ಆದರೆ ಅವಳು ಅಂತಹ ಯೋಚನೆ ಮಾಡಲಾರಳು.
ರಾತ್ರಿ ಜೈಲಿನಿಂದ ಕದ್ದೋಡುವುದೂ, ಜೀವವನ್ನು ಗಂಗೆಯಲ್ಲಿ ತೇಲಿ ಬಿಡುವುದೂ ಎರಡು ಒಂದೇ. ಬದುಕಿ ಹೊರಬೀಳುವುದು ಕಷ್ಟ. ನನ್ನ ಜೀವವನ್ನು ಪಣಕ್ಕಿಡುವ ಹಂತಕ್ಕೆ ಹೋಗಲಾರಳು ಅವಳು.
ಮತ್ತೇಕೆ?? ಮತ್ತೇಕೆ ಹೀಗೆ ಬರೆದಿದ್ದಾಳೆ?? ಇನ್ನೊಂದು ಸ್ವಲ್ಪ ವಿವರಣೆ ಏನಾದರೂ ಬರೆಯಬಾರದಿತ್ತೇ.. ಎಂದುಕೊಂಡ. ಒಂದೆರಡು ನಿಮಿಷ ಹಾಗೆಯೇ ಕಣ್ಮುಚ್ಚಿ ಕುಳಿತುಕೊಂಡ. ಮಧ್ಯಾಹ್ನ ಸರೋವರಾ ಬಂದಾಗಿಲಿನಿಂದ ಇಬ್ಬರ ಮಾತುಕತೆಯನ್ನು ಮತ್ತೊಮ್ಮೆ ಮೆಲುಕು ಹಾಕಿದ. ಏನಾದರೂ ಕ್ಲ್ಯೂ ಕೊಟ್ಟಿರುವಳಾ ಮಾತಿನಲ್ಲಿ ಎಂದು. ಅಂತಹ ಯಾವುದೇ ಸೂಚನೆ ಆಕೆಯ ಕಡೆಯಿಂದ ಬಂದಿಲ್ಲ. ಅಂದರೆ!!?
ತಲೆ ಕೆಟ್ಟಂತಾಯಿತು ಶಾಸ್ತ್ರಿಗೆ. ತನ್ನ ಬುದ್ಧಿಗೇನಾಯಿತು?? ಹೀಗಿರಲಿಲ್ಲ ನಾನು!! ಸರೋವರಾಳೆ ನನಗೆ ಸವಾಲಾಗುವ ಚಾಣಾಕ್ಷೆಯಾದಳಲ್ಲ!? ನಾನವಳನ್ನು ಬಹಳ ಮಿಸ್ ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೆನಾ?? ಯಾವಾಗಲೂ ಅವಳು ಅಳುವ ಗೊಂಬೆಯಾಗಿಯೇ ಕಂಡಿದ್ದಳು. ಕೋರ್ಟಿನಲ್ಲೂ ಲಾಯರ್ ವೇಷ ಧರಿಸಿ ಬಂದಾಗಲೇ ತಾನೇ ಅವಳಷ್ಟು ಡೈನಾಮಿಕ್ ಎಂದು ನನಗೆ ಗೊತ್ತಾಗಿದ್ದು. ಏನೋ ಪ್ಲಾನ್ ಮಾಡಿರುತ್ತಾಳೆ. ಇಲ್ಲದಿದ್ದರೆ ಹೀಗೆ ರೇಡಿಯಂ ಲಿ ಬರೆದ ಕರ್ಚಿಫ್ ಕೊಡುತ್ತಿರಲಿಲ್ಲ. ಬೇರೆ ಯಾರೋ ಸ್ವಯಂವರಳನ್ನು ಫಿಲ್ಮಿಗೆ ಬಾ ಎಂದು ಕರೆಯಲು ಹೀಗೆ ಬರೆದು ಕೊಡುವ ಹರಸಾಹಸ ಮಾಡಬೇಕಿಲ್ಲ. ಅದು ಅಲ್ಲದೆ ಮೊನ್ನೆ ಕೋರ್ಟಿನಲ್ಲಿ ಅಷ್ಟು ನಡೆದ ಮೇಲೆ ಪ್ರತಾಪ್ ಇಷ್ಟು ಬೇಗ ಸರೋವರಳ ಸುದ್ದಿಗೆ ಬರಲಾರ. Something is missing.. think shaastri.. think..
ಅವನ ಮನಸ್ಸಿನಲ್ಲಿ ಸಾವಿರ ಅಶ್ವದ ಕುದುರೆ ಗಾಡಿಯೊಂದು ಓಡತೊಡಗಿತು. ತಟ್ಟನೆ ಆತನಿಗೊಂದು ನೆನಪಾಯಿತು. ಇವತ್ತು ಸರೋವರಾಳಿಗೆ ಪೇದೆ ಬಂದು ಬಾಗಿಲು ತೆಗೆದು ಕೊಟ್ಟಿಲ್ಲ. ಅವಳೇ ಕೀ ತೆಗೆದು ಒಳಗೆ ಬಂದಿದ್ದಾಳೆ. ನನ್ನನ್ನು ತಪ್ಪಿಸುವ ಉಪಾಯ ಮಾಡಿ ಬೀಗ ಸರಿಯಾಗಿ ಹಾಕದೇ ಹೋಗಿರಬಹುದೇ?
ಅದೊಂದು ಯೋಚನೆ ತಲೆಯಲ್ಲಿ ಬರುತ್ತಲೇ ಕುಳಿತಲ್ಲಿಂದ ದಿಢೀರನೆ ಮೇಲೆದ್ದ ಶಾಸ್ತ್ರಿ. ಬಹುತೇಕ ಕತ್ತಲಾವರಿಸಿತ್ತು ಆ ಜಾಗದಲ್ಲಿ. ಮಂದ ಬೆಳಕಿನಲ್ಲೂ ಎದುರಿನ ಸೆಲ್ ನಲ್ಲಿ ಮಲಗಿರುವ ವ್ಯಕ್ತಿ ಕಾಣುತ್ತಿದ್ದ. ಸದ್ದಾಗದಂತೆ ಬಾಗಿಲ ಬಳಿ ಹೋಗಿ ಹೊರಗೆ ಎಲ್ಲಾದರೂ ಪೇದೆ ಬರುತ್ತಿರುವನೇ ಎಂದು ಕಣ್ಣಿಗೆ ಕಾಣುವಷ್ಟು ದೂರ ಎರಡೂ ಕಡೆ ನೋಡಿದ. ಯಾವುದೇ ಸದ್ದು ಕೇಳದ ಕಾರಣ ನಿಧಾನ ಕೈ ಹೊರಗೆ ಹಾಕಿ ಬಾಗಿಲಿಗೆ ಹಾಕಿದ್ದ ಬೀಗ ತಡಕಿದ. ಹಾಕಿಕೊಂಡೇ ಇತ್ತು ಬೀಗ. ಸುಮ್ಮನೆ ಇಲ್ಲದ್ದನ್ನು ಯೋಚಿಸಿ ಮನಸ್ಸಿನಲ್ಲೇ ಮಂಡಿಗೆ ತಿಂದೆ ಎಂದು ಬೇಸರವಾಯಿತು. ಬಾಗಿಲು ಬಿಟ್ಟು ಹಿಂದೆ ಸರಿದು ಶತ ಪಥ ಹಾಕತೊಡಗಿದ.
ಹಾಗಾದರೆ.. ಕಬಾಲಿ ಸೆಕೆಂಡ್ ಷೋ ನ ಅರ್ಥವೇನು? ಹಣೆ ಉಜ್ಜಿಕೊಂಡ. ಏನಾದರೂ ಈ ಹೊತ್ತಿನಲ್ಲಿ ಸರೋವರಾ ಜೈಲಿನ ಗೋಡೆ ಒಡೆದು ಬಂದು ನನ್ನನ್ನು ಹಾರಿಸಿಕೊಂಡು ಹೋಗುವಳೇ??
ಅವನ ಯೋಚನೆಗೆ ಅವನಿಗೆ ನಗು ಬಂತು. ನಾನೇನಾದರೂ ಇಂಗ್ಲೀಷ್ ಸಿನೆಮಾ ನೋಡಿದ್ದು ಜಾಸ್ತಿಯಾಯಿತಾ? ಎಂದುಕೊಂಡ. ಯಾವ ಯೋಚನೆಗೂ ನಿರಾಳವಾಗದ ಮನಸ್ಸು ಹತಾಶೆಗೊಂಡಿತು. ಹತಾಶೆ ನೋವಾಗಿ, ನೋವು ಸಿಟ್ಟಾಗಿ ಪರಿವರ್ತನೆಯಾಗಲು ಬಹಳ ಸಮಯ ಹಿಡಿಯಲಿಲ್ಲ. ಓಡಾಡುತ್ತಿದ್ದ ಶಾಸ್ತ್ರಿ ಬಾಗಿಲ ಬಳಿ ಬಂದು "ಬ್ಲಡಿ ಸೆಕೆಂಡ್ ಶೋ.." ಎನ್ನುತ್ತಾ ಜೋರಾಗಿ ಜಾಡಿಸಿ ಒದ್ದ ಬಾಗಿಲಿಗೆ. ಕಬ್ಬಿಣದ ಬಾಗಿಲು ಸಡಿಲವಾಗಿದ್ದರಿಂದ ಗೋಡೆಯ ಮಧ್ಯೆ ಸಿಕ್ಕಿಸಿದ್ದ ಲಾಕ್ ನ ಸರಳು ಗಲಗಲ ಸಡ್ಡು ಮಾಡಿತು. ಅದು ಅಲ್ಲದೆ ಅದಕ್ಕೆ ಸಿಕ್ಕಿಸಿದ್ದ ಲಾಕ್ ಸಹ ಕಳಚಿ ಎಗರಿ ಬಾಗಿಲಿನಿಂದ ಹೊರಗೆ ದೂರ ಬಿತ್ತು.
ಆ ಸದ್ದಿಗೆ ಎದುರಿನ ರೂಮಿನ ಕೈದಿ ಎದ್ದು ಕುಳಿತುಕೊಂಡದ್ದು ಶಾಸ್ತ್ರಿಗೆ ಕಂಡಿತು. ಪಕ್ಕದ ಸೆಲ್ ಗಳಿಂದ ದೊಡ್ಡ ಕೇಕೆ ಕೇಳಿ ಬಂತು. ಶಾಸ್ತ್ರಿಗೆ ತಾನು ಮಾಡಿದ ತಪ್ಪಿನ ಅರಿವಾಗಿತ್ತು. ಬಾಗಿಲಿಗೆ ಲಾಕ್ ಸುಮ್ಮನೆ ಹಾಕಿಕೊಂಡಿತ್ತು. ಅವನು ಗಟ್ಟಿಯಾಗಿ ಅದನ್ನು ಎಳೆದರೆ ತೆರೆದುಕೊಳ್ಳುತ್ತಿತ್ತು. ಆದರೆ ಅವನು ಬೀಗ ತಡವಿ ಬಂದಿದ್ದ. ಈಗ ಬೀಗ ಎಗರಿ ಬಿದ್ದಿದೆ. ಬಾಗಿಲಿನಿಂದ ಮಾರು ದೂರವೇ ಬಿದ್ದಿದೆ. ಸರಳುಗಳ ಮಧ್ಯದಿಂದ ಕೈ ಹೊರಹಾಕಿ ಬೀಗ ಎಟುಕುತ್ತದೆಯೇ ನೋಡಿದ. ಕೈಯಿಂದ ಒಂದಿಂಚು ದೂರದಲ್ಲಿದೆ. ಅವನಿಗಾದಷ್ಟು ಬಾಗಿಲ ಬಳಿ ಸರಿದು ಬೀಗ ಒಳಗೆ ತೆಗದುಕೊಂಡ. ಗಲಾಟೆ ಕೇಳಿದ್ದರಿಂದ ಅಷ್ಟರಲ್ಲಿ ಲೈಟ್ ಆನ್ ಮಾಡಿದ್ದರು. ದೂರದಲ್ಲೆಲ್ಲೋ ಪೇದೆಯ ಸೀಟಿ ಸದ್ದು ಕೇಳಿಸಿತು. ಅವನು ಈಕಡೆ ಬರುವುದರೊಳಗೆ ಬೀಗವನ್ನು ಮೊದಲಿನಂತೆಯೇ ಹಾಕಿಡಬೇಕು. ಸಿಕ್ಕಿಬಿದ್ದರೆ ಕಥೆ ಮುಗಿಯಿತು. ಕೇವಲ ತನ್ನ ಕಥೆಯಲ್ಲ ಸರೋವರಳದು ಕೂಡ. ಅವಳೇನು ಪ್ಲಾನ್ ಮಾಡಿರುವಳೋ ಅದೆಲ್ಲ ಇಲ್ಲಿಗೆ ಮುಗಿದು ಹೋಗುತ್ತದೆ. ಲೈಟ್ ಹತ್ತಿಕೊಳ್ಳುತ್ತಿದ್ದಂತೆ ಸಿಸಿಟಿವಿಯವ ಈಕಡೆಯೇ ಗಮನ ಹರಿಸುತ್ತಾನೆ. ಕೊಠಡಿಗಳಲ್ಲಿ ಏನು ನಡೆಯುತ್ತಿದೆ ಎಂಬುದು ತಿಳಿಯುವುದಿಲ್ಲವಾದರೂ ವರಾಂಡ ಮೇಲೆ ನಡೆಯುವ ಘಟನೆಗಳು ಕಾಣಿಸುತ್ತವೆ. ಹಾಗಾಗಿ ಆದಷ್ಟು ಅನುಮಾನ ಬರದಂತೆ ಬಾಗಿಲ ಬಳಿ ನಿಂತ ಹಾಗೆ ಮಾಡುತ್ತಾ ಬೀಗವನ್ನು ಮತ್ತೆ ಸ್ವಸ್ಥಾನಕ್ಕೆ ಸೇರಿಸಿದ.
ಬೀಗ ಹಳೆಯದಾಗಿದ್ದಕ್ಕೋ ಏನೋ ಸುಮ್ಮನೆ ಸಿಗಿಸಿದರೆ ಗಟ್ಟಿಯಾಗಿ ಕುಳಿತುಕೊಳ್ಳುತ್ತಿತ್ತು. ಕತ್ತಲೆಯಲ್ಲಿ ಯಾವ ಕೊಠಡಿಯಿಂದ, ಯಾವ ಕಡೆಯಿಂದ ಸದ್ದು ಬಂತು ಎಂದು ತಿಳಿಯದ್ದರಿಂದ ಎರಡೂ ಕಡೆಗೂ ಬ್ಯಾಟರಿ ಹೊಡೆಯುತ್ತ ರೂಮಿನೊಳಗೆ ನೋಡುತ್ತಾ ಬರುತ್ತಿದ್ದರು. ಶಾಸ್ತ್ರಿ ಸುಮ್ಮನೆ ಹೋಗಿ ಬೆಂಚಿನ ಮೇಲೆ ಕುಳಿತ. ಆತನ ಹೃದಯ ಬಡಿತದ ಸದ್ದು ಆತನಿಗೆ ಕೇಳುವಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು. ಶಾಸ್ತ್ರಿ ಗೋಡೆಯ ಕಡೆ ಮುಖ ಮಾಡಿಕೊಂಡು ಕುಳಿತುಕೊಂಡಿದ್ದ. ಪೇದೆಗಳು ಬರುತ್ತಿದ್ದಾರೆ ಎಂಬಂತೆ ಬೂಟು ಕಾಲಿನ ಸದ್ದು ಹತ್ತಿರದಲ್ಲಿಯೇ ಕೇಳತೊಡಗಿತು. ಶಾಸ್ತ್ರಿಯ ಕೈ ಬೆವರತೊಡಗಿತು. ಪಕ್ಕದ ರೂಮಿನ ಸರಳುಗಳ ಮೇಲೆ ಲಾಠಿಯಿಂದ ಹೊಡೆದ ಸದ್ದು. ಶಾಸ್ತ್ರಿಯ ಸೆಲ್ ನ ಬಾಗಿಲಿಗೆ ಅಷ್ಟು ತಟ್ಟಿದರೆ ಸಾಕು ಬೀಗದ ಕೊಂಡಿ ಮತ್ತೆ ಕಳಚಿ ಬಿಡುತ್ತದೆ.
ಏನು ಮಾಡಬೇಕೋ ತಿಳಿಯಲಿಲ್ಲ. ಅಷ್ಟರಲ್ಲಿ ಎದುರು ರೂಮಿನ ಕೈದಿ ಎದ್ದು ಬಾಗಿಲ ಬಳಿ ಬಂದ. ಈತನೇನಾದರೂ ನಾನು ಕೀ ಎತ್ತಿಕೊಂಡಿರುವುದನ್ನು ನೋಡಿಬಿಟ್ಟಿದ್ದಾನಾ?? ಪೇದೆಯ ಬಳಿ ಹೇಳಿ ಬಿಡುತ್ತಾನಾ?? ಆತಂಕ ಮತ್ತಷ್ಟು ಹೆಚ್ಚಾಯಿತು. ಮುಖದ ಮೇಲೆ ಚಾದರ ಎಳೆದುಕೊಂಡು ಮಲಗಿದ ಶಾಸ್ತ್ರಿ.
ಪೇದೆ ಅವನ ರೂಮಿನೆದುರು ಬಂದಿದ್ದು ತಿಳಿಯಿತು. ಬ್ಯಾಟರಿಯ ಬೆಳಕು ಶಾಸ್ತ್ರಿಯ ರೂಮಿನ ಸರಳುಗಳನ್ನು ದಾಟಿ ಆತನ ಮೇಲೆ ಆಚೀಚೆ ಸರಿಯುತ್ತಿರುವುದು ಚಾದರದೊಳಗಿಂದ ಮಸುಬು ಮಸುಬಾಗಿ ಕಂಡುಬಂತು. ಲಾಠಿ ತೆಗೆದುಕೊಂಡು ಬಾಗಿಲಿಗೆ ಗಟ್ಟಿಸಿದನೋ ಮುಗಿಯಿತು ಕಥೆ ಎಂದುಕೊಂಡ.
"ಏಯ್ ಮಗನೇ, ದೂರ ಸರಿಯೋ ಬಾಗಿಲಿನಿಂದ. ಎನ್ನುತ್ತಾ ಲಾಠಿ ಎದುರು ರೂಮಿನ ಸರಳಿಗೆ ಗಟ್ಟಿಸಿದ ಸದ್ದಾಯಿತು. ಎರಡು ಕ್ಷಣ ಭಾರವಾಗಿ ಕಳೆಯಿತು. ಎದುರು ರೂಮಿನ ಕೈದಿ ದೊಡ್ಡದಾಗಿ ಆಕಳಿಸುತ್ತ ಬಾಗಿಲಿನಿಂದ ದೂರ ಸರಿದ. "ತಿಂದ ಕೊಬ್ಬು ಮಕ್ಕಳಾ ನಿಮಗೆ.. ಉಪವಾಸ ಸಾಯಿಸುತ್ತೀನಿ.." ಎನ್ನುತ್ತಾ ಪೇದೆ ಮುಂದೆ ಸಾಗಿದ.
ಶಾಸ್ತ್ರಿ ಹಾಗೆ ಮಲಗಿಯೇ ಇದ್ದ. ಬರುತ್ತಿರುವ ಚಂಡಮಾರುತವೊಂದು ದಿಕ್ಕು ತಪ್ಪಿ ಬೇರೆಡೆಗೆ ಹೋದ ಅನುಭವವಾಯಿತು. ಐದು ನಿಮಿಷ ಕಳೆದ ನಂತರ ಲೈಟ್ ಆಫ್ ಆಗಿ ಮತ್ತೆ ಕತ್ತಲಾಯಿತು.
ಎದ್ದು ಕುಳಿತ ಶಾಸ್ತ್ರಿ. ಈಗ ಅವನಿಗೆ ಯಾವುದೇ ಅನುಮಾನ ಉಳಿದಿರಲಿಲ್ಲ. ಸರೋವರಾ ತನ್ನನ್ನು ಜೈಲಿನಿಂದ ತಪ್ಪಿಸಲು ಸಂಚು ಮಾಡಿದ್ದಾಳೆ. ಕಬಾಲಿ ಸೆಕೆಂಡ್ ಷೋ ಮುಗಿಯುವ ಗಲಾಟೆಯಲ್ಲಿ ಏನೋ ಮಾಡುವವಳಿದ್ದಾಳೆ.
ಆದರೆ ಏನು? ನಾನು ಮೊದಲೇ ಇಲ್ಲಿಂದ ಹೊರಬೀಳಬೇಕಾ? ಹೊರ ಹೋದರು ಮೆನ್ ಗೇಟಿನಿಂದ ಹೊರಹೋಗುವುದು ಹೇಗೆ? ಅಲ್ಲಿಂದ ಹೊರ ಬಿದ್ದರು ಪೊಲೀಸರು ನನ್ನನ್ನು ಬೇಟೆಯಾಡಿಬಿಡುವುದಿಲ್ಲವೇ?? ಅದೆಷ್ಟೋ ಪ್ರಶ್ನೆಗಳು ಅಸಂಬದ್ಧವಾಗಿ ಅವನ ಸುತ್ತಲೂ ಗಿರಕಿ ಹೊಡೆಯತೊಡಗಿದವು.
ಹತ್ತು ಗಂಟೆಗೆ ಕರೆಂಟ್ ತೆಗೆದಿದ್ದಾರೆ. ಇಷ್ಟೆಲ್ಲ ನಡೆಯುವುದರೊಳಗೆ ಒಂದರ್ಧ ಗಂಟೆ ಕಳೆದಿರಬಹುದು. ಸೆಕೆಂಡ್ ಷೋ ಮುಗಿಯುವುದು ಎರಡು ಗಂಟೆಗೆ. ತಾನು ಹೊರಬೀಳಬೇಕೋ ಬೇಡವೋ ನೋಡೋಣ. ಆದರೆ ಸಮಯವನ್ನು ಕೂಡ ನೆನಪಿಡಬೇಕು. ಈಗ 10.30 ಎಂದುಕೊಂಡರೆ ಇನ್ನು ಮೂರುವರೆ ಗಂಟೆ ಸಮಯವಿದೆ. ಅಂದರೆ 210 ನಿಮಿಷಗಳು. 12600 ಸೆಕೆಂಡ್ ಗಳು.. 12599.... 12598... ಮನಸ್ಸಿನಲ್ಲಿಯೇ ಕೌಂಟ್ ಡೌನ್ ಶುರು ಮಾಡಿದ ಪದ್ಮಾಸನ ಹಾಕಿ ಕುಳಿತು.
ಸರೋವರಾ ನೀನು ಕೇವಲ ಡೈನಾಮಿಕ್ ಅಲ್ಲ. ಡೈನಾಮೈಟ್ ಎಂದುಕೊಂಡ ಮನಸ್ಸು 12500... 12499... 12498...ಎಂದು ಮುಂದೆ ಎಣಿಸಿತು.
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

No comments:

Post a Comment