Wednesday, August 17, 2016

ಖತರ್ನಾಕ್ ಕಾದಂಬರಿ ಅಧ್ಯಾಯ 28

                                                             ಖತರ್ನಾಕ್ ಕಾದಂಬರಿ ಅಧ್ಯಾಯ 28

"ಹೆಚ್ಚು ಮಾತನಾಡುವುದು, ಯಾರನ್ನಾದರೂ ಒಪ್ಪಿಸಲು ಕೈ ಕಾಲು ಹಿಡಿಯುವುದು ನಮ್ಮ ಜಗತ್ತಿನಲ್ಲಿ ತುಂಬಾ ಕಡಿಮೆ. ನಿನ್ನ ವಯಸ್ಸಿಗೆ ಮತ್ತು ವೃತ್ತಿಗೆ ಬೆಲೆ ಕೊಟ್ಟು ಇಷ್ಟು ಕೇಳಿದೆ. ನಿನಗೆ ಕೊಟ್ಟ ಒಂದು ದಿನದ ಅವಧಿ ಮುಗಿಯಿತು. ಏನು ಯೋಚಿಸಿದೆ?"ಡಾಕ್ಟರ್ ಶ್ರೀನಿವಾಸನ್ ಕೇಳಿದ ಗರುಡ. ಅತ್ತ ಕಡೆ ರಿಸೀವರ್ ಹಿಡಿದಿರುವುದು ಪ್ರಿಯಂವದಾ ರಾಜ್ ಳನ್ನು ನೋಡಿಕೊಳ್ಳುತ್ತಿದ್ದ ಮುಖ್ಯ ವೈದ್ಯ ಡಾಕ್ಟರ್ ಶ್ರೀನಿವಾಸನ್. 
ತಾಜ್ ಹೋಟೆಲ್ ನಿಂದ ತಪ್ಪಿಸಿಕೊಂಡು ಹೊರಬಿದ್ದ ಗರುಡ ಇಂಡಿಯಾ ಗೆಟ್ ಗೂ ಮೊದಲೇ ಇಳಿದು ಆಟೋ ಹಿಡಿದು ಗೋವಿಂದಪುರಿ ತಲುಪಿದ್ದ. ಗಲ್ಲಿಗಲ್ಲಿಯ ಮನೆಗಳು.. ಎಲ್ಲಿ ಬೇಕೆಂದರಲ್ಲಿ ಜೋತು ಬಿದ್ದಿರುವ ಟೆಲಿಫೋನ್ ಮತ್ತು ಕೇಬಲ್ ಲೈನ್ ಗಳು.. ಸೈಕಲ್ ಮಾತ್ರ ಓಡಾಡಬಹುದಾದಷ್ಟು ಕಿರಿದಾದ ರಸ್ತೆ.. ಅದರ ಎರಡು ಕಡೆ ತುರುಕಿದಂತೆ ಕಟ್ಟಲ್ಪಟ್ಟ ಮನೆಗಳು.. ನಿಜವಾದ ದಿಲ್ಲಿ ದರ್ಶನವಾಗಬೇಕೆಂದರೆ ಇಂತಹ ಗಲ್ಲಿಗಳಲ್ಲಿ ಓಡಾಡಬೇಕು. ಇಂದಿಗೂ ಜನ ನೀರಿಗಾಗಿ ಪರದಾಡುತ್ತಾರೆ. ಭೂ ಮಾಫಿಯಾದ ಜೊತೆಗೆ ವಾಟರ್ ಮಾಫಿಯಾ ಕೂಡ ಸೇರಿಕೊಂಡು ಜನರನ್ನು ಕಾಡಿಸುತ್ತಿರುವ ಜಾಗಗಳು. 
ಭೂಗತವಾಗಿ ತಲೆ ಮರೆಸಿಕೊಳ್ಳಲು ಇಂತಹ ಜಾಗಗಳು ಹೇಳಿ ಮಾಡಿಸಿದಂತವು. ಯಾರು ಬರುತ್ತಾರೆ? ಯಾರು ಇರುತ್ತಾರೆ? ಯಾರು ಹೋಗುತ್ತಾರೆ? ಅಕ್ಕಪಕ್ಕದವರು ತಲೆ ಕೆಡಿಸಿ ಕೊಳ್ಳುವುದೇ ಇಲ್ಲ. 
ತನಗೆ ಬೇಕಾದ ವ್ಯವಸ್ಥೆಯನ್ನು ಹೋಟೆಲ್ ನಿಂದಲೇ ಹೇಳಿಬಿಟ್ಟಿದ್ದ ಗರುಡ. ಅವನು ಬರುವುದರೊಳಗೆ ಅದಿಷ್ಟು ವ್ಯವಸ್ಥೆ ಆಗಿರುತ್ತದೆ. ಅವನಂತಹ ಭೂಗತ ಕಿಂಗ್ ಪಿನ್ ಗಳು ಬದುಕಿರುವವರೆಗೆ ಇಂತಹ ಐಷಾರಾಮಿಗೇನು ಕಡಿಮೆಯಾಗುವುದಿಲ್ಲ. ಕೈ ಬೆರಳು ತೋರಿಸಿದಲ್ಲಿ ಮಹಲು ಎದ್ದು ನಿಲ್ಲುತ್ತದೆ. ಗೋವಿಂದಪುರಿಯ 14 ನೇ ಗಲ್ಲಿಯ ಮನೆ ನಂ. 888 ರ ಮುಂದೆ ನಿಂತು ಬಾಗಿಲ ಮೇಲೆ ತಡಕಿದ. ಕೀ ಗೊಂಚಲು ಸಿಕ್ಕಿತು. ಕೀ ತೆಗೆದು ಒಳ ಸೇರಿಕೊಂಡ. ಹೊರಗಿನಿಂದ ಜೇಡ ಕಟ್ಟಿಕೊಂಡಂತ ಮನೆ. ಆದರೆ ಒಳಗೆ ಎಲ್ಲವು ನೀಟಾಗಿತ್ತು. ಸುತ್ತಲೂ ಮನೆ ಇದ್ದಿದ್ದರಿಂದ ಸ್ವಲ್ಪ ಕತ್ತಲೆ ಆವರಿಸಿತ್ತು ಮನೆಯೊಳಗೆ. ಮೊದಲಿನಿಂದಲೇ ಏಸಿ ಉರಿಯುತ್ತಿದ್ದುದರಿಂದ ಮನೆ ತಂಪಾಗಿತ್ತು. ಬಿಸಿಲಿನ ಝಳದಿಂದ ಒಳ ಬಂದ ಮೈ ಮನ ಒಮ್ಮೆ ಹಾಯ್ ಎಂಬಷ್ಟು ತಂಪೆನ್ನಿಸಿತು. 
ಮುಖದ ಮೇಲೆ ದಂಡಿಯಾಗಿ ಅಂಟಿಸಿಕೊಂಡಿದ್ದ ಸಿಖ್ ವೇಷದ ಗಡ್ಡ ಮೀಸೆ ಎಲ್ಲವು ಈಗ ಕಿರಿಕಿರಿಯೆನಿಸತೊಡಗಿತು. ಬೇಗ ಬೇಗ ತನ್ನ ಮೊದಲಿನ ವೇಷಕ್ಕೆ ಬಂದು ಸುಮ್ಮನೆ ಮನೆಯನ್ನು ಒಂದು ಸುತ್ತು ಹಾಕಿದ. ಯಾವ ಯಾವ ಜಾಗಗಳಲ್ಲಿ ಏನೇನಿವೆ? ಹೊರಗಿನಿಂದ ಯಾರಾದರೂ ಬಂದರೆ ಎಸ್ಕೇಪ್ ರೂಟ್ ಯಾವುದು ಎಲ್ಲವನ್ನು ಆತ ಮನ ಲೆಕ್ಕಾಚಾರ ಹಾಕುತ್ತಿತ್ತು. ಮನೆಯ ಹಿಂದಿನ ಬಾಗಿಲು ತೆಗೆದರೆ ಹಿಂದಿನ ಮನೆಯ ಬಾಲ್ಕನಿ ಇತ್ತು. ಎಸ್ಕೇಪ್ ರೂಟ್ ಆಗಿ ಇದನ್ನು ಬಳಸಿಕೊಳ್ಳಬಹುದು. ಕಾಲಿಗೆ ಸ್ವಲ್ಪ ಶಕ್ತಿ ತುಂಬಿಕೊಂಡರೆ ಆ ಕಡೆಯ ಬಾಲ್ಕನಿಯ ಕಂಬಿ ಹಿಡಿದು ಅಲ್ಲಿಂದ ಪಕ್ಕದ ಮನೆಯ ಬಾಲ್ಕನಿಯ ಜಾಡು ಹಿಡಿದು ಮುಂದೆ ಸಾಗ ಬಹುದು. 
ಎಲ್ಲಿಯೇ ಉಳಿಯುವುದಾದರೂ ಮೊದಲು ನಿನ್ನ ಎಸ್ಕೇಪ್ ರೂಟ್ ನೋಡಿಟ್ಟುಕೋ. ಇದು ಭೂಗತ ಲೋಕ ಗರುಡನಿಗೆ ಕಳಿಸಿದ ಪಾಠ. ಆದ್ದರಿಂದಲೇ ಇಂದಿಗೂ ಆತ ಯಾರ ಕೈಗೂ ಸಿಗದೇ ಅದೃಶ್ಯನಾಗಿ ಓಡಾಡಿಕೊಂಡಿರುವುದು.
ಆತನಿಗೆ ಬಹಳ ಹತ್ತಿರ ಬಂದಿರುವೆದೆಂದರೆ ಸಮ್ಮಿಶ್ರನ ಟೀಮ್. ತನ್ನ ಮನಸ್ಸಿಗೆ ಎಲ್ಲವು ಸರಿಯೆನ್ನಿಸಿದ ಮೇಲೆ ಒಂದು ಹಿತವಾದ ಸ್ನಾನ ಮಾಡಿ ಒಂದರೆಗಳಿಗೆ ನಿದ್ರೆ ಮಾಡಿದ್ದ ಗರುಡ ಶ್ರೀನಿವಾಸನ್ ಗೆ ಕಾಲ್ ಮಾಡಿದ್ದ. ಅಲ್ಲಿಂದ ಶುರುವಾಗಿತ್ತು ಡಾಕ್ಟರ್ ಗೆ ಪಜೀತಿ. 
ಒಂದು ದಿನದ ಟೈಮ್ ಕೊಟ್ಟಿದ್ದ ಗರುಡ ಡಾಕ್ಟರ್ ಗೆ. ಈಗ ಆ ಅವಧಿ ಮುಗಿದಿತ್ತು. ಅದಕ್ಕೆ ಮತ್ತೆ ಇಂದು ಫೋನ್ ಮಾಡಿದ್ದ. ಮುಖದ ಮೇಲೆ ಮೂಡಿದ್ದ ಬೆವರನ್ನು ಕರವಸ್ತ್ರದಿಂದ ಒರೆಸಿಕೊಳ್ಳುತ್ತ ಸುಮ್ಮನೆ ರಿಸೀವರ್ ಹಿಡಿದು ಗರುಡನ ಮಾತನ್ನು ಕೇಳುತ್ತಿದ್ದ ಡಾಕ್ಟರ್ ಶ್ರೀನಿವಾಸನ್. 
ಪ್ರಿಯಂವದಾಳ ಟ್ರೀಟಮೆಂಟ್ ಯಾರು ಮಾಡುತ್ತಿದ್ದಾರೆ ಎಂದು ತಿಳಿದಿರುವುದು ಬೆರಳೆಣಿಕೆಯ ಜನರಿಗೆ ಮಾತ್ರ. ಅದಲ್ಲದೆ ಅವಳ ಹತ್ಯಾ ಪ್ರಯತ್ನ ನಡೆದಿದೆ ಎಂದು ತಿಳಿದಿರುವುದೂ ಅದೇ ಬೆರಳೆಣಿಕೆಯ ಜನರಿಗೆ ಮಾತ್ರ. ಅಂತಹದ್ದರಲ್ಲಿ ಇವನು ಯಾರು!? ಹೇಗೆ ನನ್ನ ಹಿಂದೆ ಬಿದ್ದಿದ್ದಾನೆ? ಎಂದು ನಿನ್ನೆಯಿಂದಲೂ ಯೋಚಿಸಿದ್ದಾರೆ ಶ್ರೀನಿವಾಸನ್. ಹೇಗಾದರೂ ಮಾಡಿ ಈ ಉರುಳಿನಿಂದ ಹೊರಬೀಳಬೇಕು. ಟ್ರೀಟಮೆಂಟ್ ನಿಂದಲೇ ದೂರ ಸರಿದು ಬಿಟ್ಟರೆ!!? ಫೋನ್ ಮಾಡಿದವ ನಿನ್ನೆಯೇ ಹೇಳಿದ್ದಾನೆ ನಿನ್ನ ಪ್ರತಿ ಚಲನವಲನಗಳನ್ನು ನಾವು ಗಮನಿಸುತ್ತಿದ್ದೇವೆ ಎಂದು. ನಮ್ಮ ವಿಷಯ ಬೇರೆ ಕಡೆ ತಿಳಿದರೆ ನೀನು ಇರುವುದಿಲ್ಲ ಎಂದು ಸೂಕ್ಷ್ಮವಾಗಿ ಎಚ್ಚರಿಸಿತ್ತು ನಿನ್ನೆಯ ಫೋನ್ ಕಾಲ್.
ಏನು ಮಾಡಬೇಕು? ಹೀಗೆ ಬೆದರಿಸುತ್ತಿರುವವರು ಯಾರು? ಅವರ ಉದ್ದೇಶವೇನಿರಬಹುದು? ಸಮ್ಮಿಶ್ರನಿಗೆ ಇದರ ಬಗ್ಗೆ ತಿಳಿಸಿದರೆ ಏನಾಗಬಹುದು? ಹೀಗೆ ಹತ್ತು ಹಲವು ಯೋಚನೆಗಳನ್ನು ಮಾಡುವುದರೊಳಗೆ ಒಂದು ದಿನ ಕಳೆದು ಹೋಗಿತ್ತು. ಹೇಳಿದ ಟೈಮ್ ಗೆ ಸರಿಯಾಗಿ ಮತ್ತೆ ಫೋನ್ ರಿಂಗಣಿಸಿತ್ತು. 
ಶ್ರೀನಿವಾಸನ್ ಇರುವುದರಲ್ಲಿಯೇ ಸ್ವಲ್ಪ ಧೈರ್ಯ ತಂದುಕೊಂಡು "ನೋಡು, ನೀನು ಯಾರೇ ಆಗಿರು.ನಿನ್ನನ್ನು ಡಾಕ್ಟರ್ ವೇಷದಲ್ಲಿ ಪ್ರಿಯಂವದಾಳ ಬಳಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಸೆಕ್ಯೂರಿಟಿ ಟೈಟ್ ಇರುತ್ತದೆ. ಹಾಗೊಂದು ವೇಳೆ ನೀವು ಒಳಹೋದರು ಮತ್ತೆ ಹೊರಬರಲಾರಿರಿ. ನಾನು ನನ್ನ ಕೆಲಸಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ. ಇನ್ನೇನಿದ್ದರೂ ನೀವುಂಟು.. ಪ್ರಿಯಂವದಾ ರಾಜ್ ಉಂಟು.. ನನ್ನನ್ನು ಬಿಟ್ಟುಬಿಡಿ.." ಎದುರಾದ ಸಂಕಟದಿಂದ ತಪ್ಪಿಸಿಕೊಂಡ ಭಾವ ಶ್ರೀನಿವಾಸನ್ ಗೆ. 
ಗರುಡ ಒಮ್ಮೆ ಮೆಲುವಾಗಿ ನಕ್ಕ. "ಡಾಕ್ಟರ್ ಶ್ರೀನಿವಾಸನ್, ಇದೇನು ಮಕ್ಕಳಾಟ ಎಂದುಕೊಂಡೆಯಾ?? ಅಥವಾ ನೀನೇನಾದರೂ ರಾಜಕೀಯ ಪಕ್ಷದಲ್ಲಿರುವೆ ಎಂದುಕೊಂಡೆಯಾ?? ರಾಜೀನಾಮೆ ಕೊಡಲು..!! 
ನಾಳೆ ನಾನು ಹೇಳಿದ ಕೆಲಸವಾಗಬೇಕು. ನಿನ್ನೊಂದಿಗೆ ನೀನು ಮತ್ತೊಬ್ಬ ಡಾಕ್ಟರ್ ನನ್ನು ಒಳಕರೆದುಕೊಂಡು ಹೋಗುತ್ತೀಯಾ ಅಷ್ಟೇ.."
ಶ್ರೀನಿವಾಸನ್ ಗೆ ಸಿಟ್ಟು ಉಕ್ಕುತ್ತಿತ್ತು. "ಇಲ್ಲದಿದ್ದರೆ ಏನು?? ಕೊಲ್ಲುತ್ತೀಯಾ ತಾನೇ!? ಕೊಂದುಬಿಡಿ.. ನನ್ನ ಜೀವಕ್ಕೆ ಹೆದರಿ ಇನ್ನೊಬ್ಬರ ಜೀವ ತೆಗೆಯಲಾರೆ.." 
"ಡಾಕ್ಟರ್, ನಾನು ಮೊದಲೇ ಹೇಳಿದ್ದೇನೆ. ಮಾತು ಜಾಸ್ತಿ ಆದಷ್ಟೂ ತೊಂದರೆ ಜಾಸ್ತಿ. ನಾನು ಮೊದಲೇ ಹೇಳಿದ್ದೇನೆ AIIMS ನಲ್ಲಿ HOD ಆಗಿರುವ ನಿಮ್ಮ ಮಗ, DPS ನಲ್ಲಿ ಓದುತ್ತಿರುವ ನಿಮ್ಮ ಮೊಮ್ಮಗಳು, ಲಂಡನ್ ನಲ್ಲಿ MS ಮಾಡುತ್ತಿರುವ ನಿಮ್ಮ ಮೊಮ್ಮಗ.. ಇವರೆಲ್ಲ ನಿನಗಿಂತ ಮೊದಲು ಸಾಯುತ್ತಾರೆ."
ಮತ್ತೆ ಮಾತನಾಡಲಿಲ್ಲ ಶ್ರೀನಿವಾಸನ್. "ನಾಳೆ ಎಷ್ಟು ಹೊತ್ತಿಗೆ ಯಾರು? ಎಲ್ಲಿ ಬರುತ್ತಾರೆ?" ಎಂದಷ್ಟೇ ಕೇಳಿದ.
"ಅದೆಲ್ಲ ಈಗ ಬೇಡ. ನಾಳೆ ರಾಜ್ ಳನ್ನು ಭೇಟಿ ಮಾಡಲು ಹೊರಡು. ನಮ್ಮವನು ಬಂದು ಸೇರಿಕೊಳ್ಳುತ್ತಾನೆ. ಇವನು ಹೊಸ ಡಾಕ್ಟರ್ ಎಂದು ಪರಿಚಯಿಸಿ ಒಳ ಕರೆದುಕೊಂಡು ಹೋಗುವುದಷ್ಟೇ ನಿನ್ನ ಕೆಲಸ.." 
ಏನು ಪ್ರತಿಕ್ರಿಯಿಸದ ಶ್ರೀನಿವಾಸನ್ ಕಾಲ್ ಕಟ್ ಮಾಡಿದ. ಗರುಡನ ಮುಖದ ಮೇಲೆ ನಸು ನಗು ಮೂಡಿತು.
*............................................................*................................................................*
1000..
999..
998..
ಸೆಕೆಂಡುಗಳನ್ನು ಎಣಿಸುತ್ತ ಕುಳಿತಿದ್ದ ಶಾಸ್ತ್ರಿ. ನಾನು ಸರಿಯಾಗಿ ಎಣಿಸುತ್ತಿದ್ದೇನಾ!? ಮನಸ್ಸು ಸ್ಥಿಮಿತದಲ್ಲಿಲ್ಲದೆ ಎಣಿಕೆಯಲ್ಲಿ ಅಂತರವಿದ್ದರೆ ಸಮಯ ಹೆಚ್ಚು ಕಡಿಮೆಯಾಗುವ ಅಪಾಯವೂ ಇದೆ. ಅಷ್ಟರಲ್ಲಿ ಮತ್ತೊಂದು ಯೋಚನೆಯೂ ಬಂತು ಆತನ ಮನಸ್ಸಿನಲ್ಲಿ. ಸರೋವರಾ ಒಳಗೆ ಬಂದು ನನ್ನನ್ನು ಬಿಡಿಸುತ್ತಾಳೆ ಎಂದುಕೊಂಡರೆ ಹೀಗೆ ಲಾಕ್ ಏಕೆ ತೆಗೆದಿಡುತ್ತಿದ್ದಳು? ಏನಾದರೂ ಆಯುಧ ಉಪಯೋಗಿಸಿದರೆ ಪಟ್ ಎಂದು ತೆರೆದುಕೊಂಡು ಬಿಡುತ್ತದೆ ಈ ಬಿಗ. ಹಾಗಿದ್ದಲ್ಲಿ ಏಕೆ?? ಅಂದರೆ ಈ ಹೊತ್ತಿಗಾಗಲೇ ನಾನು ಹೊರಗಿರಬೇಕು ಎಂದು ಸೂಚಿಸಿದ್ದಾಳಾ?? ಆದರೆ ಹೊರಗೆ ಹೋಗಲು ಹೇಗೆ ಸಾಧ್ಯ?? ಕೊಠಡಿಯ ಬಾಗಿಲೇನೋ ತೆರೆದಿದೆ. ಆದರೆ ಮೇನ್ ಗೇಟ್ ಹೇಗೆ ತೆಗೆದಿರಲು ಸಾಧ್ಯ? 
ಮತ್ತೆ ದುಗುಡ ಆವರಿಸಿಕೊಂಡಿತು ಮನದಲ್ಲಿ. ಇನ್ನೆರಡು ಗಂಟೆಯಲ್ಲಿ ತನ್ನ ಜೀವನದಲ್ಲಿ ಏನೇನು ನಡೆಯುತ್ತದೆಯೋ..!? ಅದಾಗಲೇ ಕೌಂಟ್ 950 ರ ಬಳಿ ಇದೆ. ಅಂದರೆ ಇನ್ನೊಂದು ಹದಿನೈದು ನಿಮಿಷದಲ್ಲಿ ಕಬಾಲಿ ಸೆಕೆಂಡ್ ಷೋ ಮುಗಿಯಲಿದೆ. ನಾನೇನು ಮಾಡಬೇಕು?? ಇಲ್ಲೇ ಕೂತಿರಲಾ?? ಅಥವಾ ಕತ್ತಲೆಯಲ್ಲಿ ಯಾರಿಗೂ ಕಾಣದಂತೆ ಹೊರ ಬೀಳಲಾ?? ಸಿಸಿಟಿವಿ ಕ್ಯಾಮೆರಾಗಳನ್ನು ಕೂಡ ಎಲ್ಲೆಲ್ಲಿ ಅಳವಡಿಸಿದ್ದಾರೋ ಗೊತ್ತಿಲ್ಲ. ನಾನೇನಾದರೂ ಅದರಲ್ಲಿ ಸಿಕ್ಕಿಬಿದ್ದರೆ!? 
ಶಾಸ್ತ್ರಿ ತನ್ನ ಎಣಿಕೆಯನ್ನು ಅರ್ಧಕ್ಕೆ ನಿಲ್ಲಿಸಿ ಬಾಗಿಲಿನ ಬಳಿ ಬಂದು ನಿಂತ. ಹೊರಗೇನಾದರೂ ಸದ್ದು ಕೇಳುತ್ತಿದೆಯಾ ಎಂದು ಸೂಕ್ಷ್ಮವಾಗಿ ಆಲಿಸಿದ. 
ಪ್ರಶಾಂತವಾಗಿತ್ತು ಜೈಲಿನ ವಾತಾವರಣ. ಸುನಾಮಿಯ ಮುಂಚಿನ ನಿಶ್ಯಬ್ದತೆಯಂತಿತ್ತು ಆ ಹೊತ್ತು. ಆದದ್ದಾಗಲಿ ಹೊರಗೆ ಹೋಗಿ ಬಿಡೋಣ. ಮುಂದಿನದು ಮುಂದೆ ಎಂದು ಜೈಲಿನ ಕೊಠಡಿಯಿಂದ ಹೊರಬಂದ. ಪಕ್ಕದ ಸೆಲ್ ನ ಕೈದಿ ಮಾತನಾಡಿದ ಸದ್ದು.. ಕೇವಲ ಪೋಲೀಸರ ಮತ್ತು ಸಿಸಿಟಿವಿಯ ಕಣ್ತಪ್ಪಿಸುವುದು ಮಾತ್ರವಲ್ಲ ಅಕ್ಕಪಕ್ಕದ ಸೆಲ್ಲಿನಲ್ಲಿರುವ ಕೈದಿಗಳಿಗೆ ಕೂಡ ತಿಳಿಯಬಾರದೆಂದು ಆಗ ಅರಿವಾಯಿತು. ಯಾವನಾದರೂ ಒಬ್ಬ ನೋಡಿಕೊಂಡು ಕೇಕೆ ಹಾಕಿದರು ಮುಗಿದುಹೋಯಿತು. ಸೈರನ್ ಸೀಟಿಗಳು ಶುರುವಾಯಿತೆಂದರೆ ಹೊರ ಬೀಳುವುದು ಅಸಾಧ್ಯ. ಎಷ್ಟು ಮೆತ್ತಗೆ ಬಾಗಿಲು ತೆಗೆದು ಹೊರಬಂದಿದ್ದನೋ ಅಷ್ಟೇ ಮೆತ್ತಗೆ ಬಾಗಿಲು ಭದ್ರ ಪಡಿಸಿದ. ಒಮ್ಮೆ ಗಾಢವಾದ ಉಸಿರೆಳೆದು ಎದೆಯಲ್ಲಿ ತುಂಬಿಕೊಂಡು ಕಣ್ಮುಚ್ಚಿ ನಿಂತ. ಯಾವುದೇ ಸಣ್ಣ ಸದ್ದೂ ಕೇಳುವಂತೆ ಕಿವಿಯನ್ನು ಶೃತಿ ಮಾಡಿಕೊಂಡ. ಎರಡು ಮೂರು ರೂಮಿನಿಂದ ಗೊರಕೆಯ ಸದ್ದು ಕೇಳಿಸುತ್ತಿತ್ತು. ದೂರದ ಇನ್ಯಾವುದೋ ರೂಮಿನಿಂದ ಕೈದಿಯೊಬ್ಬ ಕೆಮ್ಮಿದ ಸದ್ದು. ಅಷ್ಟು ಬಿಟ್ಟರೆ ಮತ್ತೆಲ್ಲ ನಿಶ್ಯಬ್ಧ. ಕಣ್ಣು ಬಿಟ್ಟು ವರಾಂಡದ ಉದ್ದಕ್ಕೂ ನೋಡಿದ. ಸಿಸಿಟಿವಿಯ ಯಾವುದೇ ಕುರುಹುಗಳು ಕಾಣಬಹುದೇ ಎಂದು. ಅಂತಹದ್ಯಾವುದೂ ಕಾಣಿಸಲಿಲ್ಲ. ಅವನನ್ನು ಒಳ ಕರೆದುಕೊಂಡು ಬರುವಾಗಿನ ಚಿತ್ರಣ ಕಣ್ಮುಂದೆ ಬಂತು. ಯಾವ ದಾರಿಯಲ್ಲಿ ನಡೆದರೆ ಮೇನ್ ಗೇಟ್ ಬಳಿ ಹೋಗಬಹುದು ಎಂಬ ಸ್ಪಷ್ಟ ಕಲ್ಪನೆ ಮೂಡಿದ ಮೇಲೆ ಗೋಡೆಗೆ ಕಚ್ಚಿಕೊಂಡ ಹಲ್ಲಿಯಂತೆ ಇಂಚಿಮಚಾಗಿ ಮುಂದೆ ಹೋಗತೊಡಗಿದ. ಹೊರಗಡೆ ಸೆಕೆಂಡ್ ಷೋ ಬಿಟ್ಟ ಸುಳಿವೆಂಬಂತೆ ಸಣ್ಣ ಗಲಾಟೆ ಶುರುವಾಯಿತು. 
ನಾನಂದುಕೊಂಡ ಘಳಿಗೆ ಬಂದು ಬಿಟ್ಟಿತು ಎಂದು ಹೊರಬೀಳುವ ಪ್ರಯತ್ನವನ್ನು ಮತ್ತಷ್ಟು ಜೋರಾಗಿಸಿದ ಶಾಸ್ತ್ರಿ..

No comments:

Post a Comment