Wednesday, August 17, 2016

ಖತರ್ನಾಕ್ ಕಾದಂಬರಿ ನಮ್ಮ ನಿಮ್ಮ ನಡುವೆ... ಅಧ್ಯಾಯ 30

                                          ಖತರ್ನಾಕ್ ಕಾದಂಬರಿ  ನಮ್ಮ ನಿಮ್ಮ ನಡುವೆ... ಅಧ್ಯಾಯ 30

ಬಾಷಾನ ಕಾರು ಮುಂದೆ ಹೊರಡಬೇಕು ಅಷ್ಟರಲ್ಲಿ ಎಲ್ಲಿಂದಲೋ ತೂರಿಕೊಂಡು ಬಂದ ಕಲ್ಲೊಂದು ಜೀಪಿಗೆ ಜೋರಾಗಿ ಬಡಿಯಿತು. ಕಲ್ಲು ಸ್ವಲ್ಪ ಮೇಲೆ ಬಿದ್ದಿದ್ದರೆ ಜೀಪಿನ ಗಾಜು ಒಡೆದು ಪುಡಿ ಪುಡಿ ಆಗಿರುತ್ತಿತ್ತು, ಹಾಗಾಗದೆ ಸ್ವಲ್ಪ ಕೆಳಗೆ ಬಡಿದಿದ್ದರಿಂದ ತಾಗಡು "ದಾಡ್" ಎಂದು ಸಡ್ಡು ಮಾಡಿತು. ಏನು ನಡೆಯಿತು ಎಂದು ಅರಿವಾಗುತ್ತಲೇ ಬಾಷಾನ ಕಣ್ಣುಗಳು ಕೆಂಪಾದವು. ಒಮ್ಮೆಲೇ ಹಿಂದೆ ತಿರುಗಿ ತನ್ನ ಚೇಲಾಗಳ ಮುಖ ನೋಡಿದ. "ಯಾರಾದರೂ ಹೋಗಿ ನೋಡಿ" ಎಂಬ ಸಂಜ್ಞೆ ಅದು. ಬಾಷಾನ ಜೀಪಿಗೆ ಕಲ್ಲು ಹೊಡೆದ ಮೇಲೂ ಸುಮ್ಮನೆ ಬಿಟ್ಟರೆ!!? No.. ಆ ಮಾತೇ ಇಲ್ಲ. ಜನರಲ್ಲಿ ಇರುವ ಭಯ ಮಾತ್ರ ಒಬ್ಬ ರೌಡಿಯನ್ನು ಜೀವಂತವಾಗಿ ಉಳಿಸಬಲ್ಲದು. ಭಯ ಹೋಗಿ ಬಿಟ್ಟರೆ ದಾರಿಯಲ್ಲಿ ಹೋಗಿ ಬರುವವರೆಲ್ಲ ಕಲ್ಲೆಸೆಯುವವರೇ. ಅದನ್ನು ಚೆನ್ನಾಗಿ ಬಲ್ಲ ಬಾಷಾ. ಈಗ ಬಾಷಾನ ಚೇಲಾಗಳು ಕಲ್ಲೆಸೆದವನ ಕೈಯೋ, ಕಾಲೋ ತೆಗೆದರೆ ಮುಂದೆ ಮತ್ಯಾರೂ ಹೀಗೆ ಕಲ್ಲೆಸೆಯುವ ಸಾಹಸ ಮಾಡಲಾರರು. ಜೀಪಿನಿಂದ ದುಡು ದುಡು ಕೆಳಗಿಳಿದರು ಹಿಂದಿದ್ದ ಇಬ್ಬರು. ಸ್ವಯಂವರಾಳಿಗೆ ಸ್ವಲ್ಪ ಸಮಾಧಾನವಾಯಿತು ತನ್ನನ್ನು ಕಾಪಾಡಲು ಯಾರೋ ಬಂದಿದ್ದಾರೆ ಎಂದು.
   ಕ್ಷಾತ್ರ ಆ ಕಡೆಯಿಂದ ಮಾಹಿತಿಗಾಗಿ  ಕಾಯುತ್ತಲೇ ಇದ್ದ. ಕ್ರೈಮ್ ಬ್ರಾಂಚ್ ನ ರಿಸೋರ್ಸ್ ಟೀಮ್ ಮೊಬೈಲ್ ಎಲ್ಲಿದೆ ಎಂದು ಟ್ರೇಸ್ ಮಾಡಿ ಕಾನಸ್ಟೆಬಲ್ಗೆ ಮಾಹಿತಿ ಕೊಟ್ಟರು. ಆತ  "ಸರ್, ಇಂದಿರಾಪುರಮ್ ನ ಸ್ವರ್ಣ ಜಯಂತಿ ಪಾರ್ಕ್ ನ ಬಳಿಯಿಂದ ಮೊಬೈಲ್ ಸಿಗ್ನಲ್ ಕ್ಯಾಚ್ ಆಗುತ್ತಿದೆ.." ಎಂದು ಗಡಿಬಿಡಿಯಲ್ಲಿ ನುಡಿದ. ಬದಿಯಲ್ಲಿ ನಿಂತಿದ್ದ ವ್ಯಕ್ತಿಗೆ ಫೋನ್ ಹಿಂದಿರುಗಿಸಿ ಜೀಪ್ ಹತ್ತಿದ ಕ್ಷಾತ್ರ. ತಕ್ಷಣವೇ ಆತನಿಗೆ ನೆನಪಾಯಿತು ತಾನು 26 ಕಿಮೀ ದೂರವಿದ್ದೇನೆ.. ಇದು ಎಲ್ಲರು ಕೆಲಸಕ್ಕೆ ಹೋಗುವ ವೇಳೆ.  ಏನೆಂದರೂ ಅಲ್ಲಿಗೆ ಹೋಗಲು ಒಂದು ತಾಸು ಬೇಕೇ ಬೇಕು. ಅಷ್ಟರಲ್ಲಿ ಆಕೆಯನ್ನು ಅಲ್ಲಿಯೇ ಬಿಡುತ್ತಾರೆ ಎಂದು ಏನು ಗ್ಯಾರೆಂಟಿ? ಅದು ಅಲ್ಲದೆ ಈಗಾಗಲೇ ಅವಳು ಮೊಬೈಲ್ ಬಳಿ ಇರುವಂತಿಲ್ಲ. ಏನು ಮಾಡುವುದು?? ತಕ್ಷಣ ಮತ್ತೆ ಜೀಪಿನಿಂದ ಇಳಿದು ಅದೇ ವ್ಯಕ್ತಿಯ ಬಳಿ ಮೊಬೈಲ್ ತೆಗೆದುಕೊಂಡು 100 ಡಯಲ್ ಮಾಡಿದ. ಹನ್ನೊಂದನೆಯ ರಿಂಗಿಗೆ ಫೋನ್ ಎತ್ತಿದ ಸದ್ದು. ಯಾರಾದರೂ ಎಮೆರ್ಜೆನ್ಸಿ ಎಂದು ಫೋನ್ ಮಾಡಿದರೆ ಗತಿಯೇನು? ಹನ್ನೊಂದನೆ ರಿಂಗಿಗೆ ಫೋನ್ ಎತ್ತಿಕೊಳ್ಳುತ್ತಿದ್ದಾರೆ ಬ್ಲಡಿ ಫೂಲ್ಸ್. ಒಂದೊಂದು ರಿಂಗಿಗೂ ಕ್ಷಾತ್ರನ ಮೈ ಉರಿದು ಸಹನೆ ಕಳೆದುಕೊಂಡಿತ್ತು. ರಿಸೀವರ್ ಎತ್ತುತ್ತಲೇ ಬಾಯಿಗೆ ಬಂದಂತೆ ಬಯ್ಯಬೇಕೆನಿಸಿದರೂ ಈಗ ಅದಕ್ಕೆ ಸಮಯವಲ್ಲ ಎಂದುಕೊಂಡು "ನಾನು ಕ್ಷಾತ್ರ ಮಾತಾಡ್ತಾ ಇರೋದು.. ಘಾಜಿಯಾಬಾದ್ ಇನಸ್ಪೆಕ್ಟರ್.. ಎಂದ" ಮಾತನಾಡುತ್ತಿರುವುದು ಇನಸ್ಪೆಕ್ಟರ್ ಎಂದು ತಿಳಿಯುತ್ತಲೇ "ಹಾಂ, ಹೇಳಿ ಸರ್.." ಎಂದು ಗಡಿಬಿಡಿಗೊಂಡ ಇತ್ತಕಡೆಯ ವ್ಯಕ್ತಿ.
   "ಹುಡುಗಿಯೊಬ್ಬಳನ್ನು ಕಿಡ್ನಾಪ್ ಮಾಡುತ್ತಿದ್ದಾರೆ. ಸ್ವರ್ಣ ಜಯಂತಿ ಪಾರ್ಕಿನ ಬಳಿ.. ಇಂದಿರಾಪುರಮ್.. ಈಗಲೇ ಹೋಗಿ ನೋಡಿ.."
   "ಸರಿ ಸರ್, ಈಗಲೇ ಹೊರಡುತ್ತೇವೆ.." ಎಂದು ಫೋನಿಟ್ಟ ಆತ.
    ಕ್ಷಾತ್ರನಿಗೂ ಗೊತ್ತು ತಮ್ಮ ಡಿಪಾರ್ಟಮೆಂಟಿನ ಕಾರ್ಯವೈಖರಿ. ತಡಮಾಡದೆ ಮತ್ತೆ ಸ್ಟೇಷನ್ ಗೆ ಕಾಲ್ ಮಾಡಿ ಎಲ್ಲ ಪೊಲೀಸ್ ಸ್ಟೇಷನ್ ಗೂ ತಿಳಿಸುವಂತೆ, ದಾರಿಯ ಮೇಲೆ ನಿಂತಿರುವ ಪೆಟ್ರೋ ಮೋಟಾರ್ಸ್ ಗಳಿಗೆ ಎಚ್ಚರಿಸುವಂತೆ ಹೇಳಿ ಮೊಬೈಲ್ ಹಿಂದಿರುಗಿಸಿ ಜೀಪ್ ಹತ್ತಿದ. ತನ್ನ ಮೊಬೈಲಿನಲ್ಲಿ ಏನಾದರೂ ಸದ್ದು ಕೇಳಿ ಬರುತ್ತಿದೆಯಾ ಎಂದು ಆಲಿಸುತ್ತಲೇ ಇದ್ದ.
    "ಅಮ್ಮಾ.." ಎಂದು ಯಾರೋ ದೊಡ್ಡದಾಗಿ ಕಿರುಚಿದ್ದು ಕೇಳಿಸಿತು ಕ್ಷಾತ್ರನಿಗೆ. ಅಂದರೆ ಅವರಿನ್ನೂ ಅಲ್ಲಿಯೇ ಇದ್ದಾರಾ? ಸ್ವಯಂವರಾ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಳಾ?? ಅಥವಾ ಯಾರಾದರೂ ಸಹಾಯಕ್ಕೆ ಬಂದಿರಬಹುದಾ? 100 ಕ್ಕೆ ಕಾಲ್ ಮಾಡಿದ ಎರಡೇ ನಿಮಿಷಗಳಲ್ಲಿ ಕಾರ್ಯ ಪ್ರವೃತ್ತರಾದರಾ? ಎಲ್ಲವೂ ಪ್ರಶ್ನೆಗಳಾಗೆ ಉಳಿದವು. ಪೊಲೀಸ್ ಸೈರನ್ ಹಾಕಿಕೊಂಡು ಎಕ್ಸಿಲೇಟರ್ ರೈಸ್ ಮಾಡಿದ ಕ್ಷಾತ್ರ. ತೆಗೆದುಕೊಂಡಿದ್ದ ಜೀಪಿನ ಕಿಡಕಿಯಿಂದ ಗಾಳಿ ಅವನ ಮುಖಕ್ಕೆ ರಾಚಿತು. ಸ್ವಯಂವರಾ ತಾನೇ ತನ್ನ ಜೀವನದಲ್ಲಿ ಇಷ್ಟೊಂದು ಬದಲಾವಣೆ ಆಗಲು ಕಾರಣ ಅನ್ನಿಸಿತು ಆತನಿಗೆ. ಸ್ವಯಂವರಾಳಿಗೆ ಏನು ಆಗದಿರಲಿ ದೇವರೇ ಎಂದುಕೊಂಡು ಜೀಪು ಮುನ್ನಡಿಸಿದ.
   "ಯಾವ್ ಬೊ.. ಮಗನೋ.. ಕಲ್ಲು ಒಗೆದದ್ದು..??" ಎಂದು ಅವಾಚ್ಯ ಶಬ್ದಗಳಿಂದ ಬಯ್ಯುತ್ತ ಜೀಪಿನಿಂದ ಕೆಳಗಿಳಿದರು ಬಾಷಾನ ಚೇಲಾಗಳು. ಹತ್ತಿರದಲ್ಲಿ ಯಾರು ಕಂಡು ಬರಲಿಲ್ಲ. ಎಲ್ಲರು ಸ್ವಲ್ಪ ದೂರದಲ್ಲಿಯೇ ನಿಂತು ತಮಾಷೆ ನೋಡುತ್ತಿದ್ದರು. ಅಷ್ಟರಲ್ಲಿ ರಸ್ತೆಯ ಮತ್ತೊಂದು ಕಡೆಯಿಂದ ತೂರಿ ಬಂದ ಕಲ್ಲು ಡ್ರೈವರ್ ಸೀಟಿನಲ್ಲಿದ್ದ ಧಡೂತಿಯ ಮುಖಕ್ಕೆ ಬಡಿಯಿತು. "ಅಮ್ಮಾ.." ಎಂದು ದೊಡ್ಡದಾಗಿ ಕೂಗಿಕೊಂಡ ಆತ. ಅದೇ ಸದ್ದು ಕ್ಷಾತ್ರನಿಗೂ ಕೇಳಿದ್ದು. ಊಹಿಸಿರದ ಘಟನೆಗೆ ಬಾಷಾನು ಒಮ್ಮೆ ಗಲಿಬಿಲಿಯಾದ. ಈಕೆಯನ್ನು ಬಿಟ್ಟು ತಾನು ಹೊರಬೀಳಲೇ?? ಅಥವಾ ಸ್ವಲ್ಪ ಸಮಯ ಇಲ್ಲೇ ಕುಳಿತು ಮುಂದೇನಾಗುವುದೆಂದು ನೋಡಲೇ? ಎಂದುಕೊಳ್ಳುವಷ್ಟರಲ್ಲಿ ಡ್ರೈವರ್ ಗೆ ಹಣೆ ಒಡೆದು ರಕ್ತ ಸುರಿಯತೊಡಗಿತು. ಆತ ದೊಡ್ಡದಾಗಿ ಕೂಗಲು ಆಗದೆ, ನೋವು ತಡೆದುಕೊಳ್ಳಲು ಆಗದೆ ನರಳುತ್ತಾ ಹಣೆ ಹಿಡಿದುಕೊಂಡು "ಥೇರಿ ಬೆಹನ್ ಕಿ..ಕೌನ್ ಹೇ.. ಬಾಹರ್ ಆಜಾ.." ಎನ್ನುತ್ತಾ ಸೀಟಿನ ಅಡಿಯಲ್ಲಿದ್ದ ಕತ್ತಿ
 ಹಿಡಿದು ಕೆಳಗಿಳಿದ.
   ತಮ್ಮ ಸಹಚಾರನಿಗಾದ ಗತಿ ನೋಡಿ ಮತ್ತು ಸಿಟ್ಟುಗೊಂಡರು ಉಳಿದವರಿಬ್ಬರು. ಕಲ್ಲು ತೂರಿಬಂದ ದಿಕ್ಕಿನತ್ತ ಓಡಿದರು. ಕೈಯಲ್ಲಿ ಕತ್ತಿ ಹಿಡಿದು ಸೋರುತ್ತಿದ್ದ ರಕ್ತವನ್ನೂ ಲೆಕ್ಕಿಸದೆ ಅವರ ಹಿಂದೆಯೇ ತಾನೂ ಓಡಿದ ಮತ್ತೊಬ್ಬ ಅನುಚರ.
   ಸ್ವಯಂವರಾ ಸುಮ್ಮನೆ ಕುಳಿತಿದ್ದಳು. ಯಾರೋ ತನ್ನ ಸಹಾಯಕ್ಕೆ ಬರುತ್ತಿದ್ದಾರೆ. ಸ್ವಲ್ಪ ಅವಕಾಶ ಸಿಕ್ಕರೂ ತಪ್ಪಿಸಿಕೊಳ್ಳಬಹುದು. ಬಾಷಾನಿಗೆ ಒಂದು ಕ್ಷಣ ಇರುಸುಮುರುಸಾಯಿತು. ದಡ್ಡ ಮುಂಡೆಗಳು.. ಎಲ್ಲರು ಎತ್ತ ಓಡಿದರು? ಅವರು ಅತ್ತ ಹೋಗುವಂತೆ ಮಾಡಿ ಇಲ್ಲಿ ಯಾರಾದರೂ ಬಂದರೆ..!? ತಾನೊಬ್ಬನೇ ಇರುವುದು ಇಲ್ಲಿ. ತನಗ್ಯಾರೋ ಹೊಡೆಯುತ್ತಾರೆ ಎಂಬ ಭಯವಲ್ಲ. ತಾನಿವಳನ್ನು ಬಿಟ್ಟು ಗುದ್ದಾಟಕ್ಕೆ ಹೋದಾಗ ಇವಳು ಓಡಿ ಹೋಗಿ ಬಿಟ್ಟರೆ ಎಂಬ ಅಂಜಿಕೆಯಷ್ಟೆ.
   ಅಷ್ಟರಲ್ಲಿ ಅವರೆಲ್ಲ ಹೋದ ದಿಕ್ಕಿನಿಂದ "ಅಮ್ಮಾ" ಎಂದು ಕಿರುಚಿಕೊಂಡ ಸದ್ದು. ಅದರ ಹಿಂದೆಯೇ ಬೈಕೊಂದು ಜೋರಾಗಿ ಹೋದ ಸದ್ದು. ರಸ್ತೆಯ ಮಧ್ಯೆ ಡಿವೈಡರ್ ಗಳಲ್ಲಿ ಬಣ್ಣದ ಗಿಡಗಳು ಪೊದೆಗಳಾಗಿ ಬೆಳೆದಿದ್ದರಿಂದ ಆ ಕಡೆ ಏನು ನಡೆಯುತ್ತಿದೆ ಎಂದು ಈ ಕಡೆ ಕಾಣಿಸುತ್ತಿರಲಿಲ್ಲ. ಕುಳಿತಲ್ಲಿ ಕುಳಿತುಕೊಳ್ಳಲಾಗದೆ ಚಡಪಡಿಸಿದ ಬಾಷಾ. ತಕ್ಷಣ ಹಿಂದಿನ ಸೀಟಿನ ಕೆಳಗೆ ಬಿದ್ದಿದ್ದ ಹಗ್ಗ ತೆಗೆದುಕೊಂಡು ಪಟಪಟನೆ ಸ್ವಯಂವರಾಳ ಕೈಗಳಿಗೆ ಕಟ್ಟಿ ಜೀಪಿನ ಹಿಂದಿನ ಬಾಗಿಲಿಗೆ ಬಂಧಿಸಿದ. "ಡಾಕ್ಟರ್, ನಿನ್ನ ಬಳಿ ನನಗೆ ಬೇಕಾಗಿರುವುದು ಸ್ವಲ್ಪವೇ ಇನಫಾರ್ಮೇಶನ್. ಅದನ್ನು ಕೊಟ್ಟಿದ್ದರೆ  ಈ ಯಾವ ರಗಳೆಗಳು ಇರುತ್ತಿರಲಿಲ್ಲ. ಈಗಲೂ ಅಷ್ಟೇ.. ಆ ಕೊಲೆ ಮಾಡಿದವನು ಯಾರೆಂದು ಹೇಳಿಬಿಡು. ಬಿಟ್ಟು ಹೋಗಿಬಿಡುತ್ತೇನೆ. ಅದ್ಯಾವುದೋ ಸುವರ್ ನಮಗೆ ಕಲ್ಲು ಹೊಡೆದಿದ್ದಾನೆ. ಬಾಷಾ ಯಾರೆಂದು ತೋರಿಸಿ ಬರುತ್ತೇನೆ. ಅಲ್ಲಿಯವರೆಗೆ ಯೋಚಿಸು. ಅದು ಬಿಟ್ಟು ತಪ್ಪಿಸಿಕೊಳ್ಳಲು ಯೋಚಿಸಿದೆಯೋ ನಿನ್ನನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ. ಬಾಷಾ.. ಬಾಷಾ ಭಾಯಿ.." ಎನ್ನುತ್ತಾ ಜೀಪಿನಿಂದ ಇಳಿದು ದಢಾರನೆ ಬಾಗಿಲು ಹಾಕಿಕೊಂಡು ಅವರೆಲ್ಲ ಓಡಿದ ಕಡೆಯೇ ಹೋದ ಬಾಷಾ.
   ಬಾಷಾ ಆಕಡೆ ಹೋಗುತ್ತಲೇ ಕೈಗೆ ಸುತ್ತಿದ ಹಗ್ಗವನ್ನು ಹಲ್ಲಿನಿಂದ ಜಗ್ಗಿ ಕಟ್ಟನ್ನು ಬಿಚ್ಚುವ ಸಾಹಸ ಶುರು ಮಾಡಿದಳು. ಒಮ್ಮೆ ಈ ಬಂಧನದಿಂದ ಹೊರಬಂದರೆ ಅಲ್ಲಿಯೇ ತನ್ನ ಮೊಬೈಲ್ ಬಿದ್ದಿರುವುದು ಕಾಣಿಸುತ್ತಿದೆ, ಕ್ಷಾತ್ರನಿಗೆ ಫೋನ್ ಮಾಡಿಕೊಂಡು ಇಲ್ಲಿಂದ ಓಡಬಹುದು ಎಂದು ಕನಸು ಕಾಣುತ್ತಲೇ ದಾರಿಯ ಕಡೆ ಒಂದು ಕಣ್ಣಿರಿಸಿಕೊಂಡು ಹಗ್ಗ ಬಿಚ್ಚುವ ಪ್ರಯತ್ನ ಮುಂದುವರೆಸಿದಳು.
   ಬಾಷಾ ಆಕಡೆಯ ರಸ್ತೆಗೆ ಹೋಗುತ್ತಲೇ ಮೊದಲು ಕಂಡ ದೃಶ್ಯ ನೋಡಿ ಅವಾಕ್ಕಾದ. ಅವನ ಒಬ್ಬ ಸಹಚರ ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಲೆ ಒಡೆದು ರಸ್ತೆಯ ತುಂಬೆಲ್ಲ ರಕ್ತ ಹರಿದಿತ್ತು. ಯಾವುದೋ ಬಲವಾದ ಆಯುಧದಿಂದ ತಲೆಗೆ ಜೋರಾಗಿ ಹೊಡೆದಿದ್ದಾರೆ. ಅವನ ಬಳಿ ಹೋಗಿ ಹತ್ತಿರ ಕುಳಿತು ಅಲ್ಲಾಡಿಸಿದ.
ಜೀವ ಇನ್ನೂ ಹೋಗಿಲ್ಲ. ಆದರೆ ಬದುಕುವ ಸಾಧ್ಯತೆ ಕಡಿಮೆ. ಈಗ ಆತನ ಪರಿಸ್ಥಿತಿ ಯೋಚಿಸುತ್ತ ಕುಳಿತರೆ ಇನ್ನುಳಿದವರ ಗತಿ ಏನಾಗಬಹುದೋ?? ಯಾವನೋ ಅವನು ಹರಾಮ್ ಕೋರ್? ತನ್ನವರ ಮೇಲೆ ಕೈ ಮಾಡುತ್ತಿರುವವನು. ಬಾಷಾನ ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗಿದವು. ನನ್ನ ಚೇಲಾಗಳು ಇನ್ನೂ ನಿನ್ನನ್ನು ಕೊಂದಿರದಿದ್ದರೆ ನಿನ್ನ ಸಾವು ನನ್ನ ಕೈಯಲ್ಲಿಯೇ ಬರೆದಿದೆ ಎಂದುಕೊಳ್ಳುತ್ತ ಕಿರು ರಸ್ತೆಯಲ್ಲಿ ಅವರೆಲ್ಲ ಹೋದ ಕಡೆ ಓಡತೊಡಗಿದ. ಮೈಯಲ್ಲಿ ಆವೇಶ ಆವರಿಸಿಕೊಂಡಿತು.
   ಅಷ್ಟರಲ್ಲಿ ಆ ರಸ್ತೆಯ ತುದಿಯಲ್ಲಿ ತಮ್ಮ ಅನುಚರನಿಗೆ ಕಬ್ಬಿಣದ ರಾಡ್ ನಲ್ಲಿ ಹೊಡೆದು ಬೈಕ್ ಹತ್ತಿ ಹೋದವನನ್ನು ಬೆನ್ನಟ್ಟಿ ಓಡುತ್ತಿದ್ದರು ಉಳಿದಿಬ್ಬರು. ಬೈಕ್ ಸವಾರ ಬೇಕಂತಲೇ ಅವರು ಹತ್ತಿರ ಬರುವವರೆಗೆ ನಿಧಾನ ಮಾಡಿ ಅವರು ಬಳಿ ಬರುತ್ತಿದ್ದಂತೆ ಜೋರಾಗಿ ಎಕ್ಸಿಲೇಟರ್ ಕೊಡುತ್ತಿದ್ದ. ಓಡಿ, ಓಡಿಯೇ ಸುಸ್ತಾಗಿದ್ದರು ಇಬ್ಬರೂ. ಕೈಯಲ್ಲಿ ಕತ್ತಿ ಹಿಡಿದು, ಮೈ ಪೂರ್ತಿ ರಕ್ತ ಸಿಕ್ತವಾಗಿ ರೌಡಿಗಳಿಬ್ಬರು ರಸ್ತೆಯಲ್ಲಿ ಓಡುತ್ತಿದ್ದರೆ ಜನರು ದೂರದಲ್ಲಿಯೇ ನಿಂತು ಕುತೂಹಲಭರಿತರಾಗಿ ನೋಡುತ್ತಿದ್ದರು. ಅಷ್ಟು ಹೊತ್ತು ಕಣ್ಣಾಮುಚ್ಚಾಲೆ ಆಡುತ್ತಿದ್ದ ಬೈಕ್ ಸವಾರ ಈಗ ಒಮ್ಮೆಲೇ ಗಾಡಿಯನ್ನು ಎಂಬತ್ತರಲ್ಲಿ ಓಡಿಸಿ ರಸ್ತೆಯ ಮತ್ತೊಂದು ಪಕ್ಕಕ್ಕೆ ಗಾಡಿ ತಿರುಗಿಸಿ ಮಾಯವಾಗಿಬಿಟ್ಟ. ಅಷ್ಟು ಹೊತ್ತು ಆತನನ್ನು ಹಿಂಬಾಲಿಸುತ್ತಿದ್ದವರು ಏದುಸಿರು ಬಿಡುತ್ತಾ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಂಡರು. ತಪ್ಪಿಸಿಕೊಂಡು ಹೋಗಿಬಿಟ್ಟ ಎಂದರೆ ಬಾಷಾ ಕನಲಿ ಕೆಂಡವಾಗುತ್ತಾನೆ. ಸಿಟ್ಟು ಬಂದರೆ ಏನು ಮಾಡಲು ಹೇಸದ ಮನುಷ್ಯ ಆತ ಎಂದು ಇಬ್ಬರಿಗೂ ತಿಳಿದ ವಿಷಯವೇ. ಪಕ್ಕದಲ್ಲಿ ಓಡಾಡುತ್ತಿರುವ ಯಾವನಾದರೂ ಟೂ ವೀಲ್ಹರ್ ಸವಾರನನ್ನು ದೂಕಿ ಬೈಕ್ ತೆಗೆದುಕೊಂಡು ಚೇಸ್ ಮಾಡಿದರೆ ಎಂಬ ಉಪಾಯ ಮೂಡಿತು. ಅದನ್ನೇ ಕಣ್ಸನ್ನೆ ಮಾಡಿ ತೋರಿಸಿದ ಮತ್ತೊಬ್ಬನಿಗೂ. ಅಷ್ಟರಲಿ ಎದುರಿನಿಂದ ಒಂದು ಬೈಕ್ ಇವರ ಬಳಿ ಬರತೊಡಗಿತು. ಇವನ ಬಳಿಯೇ ಬೈಕ್ ತೆಗೆದುಕೊಂಡು ಓಡಬೇಕೆಂದು ಅವರು ತಯಾರಾದರು. ಹಿಂದೆ ಇನ್ನೂರು-ಮುನ್ನೂರು ಮೀಟರ್ ದೂರದಲ್ಲಿ ಬಾಷಾ ಓಡಿ ಬರುತ್ತಿರುವುದು ಕಂಡಿತು.ಆತ ಬರುವುದರೊಳಗೆ ತಾವು ಸಿದ್ಧರಾಗಬೇಕು. ಎದುರು ಬರುತ್ತಿದ್ದ ಬೈಕ್ ಹತ್ತಿರವಾಯಿತು. ಅವನನ್ನು ಹಿಡಿದು ನಿಲ್ಲಿಸಲು ಅವರಿಬ್ಬರೂ ತಯಾರಾದರು. ನಿಧಾನವಾಗಿ ಬರುತ್ತಿದ್ದ ಬೈಕ್ ಒಮ್ಮೆಲೇ ವೇಗ ಪಡೆದುಕೊಂಡಿತು. ಬರುತ್ತಿರುವ ಬೈಕ್ ಸವಾರ ತಾವು ಬೆನ್ನಟ್ಟಿ ಹೋದವನೇ ಎಂದು ತಿಳಿಯುವುದರೊಳಗೆ ಕಾಲ ಮಿಂಚಿ ಹೋಗಿತ್ತು. ವೇಗವಾಗಿ ಇವರೆಡೆಗೆ ಬಂದ ಬೈಕ್ ಕತ್ತಿ ಹಿಡಿದು ತನ್ನೆಡೆಗೆ ಬರುತ್ತಿದ್ದ ರೌಡಿಯೆಡೆಗೆ ನುಗ್ಗಿತು. ಒಮ್ಮೆಲೇ ನಡೆದ ಈ ಘಟನೆಯಿಂದ ಆತನಿಗೆ ಕತ್ತಿ ಬೀಸಬೇಕೋ ಅಥವಾ ತನ್ನನ್ನು ತಾನೇ ತಪ್ಪಿಸಿಕೊಳ್ಳಬೇಕೋ ತಿಳಿಯದಾಯಿತು. ಅದೇ ಒಂದು ಕ್ಷಣದಲ್ಲಿ ಬೈಕ್ ಸವಾರ ತನ್ನ ಕೈಯಲ್ಲಿರುವ ಕಬ್ಬಿಣದ ಸರಳಿನಿಂದ ಆತನ ಮಂಡಿಗೆ ಬಿರುಸಾಗಿ ಹೊಡೆದಿದ್ದ. ಹುಚ್ಚು ಹಿಡಿದವನಂತೆ ಕೂಗಿಕೊಂಡು ರಸ್ತೆಯ ಮೇಲೆ ಕುಸಿದು ಬಿದ್ದು ದೊಡ್ಡದಾಗಿ ಅರಚತೊಡಗಿದ. ಮೊಳಕಾಲಿನ ಚಿಪ್ಪು ಒಡೆದು ಪುಡಿಪುಡಿಯಾಗಿ ಹೋಗಿತ್ತು. ತನ್ನ ಸಹಚಾರನಿಗಾದ ಪರಿಸ್ಥಿತಿ ನೋಡಿ ಕಂಗೆಟ್ಟ ಮತ್ತೊಬ್ಬ ರೌಡಿ ಏನು ಮಾಡಬೇಕೆಂದು ಯೋಚಿಸುವುದರೊಳಗೆ ಕಬ್ಬಿಣದ ರಾಡ್ ಆತನ ಭುಜದೊಳಗೆ ಇಳಿದಿತ್ತು. "ಕಳಕ್." ಮೂಳೆ ಮುರಿದು ಕೊಂಡಿತ್ತು. ಅತಿ ಪ್ರೊಫೆಷನಲ್ ಗಳು ಮಾತ್ರ ಹೊಡೆಯುವಂಥ ಹೊಡೆತಗಳವು. ಸಾಯಬಾರದು, ಬದುಕಿರುವವರೆಗೆ ಇನ್ನೊಬ್ಬರ ತಂಟೆಗೆ ಹೋಗಬಾರದು. ನಡೆಯುತ್ತಿರುವ ಘಟನೆಗಳೆಲ್ಲ ಸಿನಿಮಾದ ರೀಲಿನಂತೆ ಬಾಷಾನ ಕಣ್ಣೆದುರೇ ಕಾಣಿಸುತ್ತಿತ್ತು. ಇಂತಹದ್ದನ್ನೆಲ್ಲ ನೋಡಿಯೇ ಆತ ಅಷ್ಟೆತ್ತರ ಬೆಳೆದಿದ್ದಾನೆ. ಅದಕ್ಕೆಲ್ಲ ಧೃತಿಗೆಡುವ ಮನುಷ್ಯನಲ್ಲ. ಮಯ್ಯಲಿದ್ದ ಕಸುವನ್ನೆಲ್ಲ ಒಗ್ಗೂಡಿಸಿಕೊಂಡು ಬೈಕಿನ ಕಡೆ ಓಡಿ ಬರತೊಡಗಿದ. ಕಿರುಗಣ್ಣಲ್ಲೇ ಅವನನ್ನು ಗಮನಿಸಿ "ಓಡಿ ಬಾ ಮಗನೆ" ಎನ್ನುವಂತೆ ಅವನ ಕಡೆ ಕೈ ತೋರಿಸಿ, ಬೈಕ್ ಮುನ್ನಡೆಸಿ ನಡೆದು ಬಿಟ್ಟ ಆ ವ್ಯಕ್ತಿ. ನೋವಿನಿಂದ ಹೊರಳಾಡುತ್ತಿದ್ದ ತನ್ನ ಸಹಚರನ ಬಳಿ ಬಂದು ಕ್ಯಾಕರಿಸಿ ಉಗಿದ. "ತಿಂದ ಅನ್ನಕ್ಕೆ ಉಪಯೋಗವಿಲ್ಲದವರು ನೀವು ಮೂವರು. ಯಾರೋ ಒಬ್ಬನಿಂದ ಹೊಡೆತ ತಿಂದಿರಿ" ಎಂದು ಗುರುಗುಡುತ್ತಾ ಅಲ್ಲಿಯೇ ಎರಡು ಕ್ಷಣ ನಿಂತ. ಈತ ಮತ್ತಿನ್ನೇನಾದರೂ ತಿರುಗಿ ಬರುವನೇ?? ಅಥವಾ ಓಡಿ ಬಿಡುತ್ತಾನೆಯೇ? ಯಾರೀತ? ಅವಳನ್ನು ಕಾಪಾಡಲು ಬಂದವನಾ?? ಅಥವಾ ನಮ್ಮ ಮೇಲೇನಾದರೂ ಹಳೆ ವೈಷಮ್ಯವಾ?? ಪದೇ ಪದೇ ಅಟ್ಯಾಕ್ ಮಾಡುತ್ತಿದ್ದಾನೆ ಅಂದರೆ ಮತ್ತೆ ಈಗ ತನ್ನ ಮೇಲೆ ಎರಗಲು ಬರುತ್ತಾನೆ. ಬಾಷಾನ ಮೈ ಕೈ ನರಗಳೆಲ್ಲ ಹೊಡೆದಾಟಕ್ಕೆ ಸಿದ್ಧ ಎಂಬಂತೆ ಉಬ್ಬಿ ನಿಂತವು. ಬಾ ಮಗನೇ.. ನಿನ್ನ ಕುತ್ತಿಗೆ ಮುರಿಯದಿದ್ದರೆ ಹೇಳು ಎನ್ನುತ್ತಾ ಪಕ್ಕದಲ್ಲೇ ಬಿದ್ದಿದ್ದ ಕತ್ತಿಯನ್ನು ಕೈಲಿ ಹಿಡಿದು ನಿಂತ.
   ಒಂದೆರಡು ನಿಮಿಷಗಳು ಹಾಗೆಯೇ ಕಳೆಯಿತು. ಬೈಕಿನ ಸದ್ದಿಲ್ಲ. ಮನದಲ್ಲಿ ಟೆನ್ಷನ್ ಶುರುವಾಯಿತು. ನೋವು ತಾಳಲಾರದೆ ಚೇಲಾಗಳು ರಾಗ ಹಾಡುವುದನ್ನು ಮುಂದುವರೆಸಿಯೇ ಇದ್ದರು. "ಥೇರಿ.. ಮುಚ್ರೋ ಬಾಯಿ" ಎಂದ.
  ಮತ್ತೆರಡು ನಿಮಿಷ.. ಹಾಗೆಯೇ ಕಳೆಯಿತು..
   ಈಗ ಬಾಷಾನ ಮನದಲ್ಲಿ ಸಂಶಯ ಮೂಡಿತು. ತಾವೆಲ್ಲ ಈ ಕಡೆ ಬಂದಾಗ ಆತನೇನಾದರೂ ಹೋಗಿ ಸ್ವಯಂವರಾಳನ್ನು ಬಿಡಿಸಿ ಬಿಟ್ಟರೆ? ಮೈ ಜುಮ್ ಎಂದಿತು ಆ ಯೋಚನೆಗೆ. ಕತ್ತಿ ಅಲ್ಲೇ ಬಿಸುಟಿ, ಹಿಂದಿರುಗಿ ಜೀಪಿನತ್ತ ಓಡತೊಡಗಿದ.
  ಬಾಷಾ ಜೀಪು ಬಿಟ್ಟು ಅತ್ತ ಸಾಗುತ್ತಲೇ ಕೈಗೆ ಸುತ್ತಿದ್ದ ಹಗ್ಗವನ್ನು ಹಲ್ಲಿನಿಂದ ಕಚ್ಚಿ ಬಿಡಿಸಲು ಪ್ರಯತ್ನಿಸುತ್ತಿದ್ದಳು ಸ್ವಯಂವರಾ. ಒಮ್ಮೆ ಕಟ್ಟು ಬಿಚ್ಚಿ ಪಾರಾಗಿ ಹೋದರೆ ಸಾಕು, ಕ್ಷಾತ್ರನಿಗೆ ಹೇಳಿ ಇವರಿಗೊಂದು ಗತಿ ಕಾಣಿಸಬಹುದು. ಹೀಗೆ ಕಲ್ಲೆಸೆದಿದ್ದು ಯಾರು? ತನ್ನನ್ನು ಕಾಪಾಡಲು ಬಂದವರು ಯಾರು? ಕ್ಷಾತ್ರನಿಗೆ ತನ್ನ ಪರಿಸ್ಥಿತಿಯ ಬಗ್ಗೆ ಅರಿವಾಗಿದೆಯಾ?? ಅರಿವಾಗಿದ್ದರೆ ಈ ಕಡೆ ಬರುತ್ತಿರಬಹುದಾ? ತಾನು ಆತನಿಗೆ ಕಾಲ್ ಮಾಡಿ ಮೊಬೈಲ್ ಹಿಡಿದುಕೊಂಡಿದ್ದೇನಲ್ಲ ಈಗಲೂ ಆತನಿಗೆ ಇಲ್ಲಿನ ಪರಿಸ್ಥಿತಿ ತಿಳಿಯುತ್ತಿರಬಹುದಾ? ಹತ್ತು ಹಲವು ಯೋಚನೆಗಳು ಅವಳ ಮನದಲ್ಲಿ ಸುಳಿಯುತ್ತಿರುವಾಗಲೇ ಆಕೆ ಹಗ್ಗವನ್ನು ಬಿಚ್ಚುವ ಪ್ರಯತ್ನ ಮುಂದುವರೆಸಿದ್ದಳು. ಬಾಷಾ ಬಂದುಬಿಟ್ಟರೆ ತನ್ನ ಕಥೆ ಮುಗಿಯಿತು ಎಂದವಳಿಗೆ ಗೊತ್ತು.
   ಅವಳು ತನ್ನ ಪ್ರಯತ್ನ ಕೈಬಿಡಲಿಲ. ಅಷ್ಟರಲ್ಲಿ ಜೀಪಿನ ಪಕ್ಕ ಬೈಕೊಂದು ಬಂದು ನಿಂತಿತು. ಅದರ ಮೇಲಿದ್ದ ಹೆಲ್ಮೆಟ್ ಧಾರಿ ಸ್ವಯಂವರಾಳ ಕಡೆ ನೋಡಿದ. ಅವನ ಕೈಲಿದ್ದ ರಕ್ತ ಸಿಕ್ತವಾಗಿದ್ದ ಕಬ್ಬಿಣದ ಸರಳನ್ನು ನೋಡಿ ಇವನೇನಾ ನನ್ನನ್ನು ತಪ್ಪಿಸಲು ಬಂದವನು? ಬಾಷಾನನ್ನು ಹೊಡೆದು ಕೆಡವಿದನಾ?? ಈಗ ನನ್ನನ್ನು ಬಿಡಿಸುತ್ತಾನಾ? ಆತ ಅಲ್ಲಿಗೆ ಬರುತ್ತಲೇ ಸ್ವಲ್ಪ ನಿರಾಳವೆನ್ನಿಸಿತು ಸ್ವಯಂವರಾಳಿಗೆ.
  ಆತ ಬೈಕ್ ನಿಲ್ಲಿಸಿ ಕೆಳಗಿಳಿದ. ಕಬ್ಬಿಣದ ಸರಳು ಬೈಕ್ನ ಹ್ಯಾಂಡಲ್ ಮೇಲೆ ಉಳಿಯಿತು. ಸ್ವಯಂವರಾಳ ಹೃದಯ ಜೋರಾಗಿ ಬಡಿದುಕೊಳ್ಳತೊಡಗಿತು. ಬೈಕಿನಿಂದ ಇಳಿದ ವ್ಯಕ್ತಿ ಅಲ್ಲಿಯೇ ಹತ್ತಿರದಲ್ಲಿ ಬಿದ್ದಿದ್ದ ಸ್ವಯಂವರಾಳ ಮೊಬೈಲ್ ಎತ್ತಿಕೊಂಡ. ಇಪ್ಪತ್ತು ನಿಮಿಷಗಳಿಂದ ಕಾಲ್ ಕನೆಕ್ಟ್ ಆಗಿಯೇ ಇತ್ತು. ಕಾಲ್ ಡಿಸ್ ಕನೆಕ್ಟ್ ಮಾಡಿ ಮೊಬೈಲ್ ಜೇಬಿಗಿಳಿಸಿ ಮತ್ತೆ ಸ್ವಯಂವರಾಳ ಕಡೆ ನೋಡಿದ. ಆತ ಹೆಲ್ಮೆಟ್ ಧರಿಸಿದ್ದರಿಂದ ಯಾರೆಂದು ಗುರುತಿಸುವುದು ಕಷ್ಟವಾಯಿತು ಸ್ವಯಂವರಾಳಿಗೆ.
   ಅದೇ ಸಮಯಕ್ಕೆ ಕ್ಷಾತ್ರ ಇಂದಿರಾಪುರಮ್ ಒಳಹೊಕ್ಕಿದ್ದ. ಇನ್ನೇನು ಸ್ವಲ್ಪ ದೂರ.. ಸ್ವಯಂವರಾ ಯಾವ ಕಡೆ ಹೋದಳೋ..!? ಕಾಲ್ ಬೇರೆ ಡಿಸ್ ಕನೆಕ್ಟ್ ಆಯಿತು. ಮತ್ತೆ 100 ಡಯಲ್ ಮಾಡಿ ಏನಾದರೂ ಇನಫಾರ್ಮೇಶನ್ ಸಿಕ್ಕಿತಾ ಎಂದು ಕೇಳಿದ. ಪೊಲೀಸರಿನ್ನು ಅಷ್ಟೇ ಕಾರ್ಯಪ್ರವೃತ್ತರಾಗುತ್ತಿದ್ದರು. ಮತ್ತಷ್ಟು ತಲೆಬಿಸಿಯಿಂದ ಜೀಪನ್ನು ಸಿಕ್ಕ ಸಿಕ್ಕ ಜಾಗದಲ್ಲಿ ನುಗ್ಗಿಸಿ ಮುನ್ನಡೆಯತೊಡಗಿದ ಕ್ಷಾತ್ರ.
  ಇತ್ತ ಮೊಬೈಲ್ ಜೇಬಿಗಿಳಿಸಿದ ವ್ಯಕ್ತಿ ಹೆಲ್ಮೆಟ್ ತೆಗೆದ. ಒಮ್ಮೆಲೇ ಸ್ವಯಂವರಾಳ ಮೇಲೆ ತಣ್ಣೀರು ಸುರಿದಂತಾಯಿತು. ಎದುರಿಗೆ ನಿಂತವನು ಬೇರೆ ಯಾರು ಅಲ್ಲ. ಅಂದು ಆಸ್ಪತ್ರೆಯಲ್ಲಿ ಕೊಲೆ ಮಾಡಿದ ವ್ಯಕ್ತಿ.. No doubt.. ಆತನೇ ಈತ.. ತನ್ನನ್ನು ಮತ್ತೆ ಭಯದ ಭೂತ ಆವರಿಸಿ ಎಲ್ಲರು ಅವನಂತೆ ಕಾಣುತ್ತಿರಬಹುದೇ ಎಂಬ ಅನುಮಾನ ಮೂಡಿತು. ಇನ್ನೊಂದು ಕಡೆ ನೋಡಿದಳು. ದೂರದಲ್ಲಿ ನಿಂತು ನೋಡುತ್ತಿದ್ದ ಜನರು ಯಾರು ಸಹ ವಿಹಾರಿಯಂತೆ ಕಾಣಲಿಲ್ಲ. ಅಂದರೆ ತಾನು ನೋಡುತ್ತಿರುವುದು ನಿಜ. ಈತ ತನ್ನನ್ನು ಕೊಲ್ಲಲು ಬಂದನಾ? ಈತ ಬಾಷಾನ ಕಡೆಯವನಾ? ತನ್ನನ್ನು ತಪ್ಪಿಸಲು ಬಂದವನನ್ನು ಹೊಡೆದು ಇಲ್ಲಿ ಬಂದನಾ? ಹಾಗಾದರೆ ಬಾಷಾ ಎತ್ತ ಹೋದ? ಕಣ್ಣಂಚು ತುಂಬಿಕೊಂಡಿತು. ತಕ್ಷಣ ತನ್ನ ಬಿಡಿಸಿಕೊಳ್ಳುವ ಪ್ರಯತ್ನ ಮುಂದುವರೆಸಿದಳು.
  ವಿಹಾರಿ ಸ್ವಯಂವರಾಳತ್ತ ಮುಗುಳ್ನಕ್ಕು ಅತ್ತ ಕಡೆಯೇ ಬರತೊಡಗಿದ. ಆತನ ಮುಖದ ಮೇಲಿನ ಮುಗುಳ್ನಗು ಕಂಡು ಸ್ವಲ್ಪ ಸಮಾಧಾನವಾದರೂ ಈತನೇನಾದರೂ ಸೈಕೋ ಕಿಲ್ಲರ್ ಆಗಿದ್ದರೆ ಎಂಬ ಸಣ್ಣ ಯೋಚನೆಯು ಬಂತು. ಆದರೆ ಬಂಧಿಯಾಗಿರುವುದರಿಂದ ಆಕೆ ಹೆಚ್ಚಿನದೇನನ್ನೂ ಮಾಡಲಾಗಲಿಲ್ಲ. ಕಿಡಕಿಯಿಂದ ದೂರ ಸರಿದು ಜೀಪಿನ ಮಧ್ಯ ಹೋಗಿ ಕುಳಿತು ವಿಹಾರಿಯನ್ನೇ ನೋಡತೊಡಗಿದಳು.
   ಜೀಪಿನ ಬಾಗಿಲ ಬಳಿ ಬಂದು ಅವಳ ಮುಖ ನೋಡಿ ಮುಗುಳ್ನಗುತ್ತ "ಸ್ವಯಂವರಾ ಅವ್ರೆ, ನಾನು ನಿಮ್ಮ ಹಿತೈಷಿ.. ಹೆದರುವ ಅಗತ್ಯವಿಲ್ಲ. ಬಾಷಾ ಬರುವುದರೊಳಗೆ ನಾವು ಇಲ್ಲಿಂದ ಪಾರಾಗಬೇಕು. ಈ ಕಡೆ ಬನ್ನಿ ನಿಮ್ಮ ಕೈ ಬಿಡಿಸುತ್ತೇನೆ.." ಎಂದ.
  ಸ್ವಯಂವರಾ ಆತನ ಮುಖದ ಭಾವನೆಗಳನ್ನು ಓದುವ ಪ್ರಯತ್ನ ಮಾಡಿದಳು. No chance. ಅಂದು ಆಸ್ಪತ್ರೆಯಲ್ಲಿ ಕಂಡ ವಿಹಾರಿಯ ಮುಖವೂ, ಇಂದು ಕಂಡ ವಿಹಾರಿಯ ಮುಖವೂ ಸೇಮ್ ಟು ಸೇಮ್. ಎಂತವರನ್ನು ಬೇಕಾದರೂ ಆಕೆ ಮುಖ ನೋಡಿ ಅರಿತುಕೊಳ್ಳಬಲ್ಲಳು. ಕ್ಷಾತ್ರನ ಮುಖದ ಭಾವನೆಗಳನ್ನು ಕೂಡ ಆಕೆ ಓದಬಲ್ಲಳು. ಆದರೆ ವಿಹಾರಿಯ ಮುಖ ಮಾತ್ರ ಶೂನ್ಯ. ಆತ ನಿಜ ಹೇಳುತ್ತಿದ್ದಾನಾ? ಅಥವಾ ಹತ್ತಿರ ಕರೆದು ತನ್ನನ್ನು ಕೊಲೆ ಮಾಡುವ ಪ್ರಯತ್ನವಾ??
  ಬಾಷಾನ ಕೈಲಿ ಸಿಗುವುದಕ್ಕಿಂತ ಒಂದು ಚಾನ್ಸ್ ತೆಗೆದುಕೊಳ್ಳಬಹುದೇನೋ ಎಂದೆನ್ನಿಸಿತು.
  "ಸ್ವಯಂವರಾ ಅವ್ರೆ, ನಮ್ಮ ಬಳಿ ಸಮಯವಿಲ್ಲ ಬನ್ನಿ.." ಎಂದ ಮತ್ತೆ ವಿಹಾರಿ. ಅವಳು ಸ್ವಲ್ಪ ಭಯದಿಂದಲೇ ಬಾಗಿಲ ಬಳಿ ಸರಿದಳು. ವಿಹಾರಿ ಬೇಗಬೇಗನೆ ಅವಳ ಕೈಗೆ ಕಟ್ಟಿದ್ದ ಹಗ್ಗ ಬಿಚ್ಚತೊಡಗಿದ.
  ಆಗ ನಡೆದಿತ್ತು ಆ ಅವ್ಯಾಹುತ ಘಟನೆ.
  ಜೀಪಿನ ಹಿಂದಿನಿಂದ ಬಂದ ಬಾಷಾ ಒಮ್ಮೆಯೇ ವಿಹಾರಿಯ ಕಡೆ ನುಗ್ಗಿ ಆತನ ಸೊಂಟ ಹಿಡಿದು ಅಲಾಕ್ಕಾಗಿ ಎತ್ತಿ ಎಸೆದು ಬಿಟ್ಟ. ಒಮ್ಮೆಲೇ ನಡೆದ ಈ ಘಟನೆಗೆ ವಿಹಾರಿಗೂ ಚೇತರಿಸಿಕೊಳ್ಳಲು ಒಂದು ಕ್ಷಣ ಹಿಡಿಯಿತು.
   ಸ್ವಯಂವರಾಳಿಗೆ ಈಗ ಸತ್ಯ ತಿಳಿಯಿತು. ನಿಜವಾಗಿಯೂ ವಿಹಾರಿ ಬಾಷಾನ ಕಡೆಯವನಲ್ಲ. ತನ್ನ ಹತ್ತಿರ ತಪ್ಪಿಸಿಕೊಳ್ಳಲು ಇರುವ ಕೊನೆಯ ಚಾನ್ಸ್ ಇದು. ವಿಹಾರಿಯೇನಾದರೂ ಬಾಷಾನ ಬಳಿ ಹೊಡೆತ ತಿಂದು ಮಲಗಿದರೆ ಮುಗಿಯಿತು.
  ವಿಹಾರಿಯೇ ಅಂದು ಆಸ್ಪತ್ರೆಯಲ್ಲಿ ಕೊಲೆ ಮಾಡಿದವ ಎಂದು ಬಾಷಾಗೆ ತಿಳಿಯಿತಾ?? ಅಥವಾ ನನ್ನನ್ನು ತಪ್ಪಿಸಲು ಬಂದಿದ್ದರಿಂದ ಬಾಷಾ ಅವನ ಮೈಮೇಲೆ ಬಿದ್ದಿದ್ದಾನಾ?? ಅರ್ಥವಾಗಲಿಲ್ಲ. ಏನಾದರಾಗಲಿ ಇಬ್ಬರು ಗುದ್ದಾಡಿಕೊಳ್ಳುವಾಗ ತಾನು ಓಡಿ ಬಿಡಾಬೇಕು ಎಂದುಕೊಂಡು ಅರ್ಧ ಬಿಚ್ಚಿದ್ದ ಹಗ್ಗವನ್ನು ಹಲ್ಲಿನಿಂದ ಪಟಪಟನೆ ಬಿಚ್ಚಿಕೊಳ್ಳತೊಡಗಿದಳು.
ವಿಹಾರಿಗೆ ಸ್ವಲ್ಪವೂ ಸಮಯ ಕೊಡದೆ ಗೂಳಿಯಂತೆ ಆತನ ಮೇಲೆ ಎರಗಿದ ಭಾಷಾ. ವಿಹಾರಿ ಒಮ್ಮೆ ಗಲಿ ಬಿಲಿಗೊಂಡರು ತನ್ನ ಮೇಲೆ ಎರಗಿ ಬರುತ್ತಿದ್ದ ಬಾಷಾನಿಗೆ ಮಲಗಿದ್ದಲ್ಲಿಯೇ ಸ್ವಲ್ಪ ಸರಿದು ಮೈ ಮೇಲೆ ಬೀಳಲು ಬರುತ್ತಿದ್ದ ಆತನ ಪಕ್ಕೆಗೆ ಬಿರುಸಾಗಿ ಒದ್ದ. ಅಜಾನುಬಾಹು ಬಾಷಾ ಕೂಡ ನೋವಿನಿಂದ ಒಮ್ಮೆ ಒರಲಿದ. ಹಾಗೆಂದು ಆತ ವಿಹಾರಿಯನ್ನು ಬಿಟ್ಟು ದೂರವೇನು ಸರಿಯಲಿಲ್ಲ. ಒದೆತದ ನೋವ್ವಿಗೆ ಅಷ್ಟೇನೂ ಗಮನ ಕೊಡದೆ ವಿಹಾರಿಯ ಹೊಟ್ಟೆಯ ಮೇಲೆ ಕುಳಿತು ಮುಷ್ಟಿ ಕಟ್ಟಿ ಆತನ ಎದೆಯ ಮೇಲೆ ಗುದ್ದಿದ. ಆ ಹೊಡೆತಕ್ಕೆ ವಿಹಾರಿ ಅದುರಿ ಹೋದ. ಆತನ ಕಣ್ಣು ಒಮ್ಮೆ ಕತ್ತಲು ಗಟ್ಟಿತು. ಅಷ್ಟಕ್ಕೇ ಸುಮ್ಮನಾಗದೆ ಬಾಷಾ ತನ್ನ ತಲೆಯಿಂದ ವಿಹಾರಿಯ ತಲೆ ಎತ್ತಿ ಒಮ್ಮೆ ಗಟ್ಟಿಸಿದ. ಭಾಷಾ ಇಷ್ಟು ಬಲವಾದ ವ್ಯಕ್ತಿ ಎಂದು ವಿಹಾರಿ ಗಮನಿಸಿರಲಿಲ್ಲ. ಅದೇ ಆತ ಮಾಡಿದ ತಪ್ಪು. ತಲೆ ಒಡೆದು ಹೋಯಿತೇನೋ ಎಂಬಷ್ಟು ನೋವಾಯಿತು ವಿಹಾರಿಗೆ. ಭಾಷಾ ಸುಮ್ಮನಾಗುವ ಉಮೇದಿಯಲ್ಲಿ ಇರಲಿಲ್ಲ. ತನ್ನ ಸಹಚರರಿಗೆ ಆದೋ ಗತಿ ತಂದ  ವಿಹಾರಿಯನ್ನು ಮುಗಿಸಿದರೆ ಸಮಾಧಾನ ಎಂದೆನ್ನಿಸಿತ್ತು ಆತನಿಗೆ. ವಿಹಾರಿ ತಪ್ಪಿಸಿಕೊಳ್ಳಲು ಆಕಡೆ ಈಕಡೆ ಹೊರಳಲು ಯತ್ನಿಸಿದ. ಸುಲಭವಾಗಿ ತಪ್ಪಿಸಿಕೊಳ್ಳುವುದಂತೂ ಸಾಧ್ಯವೇ ಇಲ್ಲ. ಆಜಾನುಬಾಹು ಬಾಷಾ ಆತನ ಮೈಮೇಲೆ ಕುಳಿತಿದ್ದರಿಂದ ಆತನನ್ನು ದೂಡಿ ಮೇಲೇಳುವುದು ಕಷ್ಟಸಾಧ್ಯವೇ ಆಗಿತ್ತು. ಬಾಷಾ ತನ್ನ ಬಲವಾದ ಹಸ್ತಗಳಿಂದ ವಿಹಾರಿಯ ಕುತ್ತಿಗೆ ಹಿಡಿದು ಹಿಸುಕತೊಡಗಿದ.
  ವಿಹಾರಿಯ ಕೈ ಮುಷ್ಠಿ ಕಟ್ಟಿ ಬಾಷಾಗೆ ಗುದ್ದಿದರೂ ಬಾಷಾ ತಲೆ ಕೆಡಿಸಿಕೊಳ್ಳದೆ ತನ್ನ ಹಿಡಿತವನ್ನು ಇನ್ನು ಬಲಗೊಳಿಸತೊಡಗಿದ.
   ವಿಹಾರಿ ಸ್ವಯಂವರಳ ಕೈ ಗಂಟನ್ನು ಅರ್ಧ ಬಿಚ್ಚಿದ್ದರಿಂದ ಅವಳು ಬಂಧನ ಬಿಡಿಸಿಕೊಳ್ಳುವಲ್ಲಿ ಸಫಲಳಾದಳು. ವಿಹಾರಿಯನ್ನು ಅಡಿಯಲ್ಲಿ ಹಾಕಿಕೊಂಡು ಕುತ್ತಿಗೆ ಹಿಸುಕುತ್ತಿದ್ದ ಬಾಷಾನನ್ನು ಕಂಡು ಏನು ಮಾಡಬೇಕೆಂದು ಅರಿವಾಗಲಿಲ್ಲ ಅವಳಿಗೆ. ತಾನು ಓಡಿ ಹೊರಟರೂ, ವಿಹಾರಿಯನ್ನು ಮುಗಿಸಿ ತನ್ನನ್ನು ಹಿಡಿಯುತ್ತಾನೆ ಬಾಷಾ. ಕೊಲೆಗಾರನಾದರೂ ತನ್ನನ್ನು ತಪ್ಪಿಸಲು ಬಂದ ವಿಹಾರಿಯನ್ನು ಹೀಗೆ ಸಾಯಲು ಬಿಟ್ಟು ಹೊರಡುವುದು ಸರಿಯೇ?? ಆದರೆ ಬಾಷಾನನ್ನು ಎದುರಿಸಲು ಸಾಧ್ಯವೇ ತಾನು!?  ಅವಳ ಮನಸ್ಸು ಸಂದಿಗ್ಧದಲ್ಲಿ ಸಿಲುಕಿತು.
  ಬಾಷಾನ ಬಲವಾದ ಹಿಡಿತದಿಂದ ವಿಹಾರಿಗೆ ಉಸಿರಾಡುವುದು ಕಷ್ಟವಾಯಿತು. ಆತ ನಿಧಾನವಾಗಿ ಪ್ರಜ್ಞೆ ಕಳೆದುಕೊಳ್ಳತೊಡಗಿದ. ಕೈಕಾಲುಗಳ ಬಡಿತದಲ್ಲಿ ಶಕ್ತಿ ಕಡಿಮೆಯಾಗಿ ತೇಲುಗಣ್ಣಾಗತೊಡಗಿತು. ಬಾಷಾ ತನ್ನ ಬಲಪ್ರಯೋಗ ಮುಂದುವರೆಸಿಯೇ ಇದ್ದ. ಸ್ವಯಂವರಾ ಸ್ವಲ್ಪ ಧೈರ್ಯ ತಂದುಕೊಂಡು ಜೀಪ್ ಇಳಿದು ಬಂದು ವಿಹಾರಿಯ ಮೈಮೇಲೆ ಕುಳಿತಿದ್ದ ಬಾಷಾನನ್ನು ಗಟ್ಟಿಯಾಗಿ ದೂಡಲು ನೋಡಿದಳು. ಆಕೆಯ ಕಡೆ ಒಂದು ಭೀಭತ್ಸ ನೋಟ ಬೀರಿ, ಒಂದು ಕೈಯಲ್ಲಿ ವಿಹಾರಿಯ ಕುತ್ತಿಗೆ ಹಿಡಿದು ಮತ್ತೊಂದು ಕೈಯಲ್ಲಿ ಆಕೆಯನ್ನು ದೂರ ತಳ್ಳಿದ ಬಾಷಾ. ಅದೆಷ್ಟು ಬಿರುಸಾಗಿತ್ತೆಂದರೆ ತನ್ನ ಕೈ ಭುಜವೇ ಇಳಿದು ಬಂತೇನೋ ಅನ್ನಿಸಿತು ಅವಳಿಗೆ. ಆತ ತಳ್ಳಿದ ಬಿರುಸಿಗೆ ಸ್ವಯಂವರಾ ತಿರುಗುತ್ತ ಹೋಗಿ ವಿಹಾರಿ ನಿಲ್ಲಿಸಿದ ಬೈಕಿಗೆ ಬಡಿದುಕೊಂಡಳು.
    ವಿಹಾರಿಯನ್ನು ಕೊಂದಂತು ಸಮಾಧಾನವಿಲ್ಲದಂತೆ ಕಂಡುಬಂತು ಬಾಷಾಗೆ. ಆತ ಮೇಲೆ ಏಳಲೇ ಇಲ್ಲ. ಸ್ವಯಂವರಾ ಎಲ್ಲಿಗೆ ತಾನೇ ತಪ್ಪಿಸಿಕೊಂಡು ಹೋಗಬಲ್ಲಳು ಎಂಬ ಭಾವ ಆತನಲ್ಲಿ ಕಾಣುತ್ತಿತ್ತು. ವಿಹಾರಿ ಈಗಲೋ ಆಗಲೋ ಎನ್ನುವಂತೆ ನಿಧಾನವಾಗಿ ಕೈಕಾಲು ಆಡಿಸತೊಡಗಿದ. ಬೈಕಿಗೆ ಗುದ್ದಿಕೊಂಡ ಸ್ವಯಂವರಾಳಿಗೆ ಅದರ ಮೇಲೆ ವಿಹಾರಿ ಇಟ್ಟಿದ್ದ ಕಬ್ಬಿಣದ ಸರಳು ಕಣ್ಣಿಗೆ ಬಿತ್ತು.
   ತನ್ನ ಕೆನ್ನೆಗೆ ಬಿರುಸಾಗಿ ಹೊಡೆದ ಬಾಷಾ, ಕೆನ್ನೆ ಕಚ್ಚಿದ ರೌಡಿ, ತನ್ನನ್ನು ತಪ್ಪಿಸಲು ಬಂದ ವ್ಯಕ್ತಿಯನ್ನು ಕೊಲ್ಲುತ್ತಿದ್ದಾನೆ. ಅದು ತನ್ನೆದುರಿನಲ್ಲಿಯೇ..
   ಅದೆಲ್ಲಿಂದ ಬಂತೋ ಅವಳಿಗೆ ಆವೇಶ?? ಅವಳ ಅಸಹಾಯಕತೆ, ನೋವೆಲ್ಲಾ ಸಿಟ್ಟಾಗಿ ಎದುರಿನಲ್ಲಿದ್ದ ಸರಳನ್ನು ತೆಗೆದುಕೊಂಡು ಬಾಷಾನ ಹಿಂದೆ ಹೋಗಿ ತನ್ನಲ್ಲಿದ್ದ ಬಲವನ್ನೆಲ್ಲ ತುಂಬಿಕೊಂಡು ಬಾಷಾನ ತಲೆಗೆ ಬೀಸಿದಳು. ಮೊದಲನೇ ಹೊಡೆತ ಬೀಳುತ್ತಲೇ ಹಿಂದೆ ತಿರುಗಬೇಕೆಂದುಕೊಂಡ ಬಾಷಾ ಅಷ್ಟರಲ್ಲಿಯೇ ಎರಡನೇ ಹೊಡೆತ ಬಿದ್ದಿತ್ತು. ತಲೆ ಬಿರಿದುಕೊಂಡು ರಕ್ತ ಸುರಿಯತೊಡಗಿತು. ಏನಾಯಿತು ಎಂದು ಅರಿಯುವುದರೊಳಗೆ ಮೂರನೇ ಹೊಡೆತ.. ಸ್ವಯಂವರಾ ನಿಲ್ಲಿಸಲೇ ಇಲ್ಲ. ಹೊಡೆಯುತ್ತಲೇ ಇದ್ದಳು. ಬಾಷಾ ತಲೆ ಒಡೆದು, ವಿಹಾರಿಯ ಕುತ್ತಿಗೆ ಬಿಟ್ಟು ಪಕ್ಕಕ್ಕೆ ಬಿದ್ದ ಮೇಲೂ ಸ್ವಯಂವರಾ ಹೊಡೆಯುತ್ತಲೇ ಇದ್ದಳು. ಬಾಷಾನ ರಕ್ತ ವಿಹಾರಿಯ ಬಟ್ಟೆಯನ್ನು ತೋಯಿಸಿತು. ವಿಹಾರಿಯ ಉಸಿರು ಅರ್ಧ ನಿಂತು ಹೋಗಿದ್ದರಿಂದ ಆತನಿಗೂ ಪ್ರಜ್ಞೆ ಬರಲು ಒಂದು ನಿಮಿಷವೇ ಹಿಡಿಯಿತು. ಆತನಿಗೆ ಸರಿಯಾದ ಪ್ರಜ್ಞೆ ಬರುತ್ತಲೇ ಮೊದಲ ದೃಶ್ಯ ನೋಡಿ ದಂಗಾಗಿ ಹೋದ. ಕಬ್ಬಿಣದ ಸರಳಿನಲ್ಲಿ ಸ್ವಯಂವರಾ ಬಾಷಾನಿಗೆ ಹೊಡೆಯುತ್ತಲೇ ಇದ್ದಾಳೆ ಹುಚ್ಚಿಯಂತೆ.. ಆತ ಸತ್ತು ಎಷ್ಟು ಹೊತ್ತಾಗಿದೆಯೋ.. ಆದರೂ ಹೊಡೆಯುತ್ತಿದ್ದಾಳೆ.. ಬಾಷಾನ ತಲೆ ಪುಡಿಪುಡಿಯಾಗಿ ಹೋಗಿತ್ತು. ಆದರೂ ಅವಳು ನಿಲ್ಲಿಸಿರಲಿಲ್ಲ. ಅಕ್ಕ ಪಕ್ಕ ನಿಂತು ನೋಡುತ್ತಿದ್ದವರು ಈಗ ಓಡಿಬಿಟ್ಟಿದ್ದರು.
   ತಟ್ಟನೆ ಎದ್ದು ನಿಂತ ವಿಹಾರಿ " ಸ್ವಯಂವರಾ ಅವ್ರೆ, ಏನು ಮಾಡುತ್ತಿದ್ದೀರಿ??" ಎನ್ನುತ್ತಾ ಅವಳ ಹತ್ತಿರ ಹೋಗಿ ಅವಳನ್ನು ಹಿಡಿದು ನಿಲ್ಲಿಸಿದ. ಅವಳಿಗೆ ಈ ಲೋಕದ ಪ್ರಜ್ಞೆ ಇದ್ದಂತಿರಲಿಲ್ಲ.
   ಏನು ಮಾಡಬೇಕೆಂದು ವಿಹಾರಿಗೂ ತಿಳಿಯಲಿಲ್ಲ. ಬಾಷಾನ ತಲೆಯಿಂದ ಚಿಮ್ಮಿದ ರಕ್ತ ಅವಳ ಬಿಳಿಯ ಸಲ್ವಾರ್ ಮೇಲೂ ಚೆಲ್ಲಿ ಕೆಂಪಾಗಿತ್ತು. ಕೈಲಿದ್ದ ಸರಳನ್ನು ಗಟ್ಟಿಯಾಗಿ ಹಿಡಿದೇ ನಿಂತಿದ್ದಳು ಆಕೆ. ಜೋರಾಗಿ ಆಕೆಯನ್ನು ಅಲ್ಲಾಡಿಸಿ ಅವಳ ಕೈಲಿರುವ ಸರಳನ್ನು ಆತ ತೆಗೆದುಕೊಂಡ. ದೇಹ ಜೋರಾಗಿ ಅಲುಗಾಡಿದ್ದರಿಂದ ಸಹಜ ಲೋಕಕ್ಕೆ ಬಂದಳು ಸ್ವಯಂವರಾ.ತಾನೇನು ಮಾಡಿದೆ ಎಂದು ಅರಿವಾಗುತ್ತಲೇ ಅಳುವೇ ಬಂತು ಅವಳಿಗೆ.
   "ಸ್ವಯಂವರಾ ಅವ್ರೆ, ನಡೆಯಿರಿ. ಇನ್ನು ಇಲ್ಲಿಯೇ ಇದ್ದರೆ ಅಪಾಯ.. ಮುಂದಿನದು ಆಮೇಲೆ.. ಬೈಕ್ ಹತ್ತಿ.. " ಎಂದು ಬೈಕ್ ಹತ್ತಿ ಸ್ಟಾರ್ಟ್ ಮಾಡಿದ. ವಿಹಾರಿಯ ಮುಖವನ್ನೇ ನೋಡಿದಳವಳು. ತಾನಿಗಷ್ಟೇ ಒಬ್ಬನನ್ನು ಕೊಂದಿದ್ದೇನೆ ಎಂಬುದನ್ನು ಆಕೆಯೇ ನಂಬದಾಗಿದ್ದಳು.
  "ಏನು?? ನನ್ನ ಜೊತೆ ಬರಲು ಭಯವಾ??" ಎಂದು ಕೇಳಿದ ವಿಹಾರಿ
   "ಭಯವಾ??" ನಕ್ಕಳವಳು. "ಈಗ ನಾನೂ ಕೊಲೆಗಾರನಲ್ಲವೇ.. ಕೊಲೆಗಾರರ ಮೇಲಿದ್ದ ಭಯ ಹೋಯಿತು.. ನಡೆಯಿರಿ.." ಎನ್ನುತ್ತಾ ಬೈಕ್ ಹತ್ತಿ ಕುಳಿತಳು. ವೇಗವಾಗಿ ಬೈಕ್ ಮುನ್ನಡೆಸಿದ ವಿಹಾರಿ.
  ಬಾಷಾನ ಶವ ಅನಾಥವಾಗಿ ಬಿದ್ದೇ ಇತ್ತು.
   ಸ್ವಯಂವರಾಳ ಕಣ್ಣಲ್ಲಿ ಮೂಡಿದ ಹನಿಗಳು ಅವಳ ಕೆನ್ನೆಯ ಮೇಲೆ ಜಾರಿ ಕರೆಗಟ್ಟಿದ್ದರೆ, ಸ್ವಯಂವರಾಳಿಗೇನಾಯಿತೋ ಎಂದು ಕ್ಷಾತ್ರನಂತಹ ಕ್ಷಾತ್ರನ ಕಣ್ಣುಗಳಲ್ಲಿ ಜಾರಿದ ಕಣ್ಣೀರಿಗೆ ಜೋಡಿಯಾಯ್ತು.
   ಕ್ಷಾತ್ರ ವೇಗವಾಗಿ ಜೀಪ್ ಓಡಿಸುತ್ತಿದ್ದವ ಒಮ್ಮೆಲೇ ಬ್ರೇಕ್ ಹಾಕಿದ. ದಾರಿಯ ಮಧ್ಯದಲ್ಲಿ ಬಿದ್ದಿದ್ದ ಬಾಷಾನ ಹೆಣ ಆತನನ್ನು ಕೈಬೀಸಿ ಕರೆಯಿತು..
...............................ಮುಂದುವರೆಯುತ್ತದೆ...............................................
https://www.facebook.com/katarnakkadamabri/

No comments:

Post a Comment